Advertisement

ನಾಮಕೇವಾಸ್ತೆಯಾದ ಹೊಸ ತಾಲೂಕು

04:09 PM May 19, 2022 | Team Udayavani |

ಗದಗ: ದಶಕಗಳ ಹೋರಾಟ ಮತ್ತು ಜನಸ್ನೇಹಿ ಆಡಳಿತದ ಕನಸಿನೊಂದಿಗೆ ಜನ್ಮತಳೆದ ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ ನೂತನ ತಾಲೂಕುಗಳು ವರ್ಷಗಳು ಕಳೆದರೂ ಪೂರ್ಣ ಪ್ರಮಾಣದಲ್ಲಿ ಜನ ಸೇವೆಗೆ ಸಿದ್ಧಗೊಂಡಿಲ್ಲ. ಕಂದಾಯ ಸೇರಿದಂತೆ ನಾಲ್ಕೈದು ಇಲಾಖೆಗಳ ಹೊರತಗಿ ಎಲ್ಲದಕ್ಕೂ ಮಾತೃ ತಾಲೂಕಿಗೆ ಓಡುವ ಅನಿವಾರ್ಯತೆಗೆ ಪೂರ್ಣ ವಿರಾಮ ಬಿದ್ದಿಲ್ಲ. ಹೀಗಾಗಿ, ನೂತನ ತಾಲೂಕುಗಳ ತೆವಳುತ್ತ, ಕುಂಟುತ್ತಾ ಸಾಗಿರುವುದು ಸ್ಥಳೀಯರನ್ನು ಪೇಚಿಗೆ ಸಿಲುಕಿಸಿದೆ.

Advertisement

2017ರಲ್ಲಿ ರಾಜ್ಯ ಸರ್ಕಾರ ಘೊಷಿಸಿದ 49 ತಾಲೂಕುಗಳಲ್ಲಿ ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ಕೂಡಾ ಒಳಗೊಂಡಿವೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿರುವ ಈ ಪಟ್ಟಣಗಳನ್ನು ತಾಲೂಕು ಕೇಂದ್ರವನ್ನಾಗಿಸಿ, ನೂತನ ತಾಲೂಕುಗಳನ್ನು ರಚಿಸಬೇಕು ಎಂಬುದು ಆ ಭಾಗದ ಜನರ ವರ್ಷಗಳ ಬೇಡಿಕೆಯಾಗಿತ್ತು. ಅದಕ್ಕಾಗಿ ನಿರಂತರ ಹೋರಾಟಗಳೂ ನಡೆದಿದ್ದವು. ಅದಕ್ಕೆ ಸ್ಪಂದಿಸಿದ್ದ ಅಂದಿನ ಸರ್ಕಾರ ಜಿಲ್ಲೆಗೆ ಎರಡು ಸ್ವತಂತ್ರ ತಾಲೂಕುಗಳನ್ನು ಘೊಷಿಸಿತ್ತು. ಅಲ್ಲದೇ, ಅವು ಒಂದೇ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಯಿಸುವಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅಂದಿನ ನಾಯಕರು ಭರವಸೆ ನೀಡಿದ್ದರು.

ಹೊಸ ತಾಲೂಕುಗಳಿಗೆ ಕೋವಿಡ್‌ ಕೊಕ್ಕೆ: ಆದರೆ, ಬದಲಾದ ರಾಜಕೀಯ ವಿದ್ಯಾಮಾನ, ರಾಜ್ಯದಲ್ಲಿ ಆವರಿಸಿದ ಅತಿವೃಷ್ಟಿ ಹಾಗೂ ಮಹಾಮಾರಿ ಕೋವಿಡ್‌ ಸೋಂಕಿನಿಂದಾಗಿ ನೂತನ ತಾಲೂಕುಗಳ ಅಭಿವೃದ್ಧಿಪರ ಹೆಜ್ಜೆಗೆ ಹಿನ್ನಡೆಯಾಗಿದೆ. ಇತ್ತೀಚೆಗೆ ನೂತನ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಪಡೆದಿದೆ. ಕಟ್ಟಡ ನಿರ್ಮಾಣಕ್ಕೆ ತಲಾ 10 ಕೋಟಿ ರೂ. ನಿಗದಿಪಡಿಸಿದೆಯಾದರೂ, ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ.

