Advertisement

ನೆರೂಲ್‌ ಶ್ರೀ ಅಯ್ಯಪ್ಪ ಭಕ್ತವೃಂದ ರಜತಮಹೋತ್ಸವ 

04:35 PM Dec 28, 2017 | Team Udayavani |

ನವಿ ಮುಂಬಯಿ: ಅಯ್ಯಪ್ಪ ವ್ರತಧಾರಿಗಳು ಮತ್ತು ಧಾರ್ಮಿಕ ಸಂಸ್ಥೆಗಳಿಂದ ಹಿಂದೂ ಧರ್ಮದ ರಕ್ಷಣೆಯಾಗುತ್ತಿದೆ. ಧರ್ಮ-ಸಂಸ್ಕೃತಿಗೆ ಧಕ್ಕೆಯಾದ ಸಂದರ್ಭದಲ್ಲಿ ಜನರಲ್ಲಿ ಧಾರ್ಮಿಕ ಮನೋಭಾವ ಬೆಳೆಸುವಲ್ಲಿ ಅಯ್ಯಪ್ಪ ವ್ರತಧಾರಿಗಳ ಪಾತ್ರ ಮಹತ್ತರವಾಗಿದೆ. ಹಿಂದೂ ಸಮಾಜದಲ್ಲಿ ಇಂತಹ ಸಂಘಟನೆಗಳ ಅಗತ್ಯವಿದೆ ಎಂದು ನೆರೂಲ್‌ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಡಿ. 24ರಂದು ನೆರೂಲ್‌ ಶ್ರೀ ಶನೀಶ್ವರ ಮಂದಿರದ ಸಭಾಗೃಹದಲ್ಲಿ ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್‌ ಟ್ರಸ್ಟ್‌ ನೆರೂಲ್‌ ಇದರ ರಜತ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಇವರು, ಶ್ರೀ ಅಯ್ಯಪ್ಪ ಭಕ್ತ ಚಾರಿಟೆಬಲ್‌ ಟ್ರಸ್ಟ್‌ ಕಳೆದ 25 ವರ್ಷಗಳಿಂದ ಸಾವಿರಾರು ವ್ರತಧಾರಿಗಳನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವಂತೆ ಮಾಡುತ್ತಿರುವುದು ಅಭಿನಂದನೀಯ. ಸಮಿತಿಯ ಕೇವಲ ಧಾರ್ಮಿಕ ಕ್ಷೇತ್ರವಲ್ಲದೆ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಗಮನೀಯ ಸಾಧನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ನುಡಿದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ವಿದ್ವಾನ್‌ ದಿನೇಶ್‌ ಚಡಗ ಅವರು ಮಾತನಾಡಿ, ಅಯ್ಯಪ್ಪ ವ್ರತಾಚರಣೆಯಿಂದ ನಮ್ಮ ಜೀವನ ಪಾವನವಾಗುತ್ತದೆ. ಕಠಿನವಾದ ಈ 48 ದಿನಗಳ ವ್ರತಾಚರಣೆಯು ಹಿಂದೂಧರ್ಮದಲ್ಲಿ ಒಂದು ಶ್ರೇಷ್ಠವಾದ ವ್ರತವಾಗಿದೆ. ಇಂತಹ ವ್ರತವನ್ನು ತಮ್ಮ ಜೀವನದಲ್ಲಿ ಎಲ್ಲರೂ ಆಚರಿಸಿ ಧಾರ್ಮಿಕ ಪ್ರಜ್ಞೆಯನ್ನು ಬೆಳಗಿಸಬೇಕು ಎಂದು ನುಡಿದರು.

ಶ್ರೀ ಶನೀಶ್ವರ ಮಂದಿರ ನೆರೂಲ್‌ ಅಧ್ಯಕ್ಷ, ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು ಮಾತನಾಡಿ, ಕಳೆದ 25 ವರ್ಷಗಳಿಂದ ಶ್ರೀ ಶನೀಶ್ವರ ಮಂದಿರದ ಅಂಗಸಂಸ್ಥೆಯಂತೆ ಅಯ್ಯಪ್ಪ ಚಾರಿಟೆಬಲ್‌ ಟ್ರಸ್ಟ್‌ ಕಾರ್ಯ ನಿರ್ವಹಿಸುತ್ತಿದೆ. ನೆರೂಲ್‌ ಪರಿಸರದಲ್ಲಿ ಅನೇಕ ಅಯ್ಯಪ್ಪ  ವ್ರತಧಾರಿಗಳನ್ನು ಶಬರಿಮಲೆಗೆ ಕರೆದು ಹೋಗುವ ಪುಣ್ಯ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಘನ್ಸೋಲಿ ಶ್ರೀ ಮೂಕಾಂಬಿಕಾ ಕ್ಷೇತ್ರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ಕಠಿಣ ಪರಿಶ್ರಮದ ಮೂಲಕ ವ್ರತಧಾರಿಗಳಾಗಿರುವ ಅಯ್ಯಪ್ಪ ಭಕ್ತರನ್ನು ಶಬರಿಮಲೆ ಯಾತ್ರೆಗೈದು ದೇವರ ದರ್ಶನ ಮಾಡುವ ಕಾರ್ಯದಲ್ಲಿ ತೊಡಗಿರುವ ಸಮಿತಿಯ ಎಲ್ಲರನ್ನು ಅಭಿನಂದಿಸುತ್ತಿದ್ದೇನೆ. ಧಾರ್ಮಿಕವಲ್ಲದೆ, ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿರುವ ಸಮಿತಿಯು ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.

Advertisement

ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಭಕ್ತವೃಂದ ಘನ್ಸೋಲಿ ಇದರ ಅಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು ಇವರು ಮಾತನಾಡಿ, ಗುರುಸ್ವಾಮಿಗಳಾದ ವಿ. ಕೆ. ಸುವರ್ಣ ಮತ್ತು ಅನಿಲ್‌ ಕುಮಾರ್‌ ಅವರಂತಹ ಶಿಸ್ತುಬದ್ಧ ಗುರುಸ್ವಾಮಿಗಳಿರುವ ಈ ಸಮಿತಿಯಿಂದ ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರಗುತ್ತಿರಲಿ ಎಂದರು.

ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಕುಮಾರ್‌ ಹೆಗ್ಡೆ ಇವರು ಮಾತನಾಡಿ, ಅಯ್ಯಪ್ಪ ವ್ರತಧಾರಿಗಳನ್ನು ಒಟ್ಟು ಸೇರಿಸಿ, ಆ ಮೂಲಕ ಇಂತಹ ಟ್ರಸ್ಟ್‌ಗಳನ್ನು ಸ್ಥಾಪಿಸಿ, ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯಕ್ಕೆ ದೇವರ ಅನುಗ್ರಹ ಸದಾಯಿರುತ್ತದೆ ಎಂದರು.

ಸಮಾರಂಭದಲ್ಲಿ ಸಂಸ್ಥೆಯ ಗುರುಸ್ವಾಮಿ
ಗಳಾದ ವಿ. ಕೆ. ಸುವರ್ಣ ಮತ್ತು ಅನಿಲ್‌ ಕುಮಾರ್‌ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹದಿನೆಂಟು ವರ್ಷಗಳಿಂದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ರಾಜು ಕೋಟೆಕಾರ್‌ ಸ್ವಾಮಿ, ಸುಜಿತ್‌ ಸ್ವಾಮಿ, ಪ್ರಸಾದ್‌ ಸ್ವಾಮಿ ಅವರನ್ನು ಸಮ್ಮಾನಿಸಲಾಯಿತು.  ಪ್ರತಿಭಾವಂತ ಮಕ್ಕಳಾದ ಶ್ರಾವ್ಯಾ ಶೆಟ್ಟಿ ಮತ್ತು ಜಾಹ್ನವಿ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಮಣಿಕಂಠ ಸೇವಾ ಸಂಘ ನೆರೂಲ್‌ ಉಪಾಧ್ಯಕ್ಷ  ಸುರೇಶ್‌ ಜಿ. ಶೆಟ್ಟಿ, ಸ್ಥಳೀಯ ನಗರ ಸೇವಕಿ ಮೀರಾ ಸಂಜಯ್‌ ಪಾಟೀಲ್‌, ಶ್ರೀ ಧರ್ಮಶಾಸ್ತ ಭಕ್ತವೃಂದ ನೆರೂಲ್‌ ಇದರ ಹರೀಶ್‌ ಗುರುಸ್ವಾಮಿ ಮೊದಲಾದವರು ಶುಭಹಾರೈಸಿದರು. ನವಿಮುಂಬಯಿ ಮೇಯರ್‌ ಜಯವಂತ್‌ ಸುತಾರ್‌ ಅವರು ಆಗಮಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಸಮಿತಿಯ ಸದಸ್ಯರುಗಳಾದ ಉಪಾಧ್ಯಕ್ಷ ಪ್ರಭಾಕರ ಎಸ್‌. ಹೆಗ್ಡೆ, ಗೌರವ ಕೋಶಾಧಿಕಾರಿ ವಿಶ್ವನಾಥ ಕೆ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೀಣಾ ವಿ. ಪೂಜಾರಿ, ಉಪಕಾರ್ಯಾಧ್ಯಕ್ಷೆ ಸುಪ್ರಿತಾ ಅನಿಲ್‌ ಹೆಗ್ಡೆ,  ಸಮಿತಿಯ ಸದಸ್ಯ ಕೃಷ್ಣ ಎಂ. ಪೂಜಾರಿ, ಎನ್‌. ಕೆ. ಪೂಜಾರಿ, ಗಿರೀಶ್‌ ಸಿ. ಶೆಟ್ಟಿ, ವಿಜಯ್‌ ಶೆಟ್ಟಿ, ವಿನೋದಾ ರಾವ್‌, ಲಕ್ಷ್ಮೀನಾರಾಯಣ ಬಂಗೇರ ಮತ್ತು ಅಯ್ಯಪ್ಪ ವ್ರತಧಾರಿಗಳು ಉಪಸ್ಥಿತರಿದ್ದರು.

ಟ್ರಸ್ಟಿ ಕರುಣಾಕರ ಎಸ್‌. ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಭಾಕರ ಎಸ್‌. ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next