Advertisement

ಕೆ.ಆರ್‌.ಮಾರುಕಟ್ಟೆ ಕಟ್ಟಡಕ್ಕೆ ಹೊಸ ರೂಪ; ಸ್ಮಾರ್ಟ್‌ಸಿಟಿ ಯೋಜನೆಯಡಿ ಅತ್ಯಾಧುನಿಕ ಸೌಲಭ್ಯ

04:16 PM Oct 28, 2022 | Team Udayavani |

ಬೆಂಗಳೂರು: ಪಾರಂಪರಿಕ ಮಾರುಕಟ್ಟೆ ಕಟ್ಟಡ ವಾದ ಕೃಷ್ಣರಾಜೇಂದ್ರ ಮಾರುಕಟ್ಟೆಯ ಅಂದ ಹೆಚ್ಚಿಸುವ ಸಲುವಾಗಿ ಕಟ್ಟಡದ ಒಳ ಭಾಗಕ್ಕೆ ಹೊಸ ಸ್ವರೂಪ ನೀಡಲು ಬಿಬಿಎಂಪಿ ಮುಂದಾಗಿದೆ. 1928ರ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಪಾರಂಪರಿಕ ಕೆ.ಆರ್‌.ಮಾರುಕಟ್ಟೆ ಕಟ್ಟಡದ ಹೊರವಿನ್ಯಾಸಕ್ಕೆ ಯಾವುದೇ ಧಕ್ಕೆ ಬರದಂತೆ, ಒಳಾಂಗಣಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ.

Advertisement

ಕೆ.ಆರ್‌.ಮಾರುಕಟ್ಟೆಯ ಒಳ ಪ್ರದೇಶದಲ್ಲಿ ಸುಮಾರು 800 ಮಳಿಗೆಗಳು ಹಾಗೂ ಹೊರಭಾಗದಲ್ಲಿಯೂ ನೂರಾರು ಮಳಿಗೆಗಳಿದ್ದು, ಕಟ್ಟಡದಲ್ಲಿನ ಫ್ಲೋರಿಂಗ್‌ ಹಾನಿಗೊಳಗಾಗಿದೆ. ಇದರಿಂದ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಮಾರುಕಟ್ಟೆಯ ಒಳಾಂಗಣದ ಫ್ಲೋರಿಂಗ್‌ ಗೆ ಗ್ರ್ಯಾನೈ ಟ್‌ ಹಾಕಲಾಗುತ್ತಿದೆ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿ ತಿಳಿಸುತ್ತಾರೆ.

ಮಳೆ ಸುರಿದ ಸಂದರ್ಭದಲ್ಲಿ ಬೇಸ್ಮೆಂಟ್‌ ಜಲಾವೃತವಾಗಿ, ವಾಹನ ನಿಲುಗಡೆಗೆ ಸಮಸ್ಯೆ ಯುಂಟಾಗುತ್ತಿತ್ತು. ಆದ್ದರಿಂದ ಇದೀಗ ಮಳೆ ನೀರನ್ನು ಹೊರ ಹಾಕಲು ನಾಲ್ಕು ಪಂಪ್‌ ಮಾಡುವ ಘಟಕಗಳನ್ನು ಸ್ಥಾಪಿಸಲಾಗಿದೆ. ಹಾಗೂ ನೆಲಕ್ಕೆ ಗ್ರ್ಯಾನೈಟ್‌ಗಳನ್ನು ಹಾಕಲಾಗಿದೆ ಎಂದು ತಿಳಿಸುತ್ತಾರೆ.

ಮಾರುಕಟ್ಟೆಯ ಪ್ರತಿ ಫ್ಲೋರ್‌ನಲ್ಲಿ ಎರಡು ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪ್ರತಿ ಹಂತ ಗಳಲ್ಲಿಯೂ ನಾಲ್ಕು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಅಗ್ನಿಶಾಮಕ ರಕ್ಷಣಾ ವ್ಯವಸ್ಥೆ, ಅಪ್‌ ಗ್ರೇಡ್‌ ವಿದ್ಯುತ್‌ ವ್ಯವಸ್ಥೆ, ಡೀಸೆಲ್‌ ಜನರೇಟರ್‌ ವ್ಯವಸ್ಥೆ, ಸುರಕ್ಷಿತ ಸ್ಟೋರೇಜ್‌ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳುತ್ತಾರೆ.

