Advertisement

Kannada Actress; ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ನವನಟಿಯರು

12:06 PM Mar 01, 2024 | Team Udayavani |

ಒಂದು ಸಿನಿಮಾ ತೆರೆಗೆ ಬಂದರೆ ಅದು ನಿರ್ಮಾಪಕನ ಕೈ ಹಿಡಿಯುತ್ತೋ, ಬಿಡುತ್ತೋ, ಆದರೆ ಆ ಚಿತ್ರದಿಂದ ಒಂದಷ್ಟು ಕಲಾವಿದರು, ತಂತ್ರಜ್ಞರು ಬೆಳಕಿಗೆ ಬರುತ್ತಾರೆ. ಅವರು ಒಂದಷ್ಟು ವರ್ಷ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಈ ವಿಚಾರ ಅನೇಕ ನಿರ್ಮಾಪಕರಿಗೂ ಗೊತ್ತಿದೆ. ಅದೇ ಕಾರಣದಿಂದ ಕೆಲವು ಪತ್ರಿಕಾಗೋಷ್ಠಿಗಳಲ್ಲಿ, “ನನಗೆ ಈ ಸಿನಿಮಾದಿಂದ ಕಾಸು ಬರದಿದ್ದರೂ ಪರ್ವಾಗಿಲ್ಲ, ಆದರೆ ಈ ಸಿನಿಮಾಕ್ಕಾಗಿ ದುಡಿದ ಪ್ರತಿಭೆಗಳಿಗೆ ಹೆಸರು ಬಂದರೆ ಸಾಕು’ ಎನ್ನುತ್ತಾರೆ. ಇವತ್ತು ಚಿತ್ರರಂಗದಲ್ಲಿ ನೆಲೆಕಂಡು, ಸ್ಟಾರ್‌ಪಟ್ಟ ಗಿಟ್ಟಿಸಿಕೊಂಡ ಪ್ರತಿಯೊಬ್ಬರು ಯಾವುದೋ ಒಂದು ಸಿನಿಮಾದಿಂದ “ಭರವಸೆ’ ಮೂಡಿಸಿಯೇ ಮೇಲೆ ಬಂದಿರುತ್ತಾರೆ. ಈಗ 2024ರ ಈ ಎರಡು ತಿಂಗಳಲ್ಲಿ ತೆರೆಕಂಡಿರುವ ಸಿನಿಮಾಗಳ ಮೂಲಕ ಒಂದಷ್ಟು ನವನಟಿಯರು ಭರವಸೆ ಮೂಡಿಸಿದ್ದಾರೆ. ಹೊಸ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ, ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವ ಮೂಲಕ “ಭವಿಷ್ಯದ ಭರವಸೆ’ ಎಂದು ಕರೆಸಿಕೊಂಡಿದ್ದಾರೆ. ಹೀಗೆ ವರ್ಷಾರಂಭದಲ್ಲಿ ಮಿಂಚಿ, ನಿಧಾನಕ್ಕೆ ಸಿನಿಮಾಗಳ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಿರುವ ಕೆಲವು ನಟಿಯರ ಬಗ್ಗೆ ಇಲ್ಲಿ ಹೇಳಲಾಗಿದೆ…

Advertisement

ಪ್ರಣತಿ

ಒಂದು ಕಡೆ ಕಾಲೇಜು ಹುಡುಗರ ಕಥೆ, ಮತ್ತೂಂದು ಕಡೆ ಶಿಕ್ಷಣ ವ್ಯವಸ್ಥೆಯ ಸುತ್ತ ಹೇಳಲಾದ ಸಿನಿಮಾ “ಜಸ್ಟ್‌ಪಾಸ್‌’. ಫೆ.9ಕ್ಕೆ ತೆರೆಕಂಡ ಈ ಸಿನಿಮಾದಲ್ಲಿ ಪ್ರಣತಿ ನಾಯಕಿಯಾಗಿ ನಟಿಸಿದ್ದರು. ಅಕ್ಷರ ಎಂಬ ಪಾತ್ರದಲ್ಲಿ ಪ್ರಣತಿ ಮಿಂಚಿದ್ದು ಸುಳ್ಳಲ್ಲ. ಅಪ್ಪ-ಅಮ್ಮನಿಗಿಂತ ಹೆಚ್ಚಾಗಿ ಅಜ್ಜಿಯನ್ನು ಹಚ್ಚಿಕೊಂಡಿರುವ ಪಾತ್ರ ಮಾಡಿದ್ದರು ಪ್ರಣತಿ. ಈ ಸಿನಿಮಾ, ಪಾತ್ರ ಮೂಲಕ ಪ್ರಣತಿ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಅಂದಹಾಗೆ, ಪ್ರಣತಿ ಈ ಹಿಂದೆ ಕಿರುತೆರೆ ಹಾಗೂ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

