Advertisement

ಹೊಸ ಅಂಕಣ: ಮಳೆಬಿಲ್ಲು

01:34 AM Oct 04, 2020 | mahesh |

ಇದು ಹೊಸ ಅಂಕಣ. ಸಾಮಾಜಿಕ ಮಾಧ್ಯಮಗಳು ನಮ್ಮ ಇಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಿವೆ. ದಿನಕ್ಕೆ ನೂರಾರು, ಸಾವಿರಾರು ಸಂದೇಶಗಳು ವಾಟ್ಸ್‌ಆ್ಯಪ್‌, ನಮ್ಮ ಫೇಸ್‌ಬುಕ್‌ ವಾಲ್‌ಗ‌ಳಲ್ಲಿ ಹರಿದಾಡುತ್ತವೆ. ನಮ್ಮ ಕೆಲವು ಸ್ನೇಹಿತರು ನೋಡಿ ಕಳುಹಿಸಿದ್ದು, ಇನ್ನು ಹಲವು ನೋಡದೇ ಫಾರ್ವರ್ಡ್‌ ಮಾಡಿದ್ದು. ಅಂಥವುಗಳನ್ನು ಹೆಕ್ಕಿ ಕೊಡುವ ಪ್ರಯತ್ನ ಇದು. ನೀವೂ ನಿಮಗೆ ಖುಷಿಕೊಟ್ಟ ಮೆಸೇಜ್‌ಗಳ ಕುರಿತು ನಮ್ಮೊಂದಿಗೆ ಹಂಚಿಕೊಳ್ಳಿ. ಸೂಕ್ತವೆನಿಸಿದವುಗಳನ್ನು ಪ್ರಕಟಿಸುತ್ತೇವೆ.

Advertisement

ಕರಜಗಿ ಹೇಳಿದ ಕಥೆ
ಅಕ್ಟೋಬರ್‌ 2 ರಂದು ಜಗತ್ತಿನಾದ್ಯಂತ ಗಾಂಧಿ ಜಯಂತಿ ಆಚರಿಸಲಾಯಿತು. ಗಾಂಧಿಯ ತತ್ತ್ವದರ್ಶಗಳನ್ನು ಸ್ಮರಿಸಲಾಯಿತು. ಆದರೆ ವಾರ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿಯ ಹೋರಾಟ, ಬದುಕು, ಸಾಧನೆ ಕುರಿತ ಸಂದೇಶಗಳು, ವೀಡಿಯೋಗಳು ಬಂದಿದ್ದವು. ಇಂಥದ್ದೇ ಒಂದು ವೀಡಿಯೋ ವಾರದಿಂದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗ್ಳಲ್ಲಿ ಹರಿದಾಡುತ್ತಿತ್ತು. ಆ ವೀಡಿಯೋ ವಾಗ್ಮಿ ಗುರುರಾಜ ಕರಜಗಿ ಅವರು ಹೇಳಿದ ಗಾಂಧಿ ಕಥೆ.

