Advertisement

ಅಮ್ಮಂದಿರ ಆಶಯದಂತೆ ಹೊಸಬಾಳು ಶುರುವಾಗಿದೆ

02:19 PM Sep 16, 2017 | Team Udayavani |

“ನಾನೆಲ್ಲಿ ನಿಲ್ಲಿಸಿದ್ದೀನಿ. ಮದುವೆ ನಂತರ ಅಭಿನಯಿಸಬೇಕು ಅಂದರೆ ಪಾತ್ರಗಳು ಅರ್ಥಪೂರ್ಣವಾಗಿರಬೇಕಲ್ವಾ? ಅದೇ ಕಾರಣಕ್ಕೆ ಸ್ವಲ್ಪ ಕಾಯುತ್ತಿದ್ದೆ. ಈ ಕಥೆ ಸ್ವಲ್ಪ ವಿಭಿನ್ನವಾಗಿದೆ ಅಂತ ಅನಿಸಿತು. ಒಳ್ಳೆಯ ತಂಡ ಇತ್ತು. ಹಾಗಾಗಿ ಒಪ್ಪಿಕೊಂಡೆ. ಎಷ್ಟು ಕಂತು ಬರುತ್ತೋ ಗೊತ್ತಿಲ್ಲ. ಜನರ ಆಸಕ್ತಿಯ ವಿಷಯ ಅದು. ಆಸಕ್ತಿ ಇರುವವರೆಗೂ ನಾನು ಈ ಧಾರಾವಾಹಿಯಲ್ಲಿ ಇರುತ್ತೀನಿ …’

Advertisement

ಹಾಗೊಂದು ಸ್ಪಷ್ಟತೆ ನಟಿ ಅನು ಪ್ರಭಾಕರ್‌ ಅವರಿಗೆ ಇದೆ. ಅದೇ ಕಾರಣಕ್ಕೆ ಅವರು “ತ್ರಿವೇಣಿ ಸಂಗಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ರಘು ಮುಖರ್ಜಿ ಅವರ ಜೊತೆಗೆ ಮದುವೆಯ ನಂತರ ಅವರು ನಟಿಸುತ್ತಿರುವ ಮೊದಲ ಧಾರಾವಾಹಿ ಇದು. ಇನ್ನು ಇದರ ಜೊತೆಗೆ ಎಸ್‌. ಮಹೇಂದರ್‌ ನಿರ್ದೇಶನದ “ಒನ್ಸ್‌ ಮೋರ್‌ ಕೌರವ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ “ತ್ರಿವೇಣಿ ಸಂಗಮ’ ಧಾರಾವಾಹಿಯ ಪತ್ರಿಕಾಗೋಷ್ಠಿ ಕಳೆದ ತಿಂಗಳು ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿ, ಆ ನಂತರ ಹೊರಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನು ಮಾತನಾಡಿದರು.

ಎಲ್ಲರಿಗೂ ಬಹಳ ಕುತೂಹಲವಿತ್ತು ಅನು ಪ್ರಭಾಕರ್‌ ಅವರ ಮದುವೆಯ ಬಗ್ಗೆ ಎಂದರೆ ತಪ್ಪಿಲ್ಲ. ಏಕೆಂದರೆ, ಅನು ಪ್ರಭಾಕರ್‌ ಮತ್ತು ರಘು ಮುಖರ್ಜಿ ಮದುವೆಯಾಗುತ್ತಾರೆಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಮದುವೆಯ ಹಿಂದಿನ ದಿನ ಇಂಥದ್ದೊಂದು ಸುದ್ದಿ ಬ್ರೇಕ್‌ ಆಯಿತು. ಮರುದಿನ ಅನು ಪ್ರಭಾಕರ್‌ ಅವರು ಅನು ಪ್ರಭಾಕರ್‌ ಮುಖರ್ಜಿಯಾದರು. ಅಲ್ಲಿಂದ ಅನು ಪ್ರಭಾಕರ್‌ ತಮ್ಮ ದಾಂಪತ್ಯದ ಸವಿಯನ್ನು ಸವಿಯುತ್ತಿದ್ದಾರೆ.

