Advertisement

ನಾನ್‌ ಸಿಆರ್‌ಝಡ್‌ ಮರಳುಗಾರಿಕೆ ಗ್ರಾ.ಪಂ. ಸುಪರ್ದಿಗೆ

12:30 AM Jan 31, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ಆಯಾ ಗ್ರಾ.ಪಂ. ಸುಪರ್ದಿಗೆ ನೀಡಲು ತೀರ್ಮಾನಿಸಲಾಗಿದೆ. ಜಿಲ್ಲೆಯ 8 ಗ್ರಾ.ಪಂ.ಗಳಲ್ಲಿ ಆರಂಭಿಕವಾಗಿ ಜಾರಿಗೊಳ್ಳಲಿದೆ.  ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿ.ಪಂ.ನ 15ನೇ ಸಾಮಾನ್ಯ ಸಭೆಯಲ್ಲಿ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಹಾಗೂ ದ.ಕ. ಜಿ.ಪಂ. ಸಿಇಒ ಡಾ| ಸೆಲ್ವಮಣಿ ಈ ವಿಷಯ ತಿಳಿಸಿದರು.

Advertisement

8 ಪಂಚಾಯತ್‌ಗಳ ಹೆಸರು ಹಾಗೂ ನಿಯಮಾವಳಿಗಳನ್ನು ವಾರದೊಳಗೆ ಅಂತಿಮಗೊಳಿಸಲಾಗುವುದು. ಈ ಮೂಲಕ ಮರಳು ನೀತಿಯಲ್ಲಿ ಹೊಸ ಬದಲಾವಣೆಯ ನಿರೀಕ್ಷೆ ಇರಿಸಲಾಗಿದೆ. ಗಣಿ ಖಾತೆ ಸಚಿವ ರಾಜಶೇಖರ ಬಿ. ಪಾಟೀಲ ಹಾಗೂ ಸಚಿವ ಯು.ಟಿ. ಖಾದರ್‌ ಅವರು ಮಂಗಳವಾರ ನಗರಕ್ಕೆ ಆಗಮಿಸಿ ಮರಳುಗಾರಿಕೆ ಕುರಿತ ಸಮಸ್ಯೆಗಳ ಇತ್ಯರ್ಥದ ಕುರಿತು ವಿವರವಾಗಿ ಚರ್ಚೆ ನಡೆಸಿದ್ದಾರೆ. ಯೋಜನೆ ಜಾರಿಯಾಗುವ ಗ್ರಾ.ಪಂ.ಗಳಲ್ಲಿ ಮರಳುಗಾರಿಕೆಗೆ ಪರವಾನಿಗೆ ನೀಡುವ ಅಧಿಕಾರವನ್ನು ಗ್ರಾ.ಪಂ.ಗಳು ಹೊಂದಿರಲಿವೆ ಎಂದರು. ಬಸವ ವಸತಿ ಯೋಜನೆಯಲ್ಲಿ 90 ದಿನಗಳಲ್ಲಿ ಮನೆ ನಿರ್ಮಿಸಬೇಕು ಎಂಬ ನಿಯಮವಿದೆ. ಆದರೆ ಮರಳು ದೊರೆಯದಿದ್ದರೆ ಮನೆ ನಿರ್ಮಿಸುವುದು ಹೇಗೆ ಎಂದು ಸದಸ್ಯ ಕೊರಗಪ್ಪ ನಾಯ್ಕ ಅವರ ಪ್ರಶ್ನೆ ಚರ್ಚೆಗೊಂಡಿತು. 

