Advertisement

ನೇರಾ- ನೇರ: ಮಾಜಿ ಸಿಎಂಗಳು, ಮಾಜಿ ಸಚಿವರ ಮಕ್ಕಳಿಗೆ ಮಾತ್ರ ಸಚಿವರಾಗುವ ಅರ್ಹತೆ ಇದೆಯೇ?

12:01 AM Nov 02, 2023 | Team Udayavani |

“ನಾನು ಯಾವುದೇ ಬಣ ರಾಜಕಾರಣವನ್ನು ನಡೆಸು ತ್ತಿಲ್ಲ. ನಾನು ಬಂಡಾಯ ಸೃಷ್ಟಿ ಮಾಡುತ್ತಿಲ್ಲ. ನಾನು ಸಿದ್ದರಾಮಯ್ಯಬಣವೂ ಅಲ್ಲ, ಡಿ.ಕೆ.ಶಿವಕುಮಾರ್‌ ಬಣವೂ ಅಲ್ಲ. ಅಷ್ಟಕ್ಕೂ ಕಾಂಗ್ರೆಸ್‌ನಲ್ಲಿ ಎರಡು ಬಣಗಳೇ ಇಲ್ಲ. ಎಲ್ಲರದೂ ಒಂದೇ ಬಣ.

Advertisement

“ನನ್ನನ್ನು ಮಂತ್ರಿ ಮಾಡಿ ಎಂದು ಯಾರಿಗಾದರೂ ಕೇಳಿದ್ದೇನಾ? ಅಧಿಕಾರ ಅನುಭವಿಸಿದವರಿಗೇ ಅಧಿಕಾರ ಕೊಡುವುದರ ಬಗ್ಗೆ ಪ್ರಶ್ನೆ ಮಾಡಿದ್ದೇನೆ. ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಬೇಕೆಂಬ ಪ್ರಬಲ ಅಭಿಲಾಷೆ ಹೊಂದಿದ್ದೇನೆ. ಹಾಗೆಯೇ ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರ ಮಕ್ಕಳಿಗೆ ಮಾತ್ರ ಸಚಿವರಾಗುವ ಅರ್ಹತೆ ಇದೆಯೇ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ. ಉದಯವಾಣಿ ನೇರಾನೇರದಲ್ಲಿ ಮಾತನಾಡಿದ್ದಾರೆ.

 ಬೇಳೂರು ಗೋಪಾಲಕೃಷ್ಣ ಅವರು ಮಂತ್ರಿಗಿರಿಗಾಗಿ ಬಂಡಾಯದ ಬಾವುಟ ಹಾರಿಸುವವರ ಸಾಲಿಗೆ ಸೇರಿಬಿಟ್ಟರಾ ?

ನಾನು ಮಂತ್ರಿಗಿರಿ ಬೇಕು ಎಂದು ಎಲ್ಲಿ ಕೇಳಿದ್ದೇನೆ? ಯಾರ ಬಳಿಯಾದರೂ ನಾನು ಈ ಬೇಡಿಕೆ ಇಟ್ಟಿದ್ದೇನಾ? ನಾನು ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ. ಆದರೆ ಪಕ್ಷದ ಒಟ್ಟಾರೆ ಹಿತದೃಷ್ಟಿಯಿಂದ ಕೆಲವಷ್ಟು ವಿಚಾರಗಳನ್ನು ಪ್ರಸ್ತಾವ ಮಾಡಿದ್ದೇನೆ ಅಷ್ಟೆ. ಅದನ್ನು ಬಂಡಾಯ ಎಂದು ಹೇಳುವುದಕ್ಕೆ ಸಾಧ್ಯವೇ?

 ಹಾಗಾದರೆ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ, ಮಾಜಿ ಸಚಿವರ ಮಕ್ಕಳಿಗೆ ಸಚಿವ ಸ್ಥಾನ ಕೊಟ್ಟಿದ್ದರ ಬಗೆಗಿನ ಆಕ್ಷೇಪದ ಅರ್ಥವೇನು ?

