Advertisement

ಯಕ್ಷಕನ್ಯೆ ನೀಲ್ಕೋಡು ಅಭಿನಂದನೆ;ಹಗಲಿಡೀ ಯಕ್ಷಗಾನ

03:52 PM Jan 07, 2017 | |

ಉತ್ತರ ಕನ್ನಡ ಜಿಲ್ಲೆ ಎಂದರೆ ಅಲ್ಲಿ ಮನೆಮನೆಯಲ್ಲೂ ಯಕ್ಷಗಾನ ಅನುರಣಿಸುತ್ತಿರುತ್ತದೆ. ಆದರೆ ಹೊನ್ನಾವರದ ನೀಲ್ಕೋಡಿನ ವಿಶ್ವನಾಥ ಹೆಗಡೆ ಮತ್ತು ಪಾರ್ವತಮ್ಮ ದಂಪತಿಗಳ ಮನೆಯಲ್ಲಿ ಮಾತ್ರ ಯಕ್ಷಗಾನದ ಯಾವ ವಾತಾವರಣವೂ ಇರಲಿಲ್ಲ. ಅಲ್ಲಿದ್ದುದು ತುಂಬು ಕುಟುಂಬ ಮತ್ತು ಕೇವಲ ಕಿತ್ತು ತಿನ್ನುವ ಬಡತನ. ಇವರ ಮಗ ಶಂಕರ ಹೇಗೋ ಪಿಯುಸಿ ಮುಗಿಸಿ ಹೊಟ್ಟೆ ಪಾಡಿಗಾಗಿ ಲೈನ್‌ಮೆನ್‌ ಕೆಲಸಕ್ಕೆ ಸೇರಿದ. ಹೀಗೆ ಮಾಳ್ಕೊàಡು ಪರಿಸರದಲ್ಲಿ ಲೈನ್‌ ಎಳೆಯುವ ಕೆಲಸದಲ್ಲಿದ್ದಾಗ ಈತನಿಗೆ ಕಂಡಿದ್ದು ಇಡಗುಂಜಿಯ ಶಂಭು ಹೆಗಡೆಯವರ ಶ್ರೀಮಯ ಯಕ್ಷಗಾನ ಶಾಲೆಯ ಒಂದು ಫ‌ಲಕ. ಯಕ್ಷಗಾನ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆಯ ಜೊತೆಗೇ ವಿದ್ಯಾರ್ಥಿ ವೇತನವೂ ದೊರೆಯುತ್ತದೆಂಬ ಈ ಫ‌ಲಕದಿಂದ ಪ್ರಭಾವಿತನಾಗಿ ಕೇವಲ ಹೊಟ್ಟೆ- ಬಟ್ಟೆಯ ಸೀಮಿತ ಉದ್ದೇಶದೊಂದಿಗೆ ಈ ಕಲಾ ಕೇಂದ್ರಕ್ಕೆ ಸೇರಿದ ಶಂಕರ ಮಾಣಿ! ನಂತರದ್ದೆಲ್ಲಾ ಇತಿಹಾಸ.

Advertisement

 ಯಕ್ಷಗುರು ಹೆರಂಜಾಲು ಗೋಪಾಲ ಗಾಣಿಗರಿಂದ ಹೆಜ್ಜೆ ಅಭ್ಯಾಸಕ್ಕೆ ತೊಡಗಿದ ಶಂಕರ ಮಾಣಿ ಈಗ ಯಕ್ಷಗಾನದ ಪ್ರಸಿದ್ಧ ಸ್ತ್ರೀ ಪಾತ್ರಧಾರಿ, ನೀಲ್ಕೋಡು ಶಂಕರ ಹೆಗ್ಡೆಯವರಾಗಿ ರೂಪಾತರ ಹೊಂದಿ ಮೂಡಿಸಿದ ಹೆಜ್ಜೆ ಗುರುತು ಅನನ್ಯ ಮತ್ತು ಅನುಪಮ. ಬಡತನವೇ ಭವ್ಯ ಭವಿಷ್ಯಕ್ಕೆ ಬುನಾದಿಯಾದ ಅಪರೂಪದ ವ್ಯಕ್ತಿಯೊಬ್ಬನ ಶಿಷ್ಟ ವೃತ್ತಾಂತದು. ಇಲ್ಲಿಂದ ಶುರುವಿಟ್ಟಿತು ಶಂಕರ ಹೆಗ್ಡೆಯವರ ಯಕ್ಷ ಯಾತ್ರೆ. ಮೊದಲು ಕೆರೆಮನೆ ಮೇಳದಲ್ಲಿ ಶಂಭು ಹೆಗ್ಡೆಯವರ ಮಾರ್ಗದರ್ಶನದೊಂದಿಗೆ ರಂಗ ಪ್ರವೇಶವಾಯಿತು. ನಂತರ ಗುಂಡುಬಾಳ, ಮಂದರ್ತಿ, ಕಮಲಶಿಲೆ ಮುಂತಾದ ಮೇಳಗಳಲ್ಲಿ ತಿರುಗಾಟ ನಡೆಸಿ ಪೌರಾಣಿಕ ಸ್ತ್ರೀ ಪಾತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಲು ಮುಂದಡಿ ಇಟ್ಟರು ಶಂಕರ ಹೆಗ್ಡೆ.

