Advertisement

ಮೈನಸ್‌ ಇಲ್ಲ, ಪ್ಲಸ್ಸೇ ಎಲ್ಲಾ …-ತರುಣ್‌

11:16 AM Sep 07, 2019 | mahesh |

ನಿರ್ದೇಶಕ ಸಹೋದರರಾದ ನಂದಕಿಶೋರ್‌ ಹಾಗೂ ತರುಣ್‌ ಸುಧೀರ್‌ ‘ಪೊಗರು’ ಹಾಗೂ ‘ರಾಬರ್ಟ್‌’ ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಗಳ ಕುರಿತು ಅಣ್ತಮ್ಮಾಸ್‌ ಮಾತನಾಡಿದ್ದಾರೆ.

Advertisement

‘ಇದುವರೆಗಿನ ನನ್ನ ಸಿನಿಮಾ ಕೆರಿಯರ್‌ನಲ್ಲೇ ‘ರಾಬರ್ಟ್‌’ ನನಗೊಂದು ಲ್ಯಾಂಡ್‌ ಮಾರ್ಕ್‌ ಸಿನಿಮಾ ಆಗುತ್ತೆ…’

– ಹೀಗೆ ತುಂಬಾ ವಿಶ್ವಾಸದಿಂದ ಹೇಳುತ್ತಾ ಹೋದರು ನಿರ್ದೇಶಕ ತರುಣ್‌ ಸುಧೀರ್‌. ಟೈಟಲ್ ಮತ್ತು ಪೋಸ್ಟರ್‌ನಿಂದಲೇ ನಿರೀಕ್ಷೆ ಹೆಚ್ಚಿಸಿರುವ ‘ರಾಬರ್ಟ್‌’ ಮೇಲೆ ತರುಣ್‌ ಸುಧೀರ್‌ಗೆ ಇನ್ನಿಲ್ಲದ ಪ್ರೀತಿ. ಆ ಕಾರಣದಿಂದ ‘ರಾಬರ್ಟ್‌’ನನ್ನು ತುಂಬಾ ವಿಶೇಷವಾಗಿ ತೋರಿಸುವ ನಿಟ್ಟಿನಲ್ಲಿ ಟೀಮ್‌ ಜೊತೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆ ಬಗ್ಗೆ ಹೇಳುವ ತರುಣ್‌, ‘ನಾನು ‘ಚೌಕ’ ಮಾಡಿದಾಗ ಎಷ್ಟು ಎಫ‌ರ್ಟ್‌ ಹಾಕಿದ್ದೆನೋ, ಎಷ್ಟು ಪ್ರೀತಿಸಿದ್ದೆನೋ, ಅಷ್ಟೇ ಪ್ರೀತಿ, ಎಫ‌ರ್ಟ್‌ ‘ರಾಬರ್ಟ್‌’ ಮೇಲೂ ಇದೆ. ನಾನು ಸಿನಿಮಾ ಫ್ಯಾಮಿಲಿಯಿಂದ ಬಂದಿರುವುದರಿಂದ ಸಹಜವಾಗಿಯೇ ಸಿನಿಮಾ ಮೇಲೆ ಪ್ರೀತಿ, ಗೌರವ, ಭಕ್ತಿ ಜಾಸ್ತಿ. ನಾನು ಮತ್ತು ನನ್ನ ಸಹೋದರ ನಂದಕಿಶೋರ್‌ ಸಿನಿಮಾ ಮಾಡಿಕೊಂಡೇ ಬರುತ್ತಿದ್ದೇವೆ. ಸಿನಿಮಾ ಅನ್ನ ಹಾಕುತ್ತಿದೆ. ಚೆನ್ನಾಗಿ ಮಾಡಿದರೆ ಮತ್ತೂಂದು ಸಿನಿಮಾ ಅನ್ನ ಕೊಡುತ್ತೆ. ಅದೇ ಜಾಲಿಯಾಗಿ, ಏನೋ ಸಿಕ್ಕಿದೆ ಅಂತ ಕಾಟಾಚಾರಕ್ಕೆ ಮಾಡಿದರೆ, ಮುಂದೆ ಅನ್ನ ಇರಲ್ಲ. ಸಿನಿಮಾಗೆ ಶ್ರಮ ಹಾಕಿದರೆ, ಗೌರವ ಕೊಟ್ಟರೆ ಮಾತ್ರ ಕಾಪಾಡುತ್ತೆ ಇಲ್ಲವೆಂದರೆ ಇಲ್ಲ. ಯಾವುದೇ ಚಿತ್ರವಿರಲಿ, ಶ್ರಮಿಸಬೇಕು, ಭಯದಿಂದ ಕೆಲಸ ಮಾಡಬೇಕು, ರಿಸ್ಕ್ ತಗೋಬೇಕು. ‘ರಾಬರ್ಟ್‌’ಗೆ ಹೆಚ್ಚಿನ ಜವಾಬ್ದಾರಿ ಇದೆ. ಕಾರಣ, ಹಿಂದೆ ‘ಚೌಕ’ದಲ್ಲಿ ನಾಲ್ವರು ಹೀರೋಗಳನ್ನಿಟ್ಟುಕೊಂಡು ಚಿತ್ರ ಮಾಡಿದ್ದೆ. ಆದರೆ, ಇಲ್ಲಿ ಸೂಪರ್‌ ಸ್ಟಾರ್‌ ಇದ್ದಾರೆ. ಹಾಗಾಗಿ, ನಿರೀಕ್ಷೆ ಸಹಜ. ಇಲ್ಲಿ ದರ್ಶನ್‌ ಇದ್ದಾರೆ ಅನ್ನೋದೇ ಪ್ಲಸ್‌. ಬೇರೆ ಸಿನಿಮಾದ ಎಫ‌ರ್ಟ್‌ನಷ್ಟೇ ಇಲ್ಲಿದ್ದರೂ, ಹೆಚ್ಚು ಜವಾಬ್ದಾರಿಯಂತೂ ಇದೆ. ಹಿಂದೆ ಚಿಕ್ಕ ಬಜೆಟ್‌ನಲ್ಲಿ ಆಟವಾಡಿದ್ದೆ. ಈಗ ದೊಡ್ಡ ಕ್ಯಾನ್ವಾಸ್‌. ರಿಸ್ಕ್ ಜಾಸ್ತಿನೇ ಇದೆ. ಹಾಗಾಗಿ ಹೆಚ್ಚು ಗಮನ ಇರುತ್ತೆ. ಯಾವುದೂ ಮಿಸ್‌ ಆಗಬಾರದು ಅಂತ ಕೆಲಸ ಮಾಡುತ್ತಿದ್ದೇನೆ. ಹಂಡ್ರೆಡ್‌ ಪರ್ಸೆಂಟ್ ಎಫ‌ರ್ಟ್‌ ಇರುತ್ತೆ. ಆದರೆ, ಸಕ್ಸಸ್‌, ಫೇಲ್ಯೂರ್‌ ನಮ್ಮ ಕೈಯಲ್ಲಿರಲ್ಲ’ ಎನ್ನುತ್ತಾರೆ ತರುಣ್‌.

