ಚಿಕ್ಕಬಳ್ಳಾಪುರ: ಇತ್ತೀಚೆಗೆ ಸಂಸತ್ತಿನಲ್ಲಿ ಎರಡನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲ ಸೀತಾರಾಮನ್ ದೇಶ ಕಂಡ ಬೆಸ್ಟ್ ಫೈನಾನ್ಸ್ ಮಿನಿಸ್ಟರ್ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶೇಶ್ವರಯ್ಯ ಕ್ರೀಡಾಂಗಣದಲ್ಲಿ ಎರಡು ದಿನಗಳ ಕೃಷಿ ಮೇಳದ ಭಾಗವಾಗಿ ಆಯೋಜಿಸಿರುವ ಸಿರಿಧಾನ್ಯಗಳ ಹಬ್ಬ ಹಾಗೂ ಫಲಪುಪ್ಪ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಬಜೆಟ್ ಅನ್ನದಾತರ ಪರವಾಗಿದೆ. ನಿರ್ಮಲ ಸೀತಾರಾಮನ್ ಒಳ್ಳೆಯ ಹಣಕಾಸು ಸಚಿವರು ಅದಕ್ಕಾಗಿ ಅವರು ಧಾನ್ಯ ಲಕ್ಮೀ ಯೋಜನೆ ರೂಪಿಸಿದ್ದಾರೆ ಎಂದರು.
ಜಗತ್ತಿನಲ್ಲಿ ಭಾರತ ಆರ್ಥಿಕಾಭಿವೃದ್ಧಿಯಲ್ಲಿ ಐದನೇ ಸ್ಥಾನದಲ್ಲಿ ಇದೆ. 2025 ಕ್ಕೆ ದೇಶದ ಆರ್ಥಿಕತೆ ಪ್ರಮಾಣ ಐದು ಟ್ರೆಲಿಯನ್ ಡಾಲರ್ ತಲುಪಲಿದೆ ಎಂದರು.
ರೈತರ ಅಭಿವೃದ್ಧಿಗೆ ಆಗಬೇಕು. ಇದಕ್ಕಾಗಿ ಹೈನುಗಾರಿಕೆ, ಮೀನುಗಾರಿಕೆಗೆ ಒತ್ತು ಕೊಡಬೇಕೆಂದರು. ಕೇಂದ್ರ ಸರ್ಕಾರ 9 ಕೋಟಿ ರೈತರ ಖಾತೆಗಳಿಗೆ 54 ಸಾವಿರ ಕೋಟಿ ಹಣವನ್ನು ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಜಮೆ ಮಾಡಲಾಗಿದೆ ಎಂದರು. ಸರ್ಕಾರಗಳು ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಒತ್ತು ಕೊಡಬೇಕಿದೆ ಎಂದರು.