Advertisement

ಕವಿ ಕಣ್ಣಲಿ ಹೊಸ ವರುಷವು

10:00 AM Jan 06, 2020 | mahesh |

ಹೊಸವರ್ಷವೆಂಬ ಮಹಾಶಯ
ಇಪ್ಪತ್ತು ಇಪ್ಪತ್ತೆಂಬ ಕರೆಯದೆ ಬಂದ ಮಹಾ
ಚರಣಕ್ಕೆ ನಮ್ಮ ನಮಸ್ಕರಣ. ಇದು ಋತವೆಂಬ
ನಿತ್ಯಾಚರಣ. ಹೊರಗಣ್ಣಿಗೆ ಕಾಣದಿರುವ
ನಿರ್ದೇಹಿ ನಿಯತ್ತಾಗಿ ಪದವಿಟ್ಟು ಅಂಜದಳು
ಪದೆ ಅನುಕ್ಷಣವೂ ನಡೆವ ಮುನ್ನಡಿಯ ಸಂ
ಚರಣ. ತಮ್ಮ ತಂಗಾಳಿಯುಸಿರಾಟ ತಾಗುತ್ತಿದೆ
ಮೈಗೆ. ನೆತ್ತಿಗೆ ಮುತ್ತೂತ್ತುತ್ತಿದೆ ತಮ್ಮ ಮಾ
ತಿರದ “ಅಡಿಯ ಮುಂದಿಡು ನನ್ನೊಡನೆ’ಂಬ
ಮಹಾ ಮಂತ್ರ. ದಿಕ್ಕ ತಿರುಗಿಸುವಿರಿ ಕಾಡುವ
ಪ್ರಶ್ನೆಗಳಿಗೆಲ್ಲ ಉಂಟು ಉತ್ತರವೆಂಬಂತೆ.
ನಮ್ಮ ಸೋದರರು ಹೆಂಡತಿ ಮಕ್ಕಳು ಇರುವಂತೆ
ಕರುಣಿಸಿರಿ ನಾವಿರುವವರೆಗೆ. ಮಳೆ ಬೀಳಲಿ
ಆಲಿಕಲ್ಲಿಲ್ಲದೆ. ನೀರೂ ಕಲ್ಲಾಗುವೀ ಕಲಿಗಾಲ
ವಟಗುಟ್ಟುತ್ತಿರಲಿ ಶುಭಶುಭವೆಂದೀ ಕನ್ನಡವಕ್ಕಿ?

Advertisement

ಎಚ್‌. ಎಸ್‌. ವೆಂಕಟೇಶ ಮೂರ್ತಿ

ಹೊಸ ವರುಷದಲ್ಲಾದರೂ…
ಕಲ್ಲು- ಮಣ್ಣು, ಗಿಡ ಮರ ಹೂವು ಹಣ್ಣು
ಪಶು ಪಕ್ಷಿ ಕ್ರಿಮಿ ಕೀಟಗಳು
ಸುಮ್ಮನೆ ಬದುಕಿ ಹೋಗುವವು ಅಷ್ಟೇ.

ಮಳೆ ಗಾಳಿ ಗುಡುಗು ಮಿಂಚು ಬಿಸಿಲು ಚಳಿ
ಸುಮ್ಮನೆ ಬಂದು ಹೋಗುವವು ಅಷ್ಟೇ.

ಮಳೆಬಿಲ್ಲು-ಬೆಳದಿಂಗಳು-ತಂಗಾಳಿ ಸುಮ್ಮನೆ
ಮೂಡಿ, ಸುರಿದು, ಸೂಸಿ ಹೋಗುವವು ಅಷ್ಟೇ.

Advertisement

ಮನುಜಾ… ನಿನ್ನೊಬ್ಬನದೇ
ಹಾರಾಟ-ಚೀರಾಟ, ಎಗರಾಟ,
ಪರದಾಟ, ಮೆರೆದಾಟ, ಸೆಣೆಸಾಟ !

ಈಗಲೇ ಈ ಕ್ಷಣ ಸಂಕಲ್ಪ ಮಾಡು
ಮಿಕ್ಕವುಗಳಂತೆ ಸುಮ್ಮನೆ ಇದ್ದು ಹೋಗು…
ಕರೆ ಬರಲು ಸುಮ್ಮನೆ ಎದ್ದು ಹೋಗು !

