Advertisement

ಹೊಸ ಮಾರುಕಟ್ಟೆ; ಕಡತದಲ್ಲೇ ಬಾಕಿ!

10:59 AM Jul 30, 2018 | |

ಮಹಾನಗರ: ಹಲವು ಸಮಸ್ಯೆಗಳಿಂದ ನಲುಗುತ್ತಿರುವ ಕಂಕನಾಡಿಯ ಹಳೆ ಮಾರುಕಟ್ಟೆಯನ್ನು ಕೆಡವಿ 46.50 ಕೋ.ರೂ. ವೆಚ್ಚದಲ್ಲಿ ಹೊಸ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಪಾಲಿಕೆಯ ಪ್ರಸ್ತಾವನೆ ಕಡತದಲ್ಲಿಯೇ ಬಾಕಿಯಾಗಿದೆ. ಪರಿಣಾಮವಾಗಿ ಹಳೆಯ ಮಾರುಕಟ್ಟೆಯಲ್ಲಿ ಮಾರಾಟಗಾರರು ಹಾಗೂ ಗ್ರಾಹಕರು ನಿತ್ಯ ಸಮಸ್ಯೆಯಿಂದ ನಲುಗುತ್ತಿದ್ದಾರೆ.

Advertisement

ಸ್ಮಾರ್ಟ್‌ಸಿಟಿಯಾಗುವ ಕನಸಿನಲ್ಲಿರುವ ನಗ ರದ ಎಲ್ಲ ಮಾರುಕಟ್ಟೆಗಳನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು ಎಂಬ ಇರಾದೆಯಿಂದ ಕೆಲವು ಮಾರುಕಟ್ಟೆ ಗಳಿಗೆ ಹೊಸ ರೂಪ ನೀಡುವ ಕಾರ್ಯನಡೆದಿತ್ತು. ಈ ಕುರಿತು ತಾಂತ್ರಿಕ ಒಪ್ಪಿಗೆ ಈಗಾಗಲೇ ಪೂರ್ಣಗೊಳಿಸಿ ಸರಕಾರಕ್ಕೆ ಕಳುಹಿಸಲಾಗಿದೆ. ಸುಮಾರು 2 ವರ್ಷಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಎರಡು ವರ್ಷಗಳ ಹಿಂದೆ ಹೇಳಲಾಗಿತ್ತು. ಆದರೆ, ಈಗಲೂ ಕಡತ ಅಂತಿಮ ಒಪ್ಪಿಗೆ ಪಡೆದಿಲ್ಲ. ಆದರೆ, ಈ ಕುರಿತ ಕಡತ ಇಲಾಖೆಯಿಂದ ಇಲಾಖೆಯ ಟೇಬಲ್‌ಗ‌ಳಿಗೆ ಹೋಗುತ್ತಿದೆಯೇ ವಿನಾ ಯೋಜನೆ ಪೂರ್ಣ ಮಟ್ಟದಲ್ಲಿ ಅನುಷ್ಠಾನ ಕಂಡಿಲ್ಲ.

46.50 ಕೋ.ರೂ.ಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಪಾಲಿಕೆಯ ಆಡಳಿತಾತ್ಮಕ ಅನುಮೋದನೆ ಮಾಡಿ ಸರಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಸರಕಾರ ಮಾತ್ರ ಅನುಮೋದನೆ ನೀಡಲು ಹಿಂದೆ-ಮುಂದೆ ನೋಡುತ್ತಿದೆ. ತಾಂತ್ರಿಕ ಮಂಜೂರಾತಿ ದೊರಕಿರುವ ಈ ಯೋಜನೆ ಸಚಿವ ಸಂಪುಟದ ಒಪ್ಪಿಗೆ ನಿರೀಕ್ಷೆಯಲ್ಲಿದೆ. ಒಪ್ಪಿಗೆ ದೊರೆತರೆ ಟೆಂಡರ್‌ ಕರೆದು ನೂತನ ಮಾರುಕಟ್ಟೆ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಕೆಯುಡಿಎಫ್‌ಸಿ ಸಾಲ ಪಡೆದು ಯೋಜನೆ ಅನುಷ್ಠಾನಕ್ಕೆ ಉದ್ದೇಶಿಸಲಾಗಿದೆ ಎಂದು ಮನಪಾ ಮೂಲಗಳು ತಿಳಿಸಿವೆ.

23 ವರ್ಷಗಳ ಹಳೆಯ ಮಾರುಕಟ್ಟೆ
ಕಂಕನಾಡಿಯ ಈಗಿನ ಮಾರುಕಟ್ಟೆಯು ಸುಮಾರು 23 ವರ್ಷಗಳ ಹಳೆಯದಾಗಿದೆ.  ಇಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅಗತ್ಯದ ವ್ಯವಸ್ಥೆಗಳು ಇಲ್ಲಿ ಸೂಕ್ತ ರೀತಿಯಲ್ಲಿ ಲಭ್ಯವಿಲ್ಲ. ಜತೆಗೆ, ಹಳೆಯ ಕಟ್ಟಡ ಶಿಥಿಲವಾಗಿದ್ದು, ನೀರು ಸೋರುವ ಹಾಗೂ ಬಿರುಕು ಬಿಟ್ಟ ಗೋಡೆಗಳು ಇಲ್ಲಿ ಆತಂಕಕ್ಕೆ ಕಾರಣವಾಗಿದೆ. ಸುಮಾರು 60 ಅಂಗಡಿಗಳು ಇಲ್ಲಿವೆ. ಮಳೆ ನೀರು ಒಳಗೆ ಬರುವುದು ಇಲ್ಲಿ ಸಾಮಾನ್ಯ. ಶೌಚಾಲಯದ ಸಮಸ್ಯೆ ಇಲ್ಲಿ ಕೇಳು ವವರೇ ಇಲ್ಲ. ಎಲ್ಲೆಲ್ಲೂ ಇಕ್ಕಟ್ಟು. ಉಸಿರು ಬಿಗಿಹಿಡಿಯುವ ಪರಿಸ್ಥಿತಿ. ಶಿಥಿಲಾವಸ್ಥೆಯ ಕಟ್ಟಡವನ್ನು ದುರಸ್ತಿ ಮಾಡುವುದು ಕೂಡ ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ ಹೊಸ ಮಾರುಕಟ್ಟೆ ಇಲ್ಲಿಗೆ ಅಗತ್ಯವಾಗಿದೆ.