ಮಲೈಕಾ

ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಲೈಕಾ ನಾಯಕಿಯಾಗಿದ್ದು “ಉಪಾಧ್ಯಕ್ಷ’ ಸಿನಿಮಾ ಮೂಲಕ. ಚಿಕ್ಕಣ್ಣ ನಾಯಕರಾಗಿರುವ ಈ ಚಿತ್ರದಲ್ಲಿ ಮಲೈಕಾಗೆ ಸಖತ್‌ ಬೋಲ್ಡ್‌ ಹಾಗೂ ನಟನೆಗೆ ಅವಕಾಶವಿರುವ ಪಾತ್ರ ಸಿಕ್ಕಿತ್ತು. ಮಲೈಕಾ ಕೂಡಾ ಅದನ್ನು ಸದುಪಯೋಗ ಪಡಿಸಿಕೊಂಡು ಮೊದಲ ಚಿತ್ರದಲ್ಲೇ ಸಿನಿಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಮಲೈಕಾ ಮತ್ತೂಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಡಾಲಿ ಧನಂಜಯ್‌ ನಿರ್ಮಾಣದ, ನಾಗಭೂಷಣ್‌ ನಾಯಕರಾಗಿರುವ “ವಿದ್ಯಾಪತಿ’ ಸಿನಿಮಾಕ್ಕೆ ಮಲೈಕಾ ನಾಯಕಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಲೈಕಾ ಮತ್ತಷ್ಟು ಸಿನಿಮಾಗಳಲ್ಲಿ ತೆರೆಮೇಲೆ ಬರುವ ಲಕ್ಷಣ ಕಾಣುತ್ತಿದೆ

Advertisement

ಭೂಮಿಕಾ

ಇತ್ತೀಚೆಗೆ ತೆರೆಕಂಡ “ಮಂಡ್ಯ ಹೈದ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟ ಬೆಡಗಿ ಭೂಮಿಕಾ. ಮೊದಲ ಚಿತ್ರದಲ್ಲಿ ಭರವಸೆ ಮೂಡಿಸುವ ಮೂಲಕ ಹೊಸ ಅವಕಾಶಗಳತ್ತ ಮುಖ ಮಾಡುತ್ತಿದ್ದಾರೆ. ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಭೂಮಿಕಾಗೆ “ಮಂಡ್ಯ ಹೈದ’ ಒಳ್ಳೆಯ ವೇದಿಕೆಯಾಗಿದ್ದು ಸುಳ್ಳಲ್ಲ.