ವ್ಯವಸ್ಥಿತವಾದ ಪಾರ್ಕಿಂಗ್‌: ಕೆ.ಆರ್‌. ಮಾರುಕಟ್ಟೆಯ ಗ್ರೌಂಡ್‌ ಫ್ಲೋರ್‌ನಲ್ಲಿ ಇದ್ದ ಪಾರ್ಕಿಂಗ್‌ ಸೌಲಭ್ಯ ಅವ್ಯವಸ್ಥೆಯಾಗಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯಚಟುವಟಿಕೆಗಳು ನಡೆಯುವ ಆ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದವು. ಇದನ್ನು ತಡೆಗಟ್ಟುವ ಉದ್ದೇಶ ದಿಂದ ವಿದ್ಯುತ್‌ ವ್ಯವಸ್ಥೆ ಹಾಗೂ ಪಾರ್ಕಿಂಗ್‌ ಸ್ಥಳದಿಂದ ಏಳು ಮೀ. ಅಗಲವಾಗಿ ಇಳಿಜಾರು ಮಾಡಲಾಗಿದ್ದು, ಸುಲಭವಾಗಿ ವಾಹನ ಸಂಚರಿಸಬಹುದಾಗಿದೆ. ಈ ಪ್ರದೇಶದಲ್ಲಿ
ಸುಮಾರು 168 ನಾಲ್ಕುಚಕ್ರದ ವಾಹನ ಮತ್ತು 279 ದ್ವಿಚಕ್ರ ವಾಹನ ಗಳನ್ನು ನಿಲ್ಲಿಸಬಹುದಾಗಿದೆ.

Advertisement

ಜನರಿಗೆ ಹಾಗೂ ಸರಕು ಸಾಗಣೆಗೆ ಪ್ರತ್ಯೇಕ ಲಿಫ್ಟ್ 
ಜತೆಗೆ, ಮಾರುಕಟ್ಟೆಯ ಎಲ್ಲರಿಗೂ ಅನುಕೂಲವಾಗಲೆಂದು ನಾಲ್ಕು ಭಾಗಗಳಲ್ಲಿ ನಾಲ್ಕು ಜನರಿಗೆ ಹಾಗೂ ಎರಡು ಗೂಡ್ಸ್‌ ಸಾಗಿಸುವ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜನರ ಸುರಕ್ಷತೆಗಾಗಿ ಕಬ್ಬಣದ ಕಂಬಿ ಹಾಗೂ ಇತರೆ ವಸ್ತುಗಳನ್ನು ತೆಗೆದು, ಸ್ಟೀಲ್‌ ವಸ್ತುಗಳನ್ನು ಬಳಕೆ ಮಾಡಲಾಗಿದೆ. ಜೊತೆಗೆ ಮಳೆಯ ನೀರು ಒಳಗೆ ಬರದಂತೆ ಮಾರುಕಟ್ಟೆಯ ಮುಂಭಾಗದಲ್ಲಿ ದಪ್ಪ ಹಾಗೂ ಗುಣಮಟ್ಟದ ಗಾಜು ಬಳಸಲಾಗಿದ್ದು, ಈಗಾಗಲೇ ಗಾಜು ಛಾವಣಿಯ ಕೆಲಸ ಶೇ.90ರಷ್ಟು ಪೂರ್ಣಗೊಂಡಿದೆ. ಒಟ್ಟು 1,200 ಅಡಿ ಪ್ರದೇಶವನ್ನು ವಾಟರ್‌ಪ್ರೂಫ್ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುತ್ತಾರೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಕೆ.ಆರ್‌. ಮಾರುಕಟ್ಟೆಯ ಕಟ್ಟಡದ ಅಭಿವೃದ್ಧಿ ಕಾಮಗಾರಿಯು ಕೊರೊನಾ ಹಾಗೂ ಮಳೆಯ ಕಾರಣದಿಂದಾಗಿ ತಡವಾಗಿದ್ದರೂ, ಈಗಾಗಲೇ ಶೇ.80ರಷ್ಟು ಕಾಮಗಾರಿ ಮುಗಿದಿದ್ದು, ನವೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವ ಯೋಚನೆಯಿದೆ.
ವಿನಾಯಕ್‌ ಸೂಗರ್‌, ಸ್ಮಾರ್ಟ್‌ ಸಿಟಿ ಯೋಜನೆ
ಮುಖ್ಯ ಇಂಜಿನಿಯರ್‌

ಕೆ.ಆರ್‌.ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಕಾಮಗಾರಿಯೂ ಕೋವಿಡ್‌, ಮಳೆ ಕಾರಣದಿಂದ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿದರೆ, ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗುತ್ತದೆ.
●ದಿವಾಕರ್‌, ಕೆ.ಆರ್‌.ಮಾರುಕಟ್ಟೆ ಅಧ್ಯಕ್ಷ

●ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next