Advertisement

ಹೋಲಿಕೆ ಬೇಡ; ಮಾದರಿಯಾಗಿ ಬದುಕಿ; ಡಾ|ಮಾಲತಿ ಹೊಳ್ಳ

01:32 PM Feb 04, 2023 | Team Udayavani |

ಬೆಳಗಾವಿ: ಯಾವುದೇ ಕ್ಷೇತ್ರವಾದರೂ ನಮ್ಮಲ್ಲಿ ಗುರಿ ಇರಬೇಕು. ಯಾವುದೇ ಕನಸು ಇದ್ದರೂ ಗುರಿ ಮುಟ್ಟುವ ತನಕ ಶ್ರಮಿಸಬೇಕು. ಬೇರೆಯವರ ಜತೆ ನಮ್ಮನ್ನು ಹೋಲಿಸಿಕೊಳ್ಳುವ ಬದಲಾಗಿ ನಾವೇ ಮಾದರಿಯಾಗಿ ಬದುಕಬೇಕು ಎಂದು ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟ್‌, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ| ಮಾಲತಿ ಹೊಳ್ಳ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ನಗರದ ಕೋಟೆ ಆವರಣದ ಶ್ರೀ ರಾಮಕೃಷ್ಣ ಮಿಷನ್‌ ಆಶ್ರಮದ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ ಪ್ರತಿಷ್ಠಾಪನೆಯ 19ನೇ ವಾರ್ಷಿಕೋತ್ಸವದಲ್ಲಿ ಶುಕ್ರವಾರ ಯುವ ಸಮ್ಮೇಳನದಲ್ಲಿ “ಸವಾಲುಗಳು ಸಾಧನೆಯ ಮೆಟ್ಟಿಲುಗಳು’ ಕುರಿತು ಅವರು ಮಾತನಾಡಿ, ಬಲಯುತ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಆತ್ಮಸ್ಥೈರ್ಯ ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಸ್ಪಷ್ಟ ಗುರಿ-ಉದ್ದೇಶ ಇಟ್ಟುಕೊಳ್ಳಬೇಕು. ದೈಹಿಕವಾಗಿ ಯಾವುದೇ ನ್ಯೂನ್ಯತೆ ಇದ್ದರೂ ಅದನ್ನು ಬದಿಗೊತ್ತಿ
ಸಾಧನೆ ಮಾಡಬೇಕು ಎಂದರು.

ಪೋಲಿಯೋದಿಂದ ದೈಹಿಕವಾಗಿ ಸಾಕಷ್ಟು ನ್ಯೂನ್ಯತೆ ಹೊಂದಿದ್ದೇನೆ. ನನ್ನಿಂದಾಗಿ ಹೆತ್ತವರು ಅನುಭವಿಸಿದ ತೊಂದರೆ ಹೇಳತೀರದು. ಆದರೆ ನನ್ನ ದೆ„ಹಿಕ ನ್ಯೂನ್ಯತೆ ಬಗ್ಗೆ ಕೊರಗದೆ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಛಲದಿಂದ ಓದಿದೆ. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದೇನೆ.

ಪ್ರತಿಯೊಬ್ಬ ಮನುಷ್ಯನಿಗೆ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಬೇಕು ಎಂದು ಹೇಳಿದರು. ನಮ್ಮನ್ನು ನಾವು ತಿದ್ದುಕೊಳ್ಳಬೇಕು. ನಮ್ಮಲ್ಲಿರುವ ಆತ್ಮಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು. ಹಿರಿಯರು, ಸಮಾಜವನ್ನು ಗೌರವದಿಂದ ನೋಡಬೇಕು. ನನ್ನ ತಂದೆ ಶಿಕ್ಷಣಪ್ರೇಮಿ.

