Advertisement

ಉಡುಪಿಗೆ ಹೊಸ ಉಪ ವಿಭಾಗ ಕಚೇರಿ: ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

10:28 PM Jun 11, 2019 | sudhir |

ಉಡುಪಿ: ಜಿಲ್ಲೆಯ ಏಕೈಕ ಕುಂದಾಪುರ ಉಪವಿಭಾಗಕ್ಕೆ ಏಳು ತಾಲ್ಲೂಕುಗಳಿಂದ ಭಾರೀ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದೊಂದಿಗೆ ಆಡಳಿತಾತ್ಮಕವಾಗಿ ಎರಡು ಉಪವಿಭಾಗ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೊಸ ಉಪವಿಭಾಗ ರಚನೆ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ಸ್ವಾತಂತ್ರ್ಯ ಪೂರ್ವದ ಉಪವಿಭಾಗ
ಕುಂದಾಪುರ ಉಪವಿಭಾಗ ಸ್ವಾತಂತ್ರ್ಯ ಪೂರ್ವದಿಂದಲೂ ಅಸ್ತಿತ್ವದಲ್ಲಿದ್ದ ಆಡಳಿತಾತ್ಮಕ ಉಪವಿಭಾಗವಾಗಿದೆ. ಬ್ರಿಟಿಷರ ಆಡಳಿತ ಸಮಯದಲ್ಲಿ ಕುಂದಾಪುರ ತಾಲೂಕು ಉ.ಕ. ಜಿಲ್ಲೆ ವ್ಯಾಪ್ತಿಯಲ್ಲಿತ್ತು. ಆ ಸಂದರ್ಭ ಉ.ಕ., ದ.ಕ. ಒಂದೇ ಜಿಲ್ಲೆಯಾಗಿ ಮದ್ರಾಸ್‌ ಪ್ರಾಂತ್ಯಕ್ಕೆ ಒಳಪಟ್ಟಿತ್ತು. 1862ರಲ್ಲಿ ದ.ಕ. ಪ್ರತ್ಯೇಕ ಜಿಲ್ಲೆಯಾಗಿ ಮದ್ರಾಸ್‌ ಪ್ರಾಂತ್ಯದಲ್ಲಿ ಉಳಿದಿತ್ತು. ಆ ಸಂದರ್ಭ ಕುಂದಾಪುರ ತಾಲೂಕು ದ.ಕ. ಜಿಲ್ಲೆಗೆ ಸೇರ್ಪಡೆಯಾಗಿತ್ತು.

1927ರಲ್ಲಿ ಸಹಾಯಕ ಕಮಿಷನರ್‌ ನೇಮಕ!
ದ.ಕ. ಜಿಲ್ಲೆಯ ಕಂದಾಯ ಆಡಳಿತ ಅನುಕೂಲಕ್ಕಾಗಿ 1927ರ ಪೂರ್ವ ಜಿಲ್ಲೆಯನ್ನು ಪುತ್ತೂರು, ಮಂಗಳೂರು, ಕುಂದಾಪುರ ಉಪವಿಭಾಗಳಾಗಿ ವಿಂಗಡಿಸಲಾಯಿತು. ಕುಂದಾಪುರ ಉಪವಿಭಾಗಕ್ಕೆ ಕುಂದಾಪುರ, ಉಡುಪಿ, ಕಾರ್ಕಳ ಜತೆ ಸೇರಿಸಿ ಸಹಾಯಕ ಕಮಿಷನರ್‌ ನೇಮಿಸಲಾಗಿತ್ತು.

ಜಿಲ್ಲೆಯಾದ ಬಳಿಕ ಪ್ರಥಮ ಪ್ರಸ್ತಾವ
1997 ಆಗಸ್ಟ್‌ 25ರಂದು ಉಡುಪಿ ಜಿಲ್ಲೆ ರಚನೆಯಾಗಿತ್ತು. ಆ ಸಂದರ್ಭ ಕುಂದಾಪುರ ಉಪವಿಭಾಗ ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಸೇರ್ಪಡೆಯಾಗಿತ್ತು. ಇದೀಗ 22 ವರ್ಷಗಳ ಬಳಿಕ ಜಿಲ್ಲೆಯಿಂದ ಹೊಸ ಉಪವಿಭಾಗ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಒಂದು ಉಡುಪಿ ನಗರಸಭೆ ಅಧಿವೇಶನದಲ್ಲಿ ಕುಂದಾಪುರ ಉಪವಿಭಾಗೀಯ ಕಚೇರಿಯನ್ನು ಉಡುಪಿಗೆ ಸ್ಥಳಾಂತರಿಸಬೇಕೆಂಬ ನಿರ್ಣಯವಾಗಿತ್ತು. ಬಳಿಕ ಅಲ್ಲಿಯೇ ಬಿದ್ದು ಹೋಯಿತು. ಈಗಿನ ಬೇಡಿಕೆ ಕುಂದಾಪುರದ ಜತೆಗೆ ಉಡುಪಿಗೆ ಪ್ರತ್ಯೇಕ ಉಪವಿಭಾಗ.