ನೀಲ್ಕೋಡು ಶಂಕರ ಹೆಗ್ಡೆಯವರ ಪ್ರತಿಭೆಯ ಕೌಶಲ ಲೋಕ ಮುಖಕ್ಕೆ ಪ್ರಕಟವಾಗಲು ವೇದಿಕೆಯಾಗಿದ್ದು ಮಾತ್ರ ಪ್ರಸಿದ್ಧ ವೃತ್ತಿಪರ ತಂಡವಾದ ಶ್ರೀಪೆರ್ಡೂರು ಮೇಳ. ರಂಗ ಮಾಂತ್ರಿಕ ಎಂದೇ ಹೆಸರಾಗಿದ್ದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ಒಡನಾಟದಲ್ಲಿ ಶಂಕರ ಹೆಗ್ಡೆಯವರ ಅದ್ಭುತ ಪ್ರತಿಭೆ ಪುಟಕಿಟ್ಟ ಚಿನ್ನದಂತೆ ಪ್ರಕಾಶಿಸಲಾರಂಭಿಸಿತು.

ಕಲಾವಿದನೊಬ್ಬ ಸಾಮಾಜಿಕವಾಗಿ ಜನಪ್ರಿಯತೆಯ ಉತ್ತುಂಗಕ್ಕೇರಲು ನೆರವಾಗುವ ಸಾಮಾಜಿಕ ಪ್ರಸಂಗಗಳೇ ಮತ್ತಿಲ್ಲಿ ಶಂಕರ ಹೆಗ್ಡೆಯವರ ಕೈಯನ್ನೂ ಹಿಡಿಯಿತು. ಆಪ್ತಮಿತ್ರ ಸಿನಿಮಾದಿಂದ ಸ್ಫೂರ್ತಿಗೊಂಡು ರಂಗಕ್ಕೆ ಬಂದ ‘ನಾಗವಲ್ಲಿ’ ಎಂಬ ಪ್ರಸಂಗದಲ್ಲಿ ಶೀರ್ಷಿಕೆ ಪಾತ್ರ ಮಾಡಿದ ಶಂಕರ ಹೆಗ್ಡೆ ನೋಡನೋಡುತ್ತಿದ್ದಂತೆಯೇ ಸ್ಟಾರ್‌ ಕಲಾವಿದರಾಗಿ ರೂಪುಗೊಂಡರು. ಈ ಜನಪ್ರಿಯತೆಯ ಓಘದಲ್ಲಿ ಕರಗಿ ಹೋಗದ ಶಂಕರ ಹೆಗ್ಡೆ,  ಹೀಗೆ ಸಾಮಾಜಿಕ ಪ್ರಸಂಗದಲ್ಲಿ ಸಿಕ್ಕ ಜನಪ್ರಿಯತೆಯನ್ನು ಸಾಂಪ್ರಾದಾಯಿಕ ಸ್ತ್ರೀ ಪಾತ್ರಗಳ ಹೊಸ ಸಂವೇದನೆಯ ಸಿದ್ಧಿಗಾಗಿ ಬಳಸಿಕೊಂಡರು. ಅವರ ದ್ರೌಪದಿ, ಅಂಬೆ, ದಾûಾಯಿಣಿ, ಪ್ರಭಾವತಿ ಮುಂತಾದ ಪಾತ್ರಗಳು ನವೀನ ಅಭಿವ್ಯಕ್ತಿ ಸಾಧ್ಯತೆಗಳನ್ನು ನವಿರಾಗಿ ತೆರೆದಿರಿಸಿತು.

