Advertisement

ಘಟ್‌ಬಂಧನ್‌ನಿಂದ ಯಾವುದೇ ಪ್ರಯೋಜನವಿಲ್ಲ

07:26 AM Feb 22, 2019 | Team Udayavani |

ದೇವನಹಳ್ಳಿ: ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಘಟ್‌ಬಂಧನ್‌ನಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಿಳಿಸಿದರು.  ತಾಲೂಕಿನ ಕಸಬ ಹೋಬಳಿ ಆವತಿ ಗ್ರಾಮದ ಅನಂತ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ರಾಜ್ಯ ಹಾಗೂ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರಗಳ ಪ್ರಮುಖರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.  

Advertisement

40 ಲಕ್ಷ ನುಸುಳುಕೋರ ಪತ್ತೆ: ದೇಶದಲ್ಲಿ ನುಸುಳುಕೋರರನ್ನು ಇನ್ನು ಐದು ವರ್ಷದಲ್ಲಿ ಪ್ರಧಾನಿ ಮೋದಿ ಸರ್ಕಾರ ನಿಯಂತ್ರಣ ಮಾಡಲಿದೆ. ಆಸ್ಸಾಂನಲ್ಲಿ ಎಂಸಿಆರ್‌ನಿಂದ 40 ಲಕ್ಷ ನುಸುಳುಕೋರರನ್ನು ಪತ್ತೆ ಹಚ್ಚಿ, ದೇಶದಿಂದ ಹೊರಹಾಕುವ ಕೆಲಸವನ್ನು ಮಾಡಲಾಗುವುದು. ಕೆಲವು ಪಕ್ಷದವರು ಮತ ಬ್ಯಾಂಕಿಗಾಗಿ ಈ ಕಾರ್ಯ ಬೇಡವೆಂದು ಹೇಳುತ್ತಾರೆ. ಆದರೆ, ನಮಗೆ ಮತ ಬ್ಯಾಂಕಿನ ದೃಷ್ಟಿಕೋನವಿಲ್ಲ. ದೇಶದ ರಕ್ಷಣೆಯೇ ನವåಗೆ ಪ್ರಾಮುಖ್ಯವಾಗಿದೆ ಎಂದರು.  

ಘಟ್‌ಬಂಧನ್‌ನಿಂದ ಏನೂ ಆಗದು: ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಹುತಾತ್ಮರಾದ ವೀರ ಯೋಧರನ್ನು ಕಳೆದುಕೊಂಡಿರುವ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಉಗ್ರಗಾಮಿಗಳ ಹಾಗೂ ಭಯೋತ್ಪಾದಕರ ವಿರುದ್ಧ ಕಠಣ ಕ್ರಮ ಕೈಗೊಂಡಿದ್ದಾರೆ.  ಘಟ್‌ಬಂಧನ್‌ನಿಂದ ಸರ್ಕಾರ ಬಂದರೆ ಯಾವ ರೀತಿ ಇರುವುದು ಎಂಬುವುದರ ಬಗ್ಗೆ ನಿಮಗೆ ತಿಳಿದೇ ಇದೆ ಎಂದು ಹೇಳಿದರು.

ಆರೋಗ್ಯ ಸೌಲಭ್ಯ: 55 ವರ್ಷಗಳಿಂದ ಆಳ್ವಿಕೆ ಮಾಡಿದ ಕಾಂಗ್ರೆಸ್‌ ಪಕ್ಷ ಬಡವರ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಲಿಲ್ಲ. ದೇಶದಲ್ಲಿ 7 ಕೋಟಿ ಜನರಿಗೆ ಬ್ಯಾಂಕ್‌ಗಳಲ್ಲಿ ಖಾತೆ ಹೊಂದುವಂತೆ ಮಾಡಿದ್ದೇವೆ. 6 ಕೋಟಿ ಕುಟುಂಬಗಳಿಗೆ ಉಚಿತ ಅನಿಲ ಸೌಲಭ್ಯ, 2.5 ಕೋಟಿ ಜನ ನಿರ್ಗತಿಕರಿಗೆ ಮನೆ ಸೌಲಭ್ಯ, 2.5 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್‌ ಸಂಪರ್ಕ, ಆಯುಷ್‌ಮಾನ್‌ ಭಾರತ್‌ ಯೋಜನೆ ಅಡಿ ಆರೋಗ್ಯ ವೃದ್ಧಿಗಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ 5 ಲಕ್ಷ ರೂ. ವರೆಗೆ ಆರೋಗ್ಯ ಸೌಲಭ್ಯಗಳನ್ನು ಫ‌ಲಾನುಭವಿಗಳು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.  

