Advertisement

ಸಾವಿನ ಮನೆಯ ಪಕ್ಕದಲ್ಲಿದ್ದರೂ ಕ್ಷೇಮ; ಕೋಟೆಯೂರಿನಲ್ಲಿ ಕೋವಿಡ್-19 ಇಲ್ಲ

07:11 PM Apr 07, 2020 | mahesh |

ಸ್ಪೇನ್‌: ಝಹಾರ ಡೆ ಲಾ ಸಿಯೆರಾ, ಸ್ಪೇನ್‌ನ ದಕ್ಷಿಣ ಭಾಗದಲ್ಲಿರುವ ಗುಡ್ಡದ ಮೇಲಿನ ಒಂದು ಊರು. ಇಲ್ಲೊಂದು ಕೋಟೆ ಇದೆ. ಹಾಗಾಗಿ ಇದು ಕೋಟೆ ಇರುವ ಊರು. ಈ ಭದ್ರ ಕೋಟೆಯನ್ನು ಪಡೆಯಲು ಮಧ್ಯಕಾಲೀನ ಯುಗದಲ್ಲಿ ಮೂರ್ಷ್‌ ಮತ್ತು ಕ್ರಿಶ್ಚಿಯನ್ನರ ಮಧ್ಯೆ ಹೋರಾಟ ನಡೆದಿತ್ತು. ಆದರೆ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ 1812ರಲ್ಲಿ ಫ್ರೆಂಚ್‌ ಇದನ್ನು ವಶಪಡಿಸಿಕೊಂಡಿತು. ಪ್ರಸ್ತುತ ಅದ್ಬುತ ಪ್ರವಾಸಿ ತಾಣಗಳಲ್ಲಿ ಒಂದು ಈ ಸಿಯೆರಾ.

Advertisement

ಇರುವುದು ಸ್ಪೇನ್‌ನಲ್ಲೇ. ಈಗ ಸ್ಪೇನ್‌ ಯಾಕೆ ಪ್ರಸಿದ್ಧವಾಗಿದೆ ಎಂಬುದು ಗೊತ್ತು. ಕೋವಿಡ್-19 ವೈರಸ್‌ನ ಆಕ್ರಮಣಕ್ಕೆ ಸಿಕ್ಕು ನಲುಗಿದೆ. ಹೆಚ್ಚು ಸಾವು ನೋವು ಘಟಿಸಿದೆ. ಇದೆಲ್ಲದರ ಮಧ್ಯೆಯೇ ಈ ಕೋಟೆಯೂರಿನಲ್ಲಿ ಒಂದೇ ಒಂದು ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಇದು ಬರೀ ಸ್ಪೇನ್‌ಗಲ್ಲ, ಇಡೀ ಜಗತ್ತಿಗೇ ಅಚ್ಚರಿಯ ಸಂಗತಿ. ಆದರೆ, ಇದರ ಹಿಂದಿನ ಶ್ರಮ ಮತ್ತು ಸಕಾಲಿಕ ತೀರ್ಮಾನದಿಂದ ಸಾಧ್ಯವಾದದ್ದು.

ಸಂಪರ್ಕ ಕಡಿದುಕೊಂಡಿತು
ಅಪಾಯಕಾರಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸ್ಪೇನ್‌ದಾದ್ಯಂತ ಮಾರ್ಚ್‌ 14ರಂದು ಲಾಕ್‌ಡೌನ್‌ ಘೋಷಿಸಿತು. ಆದರೆ ಕೋಟೆಯೂರಿನ ಮೇಯರ್‌ ಸ್ಯಾಂಟಿಯಾಗೊ ಗಾಲ್ವಿನ್‌(40) ಮತ್ತೂಂದು ಹೆಜ್ಜೆ ಮುಂದೆ ಹೋಗಿ ಲಾಕ್‌ಡೌನ್‌ಗಿಂತ ಕಠಿಣ ನಿರ್ಧಾರ ಪ್ರಕಟಿಸಿದರು. ಸ್ವಯಂ ಪ್ರೇರಣೆಯೊಂದಿಗೆ ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಸಂಪರ್ಕವನ್ನು ಕಡಿದುಕೊಳ್ಳಲು ನಿರ್ಧರಿಸಿದರು. ಪಟ್ಟಣದ 5 ಪ್ರವೇಶ ದ್ವಾರಗಳ ಪೈಕಿ ನಾಲ್ಕನ್ನು ಮುಚ್ಚಿಬಿಟ್ಟರು. ಒಂದು ಮಾತ್ರ ಓಡಾಟಕ್ಕೆ, ಅದೂ ನಿರ್ಬಂಧಗಳನ್ನು ಅಧರಿಸಿ.