ಸವಿತಾ ನಾಗಭೂಷಣ

2020 ಹೊಸ ವರ್ಷ
ಕದ ತೆರೆದು ನೋಡಿದೆ
ಏಂಜೆಲ್ಸ್‌ ಇದ್ದಾರೋ ಎಂದು
ಏಂಜೆಲ್ಸ್‌ ಇರಲಿಲ್ಲ

ದಾತಾರರಿಲ್ಲದ ನಾಯಿಗಳು ಚಳಿಗೆ
ಒಂದೆಡೆ ಮುದುಡಿಬಿದ್ದಿªದ್ದುವು

ಪಾರಿವಾಳಗಳು ಎಂದಿನ ಹಾಗೆ
ಎದ್ದು ಗುಟುಕರಿಸುತ್ತಿದ್ದುವು

ಅಪಾರ್ಟ್‌ಮೆಂಟಿನ ಜನ ನಿನ್ನೆ
ತಡರಾತ್ರೆಯ ತನಕ ಕುಣಿದು ಕುಪ್ಪಳಿಸಿ
ಈಗ ಮಲಗಿದ್ದರು

ಹಾಲಿನ ತರಕ ಯಾವಾಗಲೋ ಬಂದು
ಪ್ಯಾಕೆಟುಗಳನ್ನು
ಬಿಸಾಕಿ ಹೊರಟುಹೋಗಿದ್ದ

ಉಳಿದಂತೆ ಎಲ್ಲವೂ ನಿಶ್ಶಬ್ದ ನಿಶ್ಚಲ
ಸೈಂಟ್‌ ಪೀಟರ್ಸ್‌ನಲ್ಲಿ ಮೈಖೆಲೇಂಜೆಲೋ
ಇಷ್ಟೊಂದು ಮುಂಜಾನೆ ಮುತುವರ್ಜಿಯಿಂದ
ಚಿತ್ರಿಸುತ್ತಿದ್ದನೇ
ಆದಿಮಾನವನನ್ನು ದೇವರು
ಬೀಳ್ಕೊಡುವ ದೃಶ್ಯವ

ಯಾರು ಯಾರನ್ನು ಸೃಷ್ಟಿಸಿದರು
ಯಾರು ಯಾರನ್ನು ಬೀಳ್ಕೊಟ್ಟರು
ಸ್ವಲ್ಪ ಗೊಂದಲ ನನಗೆ

ಬಾಲ್ಕನಿಗೆ ಬಂದೆ ಆಕಾಶ ನೋಡಿದೆ
ಬೆಳಕಾಗಿರಲಿಲ್ಲ ಇನ್ನೂ

ನೆನಪಿದೆಯೆ ಪೀಟರನ ಶಿಲುಬೆಗೆ ಹಾಕಿದ್ದು
ತಲೆಕೆಳಗಾಗಿ (ಅವನ ಅಪೇಕ್ಷೆಯ ಮೇಲೆಯೆ)
ಗುಮ್ಮಟದಲ್ಲಿ ಮೈಖೆಲ್‌ ಕೂಡ
ಅಂಗಾತ ಮಲಗಿ ಚಿತ್ರಿಸಿದ್ದು

ಕೆ. ವಿ. ತಿರುಮಲೇಶ್‌

ಸಾಂತ್ವನ
ಎಲೆಗಳನ್ನುದುರಿಸಿ ಬೆತ್ತಲೆ ನಿಂತ
ಆ ಮರ
ಕೈಗಳನ್ನೆತ್ತಿ ನಮಿಸುತ್ತ
ಕಾಯುತ್ತಿದೆ
ಆಕಾಶದ ಕರುಣೆಗೆ.

ಆಕಾಶವೋ-ಸುರಿಸುತ್ತ ಬಿಸಿಲ ಮಳೆ
ಪರೀಕ್ಷಿಸುತ್ತಿದೆ ಮರದ ಸಹನೆಯನು
ಗಟ್ಟಿಗೊಳ್ಳಲು ಅದರ ಬದುಕು.

ಕಾಲ ಸರಿಯುತ್ತ, ತಪಸ್ಸು
ಫ‌ಲಿಸಿತೋ ಎನ್ನುವ ಹಾಗೆ
ಮೆಲ್ಲಗೆ ತಲೆಯೆತ್ತುತ್ತ, ಮರದ
ಸಂದಿಗೊಂದಿಗಳಿಂದ
ಚಿಗುರು

ಸಾಂತ್ವನ ಹೇಳುತ್ತಿದೆ ಮರಕ್ಕೆ
ಸೂಚಿಸುತ್ತ ಅದಕ್ಕೆ
ಹೊಸತರ ಸ್ವಾಗತಕ್ಕೆ
ಬರಲಿರುವ ಸಮೃದ್ಧ ಆಕಾರಕ್ಕೆ.

