Advertisement

“ಸಹಕಾರವಿಲ್ಲದೆ ಮನುಷ್ಯನ ಜೀವನದಲ್ಲಿ ನೆಮ್ಮದಿ ಇಲ್ಲ’

02:44 PM Jan 02, 2017 | Team Udayavani |

ವಿಜಯಪುರ: ಮನುಷ್ಯನ ಜೀವನದ ಎಲ್ಲಾ ಅಂಶಗಳಲ್ಲಿಯೂ ಸಹಕಾರ ತತ್ವವೇ ಆವರಿಸಿ ಕೊಂಡಿದ್ದು, ಜೀವನಕ್ಕೆ ಆಧಾರ ಘಟಕವಾಗಿದೆ ಎಂದು ಜಿಲ್ಲಾ ಪ್ರಥಮ ಸಹಕಾರ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪಿ.ರುದ್ರಪ್ಪ ತಿಳಿಸಿದರು.

Advertisement

ಪಟ್ಟಣದ ಗಾಂಧಿಚೌಕದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಜಿಲ್ಲಾ ಪ್ರಥಮ ಸಹಕಾರ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಮೂಲ ಘಟಕ ಕುಟುಂಬದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೆ ಎಲ್ಲಾ ಚಟುವಟಿಕೆಗಳಲ್ಲಿ ಸಹಕಾರದ ಅಂಶವು ಅಡಗಿದೆ. ಸಹಕಾರವಿಲ್ಲದೇ ಸಾಮರಸ್ಯ, ನೆಮ್ಮದಿ ಇಲ್ಲ. ಸಾಹಿತ್ಯಕ್ಕೂ, ಸಹಕಾರಕ್ಕೂ ಸೇತುವೆ ನಿರ್ಮಿಸುವ ಕೆಲಸವು ಸಾಹಿತ್ಯ ಪರಿಷತ್ತಿನಿಂದ ನಡೆದಿದೆ ಎಂದು ಹೇಳಿದರು.

ಕವಿಗಳು, ಸಾಹಿತಿಗಳು, ಬರಹಗಾರರು, ಪತ್ರಕರ್ತರು, ಕೃಷಿಕರು, ವಿಜಾnನಿಗಳು, ತಂತ್ರಜ್ಞರು, ಕಾರ್ಮಿಕರು ಎಲ್ಲರಿಗೂ ಸಹಕಾರ ಬೇಕಾಗಿದ್ದು, ಎಲ್ಲರಿಂದಲೂ ಸಹಕಾರ ಕೂಡ ದೊರೆಯ ಬೇಕಾಗಿರುತ್ತದೆ ಎಂದು ವಿವರಿಸಿದರು.

ಸುಮಾರು 112 ವರ್ಷಗಳ ಇತಿಹಾಸವಿರುವ ಭಾರತದ ಸಹಕಾರ ಚಳವಳಿ ಪ್ರಪಂಚದಲ್ಲಿಯೇ ಅಮೋಘವಾದುದು. ದೇಶದಲ್ಲಿ 6 ಲಕ್ಷ ಸಹಕಾರಿ ಸಂಘಗಳೊಂದಿಗೆ 26 ಕೋಟಿ ಜನತೆಯು ಸಹಕಾರದಲ್ಲಿದ್ದಾರೆ. ರೈತರ ಸಹಕಾರ ಸಂಘ, ಮಹಿಳಾ ಸಹಕಾರ ಸಂಘ, ಪತ್ರಕರ್ತರ ಸಹಕಾರ ಸಂಘ, ಸಾರಿಗೆ ಸಹಕಾರ ಸಂಘದಂತಹ ಅನೇಕ ಸಹಕಾರ ಸಂಘಗಳಿವೆ. ರಾಜ್ಯದಲ್ಲಿ 41 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿದ್ದು, 34 ಸಾವಿರಕ್ಕೂ ಹೆಚ್ಚು ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. 4 ಸಾವಿರಕ್ಕೂ ಹೆಚ್ಚು ಮಹಿಳಾ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 24 ಬ್ಯಾಂಕ್‌ಗಳನ್ನು ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಪ್ರಮುಖ ಜೀವನಾವಶ್ಯಕವಾಗಿ ಹಾಲು ಸಹಕಾರ ಸಂಘಗಳು ಉತ್ತಮ ಕೆಲಸ ಮಾಡುತ್ತಿವೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕ ಸಹಕಾರ ಸಂಘಗಳು ಇದ್ದು, ರಾಜ್ಯದಲ್ಲಿ 14000 ಸಹಕಾರಿ ಹಾಲು ಉತ್ಪಾದಕ ಸಂಘಗಳಿವೆ. ಗುಜರಾತ್‌ ಹೊರತು ಪಡಿಸಿದರೆ, ಕರ್ನಾಟಕ ಹಾಲು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇದರಲ್ಲಿ ಬಹಳಷ್ಟು ಸಹಕಾರ ಸಂಘಗಳು ಮಹಿಳಾ ಸಹಕಾರ ಸಂಘಗಳಾಗಿವೆ ಎಂದು ತಿಳಿಸಿದರು.