ಕರಜಗಿ ಅವರ ಕಾಲೇಜಿಗೆ ಸ್ವೀಡನ್‌ ದೇಶದ ವಿದ್ಯಾರ್ಥಿಗಳು ಬಂದು, ಗಾಂಧಿಯ ಕುರಿತ ಆಸಕ್ತಿಕರವಾದ ಮಾಹಿತಿಯನ್ನು ಕೇಳಿದರು. ಆಗ ಕರಜಗಿ ಅವರು ವಿದೇಶಿಗರು ನೀವು ಯಾಕೆ ಗಾಂಧಿಯನ್ನು ಇಷ್ಟಡುತ್ತೀರಿ ಎಂದು ಕೇಳಿದರಂತೆ. ಓರ್ವ ವಿದ್ಯಾರ್ಥಿನಿ ಎದ್ದು ಮೂರು ವಿಚಾರವಾಗಿ ನಾವು ಗಾಂಧಿಯಿಂದ ಕಲಿಯಬೇಕಾದುದು ಇದೆ ಎಂದಳಂತೆ. ಒಂದು-ವೈರಿಗಳನ್ನು ಕೂಡ ಮಿತ್ರರನ್ನಾಗಿ ನೋಡುವ ಅವರ ಗುಣದಲ್ಲಿ ನಾವು ಏಸುವನ್ನು ಕಾಣುತ್ತೇವೆ. ಎರಡನೆಯದು- ಅವರ ಸ್ನೇಹ ಮನೋಭಾವ. ಮೂರನೆಯದು ಅವರು ತೀರಿಕೊಂಡಾಗ ಇಡೀ ಜಗತ್ತೇ ಶೋಕ ವ್ಯಕ್ತಪಡಿಸಿತ್ತು. ವಿಶ್ವಸಂಸ್ಥೆ ತನ್ನ ಧ್ವಜವನ್ನು ಅರ್ಧಕ್ಕೆ ಇಳಿಸಿತ್ತು. ಈ ಮೂರು ಕಾರಣಗಳಿಂದಾಗಿ ಅವರನ್ನು ಇನ್ನಷ್ಟು ತಿಳಿಯುವ ಕುತೂಹಲವಿದೆ ಎಂದಳಂತೆ. ಇದು ನನಗೆ ಹೊಸ ಹೊಳಹು ಎನಿಸಿತು.
-ಸುಕನ್ಯಾ, ಮಣಿಪಾಲ

ಬಡತನ, ಸಿರಿತನ ಲೆಕ್ಕಕ್ಕಿಲ್ಲ
ತಂದೆ ಎಲ್ಲ ಹೆಣ್ಣು ಮಕ್ಕಳಿಗೆ ಮೊದಲ ದೇವರು. ಆತ ಏನೇ ಕೊಡಲಿ ಅದನ್ನು ಜೋಪಾನ ಮಾಡುವು ದರಲ್ಲಿ ಹೆಣ್ಣು ಮಕ್ಕಳು ನಿಸ್ಸೀಮರು. ಬಡತನ ಅಥವಾ ಸಿರಿತನ ಎನ್ನುವುದು ಇಲ್ಲಿ ಲೆಕ್ಕವಿಲ್ಲ. ಅಪ್ಪ, ಮಗಳ ಸಂಬಂಧದಲ್ಲಿ ಸಿರಿವಂತಿಕೆಯ ದರ್ಪವಾಗಲಿ, ಬಡತನದ ನಿರಾಸೆಯೂ ಇಲ್ಲ. ಬರೀ ಪ್ರೀತಿ ಮಾತ್ರ ಎಂಬುದಕ್ಕೆ ಸಾಕ್ಷಿಯಾಗಿತ್ತು ಫೇಸ್‌ಬುಕ್‌ನಲ್ಲಿ ಬಂದಿದ್ದ ವೀಡಿಯೋ ಒಂದಿದು, ಅದರಲ್ಲಿ ತಂದೆ ಮಗಳಿಗೆ ಸೈಕಲನ್ನು ತಂದುಕೊಡುತ್ತಾನೆ. ಮಗಳು ಅದರಲ್ಲಿ ಕುಳಿತುಕೊಳ್ಳಲು ಹೊರಡುತ್ತಾಳೆ. ಆದರೆ ಅಷ್ಟರಲ್ಲಿ ಏನೋ ನೆನಪಾದಂತೆ ಅಪ್ಪನ ಬಳಿ ಬಂದು ಜೋರಾಗಿ ತಬ್ಬಿ ಹಿಡಿದು ಕೆನ್ನೆಗೆ ಮುತ್ತು ಕೊಡುತ್ತಾಳೆ. ಆ ಒಂದು ಸಣ್ಣ ವಿಚಾರ ಅಪ್ಪ ನೀನು ತುಂಬಾ ಗ್ರೇಟ್‌ ಅನ್ನೋ ಹಾಗಿರುತ್ತೆ. ಅಪ್ಪನ ಶ್ರಮ, ಪ್ರೀತಿಗೆ ಅದು ಬಹುಮೂಲ್ಯ ಉಡುಗೊರೆ ಎಂದೆನಿಸುತ್ತದೆ. ಈ ವೀಡಿಯೋ ನೋಡಿದಾಗ ಕಣ್ಣಲ್ಲಿ ಸಣ್ಣದೊಂದು ಹನಿ ಇಣುಕಿದ್ದು ಸುಳ್ಳಲ್ಲ. ನಿಜ, ಎಷ್ಟೋ ಬಾರಿ ನಾವು ಬೇರೆಯವರ ಶ್ರಮವನ್ನು ಗುರುತಿಸುವುದೇ ಇಲ್ಲ, ಗೌರವಿಸುವುದೂ ಇಲ್ಲ. ಅದು ಸಾಧ್ಯವಾದರೆ ಎಷ್ಟೊಂದು ಖುಷಿ. -ಮೋಹಿತ್‌, ಪುತ್ತೂರು