ಇಷ್ಟಕ್ಕೂ ಅನು ಪ್ರಭಾಕರ್‌ ಮತ್ತು ರಘು ಮುಖರ್ಜಿ ಭೇಟಿಯಾಗಿದ್ದು ಹೇಗೆ? ಪರಿಚಯ ಪ್ರೀತಿಗೆ ತಿರುಗಿ, ಆ ಪ್ರೀತಿ ಮದುವೆಗೆ ತಿರುಗಿದ್ದು ಹೇಗೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಆ ಕುತೂಹಲದಿಂದಲೇ ಅವರನ್ನು ಕೇಳ್ಳೋಣವಾಯಿತು. ಬಹುಶಃ ಇಬ್ಬರ ತಾಯಂದಿರು ಈ ಬಗ್ಗೆ ಯೋಚಿಸಿರದಿದ್ದರೆ, ತಾವಿಬ್ಬರೂ ಮತ್ತೆ ಮದುವೆಯಾಗುವ ಯೋಚನಯನ್ನು ಮಾಡುತ್ತಿರಲಿಲ್ಲ ಎನ್ನುತ್ತಾರೆ ಅನು ಪ್ರಭಾಕರ್‌. “ಜೀವನದಲ್ಲಿ ಒಮ್ಮೆ ಕಹಿ ಅನುಭವವಾಗಿದೆ. ಒಮ್ಮೆ ಎಡವಿದ್ದೀನಿ. ಮತ್ತೆ ಅದೇ ಹಾದಿ ತುಳಿಯುವುದಕ್ಕೆ ನನಗಂತೂ ಇಷ್ಟವಿರಲಿಲ್ಲ. ನಮ್ಮಿಬ್ಬರ ತಾಯಂದಿರು ಯೋಚನೆ ಮಾಡದಿದ್ದರೆ, ನಾವಿಬ್ಬರೂ ಯೋಚನೆ ಮಾಡುತ್ತಿದ್ದವೋ ಇಲ್ಲವೋ ನನಗೆ ಗೊತ್ತಿಲ್ಲ’ ಎಂದು ಒಂದು ಕ್ಷಣ ಮೌನವಾದರು ಅನು.

ಅನು ಮತ್ತು ರಘು ನಡುವೆ ಲವ್ವು ಹೇಗೆ ಶುರುವಾಯಿತು ಎಂದರೆ, ಲವ್ವುಗಿವ್ವು ಏನೂ ಇರಲಿಲ್ಲ ಎನ್ನುತ್ತಾರೆ ಅವರು. “ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೆವು. ರಘುಗೆ ನನ್ನ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಇಬ್ಬರೂ ಆಗ ಕಾರ್ಯಕ್ರಮವೊಂದರಲ್ಲಿ ಜಡ್ಜ್ ಆಗಿದ್ದೆವು. ಆ ಕಾರ್ಯಕ್ರಮ ಮುಗಿದರೂ ಸ್ನೇಹ ಇತ್ತು. ಸ್ನೇಹಿತರಾಗಿ ಆಗಾಗ ಮೀಟ್‌ ಮಾಡುತ್ತಿದ್ದುದುಂಟು. ಒಂದು ಹಂತದಲ್ಲಿ ನಮ್ಮಿಬ್ಬರ ತಾಯಂದಿರಿಗೆ, ನಾವಿಬ್ಬರೂ ಯಾಕೆ ಮದುವೆ ಆಗಬಾರದು ಎಂದನಿಸಿತು. ಆದರೆ, ನಮ್ಮಿಬ್ಬರಿಗೆ ಮದುವೆ ಯೋಚನೆ ಇರಲಿಲ್ಲ. ಏಕೆಂದರೆ, ಇಬ್ಬರ ದಾರಿಗಳು ಬೇರೆಬೇರೆ. ಒಮ್ಮೆ ನಮ್ಮಮ್ಮ ಈ ಬಗ್ಗೆ ಪ್ರಸ್ಥಾಪ ಮಾಡಿದರು. ಈ ಕುರಿತು ಇಬ್ಬರೂ ಯೋಚನೆ ಮಾಡಿದೆವು. ಕೊನೆಗೆ ಇಬ್ಬರೂ ನಮ್ನಮ್ಮ ತಾಯಂದಿರಿಗೆ ಹೇಳಿದೆವು. ಇಲ್ಲಿ ರೊಮ್ಯಾಂಟಿಕ್‌ ಅಂತದ್ದೇನೂ ಇಲ್ಲ. ಒಂದು ವಯಸ್ಸು ದಾಟಿದ ಮೇಲೆ, ಯೋಚನೆಗಳು ವಿಭಿನ್ನವಾಗಿರುತ್ತವೆ. ಕೊನೆಗೆ ನಮ್ಮಿಬ್ಬರ ಸ್ನೇಹ, ಮದುವೆಯತ್ತ ತಿರುಗಿತು’ ಎಂದರು ಅನು. ಅವರ ಮುಖದಲ್ಲಿ ತುಂಟ ಕಿರುನಗೆಯೊಂದು ಇತ್ತು.

