Advertisement

UV Fusion: ಸದ್ದು ಮಾಡದ ಮಧ್ಯದ ಬೆಂಚುಗಳು

03:28 PM Dec 06, 2023 | Team Udayavani |

ವಿದ್ಯಾಲಯ ಎಂದರೆ ಹಸಿದ ಅಕ್ಷರ ಪ್ರೇಮಿಗೆ ಅಕ್ಷರವ ಉಣಬಡಿಸುವ ಜ್ಞಾನ ದೇಗುಲ. ಅಂತೆಯೇ ವಿದ್ಯಾರ್ಥಿ ಎಂದರೆ ನೆನಪಾಗುವುದು ರ್‍ಯಾಂಕ್‌ ವಿದ್ಯಾರ್ಥಿಗಳು, ಇಲ್ಲವೇ ಹಿಂದಿನ ಬೆಂಚುಗಳು. ಗುರುಗಳಿಗೂ ಅಷ್ಟೇ ಈ ರ್‍ಯಾಂಕರ್ ಮತ್ತು ಬ್ಯಾಕ್‌ ಬೆಂಚರ್ಸ್‌ ಅನ್ನು ಮರೆಯಲು ಸಾಧ್ಯವೇ?

Advertisement

ಅರಿಯದ ವಿಷಯವ ತಿಳಿಯುತ, ತಿಳಿದಿದ್ದ ವಿಷಯವ ಗುರುಗಳ ಸಾಮರ್ಥ್ಯ ಪರೀಕ್ಷಿಸಲು ಬಳಸುತ್ತಾ ಎಲ್ಲರ ಗಮನವ ಸೆಳೆಯುತ್ತ ಆಟೋಟಗಳಿಗೆ ಹೆಚ್ಚು ಗಮನಕೊಡದೇ ಗುರುಗಳ ನೆಚ್ಚಿನ ಶಿಷ್ಯರಾಗಿ, ಒಮ್ಮೊಮ್ಮೆ ಹಿಂಬದಿ ಬೆಂಚಿನ ಗೆಳೆಯರ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ವಿದ್ಯಾರ್ಥಿಗಳೇ ರ್‍ಯಾಂಕ್‌ ಸ್ಟೂಡೆಂಟ್‌ಗಳು.

ಇನ್ನು ಬ್ಯಾಕ್‌ ಬೆಂಚರ್ ಎಂದರೆ ಯಾರು? ಅವರು ಹೇಗಿರುತ್ತಾರೆ? ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೂ ಒಂದೆರಡು ವಾಕ್ಯದಲ್ಲಿ ಹೇಳಿಬಿಡುತ್ತೇನೆ. ಇಲ್ಲವಾದರೆ ನನ್ನ ಮನಸು ತಡೆಯಬೇಕಲ್ಲಾ. ತಮಗಿಷ್ಟ ಬಂದಂತೆ ತರಗತಿಗೆ ಹಾಜರಾಗುತ್ತಾ, ಕುಳಿತ ಜಾಗದಲ್ಲಿಯೇ ಹೊಸ ಹೊಸ ರ್ಯಾಪ್‌ ಹಾಡುಗಳನ್ನು ಸೃಷ್ಟಿಸುತ್ತಾ, ಮುಂದಿದ್ದ ವಿದ್ಯಾರ್ಥಿಗಳನ್ನು ಹಿಂದಿನಿಂದಲೇ ನಿಯಂತ್ರಿಸುತ್ತ, ವಾರದಲ್ಲಿ ಕನಿಷ್ಠ ಎರಡು ಬಾರಿ ಪ್ರಾಚಾರ್ಯರಿಂದ ವಿಭಿನ್ನ ಶೈಲಿಯಲ್ಲಿ ತೆಗಳಿಸಿಕೊಳ್ಳುತ್ತ, ತರಗತಿ ಬೇಡವೆನಿಸಿದಾಗ ಅಲ್ಲಿಂದ ನಿರ್ಗ ಮಿಸುತ್ತಾ ಕಾಲಕಳೆಯುತ್ತಿದ್ದ ಹುಡುಗರೇ ಬ್ಯಾಕ್‌ ಬೆಂಚರ್ಸ್‌ಗಳು.

ಇನ್ನು ಈ ರ್‍ಯಾಂಕ್‌ ಮತ್ತು ಬ್ಯಾಕ್‌ ಬೆಂಚರ್ ಗಳ ಮಧ್ಯದಲ್ಲಿದ್ದ ಮಿಡಲ್‌ ಬೇಂಚರ್‌ಗಳ ಕುರಿತು ಅನೇಕರಿಗೆ ತಿಳಿದಿರುವುದಿಲ್ಲ.

