Advertisement

ಮನಸಿನ ಮರೆಯಲಿ ಹೊಸ ಲವ್‌ಸ್ಟೋರಿ

06:20 AM Aug 18, 2017 | Team Udayavani |

ಈ ಹಿಂದೆ “ಮಿಸ್‌ ಮಲ್ಲಿಗೆ’, “ಆಸ್ಕರ್‌’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಕೃಷ್ಣ ಅಲಿಯಾಸ್‌ ಆಸ್ಕರ್‌ ಕೃಷ್ಣ ಈಗ ಮತ್ತೂಂದು ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಆ ಚಿತ್ರಕ್ಕೆ “ಮನಸಿನ ಮರೆಯಲಿ’ ಎಂಬ ಹೆಸರನ್ನೂ ಇಟ್ಟಿದ್ದಾರೆ. ಇತ್ತೀಚೆಗೆ ಕೃಷ್ಣ ಜನ್ಮಾಷ್ಟಮಿ ದಿನದಂದು ರಾಧಾಕೃಷ್ಣ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿತು. ಕಾಂಗ್ರೆಸ್‌ ಮುಖಂಡ ಭೈರತಿ ಸುರೇಶ್‌ ಕ್ಲಾಪ್‌ ಮಾಡಿದ್ದಾರೆ.

Advertisement

ಈ ಚಿತ್ರದ ಮೂಲಕ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ನಿರ್ದೇಶಕರು. ಕಿಶೋರ್‌ ಯಾದವ್‌ ಹಾಗೂ ದಿವ್ಯಾಗೌಡ ನಾಯಕ, ನಾಯಕಿಯರು. ಇದೊಂದು ಅಪ್ಪಟ ಪ್ರೇಮಕಥೆವುಳ್ಳ ಚಿತ್ರವಂತೆ. ಅಂದಹಾಗೆ, ಇದುವರೆಗೆ ವಿವಾದಾತ್ಮಕ ಚಿತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ನಿರ್ದೇಶಕ “ಆಸ್ಕರ್‌’ ಕೃಷ್ಣ, ಮೊದಲ ಸಲ ಪ್ರೇಮಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಒಬ್ಬ ಬೇಜವಾಬ್ದಾರಿ ಹುಡುಗ ಹಾಗೂ ಪಕ್ಕದ ಮನೆಯ ಹುಡುಗಿ ಮಧ್ಯೆ ನಡೆಯುವ ಲವ್‌ಸ್ಟೋರಿ ಚಿತ್ರದ ಹೈಲೈಟ್‌ ಅಂತೆ.

“ಬೆಂಗಳೂರು, ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ. ಮನೆಯವರ ಹಾಗೂ ಊರ ಜನರ ಪಾಲಿಗೆ ಬೇಜವಾಬ್ದಾರಿ ಹುಡುಗ ಎನಿಸಿಕೊಂಡ ನಾಯಕ ನಟ ಪಕ್ಕದ ಮನೆಗೆ ಬಂದ ಸುಂದರ ಹುಡುಗಿಯ ಪ್ರೇಮದಲ್ಲಿ ಬಿದ್ದಾಗ ಅವರ ಪ್ರೀತಿ ಕೊನೆಗೆ ಉಳಿಯುತ್ತಾ ಇಲ್ಲವಾ ಎಂಬುದೇ ಚಿತ್ರದ ಕಥೆ. ಇನ್ನು, ನನ್ನ ಪುತ್ರ ರಾಕಿನ್‌ ಹೆಸರಿನ ಬ್ಯಾನರ್‌ ಆರಂಭಿಸಿ ಆ ಮೂಲಕ ಸಿನಿಮಾ ನಿರ್ಮಿಸುತ್ತಿದ್ದೇನೆ. ಪತ್ನಿ ಆರ್‌. ಶಬೀನಾ ಹಾಗೂ ಕಿಂಗ್‌ ಲಿಂಗರಾಜ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.  ಗಜರಾಜಗೌಡ ಎಕ್ಸಿಕ್ಯೂಟೀವ್‌ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ಆಸ್ಕರ್‌ ಕೃಷ್ಣ.

ನಾಯಕ ಕಿಶೋರ್‌ಗೆ ಇದು ಮೊದಲ ಅನುಭವ. “ನನಗೆ ಕಳೆದ ಎರಡು ವರ್ಷಗಳಿಂದ ನಿರ್ದೇಶಕರು ಗೆಳೆಯರಾಗಿದ್ದಾರೆ. ಇದೊಂದು ಕಾಮನ್‌ ಲವ್‌ಸ್ಟೋರಿಯಂತೆ ಕಂಡು ಬಂದರೂ, ವಿಶೇಷ ಸಂದೇಶ ಚಿತ್ರದಲ್ಲಿದೆ’ ಅನ್ನುತ್ತಾರೆ ಕಿಶೋರ್‌. ನಾಯಕಿ ದಿವ್ಯಗೌಡ, ಪಾತ್ರ ಹಾಗೂ ಕಥೆ ಕುರಿತು ಹೇಳಿಕೊಂಡರು. ಚಿತ್ರಕ್ಕೆ ತ್ಯಾಗರಾಜ್‌ ಸಂಗೀತವಿದೆ. ಪವನ್‌ ಕುಮಾರ್‌ ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next