ಒಂದು ಕಥಾ ಭಾಗಕ್ಕೆ ಭಾವನೆಯ ತೀವ್ರ ಸ್ಪರ್ಶ ನೀಡುವಲ್ಲಿ ನೀಲ್ಕೋಡು ಸಿದ್ಧ ಹಸ್ತರು. ಶೃಂಗಾರ ಮತ್ತು ಕರುಣಾ ಭಾವ ಇವರಿಗೆ ಹೆಚ್ಚು ಒಲಿದಿದೆ. ಇವರ ಈ ಸೃಜನಶೀಲತೆುಂದಾಗಿ ವಂಶವಲ್ಲರೀ, ರಜತಸಂಭ್ರಮ ಎಂಬ ಹೊಸ ಕಥಾ ಪ್ರಸಂಗವನ್ನು ಬರೆಯುವಂತಾಯಿತು. ಮತ್ತೆ ಪುರುಷ ಪಾತ್ರದಲ್ಲೂ ಸೈ ಎನಿಸಿಕೊಂಡ ಒಬ್ಬ ಅಪರೂಪದ ಸಾಧಕರಿವರು. ಸ್ತ್ರೀ-ಪುರುಷ ಪಾತ್ರಗಳ ವೈರುಧ್ಯಗಳನ್ನು ಹೇಗೆ ಸಂಭಾಳಿಸುತ್ತೀರೆಂಬ ಪ್ರಶ್ನೆಗೆ ಶಂಕರರ ಉತ್ತರ ಖಚಿತವಿದೆ. ಸ್ವಭಾವತಃ ಪುರುಷನೇ ಆಗಿರುವುದರಿಂದ ಪುರುಷ ಪಾತ್ರಗಳಲ್ಲಿ ‘ಸಾಧ್ಯತೆ’ ಗಳು ಹೆಚ್ಚು ಮುಕ್ತ. ಆದರೆ ಸ್ತ್ರೀ ಪಾತ್ರಕ್ಕೆ ತುಂಬಾ ಸೂಕ್ಷ್ಮತೆ ಇರಬೇಕು, ಮಾತ್ರವಲ್ಲ ಪರಕಾಯ ಪ್ರವೇಶದ ಮಾನಸಿಕ ಸಿದ್ಧತೆಯೂ ಅಗತ್ಯವೆಂದು ಶಂಕರ ಹೆಗ್ಡೆ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನದ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತಿದೆಯಾದರೂ ಅದಕ್ಕೆ ತಕ್ಕಂತೆ ಕಲಾವಿದರ ಅಧ್ಯಯನಶೀಲತೆ ಕಡಿಮೆಯಾಗುತ್ತಿರುವುದನ್ನು ಶಂಕರ ಹೆಗ್ಡೆ ಆತಂಕದಿಂದ ಗಮನಿಸಿದ್ದಾರೆ. ಕಲಾವಿದನೊಬ್ಬ ನಿರಂತರ ಕಲಿಯುವಿಕೆಯಿಂದಲೇ ಅವನ ಪಾರಮ್ಯವನ್ನು ತಲುಪಬಹುದೆಂಬುದು ಶಂಕರ ಹೆಗ್ಡೆಯವರ ಖಚಿತ ಅಭಿಪ್ರಾಯ.

Advertisement

ತನ್ನ ವೃತ್ತಿ ಬದುಕಿನಲ್ಲಿ ಉಮಾಕಾಂತ ಭಟ್‌, ಧಾರೇಶ್ವರ, ಆರೊYàಡು ಮೋಹನದಾಸ ಶಣೈ ಹಾಗೂ ತೀರ್ಥಹಳ್ಳಿ ಗೋಪಾಲ ಆಚಾರ್ಯರ ಜೊತೆಗೆ ದೊರೆತ ಒಡನಾಟ ಹೆಚ್ಚು ತನ್ನ ವ್ಯಕ್ತಿತ್ವವನ್ನು ರೂಪಿಸಿದ ಸಂಗತಿಗಳು ಎಂದು ಶಂಕರ ಹೆಗ್ಡೆ ಸ್ಮರಿಸುತ್ತಾರೆ. ಈಗ ಇವರ ಬಣ್ಣದ ಬದುಕಿಗೆ ಇಪ್ಪತ್ತೆ„ದು ವರ್ಷ ತುಂಬಿದ ಪರ್ವಕಾಲ. ಇವರ ಯಕ್ಷಗಾನ ಸೇವೆಯನ್ನು ಮನಗಂಡ ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ ವಿಶೇಷವಾಗಿ ಗೌರವಿಸಲಿದೆ.