ಸಾಧನೆ ಪ್ರೇರಣೆಯಾಗಲಿ
“success is not just about what you accomplish in your life; its about what you inspire others to do’
ವಾಟ್ಸ್‌ಆ್ಯಪ್‌ನಲ್ಲಿ ಹೀಗೊಂದು ಸಾಲು ನೋಡಿದಾಗ ಮೊದಲು ಅನಿಸಿದ್ದು ಹೌದಲ್ವಾ! ಈ ಬಗ್ಗೆ ನಾನು ಆಲೋಚಿಸಿಯೇ ಇರಲಿಲ್ಲ. ಏನೋ ಸಣ್ಣಪುಟ್ಟ ಕೆಲಸ ಮಾಡಿ ನಾವು ಅದನ್ನೇ ಸಾಧನೆ ಎಂದು ಬೀಗುತ್ತೇವೆ. ಆದರೆ ನಿಜವಾಗಿಯೂ ಸಾಧನೆ ಎಂದರೇನು? ಕೇವಲ ನಮ್ಮ ಖುಷಿಗಾಗಿ ಮಾಡಿದ್ದೇ, ಖಂಡಿತಾ ಅಲ್ಲ ಎಂಬುದನ್ನು ಹೇಳುವ ಈ ಮಾತುಗಳು ಎಷ್ಟು ಅರ್ಥಪೂರ್ಣ. ನಮ್ಮ ಗುರಿ ಯಾವತ್ತಿದ್ದರೂ ಮತ್ತೂಬ್ಬರಿಗೆ ಪ್ರೇರಣೆ ನೀಡಿದರೆ ಜೀವನದಲ್ಲಿ ನಾವು ಗೆದ್ದಂತೆ. ನಾವು ಮತ್ತೂಬ್ಬರಿಗೆ ಸ್ಫೂರ್ತಿಯಾಗಬೇಕು. ಅದೇ ನಮ್ಮ ಬದುಕಿನ ಗುರಿಯೂ ಆಗಬೇಕು. ಹೂವುಮುಳ್ಳುಗಳ ಹಾದಿಯಲ್ಲಿ ಸವಾಲುಗಳನ್ನು ಸ್ವೀಕರಿಸುತ್ತಲೇ ಸಾಗಬೇಕು-ಇವು ಈ ವಾರ ನನಗೆ ಖುಷಿ ತಂದುಕೊಟ್ಟ ಸಾಲುಗಳು.
-ದಿಯಾ, ಕುಂದಾಪುರ