Advertisement

ಅತ್ಯಧಿಕ ಕಡತ ವಿಲೇವಾರಿ ಬಾಕಿ
ಇಡೀ ರಾಜ್ಯದಲ್ಲಿ ಕುಂದಾಪುರ ಎಸಿ ಕೋರ್ಟ್‌ ನಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ಇತ್ಯರ್ಥ ಬಾಕಿಯಿವೆ. ವರ್ಷಕ್ಕೆ ಸರಾಸರಿ 4,55,876 ಅರ್ಜಿಗಳು ಸ್ವೀಕೃತವಾಗುತ್ತಿದ್ದು, ಕಾರ್ಯ ದೊತ್ತಡದಿಂದ ಎಲ್ಲ ಕಡತಗಳು ವಿಲೇವಾರಿ ಯಾಗುತ್ತಿಲ್ಲ. ಜಿಲ್ಲೆಗೆ ಒಂದೇ ಉಪವಿಭಾಗ ಇರುವುದರಿಂದ ಕಡತಗಳ ವಿಲೇವಾರಿ ನಿಧಾನವಾಗುತ್ತಿದೆ.

ಉಪ ವಿಭಾಗದ ಕಾರ್ಯ
7 ತಾಲೂಕುಗಳ ಖಾತಾ ಬದಲಾವಣೆ ತಿದ್ದುಪಡಿ ಸಂಬಂಧಿಸಿದ ಮೇಲ್ಮನವಿ ಪ್ರಾಧಿಕಾರ ಉಪವಿಭಾಗದ್ದಾಗಿರುತ್ತದೆ. ಜಾಗದ ನಕ್ಷೆ ಹಾಗೂ ಆರ್‌ಟಿಸಿ ತಾಳೆಯಾಗದ ಪ್ರಕರಣಗಳ ವಿಚಾರಣೆ, ಸಣ್ಣಪುಟ್ಟ ತಿದ್ದುಪಡಿಯಾದ ಪಹಣಿಗೆ ಅವರೇ ಎಸಿ ಅನುಮೋದನೆ ಮಾಡಬೇಕಾಗಿದೆ. ಅಲ್ಲದೇ ರಾಜ್ಯ, ಕೇಂದ್ರ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಜಿಲ್ಲೆಯ ಭೂಸ್ವಾಧೀನ ಕೆಲಸ ಸೇರಿದಂತೆ ವಿವಿಧ ಕೆಲಸಗಳ ಜವಾಬ್ದಾರಿ ಉಪವಿಭಾಗದ ಸಹಾಯಕ ಕಮಿಷನರ್‌ ಮೇಲಿದೆ.

ಶೀಘ್ರ ವಿಲೇವಾರಿ
ಕುಂದಾಪುರ ಉಪ ವಿಭಾಗಕ್ಕೆ ಏಳು ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಕೆಲಸದ ಒತ್ತಡದಿಂದ ಸರಿಯಾದ ಸಮಯಕ್ಕೆ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಹೊಸ ಉಪ ವಿಭಾಗವಾದರೆ ಮುಂದಿನ ದಿನದಲ್ಲಿ ಕಡತಗಳು ಶೀಘ್ರವಾಗಿ ವಿಲೇವಾರಿಯಾಗಲಿವೆೆ.
-ಡಾ| ಎಸ್‌.ಎಸ್‌. ಮಧುಕೇಶ್ವರ್‌, ಸಹಾಯಕ ಕಮಿಷನರ್‌, ಉಪ ವಿಭಾಗ ಕುಂದಾಪುರ

ಒಂದು ದಿನ ಮೀಸಲಿಡಬೇಕು
ಜನರು ಕುಂದಾಪುರದಲ್ಲಿ ಇರುವ ಉಪವಿಭಾಗ ಕಚೇರಿಯ ನಿಮಿತ್ತ ತೆರಳಬೇಕಾದರೆ ಒಂದು ದಿನ ಮೀಸಲಿಡಬೇಕು. ಕುಂದಾಪುರಕ್ಕೆ ತೆರಳಬೇಕಾದರೆ ಕಾರ್ಕಳದವರು 69 ಕಿ.ಮೀ., ಉಡುಪಿಯವರು 38 ಕಿ.ಮೀ., ಕಾಪುವಿನವರು 51 ಕಿ.ಮೀ., ಹೆಬ್ರಿಯವರು 55 ಕಿ.ಮೀ. ಕ್ರಮಿಸಬೇಕಾಗುತ್ತದೆ.

3 ತಾ| ಸೇರ್ಪಡೆ ಸಾಧ್ಯತೆ
ಉಡುಪಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದಲ್ಲಿ ಹೊಸ ಉಪವಿಭಾಗ ಪ್ರಾರಂಭಿಸುವ ಚಿಂತನೆಯಿದೆ. ಈ ಉಪವಿಭಾಗಕ್ಕೆ ಕಾಪು, ಕಾರ್ಕಳ, ಹೆಬ್ರಿ ತಾಲೂಕು ಸೇರಿಸುವ ಸಾಧ್ಯತೆಯಿದೆ.

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next