Advertisement

ದಳಪತಿಗಳ ವಿರುದ್ಧವೇ ತಿರುಗಿ ಬಿದ್ದ ನಾಯಕರು

03:53 PM Feb 13, 2023 | Team Udayavani |

ಮಂಡ್ಯ: ಜೆಡಿಎಸ್‌ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಛಿದ್ರವಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ.

Advertisement

ಜೆಡಿಎಸ್‌ ಒಡೆದ ಮನೆಯಾಗಿ ಮಾರ್ಪಾಡುವಂತ ವಾತಾ ವರಣ ನಿರ್ಮಾಣವಾಗುತ್ತಿದೆ. ದಳಪತಿಗಳ ನಿರ್ಲಕ್ಷ್ಯ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಹಾಗೂ ಭಿನ್ನಾಭಿಪ್ರಾಯಗಳು ಪಕ್ಷದಲ್ಲಿ ಭುಗಿಲೆದ್ದಿದೆ. ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಮುಖಂಡರು ಬಂಡಾಯವೆದ್ದಿದ್ದರೆ, ಕೆಲವು ನಾಯಕರು ಪಕ್ಷವನ್ನೇ ತೊರೆದು ಬೇರೆ ಪಕ್ಷ ಸೇರ್ಪಡೆಯಾಗಿದ್ದಾರೆ.

ಈಗಾಗಲೇ ಎರಡು ವಿಧಾನ ಪರಿಷತ್‌ ಹಾಗೂ ಒಂದು ಸಂಸದ ಸ್ಥಾನಗಳನ್ನು ಕಳೆದುಕೊಂಡಿರುವ ಜೆಡಿಎಸ್‌ನಲ್ಲೀಗ ಬಂಡಾಯದ ಭೀತಿ ಎದುರಾಗಿದೆ. ಹಲವು ನಾಯಕರು ಪಕ್ಷ ತೊರೆದು ಹೋಗಿದ್ದಾರೆ. ಇನ್ನೂ ಕೆಲವರು ಪಕ್ಷ ಬಿಡುವ ನಿರ್ಧಾರ ಕೈಗೊಂಡಿದ್ದಾರೆ. ಇದು ಮುಂದಿನ 2023ರ ವಿಧಾನಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚಿದೆ.

ಕೇಂದ್ರ ಸ್ಥಾನದಲ್ಲೂ ದಳ ಬಿಟ್ಟ ನಾಯಕರು: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೂ ವರು ಪ್ರಮುಖ ನಾಯಕರು ದಳಕ್ಕೆ ಗುಡ್‌ ಬೈ ಹೇಳುವ ಮೂಲಕ ಕೈ, ಕಮಲ ಹಿಡಿದಿದ್ದಾರೆ. ಜೆಡಿಎಸ್‌ನಲ್ಲಿದ್ದ ಕೀಲಾರ ರಾಧಾಕೃಷ್ಣ, ಡಾ.ಕೃಷ್ಣ ಕಾಂಗ್ರೆಸ್‌ ಸೇರ್ಪಡೆಯಾದರೆ, ಮಾಜಿ ಸಚಿವ ಎಸ್‌.ಡಿ.ಜಯರಾಂ ಪುತ್ರ ಅಶೋಕ್‌ ಜಯರಾಂ ಕಮಲ ಹಿಡಿದರು. ಈಗ ಮೂವರು ಜೆಡಿಎಸ್‌ ವಿರುದ್ಧ ಸ್ಪರ್ಧೆಗೆ ಸಜಾjಗಿದ್ದಾರೆ.