ಮತ್ತೆ ಮೋದಿ ಪ್ರಧಾನಿ ಮಾಡಿ: ಘಟ್‌ಬಂಧನ್‌ನಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿ ಆಗುವುದಿಲ್ಲ. ದೇಶದಲ್ಲಿ ಅಭಿವೃದ್ಧಿ ಆಗಬೇಕಾದರೆ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕು. ಕರ್ನಾಟಕದಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ 48 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡುತ್ತೇನೆ ಎಂದವರು, ಕೇವಲ 13 ಸಾವಿರ ಕೋಟಿ ರೂ.ಮಾತ್ರ ರೈತರ ಸಾಲ ಮನ್ನಾ ಮಾಡಿ ರೈತರಿಗೆ  ಮೋಸ ಮಾಡಿದ್ದಾರೆ ಎಂದರು.

Advertisement

ದೇವೇಗೌಡರಿಗೆ ಪ್ರಧಾನಿ ಆಸೆ: ಕುಮಾರಸ್ವಾಮಿ ಅವರು ನಾನು ಕ್ಲಾರ್ಕ್‌ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಾರೆ. ಸಿದ್ಧರಾಮಯ್ಯ ನಾನು ಸೂಪರ್‌ ಮುಖ್ಯಮಂತ್ರಿ ಎನ್ನುತ್ತಾರೆ. ಪರಮೇಶ್ವರ್‌ ಅವರು ನಾನು ಮಿನಿ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಈ ರೀತಿ ತಮ್ಮನ್ನು ತಾವೇ ಹೊಗಳಿಕೊಳ್ಳುವುದು ಕರ್ನಾಟಕದ ನೀತಿಯಾಗಿದೆ. ದೇಶದಲ್ಲಿ ಮೈತ್ರಿ ಮಹಾ ಘಟ್‌ಬಂಧನ್‌ ಬಂದರೆ ಸರ್ಕಾರ ಯಾವ ರೀತಿ ಇರುವುದು ಎಂದು ನೀವೇ ಯೋಚಿಸಿ. ದೇವೇಗೌಡರಿಗೆ ಈಗಲೂ ಪ್ರಧಾನಿ ಆಗುವ ಆಸೆಯಿದೆ. ಘಟ್‌ ಬಂಧನ್‌ ಸರ್ಕಾರ ಅವಶ್ಯವಿದೆಯೇ ಎಂದು ಯೋಚಿಸಬೇಕು ಎಂದರು.

ರಾಜ್ಯಕ್ಕೆ ಹೆಚ್ಚಿನ ಅನುದಾನ: ಪೂರ್ಣ ಬಹುಮತದೊಂದಿಗೆ ಮೋದಿ ಸರ್ಕಾರ ಬರಲಿದೆ. ಕರ್ನಾಟಕ ರಾಜ್ಯ ಸರ್ಕಾರಕ್ಕೆ 5 ವರ್ಷದಲ್ಲಿ ಮೋದಿ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. 13ನೇ ಹಣಕಾಸು ಯೋಜನೆಯಲ್ಲಿ ಯುಪಿಎ ಸರ್ಕಾರ 88 ಸಾವಿರ ಕೋಟಿ ರೂ. 14ನೇ ಹಣಕಾಸಿನಲ್ಲಿ 3.88 ದಶಲಕ್ಷ ರೂ.ಅನುದಾನ ನೀಡಿದೆ. ಫೆ.26 ರಂದು ಮನೆ ಮನೆಗೆ ಕಮಲ ದೀಪ, ಮಾರ್ಚ್‌ 5 ರಂದು ಬೂತ್‌ ಪದಾಧಿಕಾರಿಗಳ ಯುವಕರ ಬೈಕ್‌ ರ್ಯಾಲಿ ಮಾಡುವುದರ ಮೂಲಕ ಬೂತ್‌ ಮಟ್ಟದಲ್ಲಿ ಸಂಘಟಿಸಲಾಗುತ್ತಿದೆ. ಬೇರೆ ಪಕ್ಷಗಳಲ್ಲಿ ಜಾತಿ ಆಧಾರಿತವಾಗಿ ನಾಯಕರನ್ನು ಮಾಡುವರು. ಆದರೆ, ಬಿಜೆಪಿ ಬೂತ್‌ ಮಟ್ಟದ ಪದಾಧಿಕಾರಿಗಳನ್ನು ಮಾಡಿ ಗುರುತಿಸುವ ಕೆಲಸ ಮಾಡಿದೆ ಎಂದು ಹೇಳಿದರು.  