Advertisement

ಅನು ಮತ್ತು ರಘು ಮದುವೆಯಾಗುವುದರ ಕುರಿತು, ಅವರ ಸ್ನೇಹಿತರ ವಲಯದಲ್ಲಿ ಮತ್ತು ಚಿತ್ರರಂಗದ ವಲಯದಲ್ಲಿ ಪ್ರಶಂಸೆ ವ್ಯಕ್ತವಾದರೂ, ಕೆಲವು ಕಡೆ ಅಪಸ್ವರಗಳು ಕೇಳಿ ಬಂತಂತೆ. “ಅದರಲ್ಲೂ ಸೋಷಿಯಲ್‌ ಮಿಡಿಯಾದಲ್ಲಿ ಕೆಲವು ಕೀಳಾದ ಅಭಿಪ್ರಾಯಗಳು ಬಂದವು. ಮರುಮದುವೆ ಆಗೋಕೆ ನಾಚಿಕೆ ಆಗಲ್ವಾ ಎಂಬಂತಹ ಮಾತತುಗಳು ಬಂದವು. ನನ್ನ ಬಗ್ಗೆ ಅವರಿಗೇನು ಗೊತ್ತಿದೆ. ನನ್ನ ನೋವು ನನ್ನ ಅಮ್ಮನಿಗೇ ಗೊತ್ತಿರುವುದಿಲ್ಲ. ಹಾಗಿರುವಾಗ ಬೇರೆಯವರಿಗೆ ನನ್ನ ನೋವು ಏನು ಗೊತ್ತಿರತ್ತೆ ಹೇಳಿ? ನಮ್ಮಿಬ್ಬರ ಮದುವೆ ಬಗ್ಗೆ ಎಲ್ಲಾ ಕಡೆ ಒಳ್ಳೆಯ ಅಭಿಪ್ರಾಯಗಳೇ ಬಂದವು. ಆದರೆ, ಒಂದೈದು ಪರ್ಸೆಂಟ್‌ ಬೇರೆ ತರಹ ಮಾತುಗಳು ಸಹ ಕೇಳಿ ಬಂತು. ಮೊದಲು ನಮ್ಮ ಜನರ ಮನಸ್ಥಿತಿ ಬದಲಾಗಬೇಕು. ಇಂಥ ಸಂದರ್ಭದಲ್ಲಿ ಮನೆಯವರು, ಸ್ನೇಹಿತರು ದೊಡ್ಡ ಸಪೋರ್ಟ್‌ ಕೊಟ್ಟರು. ಅವರೆಲ್ಲರ ಒತ್ತಾಸೆಯಿಂದ ನಾನು ಮತ್ತು ರಘು ಮದುವೆಯಾಗುವಂತಾಯಿತು’ ಎನ್ನುತ್ತಾರೆ ಅನು.

