Advertisement

ಒಬಿಸಿ ಕೆನೆಪದರ ಏರಿಕೆ ಮಾಡುವ ಪ್ರಸ್ತಾಪವಿಲ್ಲ: ಕೇಂದ್ರ ಸರ್ಕಾರ

10:21 PM Feb 07, 2023 | Team Udayavani |

ನವದೆಹಲಿ: ಇತರೆ ಹಿಂದುಳಿದ ವರ್ಗ(ಒಬಿಸಿ)ಗಳ ಕೆನೆಪದರದ ಈಗಿರುವ ವಾರ್ಷಿಕ ಆದಾಯ ಮಿತಿ 8 ಲಕ್ಷ ರೂ. ಮುಂದುವರಿಯಲಿದ್ದು, ಇದನ್ನು ಏರಿಕೆ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಲೋಕಸಭೆಯಲ್ಲಿ ಮಂಗಳವಾರ ಕೇಂದ್ರ ಸರ್ಕಾರ ತಿಳಿಸಿದೆ.

Advertisement

ಒಬಿಸಿ ಕೆನೆಪದರದ ಸ್ಥಿತಿಯನ್ನು ನಿರ್ಧರಿಸಲು ವಾರ್ಷಿಕ ಆದಾಯ ಮಿತಿಯನ್ನು ಇದುವರೆಗೆ ನಾಲ್ಕು ಬಾರಿ ಪರಿಷ್ಕರಿಸಲಾಗಿದೆ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಸಮಾಜ ಕಲ್ಯಾಣ ಸಚಿವ ವಿರೇಂದ್ರ ಕುಮಾರ್‌ ತಿಳಿಸಿದರು.

2014ರಲ್ಲಿ ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು. ಇದೀಗ 654 ವೈದ್ಯಕೀಯ ಕಾಲೇಜುಗಳಿದ್ದು, ಕಾಲೇಜುಗಳ ಸಂಖ್ಯೆಯಲ್ಲಿ ಶೇ.69ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

1955ರ ಪೌರತ್ವ ಕಾಯಿದೆಯ ಅನುಸಾರ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡಲು 31 ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಅಧಿಕಾರ ನೀಡಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ್‌ ರೈ ಮಾಹಿತಿ ನೀಡಿದರು.

ಇನ್ನೊಂದೆಡೆ, 2022ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಗಳಲ್ಲಿ 30 ನಾಗರಿಕರು ಹಾಗೂ 31 ಭದ್ರತಾ ಪಡೆಯ ಸಿಬ್ಬಂದಿ ಅಸುನೀಗಿದ್ದು, 221 ಮಂದಿ ಗಾಯಗೊಂಡಿದ್ದಾರೆ ಎಂದು ರೈ ತಿಳಿಸಿದರು.

Advertisement

ಅಕ್ರಮ ಲೋನ್‌ ಆ್ಯಪ್‌ ಗಳ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) 859.15 ಕೋಟಿ ರೂ. ಮೌಲ್ಯದ ಆರೋಪಿತ ವ್ಯಕ್ತಿಗಳು ಮತ್ತು ಕಂಪನಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೇ 1999ರ ವಿದೇಶಿ ವಿನಿಮಯ ಕಾಯ್ದೆ ಅಡಿ 289.28 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಭಾಗವತ್‌ ಕರಾಡ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next