Advertisement

3ನೇ ದಿನವೂ ಪತ್ತೆಯಾಗದ ಹುಲಿ ಸುಳಿವು

10:15 PM Oct 11, 2019 | Lakshmi GovindaRaju |

ಗುಂಡ್ಲುಪೇಟೆ: ತಿಂಗಳ ಅಂತರದಲ್ಲೇ ಇಬ್ಬರು ರೈತರನ್ನು ಕೊಂದ ಹುಲಿಯ ಸೆರೆಗಾಗಿ ತಾಲೂಕಿನ ಚೌಡಹಳ್ಳಿ- ಹುಂಡೀಪುರ ಸುತ್ತಮುತ್ತ ಅರಣ್ಯ ಇಲಾಖೆ ಬೀಡು ಬಿಟ್ಟಿದ್ದು, ಮೂರನೇ ದಿನದ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿದೆ.

Advertisement

ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಚೌಡಹಳ್ಳಿ-ಹುಂಡೀಪುರ ಗ್ರಾಮಗಳ ನಡುವಿನ ಬೆಟ್ಟ ಗುಡ್ಡಗಳು ಮತ್ತು ಜಮೀನಿನಲ್ಲಿ ಆಗಾಗ ಕಾಣಿಸಿಕೊಂಡು ಭಯಭೀತಿಗೊಳಿಸುತ್ತಿರುವ ಹುಲಿಯ ಹುಡುಕಾಟಕ್ಕೆ ಅರಣ್ಯ ಇಲಾಖೆ ಆರು ಸಾಕಾನೆಗಳು ಮತ್ತು ಡ್ರೋಣ್‌ ಕ್ಯಾಮೆರಾ ಮತ್ತು ಅರವತ್ತಕ್ಕೂ ಹೆಚ್ಚು ಮಂದಿ ಸಿಬ್ಬಂದಿಯನ್ನು ಬಳಕೆ ಮಾಡಿಕೊಂಡು ಹುಲಿ ಸೆರೆ ಹಿಡಿಯಲು ಶ್ರಮಿಸುತ್ತಿದೆ.

ಸುಳಿವು ಪತ್ತೆಯಾಗಿಲ್ಲ: ರೈತ ಶಿವಲಿಂಗಪ್ಪರನ್ನು ಕೊಂದಿದ್ದ ಚೌಡಹಳ್ಳಿ ಸಮೀಪದ ಜಮೀನಿನಿಂದ ಹುಂಡೀಪುರ, ಬೆಳವಾಡಿ, ಕೆಬ್ಬೇಪುರ, ಮಗುವಿನಹಳ್ಳಿ ಅರಣ್ಯ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಬಂಡೀಪುರ ಸಮೀಪದ ಶ್ರೀರಾಂಪುರ ಸಾಕಾನೆ ಶಿಬಿರದ ಕ್ಯಾಪ್ಟನ್‌ ಅಭಿಮನ್ಯು, ಲಕ್ಷ್ಮೀ, ರೋಹಿತ್‌, ಗಣೇಶ್‌, ಗೋಪಾಲಕೃಷ್ಣ ಮತ್ತು ಜಯಪ್ರಕಾಶ್‌ ಹೆಸರಿನ ಸಾಕಾನೆಗಳ ಸಹಾಯದಿಂದ ಹುಲಿಯ ಹುಡುಕಾಟ ನಡೆಸಲಾಯಿತು. ಆದರೂ ಸಹ ಚಾಲಾಕಿ ಹುಲಿಯ ಸುಳಿವು ಪತ್ತೆಯಾಗಿಲ್ಲ.

ಮೂರು ತಂಡ ರಚನೆ: ಚೌಡಹಳ್ಳಿಯ ರೈತ ಶಿವಲಿಂಗಪ್ಪರನ್ನು ಕೊಂದ ಜಾಗದ ಸಮೀಪದ ಗುಡ್ಡದಲ್ಲಿ ಹುಲಿ ಹೋಗುತ್ತಿರುವುದು ಕಂಡು ಬಂದಿತ್ತು. ಅದರ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ ಸಿಬ್ಬಂದಿ ಸರಿ ಸುಮಾರು ಮೂರು ತಂಡಗಳಲ್ಲಿ 10 ಕಿ.ಮೀ.ಗಳಿಗೂ ಹೆಚ್ಚು ಕುರುಚಲು ಅರಣ್ಯ ಪ್ರದೇಶದಲ್ಲಿ ಜಾಲಾಡಿದರೂ ಸಹ ಹುಲಿ ಪತ್ತೆಯಾಗಿಲ್ಲ. ಆದರೆ ಯಾವ ಹುಲಿ ಒಂಟಿಯಾಗಿ ಬಂದು ದಾಳಿ ಮಾಡುತ್ತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಗೊತ್ತಾಗುತ್ತಿಲ್ಲ. ಒಂಟಿ ಹುಲಿಯು ಕಂಡು ಬಂದರೆ ಮತ್ತು ಬರುವ ಇಂಜಕ್ಷನ್‌ನ್ನು ಶೂಟ್‌ ಮಾಡಿ ಸೆರೆ ಹಿಡಿಯಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ. ಆದರೆ ಹುಲಿಯೇ ಕಾಣುತ್ತಿಲ್ಲ.

ಬೋನಿಗೂ ಬೀಳದ ಹುಲಿರಾಯ: ರೈತನನ್ನು ಕೊಂದು ನಾಪತ್ತೆಯಾಗಿರುವ ಹುಲಿ ಸೆರೆಗಾಗಿ ಚೌಡಹಳ್ಳಿ ಸಮೀಪ ಬೋನನ್ನು ಇಟ್ಟು ಅದರಲ್ಲಿ ಮಾಂಸವನ್ನು ಕಟ್ಟಿ ಮಾಂಸದ ವಾಸನೆಯಿಂದ ಹುಲಿ ಬಂದು ಬೋನಿಗೆ ಬೀಳುತ್ತದೆ ಎಂದು ಕಾಯುತ್ತಿರುವ ಸಿಬ್ಬಂದಿಗೆ ಕಿಲಾಡಿ ಹುಲಿ ಚಳ್ಳೆಹಣ್ಣು ತಿನ್ನಿಸುತ್ತಿದೆ. ಕಳೆದ ಮೂರು ರಾತ್ರಿಯಿಂದಲೂ ಹುಲಿ ಈ ಬೋನಿನ ಪಕ್ಕಕ್ಕೂ ಬಂದಿಲ್ಲದಿಲ್ಲ.

Advertisement

ಜನರಲ್ಲಿ ನಿಲ್ಲದ ಆತಂಕ: ಈಗಾಗಲೇ ಕೇವಲ ಜಾನುವಾರುಗಳನ್ನು ಕೊಲ್ಲುತ್ತಿದ್ದ ಹುಲಿ ರೈತರಿಬ್ಬರನ್ನು ಬಲಿ ಪಡೆದಿದ್ದು, ಈ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಕಾಯಲು ಜಮೀನಿಗೆ ಹೋಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆ ತಾತ್ಕಾಲಿಕ ಕ್ಯಾಂಪ್‌ ಹಾಕಿಕೊಂಡು 24 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುತ್ತಿದ್ದರೂ ಹಜುಲಿ ಗುರುತು ಸಹ ಪತ್ತೆಯಾಗಿಲ್ಲ. ಸುತ್ತಮುತ್ತಲ ಗ್ರಾಮಸ್ಥರಲ್ಲಿ ಮೂಡಿರುವ ಆತಂಕ ಇನ್ನೂ ದೂರವಾಗಿಲ್ಲ.

ಹುಲಿ ಸೆರೆ ಹಿಡಿಯುವ ವಿಶ್ವಾಸ: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮೂರು ತಂಡಗಳಲ್ಲಿ ಆರು ಸಾಕಾನೆಗಳನ್ನು ಬಳಸಿಕೊಂಡು ಅಕ್ಕ-ಪಕ್ಕ ಜಮೀನಿನಲ್ಲಿ ಮತ್ತು ಅರಣ್ಯದಂಚಿನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಸುಮಾರು 200ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಹುಲಿ ಓಡಾಟದ ಸ್ಥಳದಲ್ಲಿರುವ ಮರಗಳಲ್ಲಿ ಕಟ್ಟಿದ್ದು, ಯಾವುದೇ ಹುಲಿಯ ಓಡಾಟದ ಚಿತ್ರಗಳು ಸೆರೆಯಾಗಿಲ್ಲ. ಆದರೆ ಗ್ರಾಮದಲ್ಲಿ ಜೀವ ಭಯದಲ್ಲಿರುವ ಗ್ರಾಮಸ್ಥರ ಒತ್ತಾಯಕ್ಕೆ ಬೆಲೆಕೊಟ್ಟಿರುವ ಅರಣ್ಯ ಇಲಾಖೆ ಹಗಲು ರಾತ್ರಿ ಶ್ರಮಿಸುತ್ತಿದೆ. ಈ ಬಾರಿ ಯಾವುದೇ ಕಾರಣಕ್ಕೂ ಕಾರ್ಯಾಚರಣೆಯನ್ನು ಕೈಬಿಡದೇ ಹುಲಿಯನ್ನು ಸೆರೆ ಹಿಡಿಯುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next