Advertisement

New Ayushman Bharat Card ಕರಾವಳಿಯಲ್ಲಿ ನಿರಾಸಕ್ತಿ; ಸ್ವಯಂ ನೋಂದಣಿ ಅವಕಾಶ

11:20 PM Dec 03, 2023 | Team Udayavani |

ಮಂಗಳೂರು: ಕರಾವಳಿಯಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಬೇಕಾಗಿದ್ದ ಆಯುಷ್ಮಾನ್‌ ಭಾರತ್‌ ಹೊಸ ಕಾರ್ಡ್‌ ನೋಂದಣಿ ಇನ್ನೂ ಶೇ. 50ರಷ್ಟೂ ಪ್ರಗತಿ ಕಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 31.9 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 41.65ರಷ್ಟು ಮಾತ್ರ ಗುರಿ ತಲುಪಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಾರ್ವಜನಿಕರು ಸ್ವಯಂ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ.

Advertisement

ಈ ಹಿಂದೆ ರಾಜ್ಯ ಸರಕಾರ ವಿತರಿಸುತ್ತಿದ್ದ ಕಾರ್ಡನ್ನು ಕಳೆದ ವರ್ಷ ಅಮಾನ್ಯಗೊಳಿಸಿ ಕೇಂದ್ರ ಸರಕಾರ ಹೊಸತಾಗಿ ಕಾರ್ಡ್‌ ವಿತರಿಸಲು ಮುಂದಾಗಿತ್ತು. ಇದಕ್ಕೆಂದು ಜಿಲ್ಲೆ ಗ್ರಾಮ ಒನ್‌ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ನೀಡಲಾಗಿತ್ತು. ಆರಂಭದ ಕೆಲವು ತಿಂಗಳು ಸರ್ವರ್‌ ಸಮಸ್ಯೆ ಹಿನ್ನೆಲೆಯಲ್ಲಿ ನೋಂದಣಿಯೇ ಆಗುತ್ತಿರಲಿಲ್ಲ. ಬಳಿಕ ಸಾರ್ವಜನಿಕರು ಕೂಡ ಅಷ್ಟೊಂದು ಉತ್ಸಾಹ ತೋರಿಲ್ಲ. ಈ ಎಲ್ಲ ಕಾರಣ ಕಾರ್ಡ್‌ ನೋಂದಣಿ ಪ್ರಗತಿಯ ಮೇಲೂ ಪರಿಣಾಮ ಬೀರಿತ್ತು.

ಮೊಬೈಲ್‌ನಲ್ಲೇ ನೋಂದಣಿ
ಇನ್ನು ಮುಂದೆ ಸಾರ್ವಜನಿಕರು ಆಯುಷ್ಮಾನ್‌ ಭಾರತ್‌ ಹೊಸ ಕಾರ್ಡ್‌ ನೋಂದಣಿಗೆ ಗ್ರಾಮ ಒನ್‌ ಕೇಂದ್ರಕ್ಕೆ ಹೋಗಬೇಕೆಂದಿಲ್ಲ. ಬದಲಾಗಿ ಮೊಬೈಲ್‌ ಅಥವಾ ಕಂಪ್ಯೂಟರ್‌ ಮೂಲಕ ತಾವಾಗಿಯೇ ನೋಂದಣಿ ಮಾಡಬಹುದು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ “ಆಯುಷ್ಮಾನ್‌ ಕಾರ್ಡ್‌’ ಆ್ಯಪ್‌ ಡೌನ್‌ಲೋಡ್‌ ಮಾಡಬೇಕು ಬಳಿಕ ಬೆನಿಫಿಶಿಯರಿಯಲ್ಲಿ ಲಾಗಿನ್‌ನಲ್ಲಿ ಮೊಬೈಲ್‌ ನಂಬರ್‌ ಹಾಕಿ ವೆರಿಫೈ ಮಾಡಿ, ಒಟಿಪಿ ನಮೂದಿಸಬೇಕು. ಆಗ ತೆರೆಯುವ ಪುಟದಲ್ಲಿ ರಾಜ್ಯ ಆಯ್ಕೆ ಮಾಡಿ “ಸ್ಕೀಮ್‌’ ಜಾಗದಲ್ಲಿ “ಕುಟುಂಬ’ ಆಯ್ಕೆ ಮಾಡಬೇಕು. ಆಧಾರ್‌ ನಂಬರ್‌ ಜಿಲ್ಲೆ ಅಳವಡಿಸಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕ ಬಹುದು. ಆಧಾರ್‌ ಕೆವೈಸಿ ಸಹಿತ ಇತರ ವಿವರಗಳನ್ನು ಪೂರ್ತಿಗೊಳಿಸಿದ ಬಳಿಕ ಆಯುಷ್ಮಾನ್‌ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆ್ಯಪ್‌ ರಹಿತವಾಗಿ https://beneficiary.nha.gov.in ಪೋರ್ಟಲ್‌ ಕ್ಲಿಕ್‌
ಮಾಡುವ ಮೂಲಕವೂ ನೋಂದಣಿ ಸಾಧ್ಯವಿದೆ.

ಕರಾವಳಿಯಲ್ಲಿ 30 ಲಕ್ಷ ಗುರಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಿನಿಂದಲೇ ಹೊಸ ಕಾರ್ಡ್‌ ನೋಂದಣಿ ಆರಂಭಗೊಂಡಿತ್ತು. ರಾಜ್ಯ ಸರಕಾರ ನೀಡಿರುವ ಗುರಿಯಂತೆ ದ.ಕ. ಜಿಲ್ಲೆಯಲ್ಲಿ 10,99,064 ಬಿಪಿಎಲ್‌ ಮತ್ತು 6,41,175 ಎಪಿಎಲ್‌ ಕಾರ್ಡ್‌ದಾರರು ಸೇರಿದಂತೆ ಒಟ್ಟು 17,40,239 ಗುರಿ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ 7,94,264 ಬಿಪಿಎಲ್‌ ಕಾರ್ಡ್‌ ಮತ್ತು 4,72,174 ಎಪಿಎಲ್‌ ಕಾರ್ಡ್‌ ಸೇರಿದಂತೆ ಒಟ್ಟು 12,66,438 ಗುರಿ ನೀಡಿದೆ. ಆದರೆ ಉಭಯ ಜಿಲ್ಲೆಗಳಲ್ಲಿ ಸದ್ಯ ಗುರಿಯ ಶೇ. 50ರಷ್ಟೂ ನೋಂದಣಿ ತಲುಪಿಲ್ಲ.

ಆಯುಷ್ಮಾನ್‌ ಹೊಸ ಕಾರ್ಡ್‌ ನೋಂದಣಿಗೆ ಮತ್ತಷ್ಟು ವೇಗ ನೀಡಲಾಗಿದೆ. ಇದೀಗ ಸ್ವಯಂ ನೋಂದಣಿಗೆ ಜಾರಿಗೆ ನಿರ್ಧಾರ ಮಾಡಿದ್ದು, ಅದರಂತೆ ಮೊಬೈಲ್‌ ಅಥವಾ ಕಂಪ್ಯೂಟರ್‌ ಮೂಲಕ ಸಾರ್ವಜನಿಕರು ನೋಂದಣಿ ಮಾಡಿ ಕಾರ್ಡ್‌ ಡೌನ್‌ಲೋಡ್‌ ಮಾಡಲು ಅವಕಾಶ ನೀಡಲಾಗಿದೆ.
– ಡಾ| ಎಚ್‌.ಆರ್‌. ತಿಮ್ಮಯ್ಯ,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next