Advertisement

ಬೆಳಗಾವಿಯಲ್ಲಿ ಎಂಇಎಸ್‌ನಿಂದ ನಡೆದಿದೆ ಹೊಸ ರಣತಂತ್ರ

11:55 AM Mar 27, 2019 | Vishnu Das |

ಬೆಳಗಾವಿ: ರಾಷ್ಟ್ರದ ಗಮನವನ್ನು ಬೆಳಗಾವಿ ಯತ್ತ ಸೆಳೆಯಲು ಹಾಗೂ ಗಡಿ ವಿವಾದ ಕೆಣಕಿ ಚುನಾವಣೆ ವೇಳೆ ಗದ್ದಲ ಎಬ್ಬಿಸಬೇಕೆಂಬ ಕುತಂತ್ರದಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ ಈ ಬಾರಿ ಬೆಳಗಾವಿ ಲೋಕ ಸಭಾ ಕ್ಷೇತ್ರಕ್ಕೆ 100ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.

Advertisement

ಬೆಳಗಾವಿ ಗಡಿ ವಿವಾದ ಕೆಣಕಲು ಎಂಇಎಸ್‌ ಕುತಂತ್ರ ನಡೆಸಿದ್ದು, ಹೆಚ್ಚು ಅಭ್ಯರ್ಥಿಗಳನ್ನು ನಿಲ್ಲಿಸಿ, ಮರಾಠಿ ಭಾಷಿಕರ ಮತಗಳನ್ನು ವಿಭಜಿಸುವುದಲ್ಲದೆ, ಗೊಂದಲ ಸೃಷ್ಟಿಸಲು ಷಡ್ಯಂತ್ರ ರೂಪಿಸಿದೆ. 1996ರಲ್ಲಿ 452 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಎಂಇಎಸ್‌ಗೆ ಭಾರೀ ಮುಖಭಂಗವಾಗಿತ್ತು. ಎಲ್ಲ ಅಭ್ಯರ್ಥಿಗಳ ಠೇವಣಿ ಜಪ್ತಿ ಆಗಿತ್ತು. ಈಗ ಮತ್ತೆ ಅಂತಹುದೇ ದುಸ್ಸಾಹಸಕ್ಕೆ ಕೈ ಹಾಕಲು ಸಜ್ಜಾಗಿದೆ.

2004ರಲ್ಲಿ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದರೂ ಆಗಾಗ ನ್ಯಾಯಾಂಗ ನಿಂದನೆ ಮಾಡುತ್ತಲೇ ಇದೆ. ಈಗ ಗಡಿ ವಿಷಯವನ್ನೇ ಮುಂದಿಟ್ಟುಕೊಂಡು ಯುವಕರ ಕಡೆಯಿಂದ ನಾಮಪತ್ರ ಸಲ್ಲಿಸಲು ಮುಂದಾಗಿದೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ಬೆಳಗಾವಿ ದಕ್ಷಿಣ, ಉತ್ತರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮರಾಠಿ ಭಾಷಿಕರ ಪ್ರಾಬಲ್ಯವಿದೆ. ಈ ಮತಗಳು ಮರಾಠಿ ಭಾಷಿಕ ಅಭ್ಯರ್ಥಿಗಳಿಗೇ ಹಂಚಿ ಹೋಗಲು ಎಂಇಎಸ್‌ ಸಿದಟಛಿತೆ ಮಾಡಿಕೊಳ್ಳುತ್ತಿದೆ.

ಅದರಂತೆ ಈ ಬಾರಿಯ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನಿಲ್ಲಿಸಲು ಸಿದಟಛಿರೆ ನಡೆಸಿದೆ. ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಚಿಂತನೆ ನಡೆಸಿದೆ.

ಮಹಾರಾಷ್ಟ್ರದಿಂದ ಠೇವಣಿ ಮೊತ್ತ:ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಚುನಾವಣಾ ಆಯೋಗ ಈ ಸಲ 25 ಸಾವಿರ ರೂ.ಠೇವಣಿ ನಿಗದಿ ಮಾಡಿದೆ. ಅದರಂತೆ 100 ಅಭ್ಯರ್ಥಿಗಳಿಗೆ ತಲಾ 25 ಸಾವಿರ ರೂ.ಗಳಂತೆ 25 ಲಕ್ಷ ರೂ. ಆಗುತ್ತದೆ. ಇಷ್ಟೊಂದು ಮೊತ್ತವನ್ನು ಮಹಾರಾಷ್ಟ್ರದ ನಾಯಕರಿಂದ ಪಡೆದುಕೊಳ್ಳುವ ಚಿಂತನೆ ನಡೆಸಿದೆ. ಇಲ್ಲದಿದ್ದರೆ ಇಲ್ಲಿಯೇ ದೇಣಿಗೆ ಸಂಗ್ರಹಿಸಿ ಠೇವಣಿ ಮೊತ್ತ ತುಂಬುವ ಬಗ್ಗೆಯೂ ಯೋಚಿಸುತ್ತಿದೆ.

