Advertisement

ಉಡುಪಿ ಬಸ್‌ನಿಲ್ದಾಣಗಳಲ್ಲಿ ಇಲ್ಲದ ವೇಳಾಪಟ್ಟಿ

08:37 PM Mar 26, 2019 | sudhir |

ಉಡುಪಿ: ಗ್ರಾಮೀಣ ಪ್ರದೇಶಕ್ಕೆ ಉತ್ತಮ ಸಾರಿಗೆ ಸೇವೆ ನೀಡುವ
ಮೂಲಕ ಪ್ರಶಂಸೆಗೆ ಪಾತ್ರವಾದ ನಗರದ ಸಾರಿಗೆ ವ್ಯವಸ್ಥೆ ಇಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಬಸ್‌ನಿಲ್ದಾಣದಿಂದ ಯಾವ ಬಸ್‌ಎಲ್ಲಿಂದ ಎಲ್ಲಿಗೆ, ಎಷ್ಟು ಹೊತ್ತಿಗೆ
ಬರುತ್ತದೆ ಮುಂತಾದ ಮಾಹಿತಿ ಪಡೆಯಲು ಸಾಧ್ಯ ವಾಗದೆ ಪ್ರಯಾಣಿಕರು ಗೊಂದಲಕ್ಕೀಡಾಗುತ್ತಿದ್ದಾರೆ. ಈ ಬಗ್ಗೆ ಯಾರೂ ಗಮನ ಹರಿಸಿದಂತಿಲ್ಲ.

ನಗರ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ, ನರ್ಮ್, ಸಿಟಿ ಹಾಗೂ ಸರ್ವಿಸ್‌ ಬಸ್‌
ನಿಲ್ದಾಣ ಸೇರಿದಂತೆ 4 ನಿಲ್ದಾಣಗಳಿವೆ. ಆದರೆ ಈ ಯಾವ ನಿಲ್ದಾಣದಲ್ಲಿಯೂ ಸಹ ಯಾವ ಬಸ್‌ ಎಲ್ಲಿಗೆ ಹೋಗುತ್ತದೆ, ಎಷ್ಟು ಗಂಟೆಗೆ ಬರುತ್ತದೆ ಎಂಬುದರ ಬಗ್ಗೆ ತಂಗುದಾಣದಲ್ಲಿ ಮಾಹಿತಿ ಫ‌ಲಕ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.

ನರ್ಮ್ ಬಸ್‌ನಿಲ್ದಾಣ
ಸರಕಾರಿ ಬಸ್‌ ಸೇವೆಯ ಮೂಲಕ ಕಳೆದ ಮೂರು ವರ್ಷದಿಂದ ಪ್ರಯಾಣಿಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದ ನರ್ಮ್ ಬಸ್‌ ನಿಲ್ದಾಣದಲ್ಲಿಯೂ ಸಹ ವೇಳಾಪಟ್ಟಿ ಇಲ್ಲ. ಇದರಿಂದ ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ಬಸ್‌ ಏರುವ ಸಾಧ್ಯತೆಯೂ ಇದೆ. ಹಿಂದೆ ತಾತ್ಕಾಲಿಕವಾಗಿದ್ದ ಫ‌ಲಕವು ಕಳೆದ ಹಲವು ತಿಂಗಳಿಂದ ನಾಪತ್ತೆಯಾಗಿದೆ. ಸಾರಿಗೆ ಸಂಸ್ಥೆ ಬಸ್‌ಗಳ ಸಂಖ್ಯೆ, ಮಾರ್ಗಗಳ ಮಾಹಿತಿಯನ್ನು ಸಮರ್ಪಕವಾಗಿ ನೀಡಿದರೆ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ವಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ದೂರದ ಊರುಗಳಿಗೆ ಹೋಗುವ ಮತ್ತು ಕಾರ್ಕಳ, ಶಿವಮೊಗ್ಗ, ಸಿದ್ದಾಪುರ, ಕುಂದಾಪುರ ಭಾಗಗಳಿಗೆ ಹೋಗುವ ಸರಕಾರಿ ಬಸ್‌ಗಳೂ ಇವೆ. ಇಲ್ಲಿಯೂ ಸ್ಥಳೀಯ ಮಾರ್ಗಗಳ ವೇಳಾಪಟ್ಟಿಯನ್ನು ಸಮರ್ಪಕವಾಗಿ ಅಳವಡಿಸಬೇಕಾಗಿದೆ.