ಈ ಹಿನ್ನೆಲೆಯಲ್ಲಿ ಎರಡು ವಾರಗಳಿಂದ ಜಗತ್ತಿನ ಯಾವ ಪ್ರದೇಶದೊಂದಿಗೂ ಸಂಪರ್ಕವನ್ನು ಇಟ್ಟುಕೊಳ್ಳದೇ ಸುಮಾರು 1,400 ಕುಟುಂಬಗಳ ಕೋಟೆಯೂರು ಬದುಕು ತ್ತಿದೆ. ಇಲ್ಲಿಯವರೆಗೂ ಒಂದು ಕೋವಿಡ್-19 ಸೋಂಕು ಪ್ರಕರಣವಾಗಲೀ, ಶಂಕಿತ ಪ್ರಕರಣವಾಗಲೀ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಬರಲೂ ಬಿಡುವುದಿಲ್ಲ. ಇದಲ್ಲದೇ ಇನ್ನಿತರ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದೇವೆ ಎನ್ನುತ್ತಾರೆ ಗಾಲ್ವಿನ್‌. ಈ ಬಗ್ಗೆ ಸಿಎನ್‌ಎನ್‌ ವಿಶೇಷ ವರದಿ ಪ್ರಕಟಿಸಿದೆ.

ಮೇಯರ್‌ನ ನಿರ್ಧಾರಕ್ಕೆ ತಲೆ ಬಾಗಿದ ಜನರು
ಕಾಲ ಬುಡದಲ್ಲಿಯೇ ಕೋವಿಡ್-19 ಅಟ್ಟಹಾಸವನ್ನು ನೋಡಿದ್ದು, ಹತ್ತಿರದ ಪಟ್ಟಣಗಳು ಮತ್ತು ಹಳ್ಳಿಗಳ ದುಂರತ ಸ್ಥಿತಿಯನ್ನು ಕಂಡಿದ್ದೇನೆ. ನನ್ನ ಪ್ರದೇಶದಲ್ಲಿ ಈ ಸ್ಥಿತಿ ನಿರ್ಮಾಣವಾಗಬಾರದು. ಅದರಲ್ಲೂ ಝಹಾರಾದ ಒಟ್ಟು ಜನಸಂಖ್ಯೆ ಪೈಕಿ ಕಾಲು ಭಾಗ 65 ವರ್ಷ ಮೇಲ್ಪಟ್ಟವರಿದ್ದು, ಅವರ ಅರೋಗ್ಯ ಕಾಳಜಿ ಮುಖ್ಯ. ಅವರನ್ನು ಕಳೆದುಕೊಳ್ಳಲು ಊರಿಗೆ ಇಷ್ಟವಿಲ್ಲ. ಹಾಗಾಗಿಯೇ ಕಠಿನ ನಿಯಮ ಜಾರಿ ಮಾಡಲಾಗಿದೆ ಎನ್ನುತ್ತಾರೆ ಮೇಯರ್‌. ಇವರ ನಿರ್ಧಾರವನ್ನು ಸ್ವಯಂ ಪ್ರೇರಿತರಾಗಿ ಬೆಂಬಲಿಸಿ ಜನರು ಗೃಹ ಬಂಧಿ ಗಳಾಗಿದ್ದಾರೆ.

Advertisement

ಊರನ್ನ ಪ್ರವೇಶಿಸಲು ಇರುವ ಒಂದು ದ್ವಾರದಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಹಾಗೂ ಇಬ್ಬರು ಸ್ವಚ್ಛತಾ ಕೆಲಸಗಾರರನ್ನು ನಿಯೋಜಿಸಲಾಗಿದೆ. ಚೆಕ್‌ಪೋಸ್ಟ್‌ ದಾಟಿ ಹೋಗುವ ಪ್ರತಿ ವಾಹನಗಳ ಮೇಲೆ ಕ್ರಿಮಿ ನಾಶಕ ನಾಶಪಡಿಸುವ ನೀರು ಸಿಂಪಡಿಸಲಾಗುತ್ತಿದೆ. ಈ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟುತ್ತಿದ್ದು, ವಾಹನಗಳ ಚಕ್ರಗಳನ್ನೂ ತಪಾಸಣೆಗೊಳಿಸುವ ತಂತ್ರಗಾರಿಕೆ ಅಳವಡಿಸಲಾಗಿದೆ. ಆದರೆ ಅಚ್ಚರಿಯ ವಿಷಯವೆಂದರೆ ಇಲ್ಲಿಯವರೆಗೂ ಒಂದೂ ವಾಹನ ಬಂದಿಲ್ಲ ಎನ್ನುತ್ತಾರೆ ಗ್ವಾಲಿಯರ್‌.