ಭಾನುವಾರ ಬೆಳಿಗ್ಗೆಯಿಂದ ರಾತ್ರಿವರಗೆ ಅದ್ಧೂರಿ ಯಕ್ಷಗಾನ ಉತ್ಸವ ನಡೆಯುತ್ತಿದೆ. ಮೂರು ಪ್ರಸಂಗಗಳು. ವವೊಂದನ್ನು ಆಯೋಜಿಸಿದೆ. ಕೃಷ್ಣಾರ್ಜುನ, ಪಾಂಚಜನ್ಯ ಮತ್ತು ಗಧಾಯುದ್ಧ- ಪ್ರಸಂಗಗಳು. ಬಡಗುತಿಟ್ಟಿನ ಬಹುತೇಕ ಖ್ಯಾತ ನಾಮರು ಅಲ್ಲಿರುತ್ತಾರೆ. ರಂಗಸ್ಥಳದ ದಿಗ್ಗಜರೆನ್ನಿಸಿದ ಬಳ್ಕೂರು, ಕೊಂಡದಕುಳಿ, ವಿದ್ಯಾಧರ, ತೀರ್ಥಹಳ್ಳಿ ಗೋಪಾಲಾಚಾರ್‌, ಕಲಗದ್ದೆ ನಾಯಕ, ನೀಲ್ಕೋಡು, ಯಲಗುಪ್ಪ ಸುಬ್ರಹ್ಮಣ್ಯ, ಹಳ್ಳಾಡಿ ಜಯರಾಮ ಶೆಟ್ಟಿಯವರ ಜೊತೆ ತಾಳ ಮದ್ದಲೆ ಕ್ಷೇತ್ರದ ಉಜಿರೆ ಅಶೋಕ ಭಟ್‌, ಪ್ರದೀಪ ಸಾಮಗ ಮತ್ತು ಹವ್ಯಾಸೀ ವಲಯದ ಪ್ರತಿಭಾಶಾಲಿಗಳಾದ ದತ್ತಮೂರ್ತಿ ಭಟ್‌, ಬಿಳಿಯೂರು ಸಂಜಯ, ಸುಜಯೀಂದ್ರ ಹಂದೆ ಮೊದಲಾದವರು ಭಾಗವಹಿಸಲಿದ್ದಾರೆ.

ಕೃಷ್ಣಾರ್ಜುನ-ಪಾಂಚಜನ್ಯ-ಗದಾಯುದ್ಧ ಎಂಬ ಮಹಾಭಾರತದ ಮೂರು ಆಖ್ಯಾನಗಳು ಹಿರಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆ, ಕೊಳಗೀ ಕೇಶವ ಹೆಗಡೆ, ಗಣಪತಿಭಟ್‌, ರಾಘವೇಂದ್ರ ಮಯ್ಯ ಮತ್ತು ಜನ್ಸಾಲೆ ರಾಘವೇಂದ್ರ ಆಚಾರ್ಯ ಇವರ ಭಾಗವತಿಕೆ-ನಿರ್ದೇಶನದಲ್ಲಿ ಮೂಡಿಬರಲಿದೆ.

ಶಂಭು ಪರಂಪರೆಯ ಕಲಗದ್ದೆ ನಾಯಕ ಇವರ ಕೌರವನ ಪಾತ್ರಕ್ಕೆ ನೆಬ್ಬೂರು ಭಾಗವತರು ಭಾಗವತಿಕೆಯ ಸಾಥ್‌ ನೀಡಲಿರುವುದು ಈ ಪ್ರದರ್ಶನದ ಕಲಾತ್ಮಕ ಮೌಲ್ಯಗಳಲ್ಲೊಂದು.

ಎಲ್ಲಿ?: ಟೌನ್‌ಹಾಲ್‌, ಜೆಸಿ ರಸ್ತೆ
ಯಾವಾಗ?: ಜ. 8, ಭಾನುವಾರ,  ಬೆಳಿಗ್ಗೆ 11.00ರಿಂದ ರಾತ್ರಿ 9.30ರವರೆಗೆ
ಪ್ರವೇಶ ಶುಲ್ಕ:
ಸಂಪರ್ಕ: 9900808109, 9448101708

Advertisement

Udayavani is now on Telegram. Click here to join our channel and stay updated with the latest news.

Next