Advertisement

ನಾಮಪತ್ರ ಸಲ್ಲಿಕೆ ಶುರುವಾದರೂಸಿಗದ ಬಿ ಫಾರಂ!

03:38 PM Aug 13, 2018 | |

ರಾಯಚೂರು: ಒಂದು ಕಾಲಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಕರೆದು ಟಿಕೆಟ್‌ ಕೊಡುವ ಸನ್ನಿವೇಶವಿತ್ತು. ಆದರೆ, ಈಗ ಅಂಗಲಾಚಿ ಬೇಡಿದರೂ ಟಿಕೆಟ್‌ ಸಿಗದಂಥ ಸನ್ನಿವೇಶ ನಿರ್ಮಾಣವಾಗಿದೆ. ಒಂದೆಡೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿ ಮೂರು ದಿನಗಳಾದರೆ, ಮತ್ತೂಂದೆಡೆ ಪಕ್ಷಗಳು ಅಭ್ಯರ್ಥಿಗಳನ್ನೇ ಅಂತಿಮಗೊಳಿಸಿಲ್ಲ.

Advertisement

ಅದರಲ್ಲೂ ಬಿಜೆಪಿ, ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ ಜೋರಾಗಿದೆ. ಟಿಕೆಟ್‌ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳಿಗೆ ಎಲ್ಲಿ ಟಿಕೆಟ್‌ ಕೈ ತಪ್ಪುವುದೋ ಎನ್ನುವ ಆತಂಕ ಹೆಚ್ಚಾಗುತ್ತಿದ್ದು, ಬೇರೆ ಪಕ್ಷಗಳ ಕಡೆ ಮುಖ ಮಾಡುತ್ತಿದ್ದಾರೆ. ಆದರೆ, ಈ ಹಿಂದೆ ನಗರಸಭೆಯಲ್ಲಿ ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗದ ಕಾರಣ ಕಾಂಗ್ರೆಸ್‌ ಜೆಡಿಎಸ್‌ ಸೇರಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದವು. ಆದರೆ, ಈ ಬಾರಿ ಮೂರೂ ಪಕ್ಷಗಳು ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸದಲ್ಲಿವೆ.

ಅಲ್ಲದೇ, ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವಿದ್ದರೂ ಸ್ಥಳೀಯ ಸಂಸ್ಥೆಗಳಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮುಖಂಡರು ಸ್ಪಷ್ಟಪಡಿಸಿದ್ದಾರೆ. ಎಲ್ಲ ವಾರ್ಡ್‌ಗಳಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ.

ಮುಖಂಡರ ಮನೆಗೆ ಅಲೆದಾಟ: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಆಕಾಂಕ್ಷಿಗಳು ಟಿಕೆಟ್‌ ಪಡೆಯುವ ಪ್ರಹಸನಕ್ಕೆ ಮುಂದಾಗಿದ್ದಾರೆ. ಆಯಾ ಪಕ್ಷಗಳ ಮುಖಂಡರು, ಜಿಲ್ಲಾಧ್ಯಕ್ಷರು, ಶಾಸಕರ ಮನೆಗಳಿಗೆ ಬೆಂಬಲಿಗ ಪಡೆ ಕಟ್ಟಿಕೊಂಡು ಲಗ್ಗೆ ಇಡುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ತಾವು ಪಕ್ಷಕ್ಕಾಗಿ ದುಡಿದ ಸಂಗತಿಗಳನ್ನು ಮನದಟ್ಟು ಮಾಡುವ ಯತ್ನದಲ್ಲಿದ್ದಾರೆ. ಆದರೆ, ಮುಖಂಡರೇ ಕೈಗೆ ಸಿಗುತ್ತಿಲ್ಲ. ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌ .ಬೋಸರಾಜ, ಸಂಸದ ಬಿ.ವಿ.ನಾಯಕ, ನಗರ ಶಾಸಕ ಶಿವರಾಜ ಪಾಟೀಲ, ವಸಂತಕುಮಾರ, ಸೈಯ್ಯದ್‌ ಯಾಸಿನ್‌ ಸೇರಿ ಆಯಾ ಕ್ಷೇತ್ರಗಳ ಶಾಸಕರು, ಮುಖಂಡರ ಮನೆ ಮುಂದೆ ಸ್ಪರ್ಧಾಕಾಂಕ್ಷಿಗಳು ಜಮಾಯಿಸುತ್ತಿದ್ದಾರೆ. ಅದರಲ್ಲಿ ಕೆಲ ಮುಖಂಡರು ಕೈಗೆ ಸಿಕ್ಕರೂ ಸಮಜಾಯಿಷಿ ನೀಡಿ ಕಳುಹಿಸುತ್ತಿದ್ದರೆ, ಕೆಲವರು ಕೈಗೆ ಸಿಗುತ್ತಿಲ್ಲ. ಟಿಕೆಟ್‌ ನಿರೀಕ್ಷೆಯಲ್ಲಿ ಕೆಲ ನಾಯಕರು ಪಕ್ಷಾಂತರ ಮಾಡುತ್ತಿದ್ದಾರೆ.

ಈಚೆಗೆ ನಗರಕ್ಕೆ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಕೆಲವರು ಬಿಜೆಪಿ ಸೇರಿದರು. ಕೆಲವರು ಟಿಕೆಟ್‌ ತಮಗೇ ಸಿಗುವ ಅಚಲ ನಿಲುವಿನಲ್ಲಿ ಭಗೀರಥ ಯತ್ನ ನಡೆಸಿದ್ದಾರೆ. 

