Advertisement

ಛಲವಾದಿ ಸಮುದಾಯಕ್ಕಿಲ್ಲ ಸ್ಮಶಾನ

03:02 PM Jan 03, 2020 | Suhan S |

ಯಾದಗಿರಿ: ನಗರದಲ್ಲಿ 15 ಸಾವಿರಕ್ಕೂ ಹೆಚ್ಚು ಜನರಿರುವ ಛಲವಾದಿ ಸಮುದಾಯದವರಿಗೆ ಸ್ಮಶಾನವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಜನರು ಇಷ್ಟು ದಿನ ಸಮುದಾಯದವರದ್ದೇ ಖಾಸಗಿ ಸ್ಥಳದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ.

Advertisement

ಕಳೆದ 2019 ಸೆಪ್ಟೆಂಬರ್‌ ತಿಂಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಗರದ ಹೊರವಲಯದ ಸರ್ವೇ ನಂ.43ರಲ್ಲಿ ಲಭ್ಯ ಇರುವ ಜಮೀನು ಮಂಜೂರು ಮಾಡುವಂತೆ ಸಮುದಾಯದವರು ಮನವಿ ಸಲ್ಲಿಸಿದ್ದಾರೆ. ತಕ್ಷಣ ಸ್ಪಂದಿಸಿದ ಸಮಾಜ ಕಲ್ಯಾಣ ಅಧಿಕಾರಿಗಳು ತಹಶೀಲ್ದಾರ್‌ಗೆ ಅಂದೇ ಪತ್ರ ಬರೆದು ರುದ್ರಭೂಮಿಗೆ ಸ್ಥಳ ಮೀಸಲಿಟ್ಟು ಮಂಜೂರು ಮಾಡುವಂತೆ ಕೋರಿದ್ದರು. ಆದರೆ, ಈ ವರೆಗೂ ಜಮೀನು ಗುರುತಿಸುವ ಕಾರ್ಯವಾಗಿಲ್ಲ ಎಂದು ದಲಿತ ಮುಖಂಡ ಮರೆಪ್ಪ ಚಟ್ಟರಕರ್‌ ತಿಳಿಸಿದ್ದಾರೆ. ಸಮುದಾಯದವರು ನಗರಕ್ಕೆ ಹತ್ತಿರದಲ್ಲೇ ಜಮೀನು ಬೇಕು ಎನ್ನುವ ಬೇಡಿಕೆಯಿಟ್ಟಿದ್ದಾರೆ. ಆದರೆ ಜಮೀನು ನಗರದ ಹೊರ ವಲಯದಲ್ಲಿದೆ. ಹಾಗಾಗಿ ಇನ್ನೂ ನಿರ್ಣಯವಾಗಿಲ್ಲ ಎನ್ನುವ ಮಾಹಿತಿಯನ್ನುಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಈ ಹಿಂದಿನಿಂದಲೂ ಭೀಮಾನದಿ ದಡದಲ್ಲಿ ಸಾರ್ವಜನಿಕ ಸ್ಮಶಾನ ಇದ್ದು, ಬಹುತೇಕ ಜನ ಸುಮಾರು ವರ್ಷಗಳಿಂದ ಶವ ಸಂಸ್ಕಾರ ಮಾಡುತ್ತಿರುವುದರಿಂದ ಕೆಲ ಸಾರಿ ಶವ ಸಂಸ್ಕಾರ ಮಾಡಲು ತಗ್ಗು ತೋಡಿದಾಗ ಈ ಹಿಂದೆ ಸಂಸ್ಕಾರ ಮಾಡಿದ ದೇಹದ ಎಲುಬುಗಳೇ ಬರುತ್ತವೆ ಎನ್ನುತ್ತಾರೆ ಸ್ಥಳೀಯರು. ಹಲವು ವರ್ಷಗಳ ಹಿಂದೆ ಕೋಲಿ, ಕುರುಬ ಸಮಾಜದವರು ಗಂಜ್‌ ಪ್ರದೇಶ ಸೇರಿದಂತೆ ಕೆಲವು ಕಡೆ ಖಾಸಗಿ ಸ್ಥಳಗಳನ್ನು ಖರೀದಿಸಿ ಶವ ಸಂಸ್ಕಾರಕ್ಕೆ ಉಪಯೋಗಿಸಿಕೊಳ್ಳುತ್ತಿದ್ದು, ಆ ಪ್ರದೇಶದ ಸುತ್ತಲೂ ಮನೆಗಳು ನಿರ್ಮಾಣ ಆಗುತ್ತಿರುವುದರಿಂದ ಕೆಲವೊಮ್ಮೆ ಶವ ಸಂಸ್ಕಾರಕ್ಕೆ ಅಡೆತಡೆ ಎದರಾಗುವಂತಾಗಿದೆ. ಜಿಲ್ಲಾಡಳಿತ ಸ್ಮಶಾನಗಳ ಅಗತ್ಯತೆ ಅರಿತು ಅಗತ್ಯವಿರುವೆಡೆ ಸಾರ್ವಜನಿಕರ ಸ್ಮಶಾನಗಳಿಗೆ ಸ್ಥಳ ಗುರುತಿಸಲು ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next