Advertisement

ಓಟ್‌ಬ್ಯಾಂಕ್‌ ವೃದ್ಧಿಗೆ ಪ್ಲಾನ್‌: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸೋಲು ಕಂಡಿರುವ ಎಂಇಎಸ್‌ಗೆ ಈಗ ಅಸ್ತಿತ್ವ ಇಲ್ಲದಂತಾಗಿದೆ. ಜನರ ವಿರೋಧ ಹೆಚ್ಚಾಗುತ್ತಿದ್ದಂತೆ ಎಂಇಎಸ್‌ನ ಅನೇಕ ಮುಖಂಡರು ರಾಷ್ಟ್ರೀಯ ಪಕ್ಷಗಳ ಮೊರೆ ಹೋಗುತ್ತಿದ್ದಾರೆ.

ಬೆರಳೆಣಿಕೆಯಷ್ಟು ಮುಖಂಡರು ಎಂಇಎಸ್‌ನ ಪ್ರಾಬಲ್ಯ ಮೆರೆಯಲು ಮುಂದಾಗಿದ್ದಾರೆ. ಹೀಗಾಗಿ, ಲೋಕಸಭಾ ಚುನಾವಣೆ ಬಳಿಕ ನಡೆಯುವ ಮಹಾನಗರ ಪಾಲಿಕೆ, ಜಿಪಂ, ತಾಪಂ, ಗ್ರಾಪಂ ಚುನಾವಣೆಗಳಲ್ಲಿ ಹೆಚ್ಚೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದೆ. ಇದರಿಂದ ಓಟ್‌ಬ್ಯಾಂಕ್‌ ಹೆಚ್ಚಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಯೋಜನೆ ಈ ಪಕ್ಷದ್ದು.

ಇದು ಹೊಸದೇನಲ್ಲ
1985ರ ವೇಳೆಗೆ ಬೆಳಗಾವಿಯಲ್ಲಿ ಬೋಗಸ್‌(ನಕಲಿ) ಮತದಾನ ನಡೆಯುತ್ತಿತ್ತು. ಹೀಗಾಗಿ,ಇದನ್ನು ತಡೆಯುವಂತೆ ಹಾಗೂ ಮತದಾನ ಚೀಟಿ ವಿತರಿಸುವಂತೆ ಆಗ್ರಹಿಸಿ ಚುನಾವಣಾ ಆಯೋಗದ ಮೇಲೆ ಒತ್ತಡ ತರಲು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಭಾಷಿಕ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಬೆಳಗಾವಿ ವಿಧಾನಸಭೆ ಚುನಾವಣೆಯಲ್ಲಿ ಕನ್ನಡದ 305 ಜನಸ್ಪರ್ಧೆ ಮಾಡಿದ್ದರು. ಇದನ್ನೇ ನಕಲು ಮಾಡಿದ ಎಂಇಎಸ್‌ 1996ರಲ್ಲಿ ಲೋಕಸಭೆಗೆ 452 ಜನರನ್ನು ಅಖಾಡಕ್ಕಿಳಿಸಿತ್ತು. ಈಗ ಮತ್ತೆ 100ಕ್ಕೂ ಹೆಚ್ಚು ಜನರನ್ನು ಅಖಾಡಕ್ಕಿಳಿಸುವ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ.

ಗಡಿ ವಿವಾದ ಈಗಾಗಲೇ ಸುಪ್ರೀಂಕೋರ್ಟ್‌ ಅಂಗಳದಲ್ಲಿದೆ. ಆದರೆ, ಎಂಇಎಸ್‌ ಗಡಿ ವಿಷಯವನ್ನೇ ಇಟ್ಟುಕೊಂಡು ಹೆಚ್ಚು ಅಭ್ಯರ್ಥಿಗಳನ್ನು ನಿಲ್ಲಿಸಿ ಚುನಾವಣೆಗೆ ಅಡ್ಡಿಪಡಿಸಲು ಮುಂದಾಗುತ್ತಿದೆ. ಪರೋಕ್ಷವಾಗಿ ಒತ್ತಡ ಹೇರುವ ಕುತಂತ್ರ ಅಡಗಿದೆ. ಒಂದು ವೇಳೆ ನ್ಯಾಯಾಂಗ ನಿಂದನೆಯಾದರೆ ಕೂಡಲೇ ಸರ್ಕಾರ ಹಾಗೂ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ ಗಮನಕ್ಕೆ ತರುವ ಕೆಲಸ ಮಾಡಬೇಕು. ಕಾನೂನು ಕ್ರಮಕ್ಕೆ ಮುಂದಾಗಬೇಕು.
● ಅಶೋಕ ಚಂದರಗಿ, ಕನ್ನಡ ಹೋರಾಟಗಾರ

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next