ಈಗಾಗಲೇ ‘ರಾಬರ್ಟ್‌’ ಬಗ್ಗೆ ನಿರೀಕ್ಷೆ ಜಾಸ್ತೀನೆ ಇದೆ. ನಿಮ್ಮ ‘ರಾಬರ್ಟ್‌’ ಹೇಗಿರುತ್ತಾನೆ? ಇದಕ್ಕೆ ತರುಣ್‌ ಉತ್ತರವಿದು. ‘ದರ್ಶನ್‌ ಅವರು 52 ಚಿತ್ರ ಮಾಡಿದ್ದಾರೆ. ಅಷ್ಟೂ ಚಿತ್ರಗಳಲ್ಲಿರುವುದನ್ನು ಬಿಟ್ಟು ಹೊಸತನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಹಾಗಂತ, ನನ್ನ ಕಥೆ ತುಂಬಾ ಹೊಸದು, ಯಾರು ಮಾಡದೇ ಇರುವ ಕಥೆ ಇದು ಅಂತ ಹೇಳಲ್ಲ. ಪಕ್ಕಾ ಕಮರ್ಷಿಯಲ್ ಆ್ಯಕ್ಷನ್‌ ಫ್ಯಾಮಿಲಿ ಡ್ರಾಮಾ ಇಲ್ಲಿದೆ. ಆದರೆ, ದರ್ಶನ್‌ ಅವರನ್ನು ತೋರಿಸುವ ರೀತಿ ಹೊಸದಾಗಿರುತ್ತೆ. ಅವರ ಲುಕ್‌, ಬಾಡಿ ಲಾಂಗ್ವೇಜ್‌, ಡೈಲಾಗ್‌ ಡೆಲಿವರಿ ಎಲ್ಲವೂ ಹೊಸದಾಗಿರುತ್ತದೆ. ಹಿಂದಿನ ಸಿನಿಮಾಗಳಲ್ಲಿ ಇವೆಲ್ಲಾ ಇತ್ತೋ, ಇಲ್ಲವೋ ಗೊತ್ತಿಲ್ಲ. ನಮ್ಮ ಸ್ಕ್ರಿಪ್ಟ್ಗೆ ಆ ಪಾತ್ರ ಹೊಸತು. ಪಾತ್ರ ಕೇಳಿದಾಗ, ದರ್ಶನ್‌ ಸರ್‌ ಕೂಡ ಒಳಗೆ ಬಂದರು. ಹಾಗಾಗಿ ಎಲ್ಲವೂ ಸುಲಭವಾಯ್ತು. ‘ರಾಬರ್ಟ್‌’ ಬರೀ ಪ್ರಸಂಟೇಷನ್‌ ಮಾತ್ರವಲ್ಲ, ಬ್ಯಾಕ್‌ಡ್ರಾಪ್‌ನಲ್ಲೂ ಹೊಸತನದಲ್ಲಿರುತ್ತೆ’ ಎಂಬುದು ತರುಣ್‌ ಮಾತು.

ಫ್ಯಾನ್ಸ್‌ ನೋಡದ ದರ್ಶನ್‌ ಇಲ್ಲಿರ್ತಾರೆ!

Advertisement

ದರ್ಶನ್‌ ಸಿನಿಮಾ ಅಂದರೆ, ಅಲ್ಲಿ ಅಭಿಮಾನಿಗಳಿಗೆ ಒಂದಷ್ಟು ರುಚಿಸುವ ಅಂಶಗಳು ಇರಲೇಬೇಕು. ‘ರಾಬರ್ಟ್‌’ ದರ್ಶನ್‌ ಫ್ಯಾನ್ಸ್‌ಗೆ ಏನೆಲ್ಲಾ ಕೊಡುತ್ತೆ? ಈ ಬಗ್ಗೆ ತರುಣ್‌ ಹೇಳ್ಳೋದು ಹೀಗೆ. ‘ ನನ್ನ ಹಾಗೂ ದರ್ಶನ್‌ ಪರಿಚಯ ಹೊಸದಲ್ಲ. ನಾನು ಅವರನ್ನು ‘ಮೆಜೆಸ್ಟಿಕ್‌’ ಸಿನಿಮಾಗಿಂತ ಮೊದಲಿಂದಲೂ ಬಲ್ಲೆ. ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರ ಪ್ಲಸ್ಸು ಹಾಗು ಮೈನಸ್ಸುಗಳು ಚೆನ್ನಾಗಿ ಗೊತ್ತಿದೆ. ಸೋ, ಇಲ್ಲಿ ಪ್ಲಸ್ಸುಗಳನ್ನು ಇಟ್ಟು ಹೇಗೆಲ್ಲಾ ಮಾಡಬಹುದು ಎಂಬುದನ್ನು ಅರಿತು ಚಿತ್ರ ಮಾಡುತ್ತಿದ್ದೇನೆ. ಅವರ ಫ್ಯಾನ್ಸ್‌ಗೆ ಏನೆಲ್ಲಾ ಇಷ್ಟವೋ, ಅದನ್ನೂ ಕೊಡುತ್ತೇನೆ. ದರ್ಶನ್‌ ಬಗ್ಗೆ ಗೊತ್ತಿರದ ಅನೇಕ ಎಲಿಮೆಂಟ್ಸ್‌ ಬಗ್ಗೆಯೂ ಕೊಡ್ತೀನಿ. ಫ್ಯಾನ್ಸ್‌ ಗೆ ದರ್ಶನ್‌ ಹೀಗೆ ಕಾಣಬೇಕು, ಅವರ ಡೈಲಾಗ್‌ ಹಿಂಗಿರಬೇಕು ಎಂಬ ಆಸೆ ಇರುತ್ತೆ. ಅದನ್ನು ಹಂಡ್ರೆಡ್‌ ಪರ್ಸೆಂಟ್ ಕೊಡ್ತೀನಿ. ಆದರೆ, ನಮ್ಮ ಬಾಸ್‌ ಈ ಆ್ಯಂಗಲ್ನ ಎಲಿಮೆಂಟ್ಸ್‌ ನೋಡಿಲ್ಲವಲ್ಲ ಎಂಬಂತಹ ಅಂಶಗಳನ್ನೂ ಸೇರಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.

