Advertisement

ಜೂನ್‌ ಕಳೆದರೂ ಧರೆಗಿಳಿಯದ ಮಳೆರಾಯ

07:55 AM Jul 09, 2019 | Suhan S |

ಚಿತ್ತಾಪುರ: ಈ ಬಾರಿ ಮುಂಗಾರು ಮಳೆ ರೈತರ ಮೇಲೆ ಮುನಿಸಿಕೊಂಡಂತೆ ಕಂಡು ಬರುತ್ತಿದೆ. ಬೇಸಿಗೆಯಲ್ಲಿ ತಾಲೂಕಿನ ಹಳ್ಳಗಳು, ಬಾವಿಗಳು, ನದಿಗಳು ಬತ್ತಿ ಹೋಗಿ ನೀರಿನ ಕೊರತೆ ಉಂಟಾಗಿತ್ತು. ರೈತರು ಮತ್ತು ತಾಲೂಕಿನ ಜನರು ಈ ಬಾರಿಯಾದರೂ ಮುಂಗಾರು ಮಳೆ ಬಂದು ಆಸರೆ ಆಗುತ್ತದೆ ಎನ್ನುವ ನಿರೀಕ್ಷೆಯಿತ್ತು. ಆದರೆ ಮುಂಗಾರು ಕಾಲಿಟ್ಟು ಒಂದು ತಿಂಗಳು ಕಳೆದರೂ ಹೇಳಿಕೊಳ್ಳುವಷ್ಟು ಮಳೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ.

Advertisement

ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ಐದು ಹೋಬಳಿಗಳು ಇವೆ. 1,43,000 ಸಾವಿರ ಹೆಕ್ಟೇರ್‌ ಪ್ರದೇಶ ಬಿತ್ತನೆಗೆ ಯೋಗ್ಯ ಪ್ರದೇಶವಾಗಿದೆ. 1,19,000 ಹೆಕ್ಟೇರ್‌ ಪ್ರದೇಶ ಖುಷ್ಕಿ (ಮಳೆಯಾದಾರಿತ), 1,435 ಹೆಕ್ಟೇರ್‌ ಪ್ರದೇಶ ನೀರಾವರಿ ಕೃಷಿ ಪ್ರದೇಶ ಹೊಂದಿದೆ.

ಪ್ರತಿ ವರ್ಷ ಕೃಷಿ ಇಲಾಖೆ ಮುಂಗಾರಿನ ನಿರ್ದಿಷ್ಟ ಪ್ರಮಾಣದ ಬಿತ್ತನೆ ಗುರಿ ಹಾಕಿಕೊಳ್ಳುತ್ತದೆ. ಹಾಗೆಯೇ ಅದರಲ್ಲಿ ಸುಮಾರು ಅರ್ಧಕ್ಕಿಂತ ಹೆಚ್ಚಿನ ಗುರಿಯನ್ನು ಜೂನ್‌ ತಿಂಗಳಲ್ಲಿ ಕಳೆದ ವರ್ಷದವರೆಗೂ ತಲುಪುತ್ತಿದ್ದರು. ಆದರೆ ಈ ಬಾರಿ ಮುಂಗಾರು ಮುನಿಸಿಕೊಂಡ ಕಾರಣ ತಾಲೂಕಿನಲ್ಲಿ ಬಿತ್ತನೆ ಪ್ರಮಾಣ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ರೈತರು ಮಾತ್ರ ಭೂಮಿ ಹದಗೊಳಿಸಿ, ಬಿತ್ತನೆ ಬೀಜಗಳನ್ನು ಸಂಗ್ರಹ ಮಾಡಿಕೊಂಡು ಮುಗಿಲು ನೋಡುತ್ತ ಕುಳಿತಿದ್ದಾರೆ.

ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕಡಿಮೆ ಪ್ರಮಾಣದಲ್ಲಾಗಿದೆ. 2018ರ ಮುಂಗಾರು ಪೂರ್ವ ಮತ್ತು ಮುಂಗಾರಿನ ತಿಂಗಳುಗಳಾದ ಏಪ್ರಿಲ್, ಮೇ, ಜೂನ್‌ ತಿಂಗಳ ಅಂತ್ಯಕ್ಕೆ ತಾಲೂಕಿನಲ್ಲಿ ಸರಾಸರಿ 126ಮೀ.ಮೀ ಮಳೆಯಾಗಿತ್ತು. ಆದರೆ ಈ ವರ್ಷದ ಜೂನ್‌ ತಿಂಗಳ ಅಂತ್ಯದವರೆಗೆ 191 ಮಿ.ಮೀ ಮಳೆ ಬರಬೇಕಿತ್ತು. ಆದರೆ ಕೇವಲ 143 ಮಿ.ಮೀ ಮಳೆಯಾಗಿರುವುದು ರೈತರಲ್ಲಿ ಚಿಂತೆ ಹೆಚ್ಚು ಮಾಡಿದೆ.