ಜೆಡಿಎಸ್‌ ಸುತ್ತುವರೆದ ಬಂಡಾಯ: ದೇವೇಗೌಡರ ಕುಟುಂಬದ ಹಿಡಿತ ಹೊಂದಿರುವ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂಡಾ ಯದ ಬಿಸಿ ಜೋರಾಗಿಯೇ ತಟ್ಟುತ್ತಿದೆ. ಒಂದೆಡೆ ಹಿರಿಯ ಮುಖಂಡ ಬಿ. ಎಲ್‌.ದೇವರಾಜು, ಬಸ್‌ ಸಂತೋಷ್‌ ಕುಮಾರ್‌, ಬಸ್‌ ಕೃಷ್ಣೇಗೌಡ ಹಾಗೂ ರಾಜಾಹುಲಿ ದಿನೇಶ್‌ ದಳಪತಿಗಳ ವಿರುದ್ಧ ಬಂಡಾಯವೆದಿದ್ದಾರೆ. ಪ್ರತ್ಯೇಕ ಸಮಾವೇಶ, ಸಭೆ ನಡೆಸುತ್ತಾ ದಳಪತಿಗಳಿಗೆ ಟಾಂಗ್‌ ನೀಡುತ್ತಿದ್ದಾರೆ. ಬಿ.ಎಲ್‌.ದೇವರಾಜು, ದಿನೇಶ್‌ ರಾಜಾಹುಲಿ ಪಕ್ಷೇ ತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದು ಅಭ್ಯರ್ಥಿ ಎಚ್‌.ಟಿ.ಮಂಜುಗೆ ಇನ್ನಿಲ್ಲದ ತಲೆನೋವು ತಂದಿದೆ. ಅಲ್ಲದೆ, ಪಕ್ಷ ತೊರೆದ ಸಚಿವ ನಾರಾಯಣಗೌಡ ಮುಂದಿನ ಚುನಾವಣೆಯಲ್ಲೂ ಜೆಡಿಎಸ್‌ಗೆ ಕಂಟಕವಾಗಲಿದ್ದಾರೆ ಎನ್ನಲಾಗುತ್ತಿದೆ.

Advertisement

ಏಕಾಂಗಿಯಾದರೇ ಶಾಸಕ ಸುರೇಶ್‌ಗೌಡ: ವಿಭಿನ್ನ ರಾಜಕೀಯಕ್ಕೆ ಹೆಸರುವಾಸಿಯಾಗಿರುವ ನಾಗ ಮಂಗಲ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್‌ಗೆ ಬಂಡಾಯ ತಟ್ಟಿದೆ. ಇದರಿಂದ ಶಾಸಕ ಕೆ.ಸುರೇಶ್‌ ಗೌಡ ಏಕಾಂಗಿಯಾಗುವಂತೆ ಮಾಡಿದೆ. ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಪಕ್ಷದಿಂದ ಉಚ್ಛಾಟನೆಗೊಂಡ ನಂತರ ದಳಪತಿಗಳು ಹಾಗೂ ಸುರೇಶ್‌ಗೌಡ ವಿರುದ್ಧ ಕಿಡಿಕಾರುತ್ತಿದ್ದಾರೆ. ಅತ್ತ ಮನ್‌ಮುಲ್‌ ಮಾಜಿ ಅಧ್ಯಕ್ಷ ಜವರೇಗೌಡ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಕಾಂಗ್ರೆಸ್‌ ಪರ ನಿಂತಿದ್ದಾರೆ. ಇತ್ತ ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ ಪಕ್ಷದಲ್ಲಿದ್ದರೂ ನಾಮಕಾವಸ್ಥೆಯಂತೆ ಹಾಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಲಕ್ಷ್ಮೀಅಶ್ವಿ‌ನ್‌ಗೌಡ ಈಗಾಗಲೇ ತೆನೆ ಇಳಿಸಿ ಕಮಲ ಮುಡಿದಿದ್ದಾರೆ. ಇದು ಪಕ್ಷದ ವರ್ಚಸ್ಸು ಕುಂದುವಂತೆ ಮಾಡಿದೆ.

ಬಂಡಾಯದ ಕಹಳೆ ಊದಿದ ತಗ್ಗಹಳ್ಳಿ ವೆಂಕಟೇಶ್‌: ಕೋಟೆ ನಾಡು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ವಿರುದ್ಧ ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ಬಂಡಾಯದ ಕಹಳೆ ಊದಿದಿದ್ದಾರೆ. ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಿಡಿಕಾರುತ್ತಿರುವ ಅವರು, ಜೆಡಿಎಸ್‌ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಅದಕ್ಕಾಗಿ ಪ್ರತ್ಯೇಕ ಸಭೆ, ಸಮಾರಂಭ, ಪ್ರಚಾರ ನಡೆಸುತ್ತಿರುವ ತಗ್ಗಹಳ್ಳಿ ವೆಂಕಟೇಶ್‌, ದಳಪತಿಗಳ ನಿದ್ದೆಗೆಡಿಸಿದ್ದಾರೆ.

