Advertisement

ನೂತನ ಜವುಳಿ ನೀತಿ

10:13 PM Nov 09, 2019 | mahesh |

ನೂತನ ಟೆಕ್ಸ್‌ಟೈಲ್‌ ಮತ್ತು ಗಾರ್ಮೆಂಟ್ಸ್‌ ನೀತಿ 2019-24ಕ್ಕೆ (ಜವುಳಿ ನೀತಿ) ಜಾರಿಗೆ ರಾಜ್ಯ ಸರಕಾರ ಇತ್ತೀಚೆಗೆ ಒಪ್ಪಿಗೆ ನೀಡಿದೆ. ನೂತನ ನೀತಿಯಲ್ಲಿ ಜವುಳಿ ಉದ್ಯಮ ಅಭಿವೃದ್ಧಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗಿದ್ದು ಮುಂದಿನ 5 ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 10,000 ಕೋ.ರೂ. ಬಂಡವಾಳ ಹೂಡಿಕೆ ಹಾಗೂ ಸುಮಾರು 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

Advertisement

ಜವುಳಿ ಉದ್ಯಮ ಅಭಿವೃದ್ಧಿಗೆ ರಾಜ್ಯವನ್ನು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದ್ದು “ಎ’ ವಲಯದಲ್ಲಿ ಹೈದರಾಬಾದ್‌ ಕರ್ನಾಟಕ, ಬಿ ವಲಯದಲ್ಲಿ ಜಿಲ್ಲಾ, ಪುರಸಭೆ ಹೊರತುಪಡಿಸಿದ ನಗರ, ಸಿ ವಲಯದಲ್ಲಿ ಪುರಸಭೆ ಹಾಗೂ ಜಿಲ್ಲಾ ಕೇಂದ್ರ ಹಾಗೂ ವಲಯ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳು ಬರುತ್ತವೆ. ಮಂಗಳೂರಿನಲ್ಲಿ ಆ್ಯಪರಾಲ್‌ ( ವಸ್ತ್ರೋದ್ಯಮ) ಪಾರ್ಕ್‌ ಪ್ರಸ್ತಾವನೆ ಈಗಾಗಲೇ ಇದೆ. ನೂತನ ಜವುಳಿ ನೀತಿ ಈ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸಲು ಪೂರಕವಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧಗೊಳಿಸಲು ಇದು ಸಕಾಲವಾಗಿದೆ.

ಅನಿಶ್ಚಿತೆ ಕಾಡುತ್ತಿರುವ ಸ್ಥಳೀಯ ಉದ್ಯಮ
ಕೃಷಿ , ಹಂಚು, ಬೀಡಿ ಮತ್ತು ಮೀನುಗಾರಿಕೆ ದ.ಕ. ಜಿಲ್ಲೆಯ ಜೀವನಾಧರ ವೃತ್ತಿ ಕ್ಷೇತ್ರಗಳು. ಇದರಲ್ಲಿ ಹಂಚು ಕಣ್ಮರೆಯ ಅಂಚಿನಲ್ಲಿದೆ. ಕೃಷಿ ಹಿನ್ನೆಡೆಯ ಹಾದಿಯಲ್ಲಿದೆ. ಬೀಡಿ ಆರೋಗ್ಯಕ್ಕೆ ಹಾನಿಕರ ಎಂಬ ನೆಲೆಯಲ್ಲಿ ಬಹುತೇಕ ನಿಷೇಧದ ಹಾದಿಯಲ್ಲಿದ್ದು ಇದನ್ನೇ ಅವಲಂಬಿತವಾಗಿರುವ ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ. ಬೀಡಿ ಉದ್ಯಮದಲ್ಲಿ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ದುಡಿಯುತ್ತಿದ್ದಾರೆ. ಬೀಡಿ ಉದ್ಯಮ ಅನಿಶ್ಚಿತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದು ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಮೀನುಗಾರಿಕೆಯ ಸ್ಥಿತಿಯೂ ಉತ್ತಮವಾಗಿಲ್ಲ. ಈ ಹಂತದಲ್ಲಿ ಈ ಕ್ಷೇತ್ರಗಳನ್ನು ಅವಲಂಬಿಸಿಕೊಂಡಿರುವ ಜನರಿಗೆ ಪರ್ಯಾಯ ಉದ್ಯೋಗ ಮೂಲವೊಂದು ಸೃಷ್ಟಿಯಾಗಬೇಕಾಗಿದೆ. ಇದಕ್ಕೆ ಪರ್ಯಾಯವಾಗಬಲ್ಲ ಕ್ಷೇತ್ರಗಳೆಂದರೆ ವಸ್ತ್ರೋದ್ಯಮ ಕ್ಷೇತ್ರ.
ಪರ್ಯಾಯ

