ಕುಳಗೇರಿ ಕ್ರಾಸ್: ಗ್ರಾಮದಿಂದ ಬಾದಾಮಿ ತೆರಳುವ ರಾಜ್ಯ ಹೆದ್ದಾರಿ ಮುಖ್ಯ ರಸ್ತೆಗೆ ಹೊಂದಿಕೊಂಡ ಪ್ರವಾಸಿ ಮಂದಿರ (ಅತಿಥಿಗೃಹ) ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿದೆ. ಬಾದಾಮಿ, ಬನಶಂಕರಿ, ಶಿವಯೋಗ ಮಂದಿರ, ಮಹಾಕೂಟ, ಪಟ್ಟದಕಲ್ಲು, ಐಹೊಳೆ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಬರುವ ಪ್ರವಾಸಿಗರ ಅನುಕೂಲಕ್ಕೆಂದು 1964ರಲ್ಲೇ ನಿರ್ಮಿಸಿದ ಪ್ರವಾಸಿ ಮಂದಿರ ಉಪಯೋಗಕ್ಕೆ ಬಾರದಂತಾಗಿದೆ.
ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆ ಪ್ರವೇಶ ಮಾಡುವ ಮೊದಲ ಗ್ರಾಮ ಇದಾಗಿದ್ದು, ವಾಸ್ತವ್ಯಕ್ಕಾಗಿ ಇಲ್ಲಿಗೆ ಸಾಕಷ್ಟು ಅಧಿಕಾರಿಗಳು ಬರುತ್ತಿದ್ದರು. ಆದರೆ, ಕೆಲ ವರ್ಷಗಳಿಂದ ಪ್ರವಾಸಿ ಮಂದಿರ ಪಾಳುಬಿದ್ದ ಬಂಗಲೆಯಂತಾಗಿದೆ. ಈ ಪ್ರವಾಸಿ ಮಂದಿರ ನಿರ್ಮಾಣ-ನಿರ್ವಹಣೆಗೆ ಸರ್ಕಾರ ಹಣ ಖರ್ಚು ಮಾಡುತ್ತಿದ್ದರೂ ಉಪಯೋಗಕ್ಕೆ ಬಾರದೆ ವ್ಯರ್ಥವಾಗುತ್ತಿದೆ.
ಈ ಪ್ರವಾಸಿ ಮಂದಿರದಲ್ಲಿ ಮಲಪ್ರಭಾ-ಘಟಪ್ರಭಾ ನಾಮಫಲಕಗಳುಳ್ಳ ಎರಡು ಕೋಣೆಗಳಿದ್ದು, ಅವುಗಳಿಗೆ ಬೀಗ ಹಾಕಲಾಗಿದೆ. ಈ ಹಿಂದೆ ಒಂದು ಕುಟುಂಬದವರು ಅಲ್ಲಿಯೇ ಇದ್ದು, ಸ್ವಚ್ಛಗೊಳಿಸುವುದರ ಜತೆಗೆ ಬಂದ ಅತಿಥಿಗಳಿಗೆ ಉಪಚರಿಸುತ್ತಿದ್ದರು. ಆದರೀಗ ಇಲ್ಲಿ ಯಾರೂ ಇಲ್ಲ.
ಮಾಡಿದ ಖರ್ಚು ನೀರು ಪಾಲು: ಈ ಪ್ರವಾಸಿ ಮಂದಿರಕ್ಕೆ ಪ್ರತಿ ಬಾರಿಯೂ ಸುಣ್ಣ-ಬಣ್ಣ ಎಂದು ಸಾಕಷ್ಟು ಹಣ ಖರ್ಚು ಮಾಡಲಾಗುತ್ತದೆ. ಮತ್ತೆ ದುರಸ್ತಿ ಮಾಡಲಾಗುತ್ತದೆ. ವಾಟರ್ ಸೋಲಾರ್ ಅಳವಡಿಸಲಾಗಿದ್ದರೂ ಉಪಯೋಗಿಸುವವರೇ ಇಲ್ಲದಂತಾಗಿದೆ. ಇದ್ದ ಎರಡು ರೂಂಗಳಿಗೆ ಎಸಿ ಅಳವಡಿಸಲಾಗಿದೆಯಾದರೂ ಪ್ರಯೋಜನಕ್ಕೆ ಬಾರದಂತಾಗಿದೆ.
ಕುಡುಕರ ಅಡ್ಡೆ: ಈ ಪ್ರವಾಸಿ ಮಂದಿರದಲ್ಲಿ ನಿರ್ವಹಣೆ ಮಾಡಲು ಯಾರೂ ಇರದೇ ಇರುವುದರಿಂದ ಈಗ ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ. ಮುಖ್ಯ ಗೇಟ್ ಇದ್ದರೂ ಕೀಲಿ ಹಾಕದ ಕಾರಣ ಅನೈತಿಕ ಚಟುವಟಿಕೆಗೆ ಅನುಕೂಲ ಮಾಡಿಕೊಟ್ಟಂತಾಗಿದೆ.
-ಮಹಾಂತಯ್ಯ ಹಿರೇಮಠ