ಕಮಲ ಹಿಡಿದ ಎಸ್‌.ಪಿ.ಸ್ವಾಮಿ: ಮದ್ದೂರು ವಿಧಾನಸಭಾ ಕ್ಷೇತ್ರದಲ್ಲೂ ಮನ್‌ಮುಲ್‌ ನಿರ್ದೇಶಕ ಎಸ್‌.ಪಿ.ಸ್ವಾಮಿ ಬಂಡಾಯವೆದ್ದು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ತನ್ನ ಪತ್ನಿ ನಾಗರತ್ನ ಸ್ವಾಮಿ ಅವರ ಜಿಪಂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನದಿಂದ ಶುರುವಾದ ದಳಪತಿಗಳ ವಿರುದ್ಧದ ಗಲಾಟೆ ಪಕ್ಷ ತೊರೆಯುವಂತೆ ಮಾಡಿತು. ಈಗ ಜೆಡಿಎಸ್‌ ವಿರುದ್ಧ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ.

ಕೈ ಸೇರ್ಪಡೆಗೆ ಸಜ್ಜಾದ ಮರಿತಿಬ್ಬೇಗೌಡ: ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ನಾಯಕರಾಗಿರುವ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಈಗಾಗಲೇ ಜೆಡಿಎಸ್‌ ಪಕ್ಷದಿಂದ ದೂರ ಉಳಿದಿದ್ದು, ಕಾಂಗ್ರೆಸ್‌ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ. ಕಳೆದ ಎರಡು ವಿಧಾನ ಪರಿಷತ್‌ ಚುನಾವಣೆಗಳಲ್ಲೂ ಬಹಿರಂಗವಾ ಗಿಯೇ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿಯೇ ಚುನಾವಣೆ ಮಾಡಿದ್ದರು. ಹಲವು ಬಾರಿ ಕಾಂಗ್ರೆಸ್‌ ಸೇರ್ಪಡೆಯಾಗುವ ಬಗ್ಗೆಯೂ ಮಾತುಗಳನ್ನಾಡಿದ್ದಾರೆ.

ಟಿಕೆಟ್‌ ವಿಚಾರದಲ್ಲೇ ಹೆಚ್ಚು ಭಿನ್ನಾಭಿಪ್ರಾಯ : ಜೆಡಿಎಸ್‌ನಲ್ಲಿ ದಳಪತಿಗಳು ಕೊಟ್ಟ ಭರವಸೆಯಂತೆ ಟಿಕೆಟ್‌ ಸಿಗದಿರುವುದೇ ಪ್ರಮುಖ ಕಾರಣವಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲೂ ಕೀಲಾರ ರಾಧಾಕೃಷ್ಣ, ಡಾ.ಕೃಷ್ಣ ಹಾಗೂ ಅಶೋಕ್‌ ಜಯರಾಂ ಅವರು ಟಿಕೆಟ್‌ ಸಿಗುವ ಭರವಸೆ ಹುಸಿಯಾದ ಕಾರಣ ಪಕ್ಷ ತೊರೆದರು. ಶ್ರೀರಂಗಪಟ್ಟಣದಲ್ಲೂ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್‌ ಭರವಸೆ ನೀಡಿ ಕೊಡಲಿಲ್ಲ ಎಂಬ ಕಾರಣಕ್ಕೆ ಬಂಡಾಯ ಸಾರಿದ್ದಾರೆ. ಕೆ.ಆರ್‌.ಪೇಟೆಯಲ್ಲೂ ಬಿ.ಎಲ್‌.ದೇವರಾಜು ಸಹ ಟಿಕೆಟ್‌ ಕಾರಣದಿಂದಲೇ ದಳಪತಿಗಳ ವಿರುದ್ಧ ಬಂಡಾಯವೆದ್ದಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ, ಕಳೆದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಯಲ್ಲಿ ತಮ್ಮ ಶಿಷ್ಯ ಕೀಲಾರ ಜಯರಾಮು ಅವರಿಗೆ ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪರ ಚುನಾವಣೆ ಮಾಡಿದರು. ನಾಗಮಂಗಲದ ಲಕ್ಷ್ಮೀಅಶ್ವಿ‌ನ್‌ ಗೌಡ ಕೂಡ ಟಿಕೆಟ್‌ ಸಿಗದ ಹಿನ್ನೆಲೆ ಪಕ್ಷ ತೊರೆದರು.

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next