Advertisement

ಹೌದು. ನಾನು ಹೇಳಿದ್ದರಲ್ಲಿ ತಪ್ಪೇನಿದೆ? ಸಚಿವ ಸ್ಥಾನ ಕೊಡುವುದಕ್ಕೆ ಮಾನದಂಡಗಳೇನು ಎಂಬುದು ನನ್ನ ಪ್ರಶ್ನೆ. ಮಾಜಿ ಸಿಎಂಗಳ ಮಕ್ಕಳು, ಮಾಜಿ ಮಂತ್ರಿಗಳ ಮಕ್ಕಳಿಗೆ ಮಾತ್ರ ಸಚಿವರಾಗುವುದಕ್ಕೆ ಅರ್ಹತೆ ಇರುವುದೇ? ಪದೇ ಪದೆ ಸಚಿವರಾದವರು ಮಾತ್ರ ಅಧಿಕಾರ ಅನುಭವಿಸಬೇಕೆ? ಈ ಹಿಂದೆ ಸಚಿವರಾಗಿ ಕೆಲಸ ಮಾಡಿದವರಲ್ಲೂ ಒಳ್ಳೆಯವರಿದ್ದಾರೆ. ನಾನು ಎಲ್ಲರನ್ನು ಗುರಿಯಾಗಿಸಿಕೊಂಡು ಹೇಳುತ್ತಿಲ್ಲ. ಆದರೆ ಕೆಲವರಿಗೆ ಮಾತ್ರ ಅವಕಾಶ ಕೊಟ್ಟಿರುವುದರ  ಬಗ್ಗೆ ಬೇಸರವಿದೆ. ಹಿರಿತನವನ್ನೇ ಪರಿಗಣಿಸಿದರೆ ನಾನು ಮೂರು ಬಾರಿ ಗೆದ್ದಿದ್ದೇನೆ. ಮಾಜಿ ಸಿಎಂಗಳ ಮಕ್ಕಳನ್ನೇ ಮಂತ್ರಿ ಸ್ಥಾನ ಕೊಡುವುದಕ್ಕೆ ಪರಿಗಣಿಸಿದರೆ ಜನಸಾಮಾನ್ಯರ ಮಕ್ಕಳು ಎಲ್ಲಿ ಹೋಗಬೇಕು? ಇದನ್ನು ಕೇಳಿದ್ದು ತಪ್ಪೇ?

 ಅಂದರೆ ನಿಮಗೆ ಮಂತ್ರಿ ಸ್ಥಾನ ನೀಡಿ ಎಂದು ಪರೋಕ್ಷವಾಗಿ ಕೋರಿದ್ದೀರಿ?

ಇಲ್ಲ. ನನಗೆ ಮಂತ್ರಿ ಸ್ಥಾನ ಕೊಡಿ ಎಂಬುದು ನನ್ನ ವಾದವಲ್ಲ. ಆದರೆ ಅಧಿಕಾರ ಅನುಭವಿಸದೇ ಇರುವವರನ್ನೂ ಪರಿಗಣಿಸಲಿ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಸಚಿವ ಸ್ಥಾನದ ಅವಧಿಯನ್ನು 20-ಟ್ವೆಂಟಿ ಸೂತ್ರಕ್ಕೆ ಸೀಮಿತಗೊಳಿಸಿ. ಆಗ ಎಲ್ಲರಿಗೂ ಅವಕಾಶ ಸಿಗುತ್ತದೆ. ಅದೇ ರೀತಿ ನಿಗಮ-ಮಂಡಳಿ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳಿಗೂ ಶೀಘ್ರ ನೇಮಕವಾಗಲಿ. ನಿಗಮ-ಮಂಡಳಿಗೆ ಕಾರ್ಯಕರ್ತರನ್ನೇ ನೇಮಕ ಮಾಡಲಿ. ಶಾಸಕರಿಗೆ ಬೇಡ ಎಂದು ಹೇಳಿದ್ದೇನೆ.

 ಆದರೆ ನೀವು ಮಾಜಿ ಸಿಎಂ ಮಕ್ಕಳಿಗೆ ಅಧಿಕಾರ ಕೊಟ್ಟಿದ್ದು ತಪ್ಪೆಂದು ಮಧು ಬಂಗಾರಪ್ಪ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೇಳಿದ್ದಲ್ಲವೇ? ಬಂಗಾರಪ್ಪನವರ ಶಿಷ್ಯರಾದರೂ ನಿಮ್ಮ ಬಗ್ಗೆ ಅವರಿಗ್ಯಾಕೆ ಬೇಸರ?