ಊರಿನಲ್ಲಿ ನೈರ್ಮಲ್ಯ ಕಾಪಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಸೋಮವಾರ ಮತ್ತು ಗುರುವಾರ ಸಂಜೆ 5: 30 ಕ್ಕೆ ಪಟ್ಟಣದ ಎಲ್ಲಾ ಬೀದಿಗಳಿಗೆ, ಅಂಗಡಿ-ಮಗ್ಗಟ್ಟುಗಳಿಗೆ, ಮನೆಯ ಹೊರಾಂಗಣ ಪ್ರದೇಶಗಳಿಗೆ ಸೋಂಕು ನಿವಾರಕವನ್ನು ಸಿಂಪಡಿಸಲಾಗುತ್ತದೆ. ವಿಶೇಷವೆಂದರೆ ಸ್ಥಳೀಯ ಹತ್ತು ಜನರ ಗುಂಪು ಸ್ವಯಂ ಪ್ರೇರಿತವಾಗಿ ಈ ಕಾರ್ಯವನ್ನು ನಿರ್ವಹಿಸುತ್ತಿದೆ.
ಸಹಾಯಕ್ಕೆ ನಿಂತ ಮಹಿಳಾ ಸಂಘ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ದಿನಸಿ ಮತ್ತು ಅಗತ್ಯ ವೈದ್ಯಕೀಯ ವಸ್ತುಗಳ ಪೂರೈಕೆಗೆ ಇಬ್ಬರು ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಯಾವುದೇ ವಸ್ತು ಬೇಕಿದ್ದರೂ ಕರೆ ಮಾಡಿ ತಿಳಿಸಿದರೆ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಸಾಮಗ್ರಿಗಳ ವಿತರಣಾ ಸೇವೆಯೊಂದಿಗೆ ಇಲ್ಲಿನ ಮಹಿಳಾ ಸಂಘದ ಸದಸ್ಯೆಯರು ಅಡುಗೆ ಮಾಡಲು ಸಾಧ್ಯವಾಗದ ವಯಸ್ಸಾದವರಿಗೆ ಆಹಾರ ಪೂರೈಕೆಯನ್ನು (ಆಹಾರವನ್ನು ಅವರ ಮನೆ ಮುಂಭಾಗದಲ್ಲಿ ಇಡಲಾಗುತ್ತದೆ) ಮಾಡುವುದಲ್ಲದೇ ನಿತ್ಯ ಬಳಕೆಯ ಮೂಲ ವಸ್ತುಗಳನ್ನೂ ಪೂರೈಸುವ ವ್ಯವಸ್ಥೆಯನ್ನು ಮಾಡುತ್ತಿದೆ.

ಪ್ರಜೆಗಳ ಹಿತಕ್ಕಾಗಿ ಫೇಸ್‌ಬುಕ್‌ ಪೇಜ್‌
ತಮ್ಮ ಪ್ರದೇಶದ ನಿವಾಸಿಗಳಿಗೆ ಏಕಾಂತ ಕಾಡಬಾರದೆಂದು ಫೇಸ್‌ಬುಕ್‌ ಪುಟವನ್ನೂ ರಚಿಸಿದ್ದು, ಅದರಲ್ಲಿ ಅವರ ಹಳೆಯ ಛಾಯಾಚಿತ್ರಗಳನ್ನು , ಅನುಭವವಗಳನ್ನು ಪ್ರಕಟಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಯನ್ನು ರೂಪಿಸಿರುವ ಲೂಯಿಸಾ ರೂಯಿಜ್‌ ಲೂನಾ ಇದು ಜನರಲ್ಲಿನ ಒಂಟಿತನದ ಭಾವನೆಯನ್ನು ದೂರ ಮಾಡಿ, ವಿದೇಶದಲ್ಲಿ ವಾಸಿಸುತ್ತಿರುವ ಸ್ನೇಹಿತರೊಂದಿಗೆ ಸಂವಹನ ನಡೆಸಲು ಸೂಕ್ತವಾದುದು ಎಂದು ಹೇಳಿದ್ದಾರೆ ಮಾಧ್ಯಮಕ್ಕೆ. ಇದರ ಜತೆಗೆ ಮಕ್ಕಳ ಖುಷಿಗಾಗಿ 2 ಕಾರುಗಳನ್ನು ದೀಪದಿಂದ ಅಲಂಕಾರ ಮಾಡಿದ್ದು, ಅದರಲ್ಲಿ ಸಂಗೀತದ ವ್ಯವಸ್ಥೆ ಇದೆ. ಮಕ್ಕಳು ತಮ್ಮ ಮನೆಯ ಬಾಲ್ಕನಿಗಳಿಗೆ ಬಂದು ಅವುಗಳನ್ನು ಆನಂದಿಸಬಹುದು ಎಂದು ಹೇಳುತ್ತಾರೆ ಗಾಲ್ವಿನ್‌. ಜನರ ಅಭಿಪ್ರಾಯವೇನು ?
ಗಾಲ್ವಿನ್‌ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ 48 ವರ್ಷದ ಆಕ್ಸಿ ರಾಸ್ಕನ್‌, ನಾಗರಿಕರ ಪ್ರತಿಕ್ರಿಯೆ ಅದ್ಭುತ ಎಂದು ತಿಳಿಸಿದ್ದಾರೆ. ಸೋಂಕಿನ ವಿರುದ್ಧ ಹೋರಾಡಿ ಗೆಲುತ್ತೇವೆ ಎಂಬ ಆತ್ಮವಿಶ್ವಾಸ ಮೂಡಿದೆ ಎಂದು ಅವರು ಹೇಳಿದ್ದಾರೆ.

 ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next