ಕಂದಾಯ ಇಲಾಖೆಗೆ ಸೀಮಿತ: ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡ ತಾಲೂಕುಗಳು ಘೋಷಣೆಯಾಗಿ ಸುಮಾರು ನಾಲ್ಕೈದು ವರ್ಷಗಳು ಕಳೆಯುತ್ತಿದ್ದರೂ, ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಂಡಿಲ್ಲ. ಲಕ್ಷ್ಮೇಶ್ವರದಲ್ಲಿ ಈ ಹಿಂದೆ ಸ್ಥಾಪನೆಗೊಂಡಿದ್ದ ಖಜಾನೆ, ಉಪನೋಂದಣಾಕಾರಿಗಳ ಕಚೇರಿ ಜೊತೆಗೆ ಭೂ ದಾಖಲೆಗಳ ಕಚೇರಿಯಲ್ಲಿ ತಾತ್ಕಾಲಿಕವಾಗಿ ತಹಶೀಲ್ದಾರ್‌ ಕಚೇರಿ ಆರಂಭಿಸಿದ್ದು, ತಾ.ಪಂ. ಕಚೇರಿಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಜೊತೆಗೆ ಜಿ.ಪಂ. ನರೇಗಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರನ್ನು ಲಕ್ಷ್ಮೇಶ್ವರ ತಾಪಂ ಇಒ ಹುದ್ದೆಗೆ ಪ್ರಭಾರಿಯನ್ನಾಗಿ ನೇಮಿಸಿದ್ದೇ ಈವರೆಗಿನ ಸಾಧನೆ ಎನ್ನುವಂತಾಗಿದೆ.

ತಹಶೀಲ್ದಾರ್‌ ಕಚೇರಿಯಲ್ಲಿ ತಕ್ಕಮಟ್ಟಿಗೆ ಸಿಬ್ಬಂದಿ ಇಲ್ಲ. ಜೊತೆಗೆ ನಾಲ್ಕೈದು ಗ್ರಾಮ ಲೆಕ್ಕಾ ಕಾರಿಗಳ ಹುದ್ದೆಗಳು ಖಾಲಿ ಇದ್ದು, ನೂತನ ತಾಲೂಕು ಆಡಳಿತ ನಿರ್ವಹಣೆಗೆ ತೊಡಕಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕನಿಷ್ಟ ಪಕ್ಷ ಅಗತ್ಯ ಪ್ರಮಾಣದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ಗಜೇಂದ್ರಗಡದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪ್ರವಾಸಿ ಮಂದಿರದಲ್ಲಿ ತಹಶೀಲ್ದಾರ್‌ ಕಚೇರಿ ಆರಂಭಿಸಲಾಗಿದೆ. ಜೊತೆಗೆ ಹೊಸದಾಗಿ ಉಪಖಜಾನೆ, ತಾಪಂ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದರೆ, ಅಗತ್ಯ ಸಿಬ್ಬಂದಿ, ಕಂಪ್ಯೂಟರ್‌, ಪೀಠೊಪಕರಣಗಳ ಕೊರತೆ ಎದುರಿಸುತ್ತಿವೆ.