ರಾಜ್ಯ ಸುತ್ತುತ್ತೇನೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ನಾಳೆಯಿಂದ ಚುನಾವಣೆ ಮುಗಿಯುವವರೆಗೆ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ವಿಶ್ರಾಂತಿಯನ್ನು ಪಡೆಯದೇ ರಾಜ್ಯ ಸುತ್ತುವ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಸುಮಾರು 23 ಲೋಕಸಭಾ ಸದಸ್ಯರನ್ನು ಗೆಲ್ಲಿಸಿಕೊಂಡು ದೆಹಲಿಗೆ ಕರೆದುಕೊಂಡು ಹೋಗುವ ಸಂಕಲ್ಪ ಮಾಡಿದ್ದೇನೆ. ಮಹರಾಷ್ಟ್ರದಲ್ಲಿ ಈಗಗಲೇ ಶಿವ‌ಸೇನೆ ಮತ್ತು ಬಿಜೆಪಿ ಹೊಂದಾಣಿಕೆ, ತಮಿಳುನಾಡಿನಲ್ಲಿ ಐಡಿಎಂಕೆ, ಬಿಹಾರದಲ್ಲಿ ಜೆಡಿಯು ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. 300ಕ್ಕೂ ಹೆಚ್ಚಿನ ಸ್ಥಾನ ಬರಲಿವೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ದೇಶದೆಲ್ಲೆಡೆ ಪ್ರವಾಸ ಮಾಡಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಶ್ರಮಿಸುತ್ತಿದ್ದಾರೆ. ಜಗತ್ತಿನಲ್ಲಿ ಪರಿವರ್ತನೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಪ್ರತಿ ವರ್ಗದ ಜನರಿಗೂ ಉತ್ತಮ ಯೋಜನೆ ರೂಪಿಸಿದ್ದಾರೆ. ಕಾರ್ಮಿಕರಿಗೆ ಹೊಸ ಪಿಂಚಣಿ ಯೋಜನೆ, 5 ಲಕ್ಷ ರೂ. ವರೆಗೆ ತೆರಿಗೆಯಲ್ಲಿ ವಿನಾಯಿತಿ ಹೀಗೆ ಹಲವಾರು ಕ್ರಾಂತಿಕಾರಿ ಬದಲಾವಣೆಗಳಿಂದ ದೇಶದ ಚಿತ್ರನವನ್ನೇ ಬದಲು ಮಾಡಿದ್ದಾರೆ ಎಂದರು.

ಮಾರ್ಚ್‌ 5ಕ್ಕೆ ಬೈಕ್‌ ರ್ಯಾಲಿ: ರಾಜ್ಯದಲ್ಲಿ ಕುಮಾರಸ್ವಾಮಿ ಸರ್ಕಾರ 48 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುತ್ತೇನೆಂದು ಹೇಳಿ ಕೇವಲ 13 ಸಾವಿರ ಕೋಟಿ ರೂ.ಮಾತ್ರ ರೈತರ ಸಾಲ ಮನ್ನಾ ಮಾಡಿದ್ದಾರೆ. ಮಾತಿಗೆ ಮುಂಚೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೇಲೆ ಬೆಟ್ಟು ಮಾಡಿ ತೋರಿಸುತ್ತಾರೆ. ಇದಕ್ಕೆಲ್ಲ ಜನರು ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ. ಫೆ.26 ರಂದು ಮನೆ ಮನೆಗೆ ಕಮಲ ದೀಪ ಆಚರಣೆ ಮಾಡಲು 40 ಲಕ್ಷ ದೀಪಗಳನ್ನು ಕಳುಹಿಸಿ ಕೊಡಲಾಗಿದೆ. ಮಾರ್ಚ್‌ 5 ರಂದು ನಡೆಯುವ ಯುವಕರ ಬೈಕ್‌ ರ್ಯಾಲಿ ವಿವಿಧ ಪಕ್ಷದವರಿಗೆ ನಡುಕ ಹುಟ್ಟಿಸಲಿದೆ.

ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಸಮಾವೇಶ ಮಾಡಬಹುದಾಗಿತ್ತು. ಆದರೆ ಶಕ್ತಿ ಕೇಂದ್ರದ ಪ್ರಮುಖರ ಸಮಾವೇಶವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.  ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಜಿಡಿಪಿಯಲ್ಲಿ ದೇಶ 140ನೇ ಸ್ಥಾನದಲ್ಲಿ ಇದ್ದದ್ದನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ 77 ನೇ ಸ್ಥಾನಕ್ಕೆ ತಂದಿದೆ. ಮುಂದೆ 50ನೇ ಸ್ಥಾನಕ್ಕೆ ತರಲಾಗುವುದು. ಜಗತ್ತಿನ ಆರ್ಥಿಕ ಸಂಪನ್ಮೂಲದಲ್ಲಿ 5ನೇ ಸ್ಥಾನಕ್ಕೆ ಬಂದಿದ್ದೇವೆ. ಮುಂದೆ 3ನೇ ಸ್ಥಾನಕ್ಕೆ ತಲುಪುತ್ತೇವೆ.

ಭಯೋತ್ಪಾದಕತೆಯನ್ನು ಬಿಜಿಪಿ ಸರ್ಕಾರ ಹತ್ತಿಕ್ಕುವ ಕೆಲಸ ಮಾಡಲಿದೆ. ಒಬಿಸಿ ಕಮಿಷನ್‌ ಮಾಡಿ ಸಾಂವಿಧಾನಕವಾಗಿ ಹಕ್ಕನ್ನು ನೀಡುತ್ತಿದೆ. ಸ್ವತಂತ್ರ ಭಾರತದಲ್ಲಿಯೇ ಈ ಬಜೆಟ್‌ ಐತಿಹಾಸಿಕ ಬಜೆಟ್‌ ಆಗಿದೆ. 18 ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. 4.5 ವರ್ಷದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದರು.  ಇದೇ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್‌ ಮಾತನಾಡಿದರು.

ಈ ವೇಳೆ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌, ರಾಜ್ಯ ಉಸ್ತುವಾರಿ ಮುರುಳೀಧರ್‌ರಾವ್‌, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಬಸವರಾಜ್‌ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಶ್ರೀನಿವಾಸ್‌ ಪೂಜಾರಿ, ವಿಧಾನ ಪರಿಷತ್‌ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಿ.ಎಸ್‌. ವೀರಯ್ಯ, ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಮಂಜುನಾಥ್‌, ಕೋಲಾರ ಬಿಜೆಪಿ ಜಿಲ್ಲಾಧ್ಯಕ್ಷ ಮುನಿವೆಂಕಟಪ್ಪ,

ಮಾಜಿ ಶಾಸಕರಾದ ಸಂಪಂಗಿ, ಜ್ಯೋತಿರೆಡ್ಡಿ , ಸುರೇಶ್‌ಗೌಡ, ಎಂ.ವಿ.ನಾಗರಾಜ್‌, ನಾಗರಾಜ್‌, ರೇಷ್ಮೆ ಮಂಡಳಿ ಅಧ್ಯಕ್ಷ ಹನುಮಂತರಾಯಪ್ಪ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಶ್ವತ್ಥ್ನಾರಾಯಣ್‌, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್‌.ಎಂ.ರವಿಕುಮಾರ್‌, ಜಿಲ್ಲಾ ಕಾರ್ಯದರ್ಶಿಗಳಾದ ರಮೇಶ್‌ ಬಾಬು , ಅಂಬರೀಶ್‌ಗೌಡ, ರಾಜ್ಯ ಪರಿಷತ್‌ ಸದಸ್ಯ ದೇಸು ನಾಗರಾಜ್‌, ತಾಲೂಕು ಅಧ್ಯಕ್ಷ ನಾಗರಾಜ್‌ ಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next