Advertisement

ತಿರುಮಲದ ಅಂಜನಾದ್ರಿಯೇ ಹನುಮನ ಜನ್ಮಸ್ಥಳ : ಟಿಟಿಡಿ ಹೇಳಿಕೆ

01:02 AM Apr 22, 2021 | Team Udayavani |

ತಿರುಪತಿ : “ತಿರುಮಲದ ಅಕ್ಷ ಗಂಗಾ ಜಲಪಾತ ಸಮೀಪ ಇರುವ ಜಪಲಿ ತೀರ್ಥವೇ ಹನುಮಂತನ ಜನ್ಮಸ್ಥಳ’.
– ಹೀಗೆಂದು ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ಬುಧವಾರ ಹೇಳಿಕೊಂಡಿದೆ.

Advertisement

ಈ ಸಂಬಂಧ ತನ್ನ ಬಳಿ ಸಾಕ್ಷ್ಯಗಳೂ ಇವೆ ಎಂದು ಹೇಳಿರುವ ಅದು ಸಾರ್ವಜನಿಕರ ಮುಂದೆ ಬಹಿರಂಗಪಡಿಸಿದೆ. ಒಟ್ಟು 20 ಪುಟಗಳ ತೆಲುಗು ಪುಸ್ತಕವೊಂದನ್ನೂ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಕರ್ನಾಟಕದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟವೇ ಹನುಮಂತನ ಜನ್ಮಸ್ಥಳ ಎಂಬ ನಂಬಿಕೆಯನ್ನೇ ಅಳಿಸಲು ಹೊರಟಿದೆ. ಅಷ್ಟೇ ಅಲ್ಲ ತಿರುಮಲದ ಅಂಜನಾದ್ರಿ ಬೆಟ್ಟದಲ್ಲಿ ಹನುಮಂತ ಹುಟ್ಟಿದ್ದು ಎಂಬ ವಾದ ಪ್ರತಿಪಾದನೆಗಾಗಿ ಹಂಪಿಯನ್ನೇ ಬಳಸಿಕೊಂಡಿದೆ!

ಕಳೆದ ಡಿಸೆಂಬರ್‌ನಲ್ಲೇ ರಾಮಭಕ್ತ ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಎಂಬ ನಿರ್ಧಾರಕ್ಕೆ ಬಂದಿದ್ದ ಟಿಟಿಡಿ, ಈ ಸಂಬಂಧ ಸಾಕ್ಷ್ಯಗಳನ್ನು ಕಲೆ ಹಾಕಲು ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ಕಳೆದ ಯುಗಾದಿಯಂದೇ ತನ್ನ ವರದಿ ನೀಡಬೇಕಾಗಿತ್ತು. ಆದರೆ ರಾಮ ನವಮಿಯ ಪುಣ್ಯ ದಿನದಂದು ಬಿಡುಗಡೆ ಮಾಡುವ ಯೋಚನೆಯೊಂದಿಗೆ ಮುಂದೂಡಿತ್ತು.

ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಮುರಳೀಧರ ಶರ್ಮಾ ನೇತೃತ್ವದ ಸಮಿತಿಯು “ಪುರಾಣಗಳಲ್ಲಿ ಉಲ್ಲೇಖಗೊಂಡ, ಹನುಮಂತನ ಜನ್ಮದಿನ ಸ್ಥಳದ ಬಗ್ಗೆ ಹಲವಾರು ಸಾಹಿತ್ಯಿಕ ಸಾಕ್ಷ್ಯಗಳು, ಹಲವಾರು ಶಿಲಾಶಾಸನಗಳಲ್ಲಿ ಉಲ್ಲೇಖಗೊಂಡ ಮತ್ತು ಭೌಗೋಳಿಕ ಅಂಶಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ ತಿರುಮಲದ ಅಂಜನಾದ್ರಿ ಪರ್ವತದ ವ್ಯಾಪ್ತಿಯಲ್ಲಿರುವ ಅಕ್ಷಗಂಗಾ ಜಲಪಾತ ಸಮೀಪದ ಜಪಲಿ ತೀರ್ಥವೇ ಆಂಜನೇಯನ ಜನ್ಮಸ್ಥಳ ಎಂದು ತೀರ್ಮಾನಕ್ಕೆ ಬರಲಾಗಿದೆ’ ಹೇಳಿಕೊಂಡಿದೆ. ಐತಿಹಾಸಿಕ ದಾಖಲೆಗಳ ಜತೆಗೆ ಖಗೋಳಶಾಸ್ತ್ರದ ಅಧ್ಯಯನದಲ್ಲಿ ಕೂಡ ಅಂಜನಾದ್ರಿಯೇ ಜನ್ಮಸ್ಥಳ ಎಂದು ಕಂಡುಬಂದಿದೆ ಎಂದಿದೆ.

ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌, ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್‌. ಜವಾಹರ್‌ ರೆಡ್ಡಿ, ಹೆಚ್ಚುವರಿ ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮ ರೆಡ್ಡಿ ಸಮ್ಮುಖದಲ್ಲಿ ಟಿಟಿಡಿಯ “ಮಹತ್ವದ ವಾದ’ ದೃಢೀಕರಿಸಲಾಗಿದೆ.

Advertisement

19 ಹೆಸರುಗಳು
ಸಮಿತಿಯ ಮುಖ್ಯಸ್ಥ ಪ್ರೊ| ಶರ್ಮಾ ಹೇಳಿದ ಪ್ರಕಾರ ವೆಂಕಟಾಚಲಂ ಎನ್ನುವುದನ್ನು ಅಂಜನಾದ್ರಿ ಎಂದೂ ಕರೆಯಲಾಗುತ್ತದೆ. ಇದರ ಜತೆಗೆ 19 ಇತರ ಹೆಸರುಗಳೂ ಈ ಬೆಟ್ಟಕ್ಕೆ ಇವೆ ಎಂದು ಹೇಳಿದ ಅವರು, ತ್ರೇತಾಯುಗದಲ್ಲಿ ರಾಮ ಭಕ್ತ ಹನುಮಂತ ಅಂಜನಾದ್ರಿಯಲ್ಲಿ ಹುಟ್ಟಿದ್ದ ಎಂದು ಪ್ರಕಟಿಸಿದ್ದಾರೆ.

ಸ್ಕಂದ ಪುರಾಣ ಮತ್ತು ವೆಂಕಟಾಚಲ ಮಹಾತ್ಮೆಯಲ್ಲಿ ಹನುಮಂತನ ತಾಯಿ ಅಂಜನಾದೇವಿ ಅಗಸ್ತ್ಯ ಮಹರ್ಷಿಯನ್ನು ಭೇಟಿಯಾಗಿದ್ದಳು. ಈ ಸಂದರ್ಭದಲ್ಲಿ ತನಗೆ ಮಕ್ಕಳಾಗುವಂತೆ ಅನುಗ್ರಹಿಸಬೇಕು ಎಂದು ಕೋರಿಕೊಂಡಿದ್ದಳು. ಆಗ ಅಗಸ್ತ್ಯ ಮುನಿ ವೆಂಕಟಾಚಲಂನಲ್ಲಿ ತಪಸ್ಸನ್ನಾಚರಿಸುವಂತೆ ಸಲಹೆ ಮಾಡಿದ್ದರು. ಅದಕ್ಕನುಸಾರವಾಗಿ ಅಂಜನಾ ದೇವಿ ಅಲ್ಲಿ ತಪಸ್ಸು ಮಾಡಿ ಪುತ್ರನನ್ನು ಹಡೆದಳು. ಹೀಗಾಗಿ ಪರ್ವತಕ್ಕೆ ಅಂಜನಾದ್ರಿ ಎಂಬ ಹೆಸರು ಬಂತು ಎಂದು ಶರ್ಮಾ ಪ್ರತಿಪಾದಿಸಿದ್ದಾರೆ.

ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂಬುದನ್ನು ದೃಢಪಡಿಸಲು 12 ಪುರಾಣಗಳನ್ನು ಅಧ್ಯಯನ ನಡೆಸಿ, ಸಾಕ್ಷ್ಯ ಸಂಗ್ರಹಿಸಲಾಗಿದೆ. ಕಂಬ ರಾಮಾಯಣ ಮತ್ತು ಅನ್ನಮಾಚಾರ್ಯರ ಕೀರ್ತನೆಗಳಲ್ಲಿಯೂ ಈ ಅಂಶ ದೃಢಪಟ್ಟಿದೆ ಎಂದು
ಹೇಳಿದ್ದಾರೆ ಪ್ರೊ| ಶರ್ಮಾ. 12 ಮತ್ತು 13ನೇ ಶತಮಾನದ ಶಿಲಾ ಶಾಸನಗಳು ತಿರುಮಲ ದೇಗುಲದಲ್ಲಿವೆ. ಅದರಲ್ಲಿಯೂ ಹನುಮನ ಜನ್ಮಸ್ಥಳ ಉಲ್ಲೇಖಗೊಂಡಿದೆ.