ನಾನು ಯಾರದ್ದಾದರೂ ಹೆಸರು ಹೇಳಿದ್ದೇನಾ? ಅವರಿಗೆ ನನ್ನ ಬಗ್ಗೆ ಬೇಸರವಿದ್ದರೆ ನೀವು ಅವರ ಬಳಿಯೇ ಕೇಳಿ. ನಾನು ಬಂಗಾರಪ್ಪನವರ ಶಿಷ್ಯ ಎಂಬುದು ನನಗೆ ಗೊತ್ತು. ಅವರಿಗೆ ಗೊತ್ತಿದೆಯೋ, ಇಲ್ಲವೋ.

 ನಿಮ್ಮ ಬಗ್ಗೆ ಬೇಸರವಿಲ್ಲದೇ ಇದ್ದರೆ ಜಿಲ್ಲೆಯಲ್ಲಿ ನಡೆಯುವ ಸಭೆಗಳಿಗೆ ಯಾಕೆ ಆಹ್ವಾನ ನಿಮಗಿಲ್ಲ?

ಅವರು ಕರೆಯದೇ ಹೋದರೆ ನನಗೆ ಯಾವ ಚಿಂತೆಯೂ ಇಲ್ಲ. ಬೇಳೂರು ಗೋಪಾಲಕೃಷ್ಣ ಏನು ಎಂಬುದು ನನ್ನ ಕ್ಷೇತ್ರದ ಜನರಿಗೆ ಗೊತ್ತು. ಉಸ್ತುವಾರಿ ಸಚಿವರು ಕರೆಯದೇ ಇದ್ದ ಮಾತ್ರಕ್ಕೆ ಏನು ಆಗುವುದಿಲ್ಲ. ನನಗೂ ಗೊತ್ತು. ನಾನು ಮೂರು ಬಾರಿ ಶಾಸಕನಾಗಿದ್ದೇನೆ.

 ಇದೆಲ್ಲದರ ಮಧ್ಯೆ ಆಪರೇಷನ್‌ ಕಮಲದ ಚರ್ಚೆ ಮತ್ತೆ ಶುರುವಾಗಿದೆಯಲ್ಲ ?

ಕಾಂಗ್ರೆಸ್‌ ಸರಕಾರಕ್ಕೆ ಏನು ಆಗುವುದಿಲ್ಲ. ಐದು ವರ್ಷ ಸುಭದ್ರ ಆಡಳಿತವನ್ನು ನೀಡುತ್ತೇವೆ. ಆಪರೇಷನ್‌ ಕಮಲ ಮಾಡುವ ದಮ್ಮು, ತಾಕತ್ತು ಇರುವವರು ಬಿಜೆಪಿಯಲ್ಲಿ ಈಗ ಯಾರೂ ಇಲ್ಲ.

 ಅಂಥ ಪ್ರಯತ್ನ ನಡೆಯುತ್ತಿಲ್ಲವೇ ?

ಈ ಹಿಂದೆ ಆಪರೇಷನ್‌ ಕಮಲದ ರೂವಾರಿಗಳಾಗಿದ್ದವರೇ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಬರುತ್ತಾರೆ. ಅಲ್ಲಿ ಎಲ್ಲ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ.

ಸಚಿವ ಸ್ಥಾನಾಕಾಂಕ್ಷಿಯಲ್ಲ, ಎಂದರೆ ಏನನ್ನು ಬಯಸುತ್ತೀರಿ?

ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ. ಸಂಸತ್‌ ಚುನಾವಣ ಅಭ್ಯರ್ಥಿಯಾಗುವುದಕ್ಕೆ ನಾನು ಪ್ರಬಲ ಆಕಾಂಕ್ಷಿ. ಹೀಗಾಗಿ ನನಗೆ ಕೊಡಿ ಎಂದು ಕೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಮೂರು ಬಾರಿ ಶಾಸಕನಾಗಿದ್ದು, ಇಡೀ ಜಿಲ್ಲೆಗೆ ನನ್ನ ಪರಿಚಯವಿದೆ. ನಾನು ಮಾಜಿ ಸಿಎಂ ಬಂಗಾರಪ್ಪನವರ ಶಿಷ್ಯ. ಹಾಲಿ ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ಈಗಾಗಲೇ ಹಲವು ಪ್ರಯೋಗ ನಡೆಸಿದ್ದಾರೆ. ಪ್ರಯೋಜನವಾಗಿಲ್ಲ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಕುಟುಂಬ ