Advertisement

ಜಮ್ಮು ಕಾಶ್ಮೀರಕ್ಕೆ ಹೊಸ ಮನ್ವಂತರ

09:28 AM Aug 08, 2019 | mahesh |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಹೊಸ ಇತಿಹಾಸ ಬರೆದಿರುವ ಕೇಂದ್ರ ಸರ್ಕಾರ, ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ಮತ್ತು 35(ಎ)ಪರಿಚ್ಛೇದವನ್ನು ಬದಿಗೆ ಸರಿಸುವಲ್ಲಿ ಯಶಸ್ವಿಯಾಗಿದೆ. ಮಂಗಳವಾರ ಲೋಕಸಭೆಯಲ್ಲೂ ಈ ಎರಡೂ ಮಸೂದೆಗಳಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ವಿಧೇಯಕದ ಪರವಾಗಿ 370 ಮತ್ತು ವಿರುದ್ಧವಾಗಿ 70 ಮತಗಳು ಬಿದ್ದಿವೆ. ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಅಮಿತ್‌ ಶಾ ಸೇರಿದಂತೆ ಎಲ್ಲ ಸಂಸದರನ್ನು ಶ್ಲಾಘಿಸಿದ್ದಾರೆ.

Advertisement

ಕೇಂದ್ರ ಸರ್ಕಾರದ ಈ ಐತಿಹಾಸಿಕ ನಿರ್ಧಾರದಿಂದ ಗಲಿಬಿಲಿಗೊಂಡಿರುವ ನೆರೆಯ ಪಾಕಿಸ್ತಾನ ಯುದ್ಧದ ಮಾತುಗಳನ್ನಾಡಿದೆ. ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಕೋರಿತಾದರೂ, ಅಮೆರಿಕ, ಯುಎಇಯಂಥ ದೇಶಗಳು ಇದು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ ಎಂದು ಹೇಳುವ ಮೂಲಕ ಪಾಕ್‌ಗೆ ಭ್ರಮ ನಿರಸನಗೊಳಿಸಿವೆ.

ಸೋಮವಾರವಷ್ಟೇ ರಾಜ್ಯಸಭೆಯಲ್ಲಿ ಸುದೀರ್ಘ‌ ಚರ್ಚೆ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಹಿಂತೆಗೆತ ಮಸೂದೆ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ಮಸೂದೆಗೆ ಒಪ್ಪಿಗೆ ಪಡೆದಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಮಂಗಳವಾರ ಬೆಳಗ್ಗೆಯೇ ಲೋಕಸಭೆಯಲ್ಲೂ ಈ ಎರಡೂ ಮಸೂದೆಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶೇಷ ಸ್ಥಾನಮಾನ ತೆಗೆಯುವ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ನಿರ್ಧಾರವನ್ನು ಯಾರಿಂದರೂ ತಡೆಯಲು ಸಾಧ್ಯವಿಲ್ಲ ಎಂದೂ ಖಡಕ್ಕಾಗಿಯೇ ಹೇಳಿದರು. ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡುವಾಗ ಇದರಲ್ಲಿ ಪಿಒಕೆ ಮತ್ತು ಚೀನಾ ಆಕ್ರಮಿತ ಆಕ್ಸಾಯ್‌ ಚಿನ್‌ ಕೂಡ ಬರುತ್ತವೆ ಎಂದೂ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನ ಚೌಧರಿ ಪ್ರಮಾದ

ಮಸೂದೆ ಕುರಿತಂತೆ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಮಹಾ ಪ್ರಮಾದ ಎಸಗಿಬಿಟ್ಟರು. ಕಾಶ್ಮೀರ ಭಾರತದ ‘ಆಂತರಿಕ’ ಪ್ರದೇಶವಾಗಿರಲಿಲ್ಲ ಎಂದ ಅವರು, ಇದಕ್ಕೆ ಉದಾಹರಣೆಯಾಗಿ, 1948ರಿಂದಲೂ ವಿಶ್ವಸಂಸ್ಥೆ ಕಾಶ್ಮೀರದ ಮೇಲೆ ನಿಗಾ ಇಟ್ಟಿದೆ. ಶಿಮ್ಲಾ ಒಪ್ಪಂದಕ್ಕೆ ಒಳಪಟ್ಟಿದೆ, ಲಾಹೋರ್‌ ಘೋಷಣೆಗೂ ಅನ್ವಯಗೊಳ್ಳುತ್ತದೆ ಎಂದು ಹೇಳಿದರು. ಹೀಗಾಗಿ ಇದು ಆಂತರಿಕ ವಿಷಯವೇ ಅಥವಾ ದ್ವಿಪಕ್ಷೀಯ ವಿಷಯವೇ ಎಂಬುದನ್ನು ನೀವೇ ಸ್ಪಷ್ಟಪಡಿಸಿ ಎಂದು ಕೇಳಿಬಿಟ್ಟರು. ಚೌಧರಿ ಅವರ ಮಾತಿನಿಂದ ಸಿಟ್ಟಿಗೆದ್ದ ಆಡಳಿತ ಪಕ್ಷಗಳ ಸದಸ್ಯರು, ಇದು ಕಾಂಗ್ರೆಸ್‌ ಪಕ್ಷದ ನಿಲುವೇ ಎಂದು ಪ್ರಶ್ನಿಸಿದರು. ಅಮಿತ್‌ ಶಾ ಕೂಡ, ಈ ಕೂಡಲೇ ಕಾಂಗ್ರೆಸ್‌ 370ನೇ ವಿಧಿ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ವಿಚಿತ್ರವೆಂದರೆ, ಅಧೀರ್‌ ರಂಜನ್‌ ಚೌಧರಿ ಅವರ ಈ ಮಾತುಗಳ ಬಗ್ಗೆ ಸ್ವತಃ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೂ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಚೌಧರಿ ಅವರು ಮಾತನಾಡುವಾಗಲೇ ಸೋನಿಯಾ ಅವರು ಸಿಟ್ಟಾಗಿದ್ದನ್ನೂ ಕೆಲವು ಮಾಧ್ಯಮಗಳು ಪ್ರಸಾರ ಮಾಡಿವೆ.