ಹಂಪಿಯಲ್ಲಿ ಸಾಕ್ಷ್ಯಗಳಿಲ್ಲ
ಹಂಪಿಯಲ್ಲೇ ಆಂಜನೇಯ ಹುಟ್ಟಿದ್ದು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಕನ್ನಡ ವಿಶ್ವವಿದ್ಯಾನಿಲಯದ ವಿದ್ವಾಂಸರು ಹೇಳಿದ್ದಾರೆ ಎಂದೂ ಟಿಟಿಡಿ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

ಹಂಪಿಯೇ ಕಿಷ್ಕಿಂಧೆ!
ಆಂಜನೇಯ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಹುಟ್ಟಲಿಲ್ಲವೆಂದು ಹೇಳಿದರೂ, ತಜ್ಞರ ಸಮಿತಿ ಹಂಪಿಯೇ ಕಿಷ್ಕಿಂಧೆ ಎಂಬುದನ್ನು ಒಪ್ಪಿಕೊಂಡಿದೆ. ಇದಕ್ಕೆ ಪೂರಕವಾಗಿ ಕೆಲವೊಂದು ವಾದಗಳನ್ನೂ ಮಂಡಿಸಿದೆ. ತಿರುಮಲದ ಅಂಜನಾದ್ರಿ ಮತ್ತು ಹಂಪಿ ಹತ್ತಿರದಲ್ಲಿರುವುದರಿಂದ ಅಲ್ಲಿಗೆ ವಾನರ ಸೇನೆ ವಲಸೆ ಹೋಗಿದೆ. ಉಳಿದ ಪ್ರದೇಶಗಳು ದೂರ ಇರುವುದರಿಂದ ವಲಸೆ ಅಸಾಧ್ಯ.

– ಕರ್ನಾಟಕದ ಅಂಜನಾದ್ರಿ ಬೆಟ್ಟದಲ್ಲಿಯೇ ಹುಟ್ಟಿದ್ದರೆ ಸುಗ್ರೀವ ಮತ್ತು ಹನುಮಾನ್‌ ಅವರು ಕಿಷ್ಕಿಂಧೆಗೆ ವಾರನ ಸೇನೆ ಕರೆದುಕೊಂಡು ವಲಸೆ ಹೋಗುವ ಬಗ್ಗೆ ಮಾತನಾಡುತ್ತಿರಲಿಲ್ಲ.
– ಅಂಜನಾದ್ರಿಯಿಂದ ಕಿಷ್ಕಿಂಧೆಗೆ ವಾನರ ಸೇನೆ ವಲಸೆ ಹೋಗಿದೆ. ಆದರೆ, ವಲಸೆಯ ದೂರ ಕಡಿಮೆಯೇ ಇರಬೇಕು.
– ತಿರುಮಲದ ಅಂಜನಾದ್ರಿ ಬೆಟ್ಟದಿಂದ ಹಂಪಿಗೆ 363 ಕಿ.ಮೀ. ಈ ಎರಡು ಪ್ರದೇಶಗಳ ಪ್ರಯಾಣದ ಅವಧಿ ಕಡಿಮೆ
– ಝಾರ್ಖಂಡ್‌ನ‌ ಗುಮ್ಲಾ ದಲ್ಲಿರುವ ಅಂಜನ್‌ ಹಳ್ಳಿಯಿಂದ ಹಂಪಿಗೆ 1,240 ಕಿ.ಮೀ.
– ಹರ್ಯಾಣದ ಕೈಥಾಳ್‌ ನಿಂದ ಹಂಪಿಗೆ 1,626 ಕಿ.ಮೀ.
– ನಾಸಿಕ್‌ ಜಿಲ್ಲೆಯ ಅಂಜನೇರಿಯಿಂದ ಹಂಪಿಗೆ 616 ಕಿ.ಮೀ.

ನಾವು ನಂಬಿರುವ ಇತಿಹಾಸ, ಪರಂಪರೆ, ಕಲ್ಪನೆಯ ಪ್ರಕಾರ ಕೊಪ್ಪಳದ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಳ. ಹೀಗಾಗಿ ಅದರ ಅಭಿವೃದ್ಧಿಗೆ ನೀಲನಕಾಶೆ ರೂಪಿಸಿದ್ದೇವೆ. ಟಿಟಿಡಿಯವರು ಯಾವ ಆಧಾರದಲ್ಲಿ ನಿರ್ಧರಿಸಿದ್ದಾರೋ ಗೊತ್ತಿಲ್ಲ.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next