Advertisement

ಮಾತು, ಮನಸ್ಸಿನ ಮೇಲೆ ಹಿಡಿತವಿರಲಿ
Take care of your thoughts when you are alone and Take care of your words when you are with people ಶುಭೋದಯದೊಂದಿಗೆ ಬೆಳಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಹರಿದು ಬಂದ ಈ ಒಂದು ವಾಕ್ಯ ನನ್ನ ಅಂತರಂಗವನ್ನು ಸೇರಿಬಿಟ್ಟಿದೆ. ನಾವು ಸದಾ ಸಂತೋಷವಾಗಿರಲು ಈ ಸಾಲುಗಳ ಅನುಷ್ಠಾನವಷ್ಟೇ ಸಾಕು ಎಂದೂ ಅನಿಸಿದೆ. ಒಬ್ಬರೇ ಇರುವಾಗ ಮನಸ್ಸು ಬೇಡದ್ದನ್ನೆಲ್ಲ ಯೋಚಿಸುತ್ತದೆ. ಎಷ್ಟೋ ಬಾರಿ ಇದು ನಮ್ಮನ್ನು ಖನ್ನತೆಗೆ ದೂಡುತ್ತದೆ. ಹೀಗಾಗಿ ಮನಸ್ಸಿನ ಯೋಚನೆಗಳ ಮೇಲೆ ಹಿಡಿತವಿಟ್ಟುಕೊಳ್ಳಬೇಕು. ಅದೇ ರೀತಿ ಜನರೊಂದಿಗೆ ಇರುವಾಗ ಮಾತಿನ ಮೇಲೆ ನಿಯಂತ್ರಣವಿರಬೇಕು. ಯಾಕೆಂದರೆ ಯೋಚಿಸದೇ ಆಡಿದ ಮಾತಿನಿಂದ ಕಲಹ, ಮನಸ್ತಾಪವಾಗುವುದು ಹೆಚ್ಚು. ಹೀಗಾಗಿ ಮನಸ್ಸು ಮತ್ತು ನಾಲಗೆಯ ಮೇಲೆ ಹಿಡಿತವಿದ್ದರೆ ಜೀವನ ಎಷ್ಟೊಂದು ಅನಂದಮಯ.
-ಅಭಿಷೇಕ್‌, ಬಂಟ್ವಾಳ

ಅದೃಷ್ಟವನ್ನು ನಂಬುವಂತಿಲ್ಲ
ಒಬ್ಬ ರಾಜ ಮಂತ್ರಿಯನ್ನು ಕರೆದು ಅದೃಷ್ಟವಿಲ್ಲದ ಆಟ ಯಾವುದು ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಮಂತ್ರಿ ಚೆಸ್‌ ಎನ್ನುತ್ತಾನೆ. ಅದು ಹೇಗೆ ಎಂದು ಸಾಬೀತು ಪಡಿಸಿದರೆ ನೀನು ಕೇಳಿದ್ದನ್ನು ಕೊಡುತ್ತೇನೆ ಎನ್ನುತ್ತಾನೆ ರಾಜ. ಆಗ ಮಂತ್ರಿ, ರಾಜರೇ, ಚೆಸ್‌ ಬೋರ್ಡ್‌ನಲ್ಲಿ 64 ಕೋಣೆಗಳಿವೆ. ನೀವು ಮೊದಲನೇ ಕೊಣೆಯಲ್ಲಿ ಒಂದು ಅಕ್ಕಿ ಕಾಳು ಹಾಕಿ ಹಾಗೆಯೇ ಎರಡನೇ ಕೋಣೆಯಲ್ಲಿ 2, ಮೂರನೇ ಕೋಣೆಯಲ್ಲಿ 4, 4ನೇ ಕೋಣೆಯಲ್ಲಿ 8… ಹೀಗೆ ದ್ವಿಗುಣಗೊಳಿಸುತ್ತಾ ಹೋಗಿ, ಕೊನೆಯ ಕೋಣೆಗೆ ಬರುವಾಗ ಎಷ್ಟಾಗುತ್ತೋ ಅದನ್ನು ನನಗೆ ಕೊಡಿ ಎನ್ನುತ್ತಾನೆ. ರಾಜ ಹೀಗೆ ಮಾಡುತ್ತಾನೆ. ಆದರೆ ಕೊನೆಯ ಕೋಣೆಗೆ ಬರುವಾಗ ಅವನ ಸಂಪೂರ್ಣ ರಾಜ್ಯವೇ ಬರಿದಾಗುತ್ತದೆ. ಇದು ಫೇಸ್‌ಬುಕ್‌ನಲ್ಲಿ ಸ್ಯಾಂಡಲ್‌ವುಡ್‌ ನಟ ರಮೇಶ್‌ ಅರವಿಂದ್‌ ಆಡಿದ ಭಾಷಣದ ಒಂದು ತುಣುಕು. ಅದೃಷ್ಟವನ್ನೇ ನಂಬಿ ಕುಳಿತರೆ ಜೀವನದಲ್ಲಿ ಏನೂ ಸಾಧಿಸಲಾಗುವುದಿಲ್ಲ. ಬದಲಾಗಿ ಸಾಧಿಸುವ ಛಲ, ಹಂಬಲದೊಂದಿಗೆ ಸಣ್ಣ ವಯಸ್ಸಿನಲ್ಲೇ ಕಠಿನ ಶ್ರಮ ಪಟ್ಟರೆ ನಾವು ಸಾಧನೆಯ ಉತ್ತುಂಗವನ್ನು ಏರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಂಡ ಒಂದು ಒಳ್ಳೆಯ ಸಂದೇಶ.
-ಸಾಕೇತ್‌, ಮಂಗಳೂರು

