ಮಂಡ್ಯ: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ಕಾಯ್ದೆ ಹಾಗೂ ಶಿಕ್ಷಕರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹೊಸ ಆ್ಯಪ್ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ತಿಳಿಸಿದರು.
ತಾಲೂಕಿನ ಸಾತನೂರು ಗ್ರಾಮದ ಅಚೀವರ್ಸ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಬುಧವಾರ ಜಿಲ್ಲಾ ರಾಜ್ಯಶಾಸ್ತ್ರ ಅಕಾಡೆಮಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕರ ವರ್ಗಾವಣೆ ನೀತಿಗೆ ಶಾಶ್ವತ ಕಾಯಕಲ್ಪ ನೀಡುವಂತೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾಡಿದ ಮನವಿಗೆ ಸಚಿವರು ಸ್ಥಳದಲ್ಲೇ ಸ್ಪಂದಿಸಿದರು.
ಶಿಕ್ಷಕ ಸ್ನೇಹಿ ವರ್ಗಾವಣೆ ನಿಯಮಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಕಾಯ್ದೆ ಮಂಡಿಸಲಾಗುವುದು. ಮುಂದಿನ ದಿನಗಳಲ್ಲಿ ಹೊಸ ವರ್ಗಾವಣೆ ನೀತಿ ಜಾರಿಗೆ ಬರಲಿದೆ. ಶಿಕ್ಷಕರು ಶಾಲೆಗೆ ಇಷ್ಟ ಪಟ್ಟು ಹೋದರೆ ಚೆಂದ. ಇಲ್ಲದಿದ್ದರೆ ಏನೂ ಸರಿ ಹೋಗುವುದಿಲ್ಲ. ಸರ್ಕಾರಿ ಕಾಲೇಜಿನಲ್ಲಿ ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಸಂಬಂಧ ಪೂರ್ವಭಾವಿ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗುವುದು. ಅಂತೆಯೇ, ಅದನ್ನು ಬಜೆಟ್ನಲ್ಲಿ ಸೇರಿಸಲಾಗುವುದು ಎಂದು ಹೇಳಿದರು.
ಶಿಕ್ಷಕರು ಅಥವಾ ಪ್ರಾಧ್ಯಾಪಕರು ತಮ್ಮ ಕೆಲಸಕ್ಕಾಗಿ ಡಿಡಿಪಿಐ ಮತ್ತು ಡಿಡಿಪಿಯು ಕಚೇರಿಗೆ ಅಲೆದಾಡುತ್ತಿರುವುದು ಸರಿಯಲ್ಲ. ಇದನ್ನು ತಪ್ಪಿಸುವ ಉದ್ದೇಶದಿಂದ ಇಲಾಖೆಯಿಂದಲೇ ಹೊಸ ಆ್ಯಪ್ ಸಿದ್ಧಪಡಿಸಲಾಗಿದೆ. ಮುಂದಿನ 20 ದಿನಗಳೊಳಗೆ ಆ್ಯಪ್ ಲೋಕಾರ್ಪಣೆಗೊಳ್ಳಲಿದೆ. ಇಲ್ಲಿ ಶಿಕ್ಷಕರು ಅಥವಾ ಪ್ರಾಧ್ಯಾಪಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಬಳಿಕ ಅದು ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳುವಂತಹ ಸೌಲಭ್ಯವಿರಲಿದೆ ಎಂದು ತಿಳಿಸಿದರು.