Advertisement

ಈ ವರ್ಷ ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಬೆಳೆಯಬಹುದಾದ ಪ್ರದೇಶದ ಗುರಿ ಹಾಕಿಕೊಂಡಿದ್ದರು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ 1.20 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ನಿರೀಕ್ಷೆಯಿಟ್ಟುಕೊಂಡಿತ್ತು. 89,300 ಹೆಕ್ಟೇರ್‌ ತೊಗರಿ, 13,000 ಹೆಕ್ಟೇರ್‌ ಹೆಸರು, 7,000 ಹೆಕ್ಟೇರ್‌ ಉದ್ದು, 3,000 ಹೆಕ್ಟೇರ್‌ ಹತ್ತಿ, 1,900 ಹೆಕ್ಟೇರ್‌ ಸಜ್ಜೆ, 85 ಹೆಕ್ಟೇರ್‌ ಭತ್ತ, 1,500 ಹೆಕ್ಟೇರ್‌ ಸೂರ್ಯಕಾಂತಿ, 15 ಹೆಕ್ಟೇರ್‌ ಔಡಲ ಬೆಳೆಯಬಹುದು ಎಂದು ನಿರೀಕ್ಷಿಸಲಾಗಿತ್ತು. 1,800 ಹೆಕ್ಟೇರ್‌ನಷ್ಟು ಸೋಯಾಬೀನ್‌, 1,000 ಹೆಕ್ಟೇರ್‌ ಎಳ್ಳು ಬಿತ್ತನೆಯ ಗುರಿ ಹೊಂದಲಾಗಿತ್ತು.

54,380 ಸಾವಿರ ಹೆಕ್ಟೇರ್‌ ಮಾತ್ರ ಬಿತ್ತನೆ: ತಾಲೂಕಿನಲ್ಲಿ ಒಟ್ಟು ಐದು ಹೋಬಳಿ ವ್ಯಾಪ್ತಿಯಲ್ಲಿ 1.20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿತ್ತು. ಆದರೆ ವಿಪರ್ಯಾಸ ಎನ್ನುವಂತೆ ಜೂನ್‌ ತಿಂಗಳ ಅಂತ್ಯದವರೆಗೆ ಕೇವಲ 54,380 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಹೀಗಾಗಿ ಪ್ರತಿ ವರ್ಷವೂ ರೈತರು ಮಳೆಯನ್ನೆ ಅವಲಂಬಿಸಿದ್ದು ಆಳುವ ಸರ್ಕಾರಗಳು ರೈತರ ನೆರವಿಗೆ ಬರಬೇಕಿದೆ.

ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ನಾವು ಹಾಕಿಕೊಂಡಿರುವ 1.20 ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ ಜುಲೈ 3ರ ತನಕ ಅಂದಾಜು 54,380 ಸಾವಿರ ಹೆಕ್ಟೇರ್‌ ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಿತ್ತನೆಗೆ ಮುಂದಾಗಿದ್ದಾರೆ.•ಎಸ್‌.ಎಚ್. ಗಡಗಿಮನಿ, ಸಹಾಯಕ ಕೃಷಿ ನಿರ್ದೇಶಕ

ಕಳೆದ ನಾಲ್ಕೈದು ವರ್ಷಗಳ ಹಿಂದೆ ಜೂನ್‌ ಮುಗಿಯುವ ಹಂತದಲ್ಲಿ ಹೆಚ್ಚಾಗಿ ಮಳೆಯಾಗುತ್ತಿತ್ತು. ಹೀಗಾಗಿ ಜೂನ್‌ ಮೊದಲ ವಾರದಲ್ಲಿಯೇ ಬಿತ್ತನೆಗೆ ತಯಾರಿ ಮಾಡಿಕೊಂಡು ಬಿತ್ತನೆ ಶುರು ಮಾಡಿಕೊಳ್ಳುತ್ತಿದ್ದೇವೆ. ಆದರೆ ಇದೀಗ ಬಿತ್ತನೆಗಿಂತ ಮುಂಚೆಯೆ ಮಳೆರಾಯನಿಗಾಗಿ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.•ಶರಣು ಡೋಣಗಾಂವ, ಗ್ರಾಮಸ್ಥ

 

•ಎಂ.ಡಿ. ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next