ಇತರೆ ಇಲಾಖೆಗಳ ಮಾತೇ ಇಲ್ಲ: ನೂತನ ತಾಲೂಕುಗಳಾಗಿ ವರ್ಷಗಳು ಕಳೆಯುತ್ತಿದ್ದರೂ, ಕಂದಾಯ ಮತ್ತು ತಾ.ಪಂ. ಹೊರತಾಗಿ ಇನ್ನಿತರೆ ಇಲಾಖೆಗಳನ್ನು ಆರಂಭಿಸುವ ಬಗ್ಗೆ ಸರ್ಕಾರ ಚಕಾರವೆತ್ತುತ್ತಿಲ್ಲ. ಹೀಗಾಗಿ, ಕೃಷಿ, ಅಗ್ನಿಶಾಮಕ, ಸಿಪಿಐ ಕಚೇರಿ, ಅರಣ್ಯ, ತೋಟಗಾರಿಕೆ, ಕಾರ್ಮಿಕ, ಶಿಕ್ಷಣ, ಆರೋಗ್ಯ ಸೇರಿದಂತೆ ಹತ್ತಾರು ಇಲಾಖೆಗಳಲ್ಲಿ ಈಗಾಗಲೇ ಸಿಬ್ಬಂದಿ ಕೊರತೆಯಿದೆ. ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ. ಇದರ ನಡುವೆ ಹೊಸ ತಾಲೂಕುಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒದಗಿಸುವುದು ಸವಾಲಿನ ಕೆಲಸವೆಂದು ಭಾವಿಸಿರುವ ಸರ್ಕಾರ, ಹಳೇ ತಾಲೂಕಿನ ಅಧಿಕಾರಿಗಳ ಮೂಲಕವೇ ಆಡಳಿತವನ್ನು ಮುಂದುವರಿಸಿದೆ. ಪರಿಣಾಮ ನೂತನ ತಾಲೂಕು ರಚನೆಯಿಂದ ಸಿಗಬಹುದಾದ ಸೇವೆ ಮತ್ತು ಸೌಲಭ್ಯಗಳಿಂದ ಸ್ಥಳೀಯರು ವಂಚಿತರಾಗುತ್ತಿದ್ದಾರೆ.

ತಾಲೂಕು ಆಸ್ಪತ್ರೆಯಾಗಿ ಉನ್ನತೀಕರಣವಾಗಬೇಕಿದ್ದ ಉಭಯ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳು ಯಥಾಸ್ಥಿತಿಯಲ್ಲಿ ಮುಂದುವರಿ ದಿವೆ. ಹೆಚ್ಚಿನ ಹಾಸಿಗೆ ಇಲ್ಲದೇ, ಗುಣಮಟ್ಟದ ಚಿಕಿತ್ಸೆಗಾಗಿ ಜನರು ಹಳೇ ತಾಲೂಕಿನ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ.

ಹೊಸ ತಾಲೂಕುಗಳ ಬಗ್ಗೆ ಅಸಡ್ಡೆ? ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ಹೊಸ ತಾಲೂಕುಗಳಾಗಿ ಅಸ್ಥಿತ್ವಕ್ಕೆ ಬಂದು ವರ್ಷಗಳು ಕಳೆಯುತ್ತಿವೆ. ಮಿನಿ ವಿಧಾನಸೌಧಕ್ಕೆ ಜಾಗ ಗುರುತಿಸುವಂತೆ ಸೂಚಿಸಿರುವ ಸರ್ಕಾರ, ಇತರೆ ಇಲಾಖೆಗಳಿಂದ ತಾಲೂಕು ಕಚೇರಿಗಳ ಸ್ಥಾಪನೆ, ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಜಾಗ ಗುರುತಿಸುವಂಥ ಯಾವುದೇ ಪ್ರಕ್ರಿಯೆಗಳಿಗೆ ಚಾಲನೆ ನೀಡಿಲ್ಲ. ಹಳೇ ತಾಲೂಕಿನ ಅಧಿಕಾರಿಗಳನ್ನೇ ನೆಚ್ಚಿಕೊಳ್ಳುವಂತಾಗಿದೆ.

