Advertisement

ದೇಶಸೇವೆಗೆ ಮೇಲ್ವರ್ಗದವರ ತ್ಯಾಗ ಏನಿಲ್ಲ: ಸತೀಶ

12:10 PM Apr 17, 2019 | Team Udayavani |

ಬೆಳಗಾವಿ: ಅಧಿಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ 130 ಕೋಟಿ ಜನರನ್ನು ಹುಚ್ಚರನ್ನಾಗಿಸುತ್ತಿದ್ದಾರೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ವಾಗ್ಧಾಳಿ ನಡೆಸಿದರು.

Advertisement

ಕಡೋಲಿ ಗ್ರಾಮದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹಿಂದುತ್ವ ಹಾಗೂ ಕಾಶ್ಮೀರದ ವಿಷಯದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಕಾಶ್ಮೀರವನ್ನು ಸೇನೆ ಮತ್ತು ಸರಕಾರ ನಿಭಾಯಿಸುತ್ತದೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕೆಲಸವಲ್ಲ. ದೇಶದ ಗಂಭೀರ ಸಮಸ್ಯೆ ಬಗ್ಗೆ ಸ್ವಂತ ಲಾಭಕ್ಕಾಗಿ ಬಳಸಿಕೊಂಡು ಕೀಳುಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ವಾಗ್ಧಾಳಿ ನಡೆಸಿದರು.

ದೇಶ ಸೇವೆಯಲ್ಲಿ ದಲಿತರು, ಹಿಂದುಳಿದವರು, ಮುಸ್ಲಿಂ ಜನರೇ ಹೆಚ್ಚು ಪ್ರಾಣತ್ಯಾಗ ಮಾಡಿದ್ದಾರೆ ಹೊರತು ಮೇಲ್ವರ್ಗದವರು ಸೇನೆಗಾಗಿ ಜೀವ ಬಿಟ್ಟ ಇತಿಹಾಸವಿಲ್ಲ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಆಡಳಿತ ಅವಧಿಗಿಂತ ಮೋದಿ ಆಡಳಿತದಲ್ಲಿಯೇ ಹೆಚ್ಚು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ ಸರಕಾರ ಇದ್ದಾಗಲೂ ಹಲವು ಬಾರಿ ಸರ್ಜಿಕಲ್‌ ಸ್ಟ್ರೈಕ್‌ ನಡೆದಿವೆ. ಅದರ ಶ್ರೇಯಸ್ಸು ಸೇನೆಗೆ ನೀಡಿದೆ. ಆದರೆ ಮೋದಿ ಅವರು ಇದನ್ನು ರಾಜಕೀಯ ಲಾಭಕ್ಕೆ ಬಳಿಸಿಕೊಂಡಿದ್ದು, ದುರಂತವೇ ಸರಿ ಎಂದು ಟೀಕಿಸಿದರು.

ಪಾಕಿಸ್ತಾನವನ್ನು ಟೀಕಿಸಿ ಭಾಷಣ ಮಾಡುವ ಪ್ರಧಾನಿಯೇ ಪಾಕಿಸ್ತಾನಕ್ಕೆ ತೆರಳಿ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ತಬ್ಬಿಕೊಂಡು ಬಿರ್ಯಾನಿ ತಿಂದು ಬಂದಿದ್ದಾರೆ. ಇಂಥವರು ಹಿಂದುತ್ವದ ಬಗ್ಗೆ ಪಾಠ ಮಾಡುತ್ತಾರೆ ಎಂದು ಸತೀಶ ಜಾರಕಿಹೊಳಿ ಲೇವಡಿ ಮಾಡಿದರು.

ಬಿಜೆಪಿ ನಾಯಕರು, ಮುಖಂಡರು ಅಂತರ್ಜಾತಿ ಮದುವೆಮಾಡಿಕೊಂಡರೆ ಇವರ ತಕರಾರಿಲ್ಲ. ಸಾಮಾನ್ಯ ಜನರು ಅಂತರ್ಜಾತಿ ಮದುವೆಯಾದರೆ ಮರ್ಯಾದೆ ಹತ್ಯೆಗೆ ಪ್ರೇರಣೆ ನೀಡುತ್ತಾರೆ. ಇದೆಂತಹ ನ್ಯಾಯ, ಒಂದೆಡೆ ಗೋಹತ್ಯೆಗಾಗಿ ಜನರ ಹತ್ಯೆ ನಡೆಯುತ್ತಿದ್ದರೆ ಮತ್ತೂಂದೆಡೆ ಮೋದಿ ಆಡಳಿತದಲ್ಲಿಯೇ ಅತೀ ಹೆಚ್ಚು ಗೋಮಾಂಸ ವಿದೇಶಕ್ಕೆ ರಫ್ತಾಗಿದೆ ಎಂದು ದೂರಿದರು.