Advertisement

ಜಾತಿ ಲಾಬಿ ಜೋರು: ಟಿಕೆಟ್‌ ಕೇಳುತ್ತಿರುವ ಆಕಾಂಕ್ಷಿಗಳು ಕೇವಲ ಹಣ ಬಲ, ತೋಳ್ಬಲ ಮಾತ್ರವಲ್ಲದೇ ಜಾತಿ ಬಲವನ್ನೂ ಪ್ರದರ್ಶಿಸುತ್ತಿದ್ದಾರೆ. ನಮ್ಮ ಸಮಾಜದವರ ಜನಸಂಖ್ಯೆ ಹೆಚ್ಚಿದ್ದು, ಟಿಕೆಟ್‌ ಕೊಡಿ ಎಂದು ಕೇಳುತ್ತಿದ್ದಾರೆ. ಅಲ್ಲದೇ, ಕೆಲ ವಾರ್ಡಗಳಲ್ಲಿ ಹೆಚ್ಚು ಜನಸಂಖ್ಯೆ ಇರುವ ಜಾತಿ ಬಿಟ್ಟು ಬೇರೆ ಜಾತಿಯವರಿಗೆ ಮೀಸಲಾತಿ ಸಿಕ್ಕಿದೆ. ತಮ್ಮ
ಜಾತಿ ಜನರಿರುವ ಕಡೆ ಮೀಸಲಾತಿ ಸಿಕ್ಕವರು ಮಾತ್ರ ಟಿಕೆಟ್‌ಗಾಗಿ ಬೆನ್ನು ಬಿದ್ದಿದ್ದಾರೆ. ಇನ್ನು ತಮ್ಮ ಜಾತಿ ಜನರಿಗೆ ಇನ್ನಿಲ್ಲದ ಆಮಿಷವೊಡ್ಡುತ್ತಿರುವ ಸ್ಪರ್ಧಾಕಾಂಕ್ಷಿಗಳು ಈಗಾಗಲೇ ಮುಂಗಡ ಹಣ ನೀಡಿ ನಿಷ್ಠೆ ಪ್ರದರ್ಶಿಸುತ್ತಿದ್ದಾರೆ.
 
ಅಂತಿಮಗೊಳ್ಳದ ಪಟ್ಟಿ: ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಮೂರು ಪಕ್ಷಗಳು, ನಾಮಪತ್ರ ಸಲ್ಲಿಕೆ ಅಂತಿಮ ದಿನವೇ ಬಿ ಫಾರಂ ನೀಡುವ ಯೋಚನೆಯಲ್ಲಿವೆ. ಇಲ್ಲವಾದರೆ ಅನಗತ್ಯ ಗೊಂದಲ ಸೃಷ್ಟಿಯಾಗಬಹದು ಎಂಬ ಕಾರಣಕ್ಕೆ ಟಿಕೆಟ್‌ ಆಕಾಂಕ್ಷಿಗಳನ್ನು ಸಮಾಧಾನಪಡಿಸುತ್ತಿದ್ದಾರೆ. ಪ್ರತಿ ವಾರ್ಡ್‌ನಿಂದ ಪ್ರತಿ ಪಕ್ಷಕ್ಕೆ 3-4 ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಬಿಜೆಪಿಯವರು ಆ.16ರಂದೇ ಬಿ ಫಾರಂ ನೀಡುವ ಚಿಂತನೆಯಲ್ಲಿದ್ದಾರೆ. ಜೆಡಿಎಸ್‌ ನವರು ಸೋಮವಾರ ಅಂತಿಮಗೊಳಿಸುವ ಸಾಧ್ಯತೆಗಳಿವೆ.

ಈ ಬಾರಿ ಸ್ಥಳೀಯ ಸಂಸ್ಥೆಗಳ ಟಿಕೆಟ್‌ಗೆ ಭಾರೀ ಡಿಮಾಂಡ್‌ ಇದೆ. ಒಂದೊಂದು ವಾರ್ಡ್‌ಗೆ ಮೂರ್‍ನಾಲ್ಕು ಜನ ಆಕಾಂಕ್ಷಿಗಳಿದ್ದಾರೆ. ಎಲ್ಲರನ್ನು ಸಮಾಧಾನಪಡಿಸುತ್ತಿದ್ದೇವೆ. ಪಕ್ಷಕ್ಕಾಗಿ ಶ್ರಮಿಸಿದವರಿಗೆ ಆದ್ಯತೆ ಸಿಗಲಿದೆ. ಹೀಗಾಗಿ
ಆ.16ರಂದೇ ಎಲ್ಲರಿಗೂ ಬಿ ಫಾರಂ ನೀಡಲು ನಿರ್ಧರಿಸಲಾಗಿದೆ.
 ಶರಣಪ್ಪಗೌಡ ಜಾಡಲದಿನ್ನಿ, ಬಿಜೆಪಿ ಜಿಲ್ಲಾಧ್ಯಕ್ಷಾ

ಪ್ರತಿ ವಾರ್ಡ್‌ನಿಂದ ಕನಿಷ್ಠ ಮೂರ್‍ನಾಲ್ಕು ಜನ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಸಭೆ ನಡಸಿದ್ದು, ಅಭ್ಯರ್ಥಿಗಳನ್ನು
ಅಂತಿಮಗೊಳಿಸಲಾಗಿದೆ. ಸೋಮವಾರ ಅಧಿಕೃತವಾಗಿ ಪ್ರಕಟಿಸುವ ಉದ್ದೇಶವಿದೆ.
 ಎಂ.ವಿರೂಪಾಕ್ಷಿ, ಜೆಡಿಎಸ್‌ ಜಿಲ್ಲಾಧ್ಯಕ್ಷಾ

Advertisement

Udayavani is now on Telegram. Click here to join our channel and stay updated with the latest news.

Next