ಉದ್ಯೋಗ ಸೃಷ್ಟಿ ಅಗತ್ಯ
ಬೆಂಗಳೂರಿನಲ್ಲಿ ಸಿದ್ಧ ಉಡುಪು, ಬ್ಯಾಗ್‌ ತಯಾರಿ ಉದ್ಯಮ ಬಹುದೊಡ್ಡ ಉದ್ಯೋಗಾವಕಾಶನ್ನು ಒದಗಿಸುತ್ತಿರುವ ಕ್ಷೇತ್ರವಾಗಿ ಗುರುತಿಸಿಕೊಂಡಿವೆ. ಮುಖ್ಯವಾಗಿ ಲಕ್ಷಾಂತರ ಮಂದಿ ಮಹಿಳಾ ಉದ್ಯೋಗಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮಾದರಿಯಲ್ಲಿ ಮಂಗಳೂರಿನಲ್ಲೂ ವಸ್ತ್ರೋದ್ಯಮ ಸಂಬಂಧಿತ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಬೀಡಿಕಾರ್ಮಿಕರಿಗೆ ಪರ್ಯಾಯ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಾಧ್ಯವಿದೆ.

ಮಂಗಳೂರಿನಲ್ಲಿ ಆ್ಯಪೆರಾಲ್‌ ಪಾರ್ಕ್‌ ಪ್ರಸ್ತಾವನೆ
ಮಂಗಳೂರಿನಲ್ಲಿ ಆ್ಯಪೆರಾಲ್‌ ಪಾರ್ಕ್‌ ಸ್ಥಾಪನೆಯ ಪ್ರಸ್ತಾವನೆ ಬಹಳ ಸಮಯದಿಂದ ಇದೆ. ಮುಡಿಪು ಬಳಿಯ ಕೆನರಾ ಕೈಗಾರಿಕಾಭಿವೃದ್ದಿ ಪ್ರದೇಶದಲ್ಲಿ ರಾಜ್ಯ ಜವುಳಿ ಇಲಾಖೆಯಿಂದ ಆ್ಯಪೆರಾಲ್‌ ಪಾರ್ಕ್‌ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ದ.ಕ.,ಉಡುಪಿ ಸಹಿತ ಕರಾವಳಿ ಜಿಲ್ಲೆಗಳು ಹಾಗೂ ಮೈಸೂರು ಹಾಗೂ ದಾವಣೆಗೆರೆ ಜಿಲ್ಲೆಗಳಲ್ಲಿ ಜವುಳಿ ಪಾರ್ಕ್‌ಗಳ ಸ್ಥಾಪನೆ ಕುರಿತು ಪರಿಶೀಲನೆಗೆ ಜವುಳಿ ಇಲಾಖೆಯಿಂದ ಅಧ್ಯಯನ ಸಮಿತಿ ರಚನೆಯಾಗಿತ್ತು. ಬೀಡಿ ಉದ್ಯಮಕ್ಕೆ ಪರ್ಯಾಯವಾಗಿ ಉದ್ಯೋಗಾವಕಾಶಗಳ ಸೃಷ್ಟಿ ಇದರ ಉದ್ದೇಶವಾಗಿತ್ತು. ಆದರೆ ಮುಂದಕ್ಕೆ ಈ ಪ್ರಸ್ತಾವನೆಯನ್ನು ಕಾರ್ಯರೂಪಕ್ಕಿಳಿಸುವ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ.

Advertisement

ಗರಿಷ್ಠ ಉದ್ಯೋಗ
ಬೆಂಗಳೂರು ದೇಶದಲ್ಲಿ ಸಿದ್ಧ ಉಡುಪು ಉತ್ಪಾದನಾ ಕ್ಷೇತ್ರದಲ್ಲಿ ಪ್ರಮುಖ ನಗರವಾಗಿ ಗುರುತಿಸಿಕೊಂಡಿದೆ. ಸುಮಾರು 1200ಕ್ಕೂ ಅಧಿಕ ಸಿದ್ಧ ಉಡುಪು ಕಾರ್ಖಾನೆಗಳು ಕಾರ್ಯಚರಿಸುತ್ತಿವೆ. 5 ಲಕ್ಷ ಮಂದಿ ಇದರಲ್ಲಿ ಉದ್ಯೋಗಾವಕಾಶಗಳನ್ನು ಪಡೆದುಕೊಂಡಿದ್ದಾರೆ. ಅಮೆರಿಕ, ಯುರೋಪ್‌, ಮಧ್ಯಪ್ರಾಚ್ಯ ದೇಶಗಳು, ಕೆನಡಾ, ಆಫ್ರಿಕಾ, ಹಾಂಗ್‌ಕಾಂಗ್‌, ಸಿಂಗಾಪೂರ , ಆಸ್ಟ್ರೇಲಿಯ ಮುಂತಾದ ದೇಶಗಳಿಗೆ ಬೆಂಗಳೂರಿನಿಂದ ಸಿದ್ಧ ಉಡುಪುಗಳು, ಜವುಳಿ ಉತ್ಪನ್ನಗಳು ರಫ್ತಾಗುತ್ತಿವೆ.