ಖುಷಿಯಾಗಿರಲಿ ಬದುಕು
ನಮ್ಮ ಚಿಂತನೆ ಸಕರಾತ್ಮವಾಗಿದ್ದರೆ ಶಬ್ದಗಳು ಸಂಗೀತದಂತೆ, ಪ್ರತಿ ಚಲನೆಯೂ ನೃತ್ಯದಂತೆ, ಪ್ರತಿ ಪದವೂ ನಗುವಿನಂತೆ ಹಾಗೂ ಜೀವನವೇ ಹಬ್ಬದಂತಾಗುತ್ತದೆ. ಅದಕ್ಕೆ ಬೇಕಿರುವುದು ನಮ್ಮ ಸಕಾರಾತ್ಮಕ ಚಿಂತನೆಯಷ್ಟೇ.. ಜೀವನವನ್ನು ಖುಷಿಯಿಂದ ಅಥವಾ ದುಃಖದಿಂದ ಕಳೆಯಬೇಕೋ ಎನ್ನುವುದನ್ನು ನಿರ್ಧರಿಸುವುದು ನಾವುಗಳಷ್ಟೇ. ಪ್ರತಿದಿನ ಸಕಾರಾತ್ಮಕ ಆಲೋಚನೆಗಳಿಂದ ದಿನ ಆರಂಭಿಸಿದರೆ ಆ ದಿನ ನಡೆಯುವ ಎಲ್ಲವೂ ನಮಗೆ ಸಕಾರಾತ್ಮಕವಾಗಿಯೇ ಇರುತ್ತದೆ. ನಮ್ಮ ಜೀವನವನ್ನು ಹೇಗೆ ಕಳೆಯಬೇಕು ಎನ್ನುವುದನ್ನೂ ನಾವೇ ನಿರ್ಧರಿಸುವುದು. ಖುಷಿಯಿಂದಲೋ ಅಥವಾ ದುಃಖದಿಂದಲೋ ಎಂಬುದು ನಮ್ಮ ಆಯ್ಕೆ. ಈ ಸಾಲುಗಳು ವಾಟ್ಸ್‌ಆ್ಯಪ್‌ನಲ್ಲಿ ಶುಭೋದಯ ಸಂದೇಶವಾಗಿ ಬಂದಿತು. ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ ನನ್ನ ಖಜಾನೆಯಲ್ಲಿ.
-ಮಿಥಾಲಿ, ಕಾರ್ಕಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next