ಹೈಟೆಕ್‌ ಮಾರುಕಟ್ಟೆಯೊಳಗೆ…
ಸುಸಜ್ಜಿತ ರೀತಿಯಲ್ಲಿ ಮಾರುಕಟ್ಟೆ ರಚನೆ ಆದರೆ, ಮಾಲ್‌ಗ‌ಳಲ್ಲಿನ ರೀತಿ ಯ ವಾತಾವರಣ ಇಲ್ಲಿವಿರಲಿದೆ. ಮಾರಾಟಗಾರರಿಗೆ ಪ್ರತ್ಯೇಕ ವ್ಯವಸ್ಥೆ, ಗ್ರಾನೈಟ್‌ ಅಳವಡಿಕೆ, ಒತ್ತಡ ಮುಕ್ತ ಹಾಗೂ ಸ್ವಚ್ಛತೆಗೆ ವಿಶೇಷ ಗಮನ, ಹೂ, ತರಕಾರಿ, ಮೀನು, ಮಾಂಸ ಸೇರಿದಂತೆ ಮಾರಾಟಗಾರರಿಗೆ ನಿಗದಿತ ವ್ಯವಸ್ಥೆಗಳು, ಆಕರ್ಷಕ ಹೊರಭಾಗ, ಪೂರ್ಣ ಮಟ್ಟದ ಶೌಚಾಲಯ, ಮಾರುಕಟ್ಟೆಗೆ ಆಕರ್ಷಣೀಯ ಸ್ಪರ್ಶ… ಸೇರಿದಂತೆ ಹಲವಾರು ವಿಶೇಷಗಳು ಹೈಟೆಕ್‌ ಮಾರುಕಟ್ಟೆಯಲ್ಲಿ ದೊರೆಯಲಿವೆ.

Advertisement

ಮಾರುಕಟ್ಟೆ ಕೆಡವಿದ ಬಳಿಕ ತಾತ್ಕಾಲಿಕ ವ್ಯವಸ್ಥೆ
ಹೊಸ ಮಾರುಕಟ್ಟೆ ನಿರ್ಮಾಣದ ಸಂದರ್ಭ ಹಳೆಯ ಮಾರುಕಟ್ಟೆಯನ್ನು ಕೆಡವಬೇಕಾಗುತ್ತದೆ. ಆ ಸಂದರ್ಭ ಈಗ ವ್ಯಾಪಾರ ನಡೆಸುತ್ತಿರುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪಾಲಿಕೆ ನಿರ್ಧರಿಸಿದೆ. ಮಾರುಕಟ್ಟೆಯ ಮುಂಭಾಗದ ಗ್ರೌಂಡ್‌ನ‌ಲ್ಲಿ ತಾತ್ಕಾಲಿಕವಾಗಿ ಶೆಡ್‌ ನಿರ್ಮಿಸಿಕೊಡಲಾಗುತ್ತದೆ. ಅಲ್ಲಿ ವ್ಯಾಪಾರ ನಡೆಸಲು ಅವಕಾಶ ಕೊಡಲಾಗುತ್ತದೆ. ಇದಕ್ಕಾಗಿ ಪರಿಹಾರ ನಿಧಿಯ ರೂಪದಲ್ಲಿ 3 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ. ಸುಮಾರು 40ರಷ್ಟು ಮಂದಿ ಹಳೆಯ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಅವರಿಗೆ ನೂತನ ಸುಸಜ್ಜಿತ ಮಾರುಕಟ್ಟೆಯಲ್ಲೇ ಪ್ರಥಮ ಪ್ರಾಶಸ್ತ್ಯದಂತೆ ಅವಕಾಶ ನೀಡಲಾಗುತ್ತದೆ. ಜತೆಗೆ ಶೇ.10ರಷ್ಟು ಹೊಸದಾಗಿ ವ್ಯಾಪಾರ ನಡೆಸುವವರಿಗೆ ಅವಕಾಶ ದೊರೆಯಲಿದೆ. 

ಶೀಘ್ರ ಒಪ್ಪಿಗೆ
ಮಾರುಕಟ್ಟೆ/ವಾಣಿಜ್ಯ ಸಂಕೀರ್ಣ ಯೋಜನೆ ಇದೀಗ ಅಂತಿಮ ಪ್ರಕ್ರಿಯೆಯಲ್ಲಿದೆ. ಕೆಲವೇ ದಿನದಲ್ಲಿ ಸಚಿವ ಸಂಪುಟದ ಒಪ್ಪಿಗೆ ದೊರೆತು ಮಾರುಕಟ್ಟೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗುವುದು. ಮಾರುಕಟ್ಟೆ ಕೆಡಹುವ ಸಂದರ್ಭ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ.
– ನವೀನ್‌ ಡಿ’ಸೋಜಾ,
ಅಧ್ಯಕ್ಷರು, ಆರೋಗ್ಯ ಸ್ಥಾಯೀ ಸಮಿತಿ, ಮನಪಾ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next