ಸುಬ್ರಾಯ ಚೊಕ್ಕಾಡಿ

ಹೋದವರ್ಷದ ನೆನಪಿಗೆ ನೆಟ್ಟ ಆಲ
ಹೋದ ವರ್ಷ
ನಮ್ಮ ಜಮೀನಿನಲ್ಲಿ
ನೆನಪಿಗೆ ಇರಲಿ ಎಂದು ನೆಟ್ಟ ಆಲದ ಸಸಿ
ಬೆಳೆಯುವ ಸೋಜಿಗವ ಅಳೆಯುವಾಗಲೇ
ಬಂದುಬಿಟ್ಟಿದೆ ಇನ್ನೊಂದು ವರ್ಷ!

ಅಮ್ಮಾ, ಈ ಶೂನಲ್ಲಿ ಕಾಲು ತೂರುತ್ತಿಲ್ಲ
ಇದು ಸೊಂಟ ಸಾಲದ ಪ್ಯಾಂಟು,
ಮೇಲೆ ಸಾಗಿದ ಷರ್ಟ್‌ ಹೇಗೆ ಹಾಕಿಕೊಳ್ಳಲೆ
ಇದನ್ನ?
ಮಕ್ಕಳ ಹೊಸ ವರಸೆ

ಎಷ್ಟೊಂದು ಡಿಸ್ಕೌಂಟು ಅಂತೀರಿ ಎಲ್ಲಾ ಬೈ ವನ್‌ ಗೆಟ್‌ವನ್ನೇ
ನಮ್ಮ ಮನೆಯವರು ನೆನ್ನೆ ತಂದರು ಈ ಸೀರೆ
ಹೇಗಿದೆ? ಪಕ್ಕದ ಮನೆಯಾಕೆ ಅಂದಾಗ
ಕೇಳಿಲ್ಲ ಎನ್ನುವಂತೆ ಪೇಪರ್‌ನಲ್ಲಿ ಹುದುಗಿಕೊಂಡ ಗಂಡನ
ಚೂರು ಚೂರೇ ಉದುರಿ ಬಕ್ಕವಾಗುತ್ತಿರುವ ತಲೆಗೆ
ಅಂದುಕೊಂಡಿದ್ದು ಹಚ್ಚಬೇಕು ಕೂದಲು ಬೆಳೆಯುವ ಎಣ್ಣೆ

ಹೋದವರ್ಷದ ನೆನಪಿಗೆ ನೆಟ್ಟ ಆಲ
ಇನ್ನಷ್ಟು ಗಿಡ್ಡವಾಗಿಬಿಟ್ಟಿದೆ ಆಡು ಕುರಿ ಮೇದು
ಮೊನ್ನೆ ಜಮೀನಿಗೆ ಹೋದಾಗ
ಅದಕ್ಕೊಂದು ಮುಳ್ಳಿನ ಮುಚ್ಚಿಗೆ ಹಾಕಿಬಂದೆ
ನೋಡೋಣ ಮುಂದಿನ ವರ್ಷಕ್ಕೆ ಬೆಳೆಯಬಹುದು ಒಂದಡಿಯಾದರೂ

ಇವತ್ತು ರಾತ್ರಿ ಲಾಂಜಿಗೆ ಬಂದುಬಿಡಿ ಎಲ್ಲರೂ ಸೇರಿರುತ್ತೇವೆ ಅಲ್ಲಿ
ಸೆಲಬ್ರೇಟ್‌ ಮಾಡೋಣ
ಮಾತುಗಳ ನಡುವೆ ಕಾಡುವ ದಿಗ½$›ಮೆ
ಕಿಟಕಿಯಿಂದ ಬಗ್ಗಿ ನೋಡಿದೆ ಜೋರಿತ್ತು ತಯಾರಿ