ಅವರ ಆಶಯದಂತೆ ನಾನು ನನ್ನದೇ ಆದ ಸಂಸ್ಥೆ ಆರಂಭಿಸಿದೆ. 15 ವರ್ಷಗಳ ಹಿಂದೆ ಎರಡು ಮಕ್ಕಳಿಂದ ಆರಂಭಗೊಂಡ ಸಂಸ್ಥೆಯಲ್ಲಿ ಈಗ 53 ಮಕ್ಕಳು ಕಲಿಯುತ್ತಿದ್ದಾರೆ. ಅವರಲ್ಲಿಯೂ ದೆ„ಹಿಕವಾಗಿ ಎಷ್ಟೇ ನ್ಯೂನ್ಯತೆಯಿದ್ದರೂ ಅದನ್ನು ಎದುರಿಸಿ ಉನ್ನತ ಶಿಕ್ಷಣ ಪಡೆದಿದ್ದಾರೆ ಎಂಬುದು ನನಗೆ ಹೆಮ್ಮೆಯ ವಿಷಯ ಎಂದು ಡಾ| ಹೊಳ್ಳ ಹೇಳಿದರು.

Advertisement

ವಿದ್ಯಾರ್ಥಿ ಜೀವನ ಅತ್ಯಂತ ಸುಂದರ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನೀವೂ ಚೆನ್ನಾಗಿ ಓದಬೇಕು. ನಿಮ್ಮ ತಂದೆ-ತಾಯಿ, ಗುರುಗಳ ಅಸೆಯಂತೆ ಉನ್ನತ ಶಿಕ್ಷಣ ಪಡೆದು ಸಾಧನೆ ಮಾಡಬೇಕು ಎಂದರು. ಯುವಕರಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಅಧ್ಯಾತ್ಮ ಕುರಿತು ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ, ಕುಡಚಿ ಶಾಸಕ ಪಿ. ರಾಜೀವ ಮಾತನಾಡಿ, ಆಧ್ಯಾತ್ಮಿಕ ತಳಹದಿಯ ಮೇಲೆ ರಾಮಕೃಷ್ಣ ಮಿಷನ್‌ ಆಶ್ರಮ ನಿಂತಿದೆ. ಜೀವನ ರೂಪಿಸಿಕೊಳ್ಳಲು ಪೂರಕ ಮಾರ್ಗದರ್ಶನ ಇಲ್ಲಿ ಸಿಗುತ್ತದೆ. ದೇಶದ ಹಿಂದುಳಿಯುವಿಕೆಗೆ ಮೆಕಾಲೆ ಕಾಲದ ಶಿಕ್ಷಣ ವ್ಯವಸ್ಥೆಯೇ ಕಾರಣ. ನೂತನ ರಾಷ್ಟ್ರೀಯ ನೀತಿಯನ್ನು ಇದೀಗ ಅಳವಡಿಸಿಕೊಂಡಿದ್ದೇವೆ. ವೈಜ್ಞಾನಿಕ ದೃಷ್ಟಿಕೋನಕ್ಕೆ ತಕ್ಕಂತೆ ಶಿಕ್ಷಣ ನೀತಿ ರೂಪುಗೊಂಡಿದೆ. ಇದರಿಂದಾಗಿ ಭವಿಷ್ಯದಲ್ಲಿ ಭಾರತದ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು. ನಮ್ಮಲ್ಲಿರುವ ಲೋಪ ದೋಷ ಸರಿಪಡಿಸಿಕೊಂಡು, ವಿದ್ಯಾರ್ಥಿ ಜೀವನವನ್ನು ವ್ಯರ್ಥವಾಗಿ ಕಳೆಯದೆ ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದಲ್ಲಿ ಮುನ್ನುಗ್ಗಬೇಕು.