ವಸ್ತ್ರೋದ್ಯಮ ಎಂಬುವುದು ಹೆಚ್ಚಾಗಿ ಸ್ಥಳೀಯ ಉದ್ಯಮವಾಗಲಿದ್ದು ಇದು ಗರಿಷ್ಠ ಪ್ರಮಾಣದ ಉದ್ಯೋಗವನ್ನು ದೊರೆಕಿಸಿಕೊಡಲಿದೆ. ಅಲ್ಲದೇ ಉದ್ಯೋಗವನ್ನು ಹರಿಸಿ, ಬೇರೆ ರಾಜ್ಯ-ದೇಶಗಳಿಗೆ ಹೋಗುವುದನ್ನು ತಡೆಯಬಹುದು.

ದೇಶದ ಪ್ರಮುಖ ಬಂದರುಗಳಲ್ಲೊಂದಾಗಿರುವ ಗುರುತಿಸಿಕೊಂಡಿರುವ ನವಮಂಗಳೂರು ಬಂದರು ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಿಂದ ರಫ್ತು ಮತ್ತು ಆಮದು ವ್ಯವಹಾರಗಳು ನಡೆಯುತ್ತಿವೆ. ಅದುದರಿಂದ ಮಂಗಳೂರಿನಲ್ಲಿ ಸಿದ್ದಗೊಳ್ಳುವ ಸಿದ್ಧ ಉಡುಪುಗಳು ಹಾಗೂ ಜವುಳಿ ಉತ್ಪನ್ನಗಳ ರಫ್ತುಗೆ ಇದು ಸಹಕಾರಿಯಾಗಿದೆ.

ನೂತನ ಜವುಳಿ ನೀತಿ
ಜವುಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯಧನ ಹಾಗೂ ಸವಲತ್ತುಗಳನ್ನು ನೂತನ ನೀತಿ ಒಳಗೊಂಡಿದೆ. 2019-20 ರಲ್ಲಿ 1000 ಕೋ.ರೂ.ವಿನಿಯೋಗ ಹಾಗೂ 50,000 ಉದ್ಯೋಗಸೃಷ್ಟಿ, 2020-21 ರಲ್ಲಿ 1500 ಕೋ.ರೂ. ವಿನಿಯೋಗ ಹಾಗೂ 75,000 ಉದ್ಯೋಗ , 2021-22 ರಲ್ಲಿ 2000 ಕೋ.ರೂ. ವಿನಿಯೋಗ ಹಾಗೂ 1 ಲಕ್ಷ ಉದ್ಯೋಗ, 2022-23 ರಲ್ಲಿ 3000 ಕೋ.ರೂ. ವಿನಿಯೋಗ ಹಾಗೂ 1.50 ಲಕ್ಷ ಉದ್ಯೋಗ , 2023-24 ರಲ್ಲಿ 2500 ಕೋ.ರೂ. ವಿನಿಯೋಗ ಹಾಗೂ 1.25 ಲಕ್ಷ ಉದ್ಯೋಗ ಸೃಷ್ಟಿ ಗುರಿಯನ್ನು ಹೊಂದಿದೆ. ಜವುಳಿ ಉದ್ಯಮ ಅಭಿವೃದ್ಧಿ ಜತೆಗೆ ಈ ಕ್ಷೇತ್ರಕ್ಕೆ ಸಂಬಂಧಿಸಿ ಯುವಕರಲ್ಲಿ ಕೌಶಲ ಅಭಿವೃದ್ಧಿಗೊಳಿಸುವ ಯೋಜನೆಯನ್ನು ನೀತಿ ಒಳಗೊಂಡಿದೆ.

ನಿರೋದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಸರಕಾರವೂ ಹಲವಾರು ಯೋಜನೆಗಳನ್ನು ಸೃಷ್ಟಿಸುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರದಿಂದ ಜವುಳಿ ಉದ್ಯಮವನ್ನು ಅಭಿವೃದ್ಧಿಪಡಿಸುವುಕ್ಕಾಗಿ ನೂತನ ಜವುಳಿ ನೀತಿಗೆ ಒಪ್ಪಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಬಹುತೇಕ ಉದ್ಯೋಗವನ್ನು ಸೃಷ್ಟಿಸುವ ಜವುಳಿ ಉದ್ಯಮವೂ ಸ್ಮಾರ್ಟ್‌ಸಿಟಿ ಮಂಗಳೂರಿನಲ್ಲಿ ಕೂಡ ಅಭಿವೃದ್ಧಿಪಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಈ ಲೇಖನ ತಿಳಿಸುತ್ತದೆ.

- ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next