ಕ್ಯಾಲೆಂಡರಿನಲ್ಲಿ ಬದಲಾಗುವ ವರ್ಷಕ್ಕೆ
ಕತ್ತರಿಸಬೇಕಿರುವ ಕೇಕುಗಳು
ಒಡೆಯಬೇಕಿರುವ ಬಲೂನುಗಳು,
ಕುಣಿವ ತಯಾರಿಗೆ ಕಾದ ಕಾಲುಗಳು
ಅಚ್ಚುಕಟ್ಟಾಗಿ ಜೋಡಿಸಿಟ್ಟ ಶಾಂಪೇನ್‌ ಬಾಟಲುಗಳು,
ಎಲ್ಲವೂ ಕಾಯುತ್ತಿವೆ
ಯಾಕೋ ಅಜ್ಜಿ ಹೇಳಿಕೊಟ್ಟಿದ್ದ ಪ್ರಭವ ವಿಭವ…
ಹೀಗೆ ಅರವತ್ತು ಸಂವತ್ಸರಗಳೂ
ಎಣ್ಣೆ ತಟ್ಟಿಸಿಕೊಂಡು ಅಭ್ಯಂಜನಕ್ಕೆ ಸಾಲುಗಟ್ಟಿ ಕಾದ ಮಕ್ಕಳಂತೆ
ನೆನಪಾಗುತ್ತಿವೆ ಹಾಗೆ ಸುಮ್ಮನೆ

ಪಿ. ಚಂದ್ರಿಕಾ

ಕಾಲದೀಪ
ದೇವರೇ
ಎಂಥಾ ನಿರ್ದಯಿ ಈ ಜಗತ್ತು
ಯಾರೂ ಹೇಳಲೇ ಇಲ್ಲವಲ್ಲಾ ಕೃತಜ್ಞತೆ
ಅಥವಾ ಹತ್ತಿ ಇಳಿದು
ಇಳಿದು ಹತ್ತಿದ ಮೇಲೆ
ತಮ್ಮ ತಮ್ಮ ಋಣದ ಕಥೆ
ಅಂತ ಆ ಏಣಿ ಅತ್ತಿತು

ದೇವರೇ ಎಂಥ ನಿರ್ದಯಿ ಈ ಏಣಿ
ತನ್ನೆದೆಗೆ ಕಾಲಿಟ್ಟು ಹತ್ತಿದ
ಎಲ್ಲರ ನಿರ್ದಯ ನಡೆಯ
ಎಲ್ಲರಿಗೂ ಸಾರಿ ಸಾರಿ ಹೇಳಿ
ದರೂ ಕೊನೆಗೂ ತನ್ನ
ಸೃಷ್ಟಿಕರ್ತನಿಗಿದನ್ನ
ತಿಳಿಸದೆ ಹೋಯ್ತಲ್ಲ ಅಂತ
ಅಲವತ್ತುಗೊಂಡಿತು
ಬಡ ಬಡಗಿಯ ಉಳಿ

ದೇವರೇ ಎಂಥಾ ನಿರ್ದಯಿ ನೀನು
ಏಣಿ ಹತ್ತಿದವರನ್ನೂ
ಏಣಿ ಸೃಷ್ಟಿಸಿದವರನ್ನೂ
ಸೃಷ್ಟಿಸಿ
ಏಣಿಯನ್ನೂ ಏಣಿ ಹತ್ತಿದವರನ್ನೂ
ಏಣಿಯ ಸೃಷ್ಟಿಸಿದವರ ಜೊತೆಗೇ
ಅಮರರನ್ನಾಗಿಸಿ ಚಂದ
ನೋಡುತ್ತಿದ್ದೀಯಲ್ಲಾ ಪರದೆ ಹಿಂದಿಂದ
ಅಂತ ಅತ್ತಿತು ಗರ್ಭಗುಡಿ ದಾರಂದ

ದೇವರು ದೇವರ ಹಾಗೆ ಪಾಪ
ಆ ಏಣಿಯ ಮೈ ತಡವಿಬಿಟ್ಟು
ಆ ಬಡಪಾಯಿ ಉಳಿಯ
ಹೊಳಪನ್ನೂ ಸವರಿಬಿಟ್ಟು
ಉಧ್ದೋ ಉದ್ದನ್ನ ನಿಟ್ಟುಸಿರಿಟ್ಟು
ಗರ್ಭಗುಡಿಯೊಳಗೇ ಅಡಗಿದ್ದು
ಯಾರ ಕಣ್ಣಿಗೂ ಕಾಣದೆ ಹೋಯಿತು
ನಿರಂತರ ಉರಿಯುತ್ತಿದ್ದ ಕಾಲ
ದೀಪದ ಹೊರತು…

ಜಯರಾಮ ಕಾರಂತ

Advertisement

Udayavani is now on Telegram. Click here to join our channel and stay updated with the latest news.

Next