ಸಿಟಿ ಬಸ್‌ ಕಿರಿಕಿರಿ
ಸಿಟಿ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಸ್‌ ಕಾಯುವುದೇ ಒಂದು ಘೋರ ಶಿಕ್ಷೆಯಾಗಿದೆ. ಹೊಸದಾಗಿ ನಗರಕ್ಕೆ ಬರುವವರು ಅಂಬಾಗಿಲು ಹೋಗಬೇಕಾದರೆ ಯಾವ ಪ್ಲಾಟ್‌ಫಾರಂಗೆ ಹೋಗಿ ಬಸ್‌ ಹಿಡಿಯಬೇಕು ಎನ್ನುವ ಗೊಂದಲದಲ್ಲಿ ಬಸ್‌ನಿಲ್ದಾಣದಲ್ಲಿ ನಾಲ್ಕು ಬಾರಿ ಸುತ್ತಬೇಕಾಗುತ್ತದೆ.

Advertisement

ಮಣಿಪಾಲ- ಉಡುಪಿ, ಉಡುಪಿ- ಉದ್ಯಾವರ-ಕಟಪಾಡಿ, ಉಡುಪಿ- ಮಲ್ಪೆಯಂತಹ ಮಾರ್ಗಗಳಿಗೆ ಆಗಾಗ್ಗೆ ಬಸ್‌ಗಳಿರುವುದರಿಂದ ಕಾಯುವ ಸಮಸ್ಯೆ ಇರುವುದಿಲ್ಲ. ಆದರೆ ಕಡಿಮೆ ಸಂಚಾರದ ಮಾರ್ಗಗಳಲ್ಲಿ ವೇಳಾಪಟ್ಟಿಯ ಅಗತ್ಯವಿರುತ್ತದೆ.

ಅಂಬಲಪಾಡಿ, ದೊಡ್ಡಣಗುಡ್ಡೆ, ಡಿಸಿ ಕಚೇರಿ ಹಾಗೂ ಆರ್‌ಟಿಒ ಕಚೇರಿ, ಪ್ರಗತಿನಗರ, ಮಂಚಿ, ಮಟ್ಟು, ಹೆರ್ಗ, ಅಲೆವೂರು, ಬೀಡಿನಗುಡ್ಡೆ, ಆತ್ರಾಡಿ,
ಬೆಳ್ಳೆ ಸೇರಿದಂತೆ ಇತರೆ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ವೇಳಾಪಟ್ಟಿ ನಿಲ್ದಾಣದಲ್ಲಿ ಇಲ್ಲದ ಕಾರಣ ಪ್ರಯಾಣಿಕರು ನಿಲ್ದಾಣದಲ್ಲಿ ನಿಂತು ಗಂಟೆಗಟ್ಟಲೆ ಕಾಲ ವ್ಯಯಿಸುತ್ತಿದ್ದಾರೆ. ಕೆಲವು ಕಡೆಗಳಿಗೆ ಬಸ್‌ ಸಂಚಾರ ಖಾತ್ರಿಯೂ ಇರುವುದಿಲ್ಲ, ಸಿಬಂದಿಗಳೂ ಇಂತಹ ಸಂದರ್ಭ ಅರೆಬರೆ ಉತ್ತರಿಸುವುದೂ ಇದೆ.

ಸಿಂಡ್‌ ಸರ್ಕಲ್‌ ಬಳಿ
ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾಧಿಕಾರಿ ಕಚೇರಿಯಿಂದ ಮಣಿಪಾಲ ಮತ್ತು ಉಡುಪಿ ಕಡೆಗೆ ಹೋಗುವ ವೇಳಾಪಟ್ಟಿ ಇರುವುದೊಂದೇ ಸಮಾಧಾನ. ಆದರೆ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ತಿರುವಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಬೇಕೆಂದು ಬಸ್‌ ಕಾಯುತ್ತಿದ್ದರೆ ಆತ , ಆಕೆ ಹೈರಾಣಾಗಿ ಹೋಗುತ್ತಾನೆ. ಅಪರೂಪದ ಬಸ್‌ಗಳು ಎಷ್ಟು ಹೊತ್ತಿಗೆ ಬರುತ್ತವೆ ಎಂದು ಯಾರಿಗೂ ಗೊತ್ತಿರುವುದಿಲ್ಲ.