ಇನ್ನು ರಘು ಅವರ ವ್ಯಕ್ತಿತ್ವದ ಬಗ್ಗೆ ಬಹಳ ಖುಷಿಯಿಂದ ಮಾತನಾಡುತ್ತಾರೆ ಅನು. “ನನಗೆ ಅವರ ಪ್ರಾಮಾಕಿತೆ ಬಹಳ ಇಷ್ಟ. ತುಂಬಾ ಒಳ್ಳೆಯ ಹೃದಯದವರು ಅವು. ಪರಿಚಯ ಆಗಿ ಇಷ್ಟು ದಿನ ಆಯ್ತು. ಒಮದೇ ಒಂದು ದಿನ ಅವರ ಬಾಯಲ್ಲಿ ಕೆಟ್ಟ ಮಾತನ್ನ ನಾನು ಕೇಳಿಲ್ಲ. ಯಾರ ಬಗ್ಗೆಯೂ ನೆಗೆಟಿವ್‌ ಆಗಿ ಮಾತಾಡಿಲ್ಲ. ಯಾರಾದರೂ ಇಷ್ಟವಾಗಲಿಲ್ಲ ಎಂದರೆ, ದೂರ ಇರುತ್ತಾರೆ. ಅದು ಬಿಟ್ಟು, ಯಾರ ಬಗ್ಗೆಯೂ ಕೆಟ್ಟದ್ದು ಬಯಸುವ ವ್ಯಕ್ತಿತ್ವ ಅವರದಲ್ಲ. ಆ ಪ್ರಾಮಾಣಿಕತೆಯಿಂದಲೇ ಅವರು ಇಷ್ಟು ದೂರ ನಡೆದು ಬಂದಿದ್ದಾರೆ. ಮದುವೆಯಾಗಿದ್ದರಿಂದ ಕೆಲಸಕ್ಕೆ ತೊಂದರೆಯಾಗಬಹುದು ಎಂದು ನಾನು ಯಾವತ್ತೂ ಭಾವಿಸಿಲ್ಲ. ತಿಂಗಳಿಗೆ 15 ದಿನ ಕೆಲಸ ಇರಬಹುದು. ಮಿಕ್ಕಂತೆ ಇನ್ನು 15 ದಿನ ಖಾಲಿಯೇ ಇರುತ್ತೇನೆ. ಹಾಗಾಗಿ ಮದುವೆ ಮತ್ತು ನಟನೆ ಎರಡನ್ನೂ ಬ್ಯಾಲೆನ್ಸ್‌ ಮಾಡುವುದಕ್ಕೆ ಸಾಧ್ಯವಾಗಿದೆ …’