ಭೂ ದಾಖಲೆಗಳಿಗೆ ಪರದಾಟ: ಹೊಸ ತಾಲೂಕುಗಳಲ್ಲಿ ತಹಶೀಲ್ದಾರ್‌ ಕಚೇರಿ ಮಾತ್ರ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯಕ್ಕೆ ಪಹಣಿ ನೀಡುವುದು, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿಲೇವಾರಿ ಮಾಡಲಾಗುತ್ತಿದೆ. ಇನ್ನುಳಿದ ಜಮೀನುಗಳಿಗೆ ಸಂಬಂಸಿ ಅರ್ಜಿಗಳ ವಿಲೇವಾರಿಗೆ ದಾಖಲೆಗಳೇ ಲಭ್ಯವಿಲ್ಲ. ಹೀಗಾಗಿ, ಲಕ್ಷ್ಮೇಶ್ವರಕ್ಕೆ ಸಂಬಂಧಿಸಿದ ಕಡತಗಳಿಗಾಗಿ ಶಿರಹಟ್ಟಿ ಹಾಗೂ ಗಜೇಂದ್ರಗಡ ತಾಲೂಕಿನ ಕಡತಗಳಿಗಾಗಿ ರೋಣ ಕಚೇರಿಗೆ ಅಲೆದಾಟ ತಪ್ಪುತ್ತಿಲ್ಲ. ಇದರಿಂದಾಗಿ ಕೆಲವೊಮ್ಮೆ ತಹಶೀಲ್ದಾರರು ತುರ್ತು ನಿರ್ಧಾರ ಕೈಗೊಳ್ಳಲು ಸಾಧ್ಯವಾಗದು ಎಂಬುದು ರೈತರ ಅಳಲು.

ಅನುದಾನದ ಕೊರತೆ ಇಲ್ಲ: ಗಜೇಂದ್ರಗಡ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಿಗೆ ಕಳೆದ ಒಂದು ವರ್ಷದಿಂದ ಅನುದಾನದ ಕೊರತೆ ಇಲ್ಲ. ಕಚೇರಿಗೆ ಬೇಕಿರುವ ಸ್ಟೇಷನರಿ ಮತ್ತು ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಖಾತೆಗೆ ಸರ್ಕಾರದಿಂದ ನೇರವಾಗಿ ಹಣ ಜಮಾ ಆಗುತ್ತಿದೆ. ಇತ್ತೀಚೆಗೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಸಿಡಿಲು ಬಡಿದು ಎತ್ತುಗಳು ಮೃತಪಟ್ಟಿದ್ದರಿಂದ ಮಾಲೀಕರಿಗೆ ಎರಡು ದಿನದಲ್ಲಿ ಪರಿಹಾರ ಪಾವತಿಸಲಾಗಿದೆ ಎನ್ನುತ್ತಾರೆ ಲಕ್ಷ್ಮೇಶ್ವರ ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ..

ಬಹುದೊಡ್ಡ ಕನಸಿನೊಂದಿಗೆ ಹೊಸ ತಾಲೂಕುಗಳು ರಚನೆಯಾಗಿವೆ. ಆದರೆ, ಇಂದಿನ ಬಿಜೆಪಿ ಸರ್ಕಾರ ಅವುಗಳ ಸಬಲೀಕರಣಕ್ಕೆ ಒತ್ತು ನೀಡುತ್ತಿಲ್ಲ. ಹೊಸ ತಾಲೂಕುಗಳು ರಚನೆಯಾದರೂ, ಹಳೇ ತಾಲೂಕು ಕೇಂದ್ರಕ್ಕೆ ಅಲೆದಾಡ ತಪ್ಪುತ್ತಿಲ್ಲ. ಕಾಟಾಚಾರಕ್ಕೆ ಮುರ್‍ನಾಲ್ಕು ಕಚೇರಿಗಳನ್ನು ಆರಂಭಿಸಿದ್ದು ಬಿಟ್ಟರೆ, ಮತ್ಯೇನೂ ಇಲ್ಲ. ಹೊಸ ತಾಲೂಕುಗಳು ಹೆಸರಿಗೆ ಸೀಮಿತವಾಗಿವೆ. –ಮಾರುತಿ ಚಿಟಗಿ, ಸಿಐಟಿಯು ಮುಖಂಡರು  

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next