Advertisement

ಹೊಸ ಕೊಳವೆ ಬಾವಿಗಳಿಗೆ 5 ಸ್ಟಾರ್‌ ಪಂಪ್‌ ಅಳವಡಿಕೆ ಕಡ್ಡಾಯ

11:05 AM Aug 30, 2017 | |

ಮಂಡ್ಯ: ರಾಜ್ಯದಲ್ಲಿ ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಎಲ್ಲಾ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಪಡೆಯುವ ವೇಳೆ 4 ಅಥವಾ 5 ಸ್ಟಾರ್‌ ರೇಟೆಡ್‌ ಪಂಪ್‌ ಅಳವಡಿಕೆಯನ್ನು ಇಂಧನ ಇಲಾಖೆ ಕಡ್ಡಾಯಗೊಳಿಸಿದೆ. ಇದರಿಂದಾಗಿ ಇನ್ನು ಮುಂದೆ ಹೊಸ ಕೊಳವೆ ಬಾವಿಗಳಿಗೆ 5 ಸ್ಟಾರ್‌ ಪಂಪ್‌ ಅಳವಡಿಕೆ ಕಡ್ಡಾಯ.

Advertisement

ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆಯಲು ನೋಂದಣಿಯಾಗುವ ನೀರಾವರಿ ಪಂಪ್‌ಸೆಟ್‌ಗಳಿಗೆ ಹೆಚ್ಚಿನ ಕಾರ್ಯಕ್ಷಮತೆಯುಳ್ಳ 4 ಅಥವಾ 5 ಸ್ಟಾರ್‌ ರೇಟೆಡ್‌ನ‌ ಪಂಪ್‌ಗ್ಳನ್ನೇ ಅಳವಡಿಸಬೇಕಿದ್ದು, ವಿದ್ಯುತ್‌ ಸಂಪರ್ಕ ಪಡೆಯುವ ವೇಳೆ ಅರ್ಜಿದಾರರು ಈ ಬಗ್ಗೆ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ನೀಡುವಂತೆ ಸೂಚಿಸಿದೆ.

ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 1 ಲಕ್ಷ ನೀರಾವರಿ ಪಂಪ್‌ಸೆಟ್‌ಗಳು ವಿದ್ಯುತ್‌ ಜಾಲಕ್ಕೆ ಸೇರ್ಪಡೆಗೊಳ್ಳುತ್ತಿವೆ. ಪಂಪ್‌ಸೆಟ್‌ಗಳ ಸೇರ್ಪಡೆ ನಿರಂತರ ಪ್ರಕ್ರಿಯೆ. ಸದ್ಯ  ರಾಜ್ಯದಲ್ಲಿ ಸುಮಾರು 24 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿವೆ. ಪ್ರತಿನಿತ್ಯ ಬಳಕೆಯಾಗುತ್ತಿರುವ ವಿದ್ಯುತ್ಛಕ್ತಿ ಪ್ರಮಾಣದಲ್ಲಿ
ಶೇ.38ರಷ್ಟು ವಿದ್ಯುತ್‌ ನೀರಾವರಿ ಪಂಪ್‌ಸೆಟ್‌ಗಳಿಗೆ ಬಳಕೆಯಾಗುತ್ತಿರುವುದು ಸಮೀಕ್ಷೆಯಿಂದ ಕಂಡು ಬಂದಿದೆ.

ಶೇ.30ರಷ್ಟು ವಿದ್ಯುತ್‌ ಉಳಿತಾಯ: ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಸುಧಾರಿತ ಪಂಪ್‌ ಗಳನ್ನು ಬಳಸುವುದರಿಂದ ಶೇ.30ರಷ್ಟು ವಿದ್ಯುಚ್ಛಕ್ತಿ ಉಳಿತಾಯವಾಗಲಿದೆ. ವಿದ್ಯುತ್‌ ಸರಬರಾಜು ಕಂಪನಿಗಳು ಸುಧಾರಿತ ಪಂಪ್‌ಸೆಟ್‌ಗಳನ್ನು ಅಳವಡಿಸಿ ಮಾದರಿ ಯೋಜನೆಗಳನ್ನು ಹಲವೆಡೆ ಅನುಷ್ಠಾನಗೊಳಿಸಿರುವುದರಿಂದ ವಿದ್ಯುತ್‌ ಉಳಿತಾಯವನ್ನು ಖಚಿತಪಡಿಸಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಇನ್ನು ಮುಂದೆ ಹೊಸದಾಗಿ ನೋಂದಣಿಗೊಳ್ಳುವ ನೀರಾವರಿ ಪಂಪ್‌ಗಳಿಗೆ 4 ಅಥವಾ 5 ಸ್ಟಾರ್‌ ರೇಟಿಂಗ್‌ನ ಪಂಪ್‌ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಇದರ ಬೆನ್ನಲ್ಲೇ ಇಂಧನ ಸಚಿವಾಲಯ ಗ್ರಾಮೀಣ ಪ್ರದೇಶಗಳ ವಿದ್ಯುತ್‌ ಸ್ಥಾವರಗಳಿಗೆ 4 ಸ್ಟಾರ್‌ ಮತ್ತು ನಗರ ಪ್ರದೇಶಗಳ ವಿದ್ಯುತ್‌ ಸ್ಥಾವರಗಳಿಗೆ 5 ಸ್ಟಾರ್‌ ರೇಟೆಡ್‌ನ‌ ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸಲು ನಿರ್ಧರಿಸಿದೆ.

