Advertisement

ಗೃಹ ಮಂಡಳಿಯಿಂದ ಇನ್ನು ಮುಂದೆ ಹೊಸ ಬಡಾವಣೆ ಇಲ್ಲ: ಸೋಮಣ್ಣ

03:49 PM Jul 08, 2022 | Team Udayavani |

ಬೆಂಗಳೂರು: ಭೂಸ್ವಾಧೀನ ವೆಚ್ಚ ದುಬಾರಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ಮುಂದೆ ಹೊಸ ಬಡಾವಣೆ ನಿರ್ಮಾಣ ಮಾಡದಿರಲು ಕರ್ನಾಟಕ ಗೃಹ ಮಂಡಳಿ ತೀರ್ಮಾನಿಸಿದೆ. ಬಡಾವಣೆ ನಿರ್ಮಾಣಕ್ಕೆ ಅಗತ್ಯ ಜಮೀನು ಸಿಗುತ್ತಿಲ್ಲ. ಜತೆಗೆ ಭೂಮಿ ದರ ಹೆಚ್ಚಳಗೊಂಡಿದೆ.

Advertisement

ಹೀಗಾಗಿ, ಗೃಹ ಮಂಡಳಿ ವತಿಯಿಂದ ಬಡಾವಣೆ ರಚನೆ ಕಷ್ಟ. ಆದರೆ, ಕನಿಷ್ಠ 50 ಎಕರೆ ಜಮೀನು ಇರುವ ಮಾಲೀಕರು ಮುಂದೆ ಬಂದರೆ ಖಾಸಗಿ ಸಹಭಾಗಿತ್ವದಲ್ಲಿ ಬಡಾವಣೆ ರಚನೆ ಮಾಡಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಖಾಸಗಿ ಸಹಭಾಗಿತ್ವದಲ್ಲಿ ನಗರ ಪ್ರದೇಶದಲ್ಲಿ ಶೇ.50:50, ಗ್ರಾಮೀಣ ಭಾಗದಲ್ಲಿ ಶೇ.60:40 ಆಧಾರದಲ್ಲಿ ಬಡಾವಣೆ ನಿರ್ಮಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ಗೃಹ ಮಂಡಳಿ ರಚನೆ ಮಾಡಿದ್ದ ಬಡಾವಣೆಗಳಲ್ಲಿ 6015 ನಿವೇಶಗಳನ್ನು ಮೂರು ತಿಂಗಳಲ್ಲಿ ವಿತರಣೆಗೆ ಸಮಯ ನಿಗದಿ ಮಾಡಲಾಗಿದೆ. ಮೈಸೂರು, ಬಳ್ಳಾರಿ, ವಿಜಯಪುರ, ಗದಗ, ನೆಲಮಂಗಲ ಸೇರಿ ರಾಜ್ಯದ ವಿವಿಧೆಡೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವವರಿಗೆ ಲಾಟರಿ ಮೂಲಕ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಈ ಬಡಾವಣೆಗಳಲ್ಲಿನ ಮೂಲೆ ನಿವೇಶನ ಹರಾಜು ಹಾಕಲಾಗುವುದು. ಸಿಎ ನಿವೇಶನ ಆಸ್ಪತ್ರೆ, ಶಾಲೆ, ನಗರಸಭೆ- ಪುರಸಭೆ, ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ನೀಡಲಾಗುವುದು. ಖಾಸಗಿ ಸಂಘ- ಸಂಸ್ಥೆಗಳು ಸೇವಾ ಸಂಘಟನೆಗಳು ಅರ್ಜಿ ಹಾಕಿದರೆ ಶೇ.30ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಿದರು.

Advertisement

1967 ಮನೆ ಹಂಚಿಕೆ: ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯಡಿ 48 ಸಾವಿರ ಮನೆಗಳ ನಿರ್ಮಾಣ ಭರದಿಂದ ಸಾಗಿದ್ದು, 1967 ಮನೆಗಳನ್ನು ಈ ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು. ಈ ವರ್ಷದಲ್ಲಿ 20 ಸಾವಿರ ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next