ಸರ್ವಿಸ್‌ ಬಸ್‌ನಿಲ್ದಾಣ
ಬಾರಕೂರು, ನಡೂರು, ರಂಗನಕರೆ, ಸಾೖಬರಕಟ್ಟೆ, ಮಂದಾರ್ತಿ, ಸಿದ್ದಾಪುರ, ಹಾಲಾಡಿ, ಹಂಗಾರಕಟ್ಟೆ, ಸಾಲಿಕೇರಿ, ಶೃಂಗೇರಿ, ಶಿವಮೊಗ್ಗ, ಕರ್ಜೆ ಮಾರ್ಗದಲ್ಲಿ ತೆರಳುವ ಬಸ್‌ ಬಗ್ಗೆಯೂ ಉಡುಪಿ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ಯಾವುದೇ ಫ‌ಲಕ ಆಳವಡಿಸಿಲ್ಲ. ಉಳಿದ ಬಸ್‌ ನಿಲ್ದಾಣಗಳಿಗೆ ಹೋಲಿಸಿದರೆ ಇಲ್ಲಿನ ಖಾಸಗಿ ಏಜೆಂಟರು ಸ್ಪಂದಿಸಿ ಉತ್ತರವನ್ನಾದರೂ ನೀಡುತ್ತಾರೆ.

ಎಲ್ಲಿ ಬೇಡಿಕೆ
ನಗರದ ಸರ್ವಿಸ್‌, ಸಿಟಿ, ಕೆಎಸ್‌ಆರ್‌ಟಿಸಿ, ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ತಿರುವಿನಲ್ಲಿ, ನರ್ಮ್ ಬಸ್‌ನಿಲ್ದಾಣಗಳಲ್ಲಿ ಬಸ್‌ಗಳ ಮಾಹಿತಿ ಫ‌ಲಕ ಆಳವಡಿಸಬೇಕಾಗಿದೆ. ಇದರಿಂದ ಪ್ರಯಾಣಿಕರ ಪರದಾಟ ತಪ್ಪುತ್ತದೆ.

ನಿರ್ಮಾಣ ಕಾರ್ಯ ಪ್ರಗತಿಯಲ್ಲಿ
ಕೆಎಸ್‌ಆರ್‌ಟಿಸಿ ಹಾಗೂ ನರ್ಮ್ ಬಸ್‌ನಿಲ್ದಾಣದ ಹೊಸ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕೆಲಸ ನಡೆಯುವಾಗ ಹಳೆಯ ಫ‌ಲಕ ಹಾಳಾಗಿ ಹೋಗಿದೆ. ಹೊಸ ಬಸ್‌ನಿಲ್ದಾಣದಲ್ಲಿ ಬಸ್‌ಗಳ ವೇಳಾಪಟ್ಟಿ ಹಾಗೂ ಮಾರ್ಗವನ್ನು ನಮೂದಿಸಲಾಗುತ್ತದೆ.
-ಉದಯ ಕುಮಾರ್‌ ಶೆಟ್ಟಿ, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌, ಉಡುಪಿ.

ವೇಳಾಪಟ್ಟಿ ಅಳವಡಿಕೆ ಅಗತ್ಯ
ವೃದ್ಧರು, ಅನಕ್ಷರಸ್ಥರು, ಮಹಿಳೆಯರು ಬಸ್‌ ಮಾರ್ಗದ ಮಾಹಿತಿ ಮತ್ತು ಸಮಯದ ಬಗ್ಗೆ ತಿಳಿದುಕೊಳ್ಳಲು ದಾರಿಹೋಕರನ್ನು ಹಾಗೂ ಇತರೆ ಬಸ್‌ ನಿರ್ವಾಹಕರನ್ನು ಕೇಳುವ ಪರಿಸ್ಥಿತಿ ಎದುರಾಗಿದೆ. ಆದಷ್ಟು ಬೇಗ ಬಸ್‌ನಿಲ್ದಾಣದಲ್ಲಿ ವೇಳಾಪಟ್ಟಿ ಆಳವಡಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.

-ರವೀಂದ್ರ ನಾಯಕ್‌, ಪ್ರಯಾಣಿಕ.

  • ತೃಪ್ತಿ ಕುಮ್ರಗೋಡು
Advertisement

Udayavani is now on Telegram. Click here to join our channel and stay updated with the latest news.

Next