ರಿಷಿಕಾ ನಾಯಕ್‌

ರಿಷಿಕಾ ಈ ವರ್ಷ ಎರಡು ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. “ಜೂನಿ’ ಹಾಗೂ “ಪುರುಷೋತ್ತಮನ ಪ್ರಸಂಗ’ ಸಿನಿಮಾಗಳಲ್ಲಿ ರಿಷಿಕಾಗೆ ಭಿನ್ನ ಪಾತ್ರ ಸಿಕ್ಕಿದೆ. “ಜೂನಿ’ಯಲ್ಲಿ ಬಹುಮುಖ ವ್ಯಕ್ತಿತ್ವ ಹೊಂದಿರುವ ಹುಡುಗಿಯಾಗಿ ಕಾಣಿಸಿಕೊಂಡಿರುವ ರಿಷಿಕಾ, “ಪುರುಷೋತ್ತಮನ ಪ್ರಸಂಗ’ ಚಿತ್ರದಲ್ಲಿ ಮಂಗಳೂರು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಇಂದು ತೆರೆಕಾಣುತ್ತಿದ್ದು, ಈ ಚಿತ್ರದ ಮೇಲೆ ರಿಷಿಕಾ ನಿರೀಕ್ಷೆ ಇಟ್ಟಿದ್ದಾರೆ. ಇದಲ್ಲದೇ ಇತ್ತೀಚೆಗಷ್ಟೇ ಮುಹೂರ್ತ ಆಚರಿಸಿಕೊಂಡಿರುವ “ನಿದ್ರಾದೇವಿ’ ಚಿತ್ರದಲ್ಲೂ ರಿಷಿಕಾ ನಾಯಕ್‌. ವರ್ಷಾರಂಭದಲ್ಲೇ ಹೊಸ ಸಿನಿಮಾಗಳ ಮೂಲಕ ಭರವಸೆ ಮೂಡಿಸಿ, ಮತ್ತಷ್ಟು ಸಿನಿಮಾಗಳ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿರುವುದು ಸುಳ್ಳಲ್ಲ.

ಸ್ವಾತಿಷ್ಠ

ಸಿಂಪಲ್‌ ಸುನಿ ನಿರ್ದೇಶನದ “ಒಂದು ಸರಳ ಪ್ರೇಮಕಥೆ’ಯಲ್ಲಿ ನಟಿಸಿರುವ ಸ್ವಾತಿಷ್ಠಗೆ ಈ ಸಿನಿಮಾದಲ್ಲಿ ಡಬಲ್‌ ಶೇಡ್‌ ಇರುವ ಪಾತ್ರ ಸಿಕ್ಕಿತ್ತು. ಆ ಪಾತ್ರಗಳನ್ನು ನೀಟಾಗಿ ನಿರ್ವಹಿಸುವ ಮೂಲಕ “ಹುಡುಗಿ ಚೆನ್ನಾಗಿ ನಟಿಸಿದ್ದಾಳೆ’ ಎಂಬ ಶಹಬ್ಟಾಸ್‌ಗಿರಿ ಪಡೆದಿದ್ದು ಸುಳ್ಳಲ್ಲ. ತಮಿಳಿನ “ವಿಕ್ರಮ್‌’ ಸಿನಿಮಾದ ಮೂಲಕ ನಟಿಯಾಗಿ ಗುರುತಿಸಿಕೊಂಡಿರುವ ಸ್ವಾತಿಷ್ಠಗೆ ಈಗ “ಒಂದು ಸರಳ ಪ್ರೇಮಕಥೆ’ ಕೂಡಾ ಒಳ್ಳೆಯ ಅವಕಾಶ ನೀಡಿತು.

ನಿಧಿ ಹೆಗಡೆ

“ಶಾಖಾಹಾರಿ’ ಎಂಬ ಸಿನಿಮಾವೊಂದು ಇತ್ತೀಚೆಗೆ ತೆರೆಕಂಡು ಸಿನಿಮಾ ವಿಮರ್ಶಕರಿಂದ, ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನಿಧಿ ಹೆಗಡೆ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳ ಪಾತ್ರಗಳಿಗಿಂತ ವಿಭಿನ್ನ ಪಾತ್ರ ಪೋಷಣೆ ಮಾಡುವ ಮೂಲಕ ನಿಧಿ ಹೆಗಡೆ ಕೂಡಾ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಮಧ್ಯಮ ವರ್ಗದ, ಜೀವನದಲ್ಲಿ ಕನಸು ಕಟ್ಟಿಕೊಂಡಿರುವ ಹುಡುಗಿಯಾಗಿ ಈ ಚಿತ್ರದಲ್ಲಿ ನಿಧಿ ಕಾಣಿಸಿಕೊಂಡಿದ್ದಾರೆ.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next