ಇನ್ನು ಮದುವೆಯ ನಂತರ ನಟಿಸುವುದನ್ನು ನಿಲ್ಲಿಸಿಲ್ಲ ಮತ್ತು ನಟಿಸುವುದನ್ನು ನಿಲ್ಲಿಸಬೇಕೆಂಬ ಯೋಚನೆಯೂ ಅವರಿಗಿಲ್ಲವಂತೆ. “ನಾನು ಮನೆ ಬಿಟ್ಟು ಬಂದರೆ, ಕೊನೆಗೆ ಖುಷಿ ಸಿಗಬೇಕು. ಅದು ಸಿಗದಿದ್ದರೆ ಯಾಕಾಗಿ ಮಾಡಬೇಕು ಹೇಳಿ? ನಾನ್ಯಾವತ್ತೂ ನಟಿಸುವುದಿಲ್ಲ ಎಂದು ಹೇಳಿಲ್ಲ. “ಆಟಗಾರ’ ನಾನು ನಟಿಸಿದ ಕೊನೆಯ ಚಿತ್ರವಾಗಿತ್ತು. ಆ ನಂತರ ಕನ್ನಡ, ತಮಿಳು ಮತ್ತು ತೆಲುಗಿನಿಂದ ಆಫ‌ರ್‌ಗಳು ಬರುತ್ತಲೇ ಇವೆ. ಆದರೆ, ಅದ್ಯಾವುದೂ ನನ್ನ ಆಸಕ್ತಿಯನ್ನು ಕೆರಳಿಸಲಿಲ್ಲ. ನನಗೆ ಇದೇ ತರಹದ ಪಾತ್ರ ಬೇಕು, ಅದೇ ತರಹ ಮಾಡಬೇಕು ಎಂದೇನೂ ಇಲ್ಲ. ಒಂದೇ ಒಂದು ಸೀನ್‌ ಆದರೂ ಪರವಾಗಿಲ್ಲ. ಅದು ಚೆನ್ನಾಗಿರಬೇಕು ಅಷ್ಟೇ. ಅಂಥದ್ದಾ$Âವುದೂ ಬಂದಿಲ್ಲ ಅಂತ ಸುಮ್ಮನಿದ್ದೆ. ಈ ಮಧ್ಯೆ “ತ್ರಿವೇಣಿ ಸಂಗಮ’ ಬಂತು. ಇದೊಂದು ಒಳ್ಳೆಯ ಕಥೆ. ತಂಡ ಚೆನ್ನಾಗಿತ್ತು. ಪಾತ್ರ ಚೆನ್ನಾಗಿತ್ತು. ಅದಕ್ಕೇ ಒಪ್ಪಿಕೊಂಡೆ’ ಎಂಬ ಉತ್ತರ ಅವರಿಂದ ಬರುತ್ತದೆ.

ರಘು ಮತ್ತು ಅನು ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳೋದು ಯಾವಾಗ? ರಘು ಮುಖರ್ಜಿ ಜೊತೆಗೆ ನಟಿಸಬೇಕು ಎಂಬ ಆಸೆ ಅನು ಅವರಿಗೂ ಇದೆ. ಆದರೆ, ಅಂಥದ್ದೊಂದು ಕಾಲಕ್ಕೆ ಕಾಯುತ್ತಿದ್ದಾರೆ ಅವರು. “ಆಸೆ ಖಂಡಿತಾ ಇದೆ, ಅವರ ಜೊತೆಗೆ ನಟಿಸುವುದಕ್ಕೆ. ಅವರೊಬ್ಬ ಒಳ್ಳೆಯ ನಟ. ತುಂಬಾ ಶ್ರಮ ಹಾಕಿ ತಮ್ಮ ಕೆಲಸ ಮಾಡುತ್ತಾರೆ. ಅವರ ಜೊತೆಗೆ ನಟಿಸಬೇಕು ಅಂತ ಆಸೆ ಇದೆ. ಅವರಿಗೂ ಇದೆ. ಒಳ್ಳೆಯ ಕಥೆ ಮತ್ತು ನಿರ್ದೇಶಕರು ಬಂದರೆ, ಖಂಡಿತಾ ನಟಿಸುತ್ತೇವೆ. ಅದರಲ್ಲೇನಿದೆ ಹೇಳಿ? ನಿಮ್ಮ ಗಮನಕ್ಕೆ ಅಂಥದ್ದೇನಾದರೂ ಬಂದರೆ ಹೇಳಿ’ ಎಂದು ನಕ್ಕರು ಅನು.

ಅಷ್ಟರಲ್ಲಿ “ತ್ರಿವೇಣಿ ಸಂಗಮ’ದ ಚಿತ್ರೀಕರಣ ಪ್ರಾರಂಭವಾಗಿತ್ತು. ಅನು ಅವರನ್ನು ಹುಡುಕಿಕೊಂಡು, ತಂಡದ ಹುಡುಗರು ಬಂದರು. ಸರಿಯಾಗಿ, ಅನು ಸಹ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಕ್ಕೆ ಎದ್ದರು.

ಬರಹ: ಶ್ರೀಪತಿ; ಚಿತ್ರಗಳು: ಮನು

Advertisement

Udayavani is now on Telegram. Click here to join our channel and stay updated with the latest news.

Next