Advertisement

ಸಹಕಾರಿ ಕ್ಷೇತ್ರದಲ್ಲಿ ರಾಜ್ಯಕ್ಕೆ 2ನೇ ಸ್ಥಾನ: ವರ್ಷಂಪ್ರತಿ 13000 ಕೋಟಿ ರೂ. ಸಹಕಾರ ಸಂಘಗಳಿಂದ ರೈತರಿಗೆ ಸಾಲ ನೀಡುತ್ತಿರುವ ಮಧ್ಯ ಪ್ರದೇಶ ಪ್ರಥಮ ಸ್ಥಾನದಲ್ಲಿದ್ದರೆ, 11000 ಕೋಟಿ ರೂ.ಗೂ ಹೆಚ್ಚು ಸಾಲವನ್ನು ಸಹಕಾರ ಸಂಘಗಳಿಂದ ನೀಡುತ್ತಿರುವ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. 282 ಸಹಕಾರಿ ಬ್ಯಾಂಕುಗಳು ಇದ್ದು, ಅದರಲ್ಲಿ 24 ಸಹಕಾರಿ ಬ್ಯಾಂಕ್‌ಗಳನ್ನು ಮಹಿಳೆಯರು ಅತ್ಯುತ್ತಮ ರೀತಿಯಲ್ಲಿ ನಡೆಸುತ್ತಿರುವರು ಎಂದು ತಿಳಿಸಿದರು.

ನೋಟು ರದ್ದತಿ ಕ್ರಮಕ್ಕೆ ಸಹಕರಿಸಿ: ಮಾಜಿ  ಶಾಸಕ ಜಿ.ಚಂದ್ರಣ್ಣ ಮಾತನಾಡಿ, ಕನ್ನಡದ ಕೆಲಸಗಳಿಗೆ ಯಾರನ್ನೇ ಆದರೂ ತಾಂಬೂಲ ನೀಡಿ, ಆಹ್ವಾನಿಸುವ ಅವಶ್ಯಕತೆ ಇಲ್ಲ. ಕೇವಲ ಸುದ್ದಿ ಮುಟ್ಟಿಸಿದರೆ ಸಾಕು ಎಲ್ಲರೂ ಹುರುಪಿನಿಂದ ಭಾಗವಹಿಸಬೇಕು.  ನೋಟು ರದ್ದತಿಯಿಂದ ಹಣಕಾಸಿನ ಸಮಸ್ಯೆ ಇದೆ. ಕೆಲವೇ ದಿನಗಳಲ್ಲಿ ನಿವಾರಣೆಯಾಗಲಿದೆ. ಪ್ರಧಾನಿ ಬದಲಾವಣೆ ತರಲು ಹೊರಟಿರುವ ಕಾರ್ಯಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಬೇಕೆಂದರು.

ನೆಲಮಂಗಲ ತಾಲೂಕು ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿ, ಕವಿಗೆ ಕಾಯ ಕೃಷವಾದರೂ ಕವಿತ್ವಕ್ಕೆ ವಯಸ್ಸಾಗುವುದಿಲ್ಲ. ಕವಿಯಾಗುವವರು ಕಾವ್ಯಮೀಮಾಂಸೆಯ ಅರಿವು ಹೊಂದಿ ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ವಚನಸಾಹಿತ್ಯ, ಜನಪದಸಾಹಿತ್ಯಗಳಲ್ಲಿ ಮೌಲ್ಯಗಳು ಅಡಗಿದ್ದು ಬದುಕಿನ ಮಾರ್ಗವನ್ನು ತಿಳಿಸುತ್ತವೆ. ಕನ್ನಡ ಸಾಹಿತ್ಯವನ್ನು ಬಾಲ್ಯದಿಂದಲೇ ಓದಲು ಪ್ರೇರೇಪಿಸಬೇಕು ಎಂದು ನಿರ್ದೇಶಿಸಿದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಮಾಜಿ ಉಪಾಧ್ಯಕ್ಷ ಪಾಪನಹಳ್ಳಿ ಎಂ.ನಾರಾಯಣಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್‌, ದೇವನಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಎನ್‌.ರಾಜಗೋಪಾಲ್‌, ನೆಲಮಂಗಲ ಕಸಾಪ ಅಧ್ಯಕ್ಷ ಹೊನ್ನಶಾಮಯ್ಯ, ಟಿ.ಡಿ.ಎನ್‌.ಮೂರ್ತಿ, ಟಿ.ನಾಗರಾಜ್‌,ಕೆ.ಎಂ.ಚೌಡೇಗೌಡ, ಸ್ವರ್ಣಗೌರಿ ಮಹದೇವ್‌, ಜಿಲ್ಲಾ ಮಹಿಳಾ ಕಸಾಪ ಅಧ್ಯಕ್ಷೆ ಪುನೀತಾ ನಟರಾಜ್‌, ಬಿಜೆಪಿ ಟೌನ್‌ ಮಾಜಿ ಅಧ್ಯಕ್ಷ ರಾಮುಭಗವಾನ್‌, ರಾಮಕೃಷ್ಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಸಮಾರೋಪ: ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್‌.ಎಸ್‌.ರುದ್ರೇಶಮೂರ್ತಿ  ಸಮಾರೋಪ ಭಾಷಣ ಮಾಡಿ, ಪಂಪನಿಂದ ಹಿಡಿದು ಕುವೆಂಪುವರೆಗೆ ಅನೇಕ ಮಹಾಕವಿಗಳನ್ನು ನೀಡಿದ ಅನೇಕರಿಗೆ ಆಶ್ರಯವಿತ್ತ ನಾಡು ಕನ್ನಡನಾಡು. ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ಕನ್ನಡನಾಡು ಅನೇಕ ಸಿಡಿಲಮರಿಗಳಿಗೆ ಜನ್ಮವಿತ್ತಿದ್ದು, ಎಲ್ಲರೂ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಬೇಕಿದೆ ಎಂದು ಸಲಹೆ ನೀಡಿದರು. 
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ
ಸಹಕಾರ ಮಹಾ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಸುಮಾರು 2500ಕ್ಕೂ ಹೆಚ್ಚು ಭರತನಾಟ್ಯ ಪ್ರದರ್ಶನ ನೀಡಿದ ಖ್ಯಾತಿಯ ಹೊಸಕೋಟೆಯಕುಮಾರಿ ಕೃತಿ ಅವರ ಭರತನಾಟ್ಯ ಎಲ್ಲರನ್ನೂ ಆಕರ್ಷಿಸಿತು. 

ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು ಅವರ ನಿರ್ದೇಶನದಲ್ಲಿ ಘಂಟಸಾಲ ಖ್ಯಾತಿ ಮಹಾ ತ್ಮಾಂಜನೇಯರವರು ಹಳೆಯ ಚಲನಚಿತ್ರ ಹಾಗೂ ಭಾವಗೀತೆಗಳನ್ನು ಹಾಡಿದರು. ಪೊ›.ಟಿ.ಯಲ್ಲಪ್ಪ ಅವರ ಅಧ್ಯಕ್ಷತೆಯಲ್ಲೂ ಕವಿಗೋಷ್ಠಿ ನಡೆಯಿತು. ಸುಮಾರು 20 ಮಂದಿ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಚಲನಚಿತ್ರ ನಿರ್ದೇಶಕ ಎಲ್‌.ಎನ್‌.ಮುಕುಂದರಾಜು ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ನವೀನ್‌ಕುಮಾರ್‌ ಅವರು ಕರ್ನಾಟಕ ಏಕೀಕರಣ ಕುರಿತು, ಚಂದ್ರಶೇಖರಯ್ಯ ಅವರು ವಚನಕಾರರ ಕುರಿತು ವಿಷಯ ಮಂಡಿಸಿದರು.

ಹಿರಿಯ ಸಾಹಿತಿ ಬೆ.ಕಾ.ಮೂರ್ತಿಶ್ವರಯ್ಯ ಅಧ್ಯಕ್ಷತೆಯಲ್ಲಿ ಬಿ.ಆರ್‌.ಮಂಜುನಾಥ್‌  ಸಾವಯವ ಕೃಷಿ ಕುರಿತು, ಸ್ವರ್ಣಗೌರಿ ಮಹದೇವ್‌ ಮಹಿಳಾ ಸಬಲೀಕರಣ ಕುರಿತು, ಮಳ್ಳೂರು ಶಿವಣ್ಣ ಜಿಲ್ಲಾ ಜಲ ಸಮಸ್ಯೆ ಕುರಿತು ಮಾತನಾಡಿದರು. ಆಯಾ ಕಾಲಘಟ್ಟಕ್ಕೆ ಸರಿಹೊಂದುವಂತೆ ಸಾಹಿತ್ಯ ಕವಿತೆ ರಚಿಸಿದರೆ ಮಾತ್ರ ಜನರಿಗೆ ಮತ್ತು ವಿಶೇಷವಾಗಿ ಯುವಕರಿಗೆ ತಲುಪಲು ಸಾಧ್ಯ ಎಂದು ಮುಕುಂದರಾಜ್‌ ತಿಳಿಸಿದರು.

ಮುಂದಿನ ದಿನಗಳಲ್ಲಿ ಕೃಷಿ, ಕೈಗಾರಿಕೆ, ಸಹಕಾರಿ ಕ್ಷೇತ್ರ ಗಳ ಬಗ್ಗೆ ಸಾಹಿತ್ಯ ಪರಿಷತ್‌ಗಳಂತಹ ಬೃಹತ್‌ ಸಭೆಗಳಲ್ಲಿ ಚರ್ಚೆ, ಚಿಂತನಗೋಷ್ಠಿಗಳನ್ನು ನಡೆಸಬೇಕಾಗಿದೆ.
-ಪಿ.ರುದ್ರಪ್ಪ, ಜಿಲ್ಲಾ ಪ್ರಥಮ ಸಹಕಾರ ಸಾಹಿತ್ಯ ಸಮ್ಮೇಳನಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next