Advertisement

ಕಳೆದ 10 ವರ್ಷದಲ್ಲಿ ಕಡೋಲಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಕ್ಷೇತ್ರದ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದೇವೆ. ಕೆಲವರು ನಮ್ಮ ವಿರುದ್ದ ಗುಂಪು ಕಟ್ಟಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ.

ಇದರ ಬಗ್ಗೆ ಗಮನ ಹರಿಸಬೇಡಿ. ಸಾರಾಯಿ, ಹಣದ ಆಮಿಷಕ್ಕೆ ಯಾರು ಒಳಗಾಗಬೇಡಿ. ಅಭಿವೃದ್ಧಿಯ ಕನಸು ಕಟ್ಟಿಕೊಂಡಿರುವ ಪ್ರಕಾಶ ಹುಕೇರಿ ಅವರಿಗೆ ಹೆಚ್ಚು ಮತಗಳ ನೀಡುವ ಮೂಲಕ ಆರಿಸಿ ತರಬೇಕು ಎಂದರು. ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಂಸಿ ಸದಸ್ಯ ಆನಂದ ಪಾಟೀಲ್‌, ರಾಜು ಮಾಯನ್ನಾ, ಸಂದೀಪ್‌ ಇತರರು ಉಪಸ್ಥಿತರಿದ್ದರು.

ಕೋಮುವಾದಿಗಳನ್ನು ದೂರವಿಡಲು ಎಲ್ಲರೂ ಒಂದಾಗುವುದು ಅವಶ ಅಥಣಿ: ದೇಶದಲ್ಲಿ ಎಲ್ಲಿಯೂ ಮೋದಿ ಹವಾ ಇಲ್ಲ. ಮೋದಿ ಎರಡನೇ ಬಾರಿ ಧಾನಿಯಾಗುವುದನ್ನು ತಡೆಯಲು ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಘರ್ಷ ಮಾಡಬೇಕಾಗಿದೆ ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿಗಳನ್ನು ದೂರ ಇಡಲು ಎಲ್ಲರೂ ಒಂದಾಗಬೇಕಾಗಿದೆ. ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ರಚಿಸಲಿದೆ. ಅಥಣಿ ಮತಕ್ಷೇತ್ರದಲ್ಲಿ ಸ್ಥಳೀಯ ಶಾಸಕ ಮಹೇಶ ಕುಮಠಳ್ಳಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲರ ಒಗ್ಗಟ್ಟಾಗಿದ್ದರಿಂದ ಅಥಣಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಜಯಭೇರಿಯನ್ನು ಬಾರಿಸಿದೆ. ಅದೇ ರೀತಿ ಲೋಕಸಭಾ ಅಭ್ಯರ್ಥಿ ಕೂಡಾ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಎಲ್ಲರೂ ಪ್ರಯತ್ನಿಸಬೇಕು. ಕಾಂಗ್ರೆಸ್‌ ಪಕ್ಷಕ್ಕೆ ಬಲ ತುಂಬುವ ಕಾರ್ಯ ನಡೆದಿದೆ. ಕಾಂಗ್ರೆಸ್‌ ಪಕ್ಷದ ಮತ ಬ್ಯಾಂಕ್‌ ಆಗಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮತಗಳು ಹರಿದು ಹಂಚಿ ಹೋಗದಂತೆ ಕಾಳಜಿ ವಹಿಸಲಾಗುವುದು ಎಂದರು.

ಈ ಬಾರಿ ಮತ್ತೆ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಭರ್ಜರಿ ಗೆಲುವು ಸಾಧಿ ಸಲಿದ್ದಾರೆ. ಹುಕ್ಕೇರಿಯವರ ಗೆಲುವಿಗೆ ಜೆಡಿಎಸ್‌ ಮುಖಂಡರು ಹಾಗೂ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸ್ಥಳೀಯ ಮುಖಂಡರಿಗೆ ಸೂಚಿಸಲಾಗಿದೆ. ಕಾಂಗ್ರೆಸ್‌ ಪಕ್ಷದ ಮತ ಬ್ಯಾಂಕ್‌ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

ಈ ವೇಳೆ ಅಥಣಿ ಶಾಸಕ ಮಹೇಶ ಕುಮಠಳ್ಳಿ, ಮಾಜಿ ಶಾಸಕ ಶಹಜಾನ ಡೊಂಗರಗಾಂವ, ಲಕ್ಷ್ಮಣರಾವ ಚಿಂಗಳೆ, ಅರ್ಷದ ಗದ್ಯಾಳ, ಆಶಾ ಐಹೊಳೆ, ಸದಾಶಿವ ಬುಟಾಳಿ, ಗಿರೀಶ ಬುಟಾಳಿ, ಸಿದ್ದಾರ್ಥ ಸಿಂಗೆ, ಸತ್ಯಾಪ್ಪ ಬಾಗೆನ್ನವರ, ರಮೇಶ ಸಿಂದಗಿ, ಅನಿಲ ಸುಣದೋಳಿ, ನಿಂಗಪ್ಪ ನಂದೇಶ್ವರ, ಸುನಿತಾ ಐಹೊಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next