Advertisement

Udupi ಅತೀ ವೇಗಕ್ಕಿಲ್ಲ ನಿಯಂತ್ರಣ: ಹೆಚ್ಚುತ್ತಿರುವ ನಿರ್ಲಕ್ಷ್ಯದ ವಾಹನ ಚಾಲನೆ

08:09 PM Nov 14, 2023 | Team Udayavani |

ಉಡುಪಿ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷ್ಯದ ವಾಹನ ಚಾಲನೆ ಹೆಚ್ಚುತ್ತಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳು ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

Advertisement

ಉಡುಪಿ ನಗರ ಬೆಳೆಯುತ್ತಿದ್ದಂತೆ ವಾಹನಗಳ ಓಡಾಟ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ 10 ವರ್ಷಗಳಲ್ಲಿ ಉಡುಪಿ ನಗರ ಅಗಾಧ ಪ್ರಮಾಣದಲ್ಲಿ ಬೆಳೆದಿದೆ. ಅಷ್ಟೇ ಪ್ರಮಾಣದಲ್ಲಿ ಟ್ರಾಫಿಕ್‌ ದಟ್ಟಣೆ,

ರಸ್ತೆ ಅಪಘಾತ ಸಂಭವಿಸುತ್ತಿದೆ. ಕೆಲವಡೆ ರಸ್ತೆಗಳು ವ್ಯವಸ್ಥಿತವಾಗಿದ್ದರೆ, ಕೆಲವು ಕಡೆಗಳಲ್ಲಿ ಅವೈಜ್ಞಾನಿಕ ಕಟ್ಟಡ ನಿರ್ಮಾಣ ರಸ್ತೆಗಳು ನಗರದಲ್ಲಿ ಟ್ರಾಫಿಕ್‌ ಜಾಮ್‌ ಮತ್ತು ಅಪಘಾತ ಸಂಖ್ಯೆ ಹೆಚ್ಚಳವಾಗಲು ಕಾರಣವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಾಹನ ಸವಾರರ ನಿರ್ಲಕ್ಷ್ಯದಿಂದಾಗಿಯೇ ಸಾಕಷ್ಟು ಅಪಘಾತ ಸಂಭವಿಸುತ್ತಿದೆ ಎಂಬುದು ಕಳವಳಕಾರಿಯಾಗಿದೆ.

ಒಂದೇ ದಿನ ಎರಡು ಸಾವು
ನಗರದ ಹೆದ್ದಾರಿ ಮತ್ತು ಪ್ರಮುಖ ರಸ್ತೆಗಳಲ್ಲಿ ವೇಗದ, ನಿರ್ಲಕ್ಷ್ಯದ ಚಾಲನೆ ಹೆಚ್ಚುತ್ತಿದೆ. ಶುಕ್ರವಾರ ಒಂದೇ ದಿನ ಇಬ್ಬರು ಪಾದಚಾರಿಗಳು ಅಪಘಾತಕ್ಕೆ ಬಲಿಯಾಗಿದ್ದಾರೆ. ಗುಂಡಿಬೈಲು, ನಿಟ್ಟೂರು ಬಾಳಿಗ ಜಂಕ್ಷನ್‌ ಬಳಿ ರಸ್ತೆ ದಾಟುತ್ತಿದ್ದ ವೇಳೆ ವಾಹನಗಳಿಗೆ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಸಂತೆಕಟ್ಟೆ-ಅಂಬಾಗಿಲು-ಅಂಬಲಪಾಡಿ, ಮಲ್ಪೆ-ಕಲ್ಮಾಡಿ, ಪೆರಂಪಳ್ಳಿ-ಅಂಬಾಗಿಲು, ಡಿಸಿ ಕಚೇರಿ -ಸಿಂಡಿಕೇಟ್‌ ಸರ್ಕಲ್‌, ಗುಂಡಿಬೈಲು-ಕಲ್ಸಂಕ ರಸ್ತೆ, ಕಡಿಯಾಳಿ, ಕುಂಜಿಬೆಟ್ಟು, ಎಂಜಿಎಂ, ಮಣಿಪಾಲ-ಅಲೆವೂರು ರಸ್ತೆ, ಶಿರಿಬೀಡು, ಬನ್ನಂಜೆ ಈ ರಸ್ತೆಗಳಲ್ಲಿ ಸಣ್ಣಪುಟ್ಟ ಮತ್ತು ಗಂಭೀರ ಅಪಘಾತ ಸಂಖ್ಯೆ ನಿರಂತರವಾಗಿದೆ. ಅನಧಿಕೃತ ಪಾರ್ಕಿಂಗ್‌, ವೇಗದ ಚಾಲನೆ, ಅವೈಜ್ಞಾನಿಕ ರಸ್ತೆ ಡಿವೈಡರ್‌ನ ತಿರುವು ಅಪಘಾತ ಹೆಚ್ಚಲು ಕಾರಣ ಎನ್ನುತ್ತಾರೆ ಸ್ಥಳೀಯರು.