ಹೆಚ್ಚಿನ ಕಾರ್ಯಕ್ಷಮತೆಯುಳ್ಳ ಪಂಪ್‌ಗ್ಳಿಗೆ ಸುಧಾರಿತ ವಿದ್ಯುತ್‌ ಪರಿವರ್ತಕಗಳ ಮೂಲಕ ವಿದ್ಯುತ್‌ ಸರಬರಾಜು ಮಾಡುವ ಮೂಲಕ ವಿದ್ಯುತ್‌ ಪೂರೈಕೆ ಸುಗಮಗೊಳಿಸುವುದು, ಓವರ್‌ ಲೋಡ್‌ ಆಗುವುದನ್ನು ತಡೆಯುವುದು ಹಾಗೂ ವಿದ್ಯುತ್‌ ಪರಿವರ್ತಕಗಳಿಗೆ ಆಗುವ ನಷ್ಟ ತಡೆಯುವುದು ಮುಖ್ಯ ಉದ್ದೇಶವಾಗಿದೆ. ಕೇಂದ್ರ ಇಂಧನ ಸಚಿವಾಲಯದಿಂದಲೂ 4 ಅಥವಾ 5 ಸ್ಟಾರ್‌ ರೇಟೆಡ್‌ ಪರಿವರ್ತಕಗಳ ಅಳವಡಿಸುವಿಕೆ ಬಗ್ಗೆ ಸೂಚನೆ ಬಂದಿದೆ ಎಂದೂ ಮೂಲಗಳು ತಿಳಿಸಿವೆ.

Advertisement

ರಾಜ್ಯದಲ್ಲಿ ಸುಮಾರು 6.95 ಲಕ್ಷ ವಿದ್ಯುತ್‌ ವಿತರಣಾ ಪರಿವರ್ತಕಗಳಿವೆ. ಈ ಪೈಕಿ ನಗರ ಪ್ರದೇಶಗಳಲ್ಲಿ ಸುಮಾರು 1.26 ಲಕ್ಷ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು 5.69 ಲಕ್ಷ ವಿತರಣಾ ಪರಿವರ್ತಕಗಳಿವೆ. ಪ್ರತಿ ವರ್ಷ ಸುಮಾರು 55,000 ವಿತರಣಾ ಪರಿವರ್ತಕ ಗಳು ವಿದ್ಯುತ್‌ ವಿತರಣಾ ಜಾಲಕ್ಕೆ ಸೇರ್ಪಡೆಗೊಳ್ಳು ತ್ತಿವೆ. ಪ್ರಸ್ತುತ ಅಳವಡಿಸಲಾಗುತ್ತಿರುವ 3 ಸ್ಟಾರ್‌ ರೇಟೆಡ್‌ ಪರಿವರ್ತಕಗಳ ಬದಲಿಗೆ 4 ಅಥವಾ 5 ಸ್ಟಾರ್‌ ರೇಟೆಡ್‌ ಪರಿವರ್ತಕಗಳನ್ನು ಅಳವಡಿಸಿದಲ್ಲಿ ಪರಿವರ್ತಕಗಳಲ್ಲಿ ಉಂಟಾಗುವ ಆಂತರಿಕ ನಷ್ಟ ಕಡಿಮೆಗೊಂಡು ಪರಿವರ್ತಕಗಳ ಒಟ್ಟಾರೆ ಕಾರ್ಯಕ್ಷಮತೆ ಉತ್ತಮಗೊಳ್ಳಲಿದೆ. ಇದರಿಂದಾಗಿ ವಿದ್ಯುತ್‌ ಬೇಡಿಕೆ ನಿರ್ವಹಣೆಯನ್ನುಸುಧಾರಿಸಲು ಅನುಕೂಲವಾಗಲಿದೆ.

ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಅನುಕೂಲ
ರಾಜ್ಯದಲ್ಲಿ 2017-18ನೇ ಸಾಲಿನಲ್ಲಿ ವಿದ್ಯುತ್‌ ಪ್ರಸರಣ ಜಾಲದ ಬಲವರ್ಧನೆಗಾಗಿ 40 ಹೊಸ ವಿದ್ಯುತ್‌ ಉಪಕೇಂದ್ರಗಳನ್ನು ಸ್ಥಾಪಿಸಲು ಇಂಧನ ಸಚಿವಾಲಯ ಉದ್ದೇಶಿಸಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಸುಗಮವಾಗಿ ಗ್ರಾಹಕರೆಡೆಗೆ ರವಾನಿಸಲು ಮತ್ತು ವೋಲ್ಟೆಜ್‌ ಸಮಸ್ಯೆ ಪರಿಹರಿಸಲು ವಿವಿಧ ಸಾಮರ್ಥ್ಯದ ವಿದ್ಯುತ್‌ ಉಪಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಪ್ರಸರಣ ಜಾಲದ ನಷ್ಟ ಕಡಿಮೆಯಾಗಲಿದ್ದು, ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಹೆಚ್ಚಿನ ಅನುಕೂಲವಾಗಲಿದೆ. ವಿದ್ಯುತ್‌ ಬೇಡಿಕೆ ಪ್ರಸ್ತುತ ಏರುಗತಿಯಲ್ಲಿದೆ. ಹೊಸ ಉಪ ಕೇಂದ್ರಗಳ ಸ್ಥಾಪನೆಯಿಂದ ಸಮರ್ಪಕ ಮತ್ತು ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡಬಹುದು. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ಪ್ರತಿ ವರ್ಷ ಸರಾಸರಿ 30 ಹೊಸ ಉಪಕೇಂದ್ರಗಳನ್ನು ತನ್ನ ವಾರ್ಷಿಕ ಬಂಡವಾಳ ಕಾಮಗಾರಿ ಯೋಜನೆಯಡಿ ಸ್ವಂತ ಆರ್ಥಿಕ ಸಂಪನ್ಮೂಲದಿಂದ ಸ್ಥಾಪಿಸುತ್ತಿದೆ.

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next