ಒನ್‌ಲೈನ್‌ಗೆ ಫಿಕ್ಸ್‌

ದರ್ಶನ್‌ ಅವರಿಗೆ ಸುಲಭವಾಗಿ ಕಥೆ ಒಪ್ಪಿಸಲು ಸಾಧ್ಯವಿಲ್ಲ. ‘ರಾಬರ್ಟ್‌’ ಆಗೋಕೆ ಕಾರಣವೇನು? ಇದಕ್ಕೆ ಉತ್ತರಿಸುವ ತರುಣ್‌, ‘ನಾನು ‘ಚೌಕ’ ಮಾಡುವಾಗ ದರ್ಶನ್‌ ಸರ್‌ ಗೆಸ್ಟ್‌ ಪಾತ್ರ ಮಾಡಿದ್ದರು. ಚಿತ್ರೀಕರಣ ಬಳಿಕ ಒಂದು ದಿನ ಮನೆಗೆ ಕರೆದು, ‘ನನಗೊಂದು ಸಿನಿಮಾ ಡೈರೆಕ್ಟ್ ಮಾಡ್ತೀಯಾ’ ಅಂದ್ರು. ಆಗ ನಾನು ‘ಏನ್‌ ಬಾಸ್‌, ಅವಕಾಶ ಕೊಟ್ಟರೆ ಹಂಡ್ರೆಡ್‌ ಪರ್ಸೆಂಟ್ ಮಾಡ್ತೀನಿ’ ಅಂದೆ. ಆಗ ನಾನು ‘ವೀರಂ’ ರಿಮೇಕ್‌ ಮಾಡುವುದು ಫಿಕ್ಸ್‌ ಆಗಿತ್ತು. ಅವರ 50 ನೇ ಚಿತ್ರ ‘ಒಡೆಯ’ ಚಿತ್ರವನ್ನು ನಾನು ನಿರ್ದೇಶಿಸಬೇಕಿತ್ತು. ಆಗಿನ್ನೂ ‘ಚೌಕ’ ರಿಲೀಸ್‌ ಆಗಿರಲಿಲ್ಲ. ಅದು ಹೇಗೆ ಆಗುತ್ತೋ ಗೊತ್ತಿರಲಿಲ್ಲ. ಆದರೂ ದರ್ಶನ್‌ ‘ಚೌಕ’ ಕೆಲಸ ನೋಡಿ ಅವಕಾಶ ಕೊಡುತ್ತಿದ್ದಾರೆ. ರಿಮೇಕ್‌, ಸ್ವಮೇಕ್‌ ಯಾವುದಾದರೂ ಸರಿ ಕಣ್ಣು ಮುಚ್ಚಿಕೊಂಡು ಒಪ್ಪಿದೆ. ಆಗ ಅವರು ‘ಕುರುಕ್ಷೇತ್ರ’ ಮಾಡ್ತೀನಿ ಅಂತ ಹೊರಟರು. ಅಷ್ಟೊತ್ತಿಗೆ ‘ಚೌಕ’ ರಿಲೀಸ್‌ ಆಯ್ತು. ಆ ಚಿತ್ರ ನೋಡಿ, ‘ತರುಣ್‌ ನೀನು ರಿಮೇಕ್‌ ಮಾಡೋದು ಬೇಡ, ಯಾವುದಾದರೂ ಹೊಸ ಕಥೆ ಇದ್ದರೆ ಹೇಳು’ ಅಂದರು. ನಾನು ಒಂದು ಕಥೆ ಮಾಡಿದ್ದೆ. ಒನ್‌ಲೈನ್‌ ಹೇಳಿದೆ. 30 ನಿಮಿಷ ಆ ಕಥೆ ಕೇಳಿ ಫಿಕ್ಸ್‌ ಆಗಿಬಿಟ್ಟರು. ಮೊದಲು ಎರಡು ಕಥೆ ಇದೆ, ಯಾವುದು ಇಷ್ಟಾನೋ ಅದನ್ನು ಮಾಡಿ ಅಂದೆ. ಕೇಳಿದ ಕಥೆಯೇ ‘ರಾಬರ್ಟ್‌’ ಒಂದೇ ಬಾರಿಗೆ ಓಕೆ ಮಾಡಿದರು.