ಸ್ವಾಮಿ ವಿವೇಕಾನಂದರು ತೋರಿದ ಮಾರ್ಗದಲ್ಲಿ ಸಾಗಿದರೆ ಯಾರೊಬ್ಬರೂ ತಮ್ಮ ಜೀವನದಲ್ಲಿ ವೈಫಲ್ಯತೆ ಅನುಭವಿಸಲು ಸಾಧ್ಯವೇ ಇಲ್ಲ. ರಾಮಕೃಷ್ಣ ಮಿಷನ್‌ ಆಶ್ರಮದ ಸ್ವಾಮಿ ಪುರುಷೋತ್ತಮನಂದರ ಭಾಷಣ ಕೇಳಿದ ನಂತರ ನನ್ನ ಜೀವನವೇ ಬದಲಾಯಿತು ಎಂದು ಹೇಳಿದರು. ನಿಮ್ಮ ಚಿಂತನೆ ವೈಜ್ಞಾನಿಕವಾಗಿ ಇರಲಿ.ಧ್ಯಾನ ಅಳವಡಿಸಿಕೊಳ್ಳಿ. ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ. ಬದುಕಿನ ಯಶೋಗಾಥೆ ಕಟ್ಟಿಕೊಳ್ಳುವುದು ನಿಮ್ಮ ಮೇಲಿದೆ. ಪ್ರಕೃತಿ ತಂದೊಡ್ಡುವ ಸವಾಲು ಎದುರಿಸಿ ಮುನ್ನಡೆಯಬೇಕು ಎಂದು ಹೇಳಿದರು.

ಸಿಂಹದ ಹೃದಯದ ಮೇಲೆ ಧ್ಯಾನಿಸು ಕುರಿತು ಬೆಂಗಳೂರು ಶಿವನಹಳ್ಳಿ ರಾಮಕೃಷ್ಣ ಮಿಷನ್‌ ನ ಸ್ವಾಮಿ ಮಂಗಳಾನಾಥ ಮಹಾರಾಜ ಮಾತನಾಡಿ, ಪ್ರತಿ ಸವಾಲು ಹಾಗೂ ಕಷ್ಟಗಳನ್ನು ಎದುರಿಸಿ ನಿಲ್ಲಬೇಕು. ಆಗ ನಿಮ್ಮೆಲ್ಲರ ಜೀವನದ ಚಿತ್ರಣವೇ ಬದಲಾಗುತ್ತದೆ ಎಂದು ಹೇಳಿದರು. ಬೆಳಗಾವಿ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಾನು ದೇಹದ ಒಂದು ಭಾಗ ಮಾತ್ರ ಶಕ್ತಿ ಕಳೆದುಕೊಂಡಿದ್ದೇನೆ. ದೇಹದ ಬೇರೆ ಯಾವ ಭಾಗಕ್ಕೂ ಅಂತಹ ತೊಂದರೆ ಇಲ್ಲ. ಮಾನಸಿಕವಾಗಿ ನಾನು ಶಕ್ತಿವಂತಳಾಗಿದ್ದೇನೆ. ಇದರಿಂದ ನಾನು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಮೈಲುಗಲ್ಲು ಸಾಧಿಸಿದ್ದೇನೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದೇನೆ.
ಡಾ|ಮಾಲತಿ ಹೊಳ್ಳ, ಪದ್ಮಶ್ರೀ ಪುರಸ್ಕೃತರು

ಪ್ರತಿಯೊಬ್ಬರಿಗೂ ವೈಜ್ಞಾನಿಕ ಚಿಂತನೆ ಜತೆಗೆ ಅಧ್ಯಾತ್ಮಿಕ ದೃಷ್ಟಿ ಇರಬೇಕು. ಜಗತ್ತಿಗೆ ಅಧ್ಯಾತ್ಮ ಸಾರಿ ಹೇಳಿದ್ದು ನಮ್ಮ ಭಾರತ. ಬಿಸಿ ರಕ್ತದ ಯುವಕರು ವೈಜ್ಞಾನಿಕ ಚಿಂತನೆ ಮೂಲಕ ಅಧ್ಯಾತ್ಮಿಕ ಹಾದಿಯಲ್ಲಿ ಸಾಗಬೇಕು. ಇಂದಿನ ಯುವಕರು ಅವುಗಳನ್ನು ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದಾರೆ ಎನ್ನುವುದೇ ಬಹುದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಪಿ. ರಾಜೀವ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next