ನಿಜವಾಗಿ ಕಾಲೇಜು ಜೀವನವನ್ನು ಸುಂದರವಾಗಿ ಕಳೆಯುವವರೆಂದರೆ ಇವರೇ. ಆಟದಲ್ಲಿ ಪಾಠದಲ್ಲಿ ಎಲ್ಲಿಯೂ ಮುಂದೆಕಾಣಿಸಿಕೊಳ್ಳದ ಇವರು ಎಲ್ಲದರಲ್ಲಿಯೂ ಭಾಗವಹಿಸುತ್ತಿರುತ್ತಾರೆ. ಆಟದ ಸಮಯದಲ್ಲಿ ಆಟವಾಡುತ್ತಾ, ಕೆಲವೊಮ್ಮೆ ಗ್ರಂಥಾಲಯಕ್ಕೆ ಭೇಟಿ ನೀಡುತ್ತಾ, ಹಿಂಬದಿ ಹುಡುಗರ ರ್ಯಾಪ್‌ ಹಾಡುಗಳಿಗೆ ಪದಗಳ ಪೋಣಿಸುತ್ತ, ಚೀಲದಲ್ಲಿ ತುಂಬಿಕೊಂಡು ಬಂದಿದ್ದ ತಿಂಡಿಗಳನ್ನು ಬಚ್ಚಿಟ್ಟುಕೊಂಡು ತಿನ್ನುತ್ತಾ, ಗುರುಗಳ ಪಾಠದಲ್ಲಿ ಒಂದಕ್ಷರ ಅರ್ಥವಾಗದಿದ್ದರೂ ಎಲ್ಲವೂ ಅರ್ಥವಾದಂತೆ ನಟಿಸುತ್ತಾ ಕೆಲವೊಮ್ಮೆ ಗುರುಗಳ ಮಿಮಿಕ್ರಿ ಮಾಡುತ್ತಾ ನಗುಬಂದರೂ ತಡೆಹಿಡಿದುಕೊಳ್ಳುತ್ತಾ ಕಾಲಕಳೆಯುತ್ತಾರೆ.

Advertisement

ಮುಂದಿನ ಬೆಂಚಿನವರು ತಮ್ಮ ಬುದ್ಧಿಶಕ್ತಿಯಿಂದ ಉತ್ತಮ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಬ್ಯಾಕೆºಂಚರ್‌ಗಳು ಸಿಕ್ಕ ಕೆಲಸವ ಮಾಡುತ್ತಾ ತಮ್ಮದೇ ಹೊಸ ವ್ಯಾಪಾರ ವಹಿವಾಟು ನಡೆಸುತ್ತಾ ಜೀವನ ನಡೆಸುತ್ತಾರೆ. ಆದರೆ ಮಧ್ಯೆ ಬೆಂಚಿನವರು ಎಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳುವುದಿಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ ಈ ಮಾತನ್ನು ನಾನು ಒಪ್ಪಿ ಕೊಳ್ಳಲಾರೆ ಜೀವನದಲ್ಲಿ ಯಶಸ್ಸು ಎಂಬುದು ಶಾಶ್ವತವಲ್ಲ. ಇಂದು ಗೆದ್ದವನು ನಾಳೆ ಸೋಲಬಹುದು. ಸೋತವನು ಗೆಲ್ಲಬಹುದು. ಬೆಂಚು ಗಳಿಂದ ಒಬ್ಬ ವಿದ್ಯಾರ್ಥಿಯ ಕಾಲೇಜು ಜೀವನವನ್ನು ಅಂದಾಜಿಸ ಬಹುದೇ ಹೊರತು ಅವನ ಸಂಪೂರ್ಣ ಜೀವನ ಹೀಗೆಯೇ ಇರು ವುದು ಎಂದು ನಿರ್ಧರಿಸುವುದು ಕಷ್ಟ. ಏಕೆಂದರೆ ಬೆಂಚುಗಳಿಗೆ ಯಾವುದೇ ಸಾಮರ್ಥ್ಯ ಇಲ್ಲವೇ ಭಾವನೆಯಿರುವುದಿಲ್ಲ ಅದೊಂದು ನಿರ್ಜೀವ ವಸ್ತು. ಬೆಂಚು ಗಳು ಅಗತ್ಯವಾಗಿಯೋ? ಅನಿವಾರ್ಯವಾಗಿಯೋ? ಅವರಿಗೆ ಒಲಿದದ್ದು ಎಂಬುದನ್ನು ಅಲ್ಲಗೆಳೆಯುವಂತಿಲ್ಲ.

-ಶಶಿಧರ ಮರಾಠಿ

ಎಂ.ಎಂ. ಮಹಾವಿದ್ಯಾಲಯ ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next