ಪಾಕಿಸ್ತಾನ ಯುದ್ಧದ ಕ್ಯಾತೆ

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದಿರುವ ವಿಚಾರ ಸಂಬಂಧ ಪಾಕಿಸ್ತಾನ ಸಂಪೂರ್ಣವಾಗಿ ಗಲಿಬಿಲಿಗೊಂಡಿದೆ. ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದೇ ನೇರವಾಗಿ ಯುದ್ಧದ ಮಾತುಗಳನ್ನಾಡಿದೆ. ಭಾರತದಲ್ಲಿನ ಕಾಶ್ಮೀರ ನಿರ್ಣಯದ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ವಿಶೇಷ ಸಂಸತ್‌ ಅಧಿವೇಶನದಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮಾತನಾಡಿದ್ದು, ಭಾರತದ ನಿರ್ಣಯವನ್ನು ವಿರೋಧಿಸಿದ್ದಾರೆ. ಇದಷ್ಟೇ ಅಲ್ಲ, ಮತ್ತೂಂದು ಪುಲ್ವಾಮಾ ರೀತಿಯ ದಾಳಿಯಾದರೂ ಆಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದರ ಜತೆಗೆ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ವೇದಿಕೆಗಳನ್ನು ಬಳಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಇನ್ನು ಪಾಕ್‌ ಸೇನಾ ಮುಖ್ಯಸ್ಥರು ಕೂಡ, ಕಾಶ್ಮೀರದ ಜನರಿಗಾಗಿ ಎಂಥ ಸನ್ನಿವೇಶ ಬಂದರೂ ಎದುರಿಸಲು ಸಿದ್ಧರಿರಬೇಕು ಎಂದು ಅಲ್ಲಿನ ಸೈನಿಕರಿಗೆ ಕರೆ ನೀಡಿದ್ದಾರೆ.

ಚೀನಾ ಅಪಸ್ವರ

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿರುವುದಕ್ಕೆ ಚೀನಾ ಯಾವುದೇ ಅಪಸ್ವರ ಎತ್ತಿಲ್ಲ. ಆದರೆ, ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡಿರುವುದಕ್ಕೆ ಆಕ್ಷೇಪ ಎತ್ತಿದೆ. ಇನ್ನೂ ಗಡಿ ವಿವಾದ ಬಾಕಿ ಇರುವುದರಿಂದ ಭಾರತ ಇಂಥ ಕ್ರಮಕ್ಕೆ ಮುಂದಾಗಬಾರದಿತ್ತು ಎಂದು ಹೇಳಿದೆ. ಚೀನಾದ ಈ ವಾದವನ್ನು ತಿರಸ್ಕರಿಸಿರುವ ಭಾರತ, ಇದೊಂದು ಆಂತರಿಕ ವಿಷಯ ಎಂದಿದೆ.
ನಾವೆಲ್ಲರೂ ಸೇರಿ, 130 ಕೋಟಿ ಭಾರತೀಯರ ಕನಸು ನನಸು ಮಾಡಲು ಶ್ರಮಿಸೋಣ. ಕಾಶ್ಮೀರದ ಮಸೂದೆಗೆ ಒಪ್ಪಿಗೆ ನೀಡುವ ಮೂಲಕ ಸಂಸದೀಯ ಪ್ರಜಾಪ್ರಭುತ್ವ ದಲ್ಲಿ ಮಹತ್ವದ ಘಳಿಗೆಗೆ ನಾವು ಸಾಕ್ಷಿಯಾಗಿದ್ದೇವೆ.
• ನರೇಂದ್ರ ಮೋದಿ, ಪ್ರಧಾನಿ
370ನೇ ವಿಧಿಯಿಂದಲೇ ಯುವಕರು ಉಗ್ರವಾದದತ್ತ ಹೋಗಿದ್ದು, ಇದರಿಂದಲೇ 41,500 ಮಂದಿ ಸಾವನ್ನಪ್ಪಿದ್ದು. ನಾವು ಐತಿಹಾಸಿಕ ತಪ್ಪು ಮಾಡುತ್ತಿಲ್ಲ, ಐತಿಹಾಸಿಕ ತಪ್ಪನ್ನು ಸರಿ ಮಾಡುತ್ತಿದ್ದೇವೆ.
• ಅಮಿತ್‌ ಶಾ, ಕೇಂದ್ರ ಗೃಹ ಸಚಿವ
Advertisement

Udayavani is now on Telegram. Click here to join our channel and stay updated with the latest news.

Next