ಶಿಕ್ಷಕರಿಗೆ ಸಂಬಳವೇ ಬಂದಿಲ್ಲ!
ಕುರ್ನಾಡು ಜಿ.ಪಂ. ಸದಸ್ಯೆ ಮಮತಾ ಡಿ.ಎಸ್‌. ಗಟ್ಟಿ ಮಾತನಾಡಿ, ಬಂಟ್ವಾಳ ತಾಲೂಕಿನ ಬಹುತೇಕ ಸರಕಾರಿ ಶಾಲೆಯ ಶಿಕ್ಷಕರಿಗೆ ನಾಲ್ಕು ತಿಂಗಳುಗಳಿಂದ ಸಂಬಳ ದೊರಕಿಲ್ಲ ಎಂದು ದೂರಿದರು. ಸಿಇಒ ಮಾತನಾಡಿ, ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಸಾಫ್ಟ್ವೇರ್‌ ಸಮಸ್ಯೆ ಯಿಂದ ಹೀಗಾಗಿದೆ. ವಾರದೊಳಗೆ ಸರಿಯಾಗಲಿದೆ ಎಂದರು.  ಇನ್ನು ವಿಭಜಿತ ಶೌಚಾಲಯ ರಹಿತ 803 ಕುಟುಂಬಗಳ ಮಾಹಿತಿಯನ್ನು ಗ್ರಾ.ಪಂ.ನಿಂದ ಪಡೆಯಲಾಗಿದೆ. ಇದರಲ್ಲಿ 73 ಶೌಚಾಲಯವನ್ನು ಎಂಆರ್‌ಪಿಎಲ್‌ ನಡೆಸಲಿದೆ. ಉಳಿದ 504 ಶೌಚಾಲಯ ಕಾಮಗಾರಿಗೆ ಆದೇಶಿಸಲಾಗಿದೆ ಎಂದರು.

ಹೊಸ ವೆಬ್‌ಸೈಟ್‌ಗೆ ಚಾಲನೆ
ಜಿ.ಪಂ. ವೆಬ್‌ಸೈಟ್‌ಗೆ (zpdk.kar.nic.in) ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಚಾಲನೆ ನೀಡಿದರು. ಜಿ.ಪಂ. ಆಡಳಿತ, ಯೋಜನೆಗಳ ಮಾಹಿತಿ, ದೂರವಾಣಿ ಸಂಖ್ಯೆಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ, ಅನಿತಾ ಹೇಮನಾಥ ಶೆಟ್ಟಿ, ಪ್ರಭಾರ ಉಪ ಕಾರ್ಯದರ್ಶಿ ಸಂತೋಷ್‌ ಕುಮಾರ್‌ ಉಪಸ್ಥಿತರಿದ್ದರು. 

ನೀರಿನ ಘಟಕ;  ಗ್ರಾ.ಪಂ. ಮೇಲುಸ್ತುವಾರಿಗೆ
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಡಿಎಲ್‌) ಮೂಲಕ ಜಿಲ್ಲೆಯಲ್ಲಿ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳ ಕಳಪೆ ಕಾಮಗಾರಿಯಿಂದ ಒಟ್ಟು ಯೋಜನೆಯೇ ಹಳ್ಳ ಹಿಡಿದಿದೆ ಎಂದು ಸದಸ್ಯರು ಪಕ್ಷಬೇಧ ಮರೆತು ವಿರೋಧಿಸಿದರು. ಜಿ.ಪಂ. ಸಿಇಒ ಸೆಲ್ವಮಣಿ ಆರ್‌ ಮಾತನಾಡಿ, ಅಸಮರ್ಪಕ ನಿರ್ವಹಣೆ ಬಗ್ಗೆ ಖಾತರಿಪಡಿಸಲು ಎನ್‌ಐಟಿಕೆ ಮೂಲಕ ತಾಂತ್ರಿಕ ವರದಿ ಪಡೆದು ಸರಕಾರಕ್ಕೆ ಕಳುಹಿಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.  

Advertisement

ಉಡುಪಿ ಜಿಲ್ಲೆಯಲ್ಲಿ  2 ಗ್ರಾ.ಪಂ. ಸುಪರ್ದಿಗೆ
ಉಡುಪಿ ಜಿಲ್ಲೆಯಲ್ಲಿ ನಾನ್‌ ಸಿಆರ್‌ಝಡ್‌ ವ್ಯಾಪ್ತಿಯ ಮರಳುಗಾರಿಕೆಯನ್ನು ಪ್ರಾಯೋಗಿಕವಾಗಿ ಎರಡು ಗ್ರಾ.ಪಂ.ಗಳ ಸುಪರ್ದಿಗೆ ನೀಡಲು ಮಂಗಳವಾರ ಗಣಿ ಸಚಿವ ರಾಜಶೇಖರ ಪಾಟೀಲ್‌ ಅವರು ನಡೆಸಿದ ಪ್ರಗತಿ ಪರಿಶೀಲನ ಸಭೆಯಲ್ಲಿ ನಿರ್ಣಯಿಸಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next