ದಂಡ ಬಿಸಿಗೆ ಬಗ್ಗದ ವೇಗಿಗಳು
ಎಷ್ಟೇ ಸಂಚಾರ ನಿಯಮ ಬಿಗು ಇದ್ದರೂ ಟ್ರಾಫಿಕ್‌ ದಟ್ಟಣೆ ನಡುವೆಯೂ ಕೆಲವು ದ್ವಿಚಕ್ರ, ಕಾರು ಚಾಲಕರು ವೇಗ ತಗ್ಗಿಸದೆ ವಾಹನ ಚಾಲನೆ ಮಾಡುವ ಮೂಲಕ ಅಪಘಾತ ಸಂಭವಿಸಲು ಕಾರಣವಾಗುತ್ತಿದ್ದಾರೆ. ವೇಗದ ವಾಹನ ಚಾಲನೆ ಮಾಡುವರನ್ನು ಸಂಚಾರಿ ಪೊಲೀಸರು ಅಲ್ಲಲ್ಲಿ ತಡೆದು ದಂಡ ವಿಧಿಸುತ್ತಿದ್ದಾರೆ. ಪೊಲೀಸರ ದಂಡ ಬಿಸಿಗೂ ಕೆಲವು ವಾಹನ ಸವಾರರು ಬಗ್ಗುತ್ತಿಲ್ಲ. ವೇಗದ ಚಾಲನೆಗೆ ಮದ್ಯ, ಇನ್ನಿತರೆ ಮಾದಕ ದ್ರವ್ಯ ವ್ಯಸನವು ಕಾರಣವಾಗುತ್ತಿದೆ. ರಸ್ತೆ ಸುರಕ್ಷತೆಗೆ ಅಳವಡಿಸಿದ ಬ್ಯಾರಿಕೇಡ್‌ಗೂ
ಸಹ ಢಿಕ್ಕಿ ಹೊಡೆಯುವ ಘಟನೆಗಳು ವರದಿಯಾಗಿವೆ.

Advertisement

ಇಲಾಖಾ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ
ಸಂಚಾರ ನಿಯಮ ಮೀರುವ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯ ನಿರಂತರ ನಡೆಯುತ್ತಿದೆ. ನಗರ ವ್ಯಾಪ್ತಿಯಲ್ಲಿ ನಿರ್ಲಕ್ಷ್ಯ, ಅತೀವೇಗದ ವಾಹನ ಚಾಲನೆ ಬಗ್ಗೆ ನಿಗಾ ವಹಿಸಲಾಗಿದೆ. ಅತೀವೇಗ, ನಿರ್ಲಕ್ಷ್ಯದ ವಾಹನ ಚಾಲನೆ ಮಾಡದಂತೆ ಸಂಚಾರ ನಿಯಮಕ್ಕೆ ಸಂಬಂಧಿಸಿ ಇಲಾಖೆ ವತಿಯಿಂದ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ.
-ಶೇಖರ್‌, ಪಿಎಸ್‌ಐ, ಸಂಚಾರ ಪೊಲೀಸ್‌ ಠಾಣೆ, ಉಡುಪಿ.

– ಅವಿನ್‌ ಶೆಟ್ಟಿ

 

Advertisement

Udayavani is now on Telegram. Click here to join our channel and stay updated with the latest news.

Next