ಪ್ಯಾನ್‌ ಇಂಡಿಯಾ ರಾಬರ್ಟ್‌

ಎಲ್ಲಾ ಸರಿ, ಈ ‘ರಾಬರ್ಟ್‌’ ಅಂದರೆ ಧರ್ಮಕ್ಕೆ ಸಂಬಂಧಿಸಿದ ವಿಷಯವೇನಾದರೂ ಇರುತ್ತಾ? ಈ ಪ್ರಶ್ನೆ ಹೊರಬರುತ್ತಿದ್ದಂತೆಯೇ, ‘ಶೀರ್ಷಿಕೆಗೆ ಬೇರೆ ಆಯಾಮವಿಲ್ಲ. ಇಲ್ಲಿ ಪಾತ್ರದ ಹೆಸರಷ್ಟೇ ರಾಬರ್ಟ್‌. ಅದು ಬಿಟ್ಟರೆ ಬೇರೇನೂ ಇಲ್ಲ. ‘ಚೌಕ’ ಚಿತ್ರದಲ್ಲಿ ದರ್ಶನ್‌ ‘ರಾಬರ್ಟ್‌’ ಪಾತ್ರ ಮಾಡಿದ್ದರು. ಆ ಹೆಸರು, ಈ ಕಥೆಗೆ ಪೂರಕ ಎನಿಸಿದ್ದರಿಂದ ಅದನ್ನೇ ಫಿಕ್ಸ್‌ ಮಾಡಿದ್ವಿ. ಇಲ್ಲಿ ಸಾಕಷ್ಟು ಮಂದಿ ಸಾಥ್‌ ಕೊಟ್ಟಿದ್ದಾರೆ. ವಿನೋದ್‌, ಜಗಪತಿಬಾಬು ಇದ್ದಾರೆ. ಇನ್ನಷ್ಟು ಕಲಾವಿದರೂ ಇರಲಿದ್ದಾರೆ. ಇದು ಫ್ಯಾನ್ಸ್‌ ಟಾರ್ಗೆಟ್ ಚಿತ್ರವಲ್ಲ. ಫ್ಯಾಮಿಲಿ ಟಾರ್ಗೆಟ್ ಕೂಡ ಇದೆ. ಜೊತೆಗೊಂದು ಎಮೊಷನ್‌ ಜರ್ನಿ ಇದೆ. ದರ್ಶನ್‌ ಮತ್ತು ಏಳು ವರ್ಷದ ಹುಡುಗನ ಟ್ರಾಕ್‌ ಇದೆ. ಅದು ಕೂಡ ಫ್ಯಾಮಿಲಿಗೆ ಇಷ್ಟ ಆಗುತ್ತೆ. ಇನ್ನು, ಕನ್ನಡದ ಚಿತ್ರಗಳು ಪ್ಯಾನ್‌ ಇಂಡಿಯಾ ಆಗುತ್ತಿವೆ. ‘ರಾಬರ್ಟ್‌’ ಕೂಡ ಅದರ ಹೊರತಾಗಿಲ್ಲ’ ಎನ್ನುತ್ತಾರೆ ತರುಣ್‌.

-ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next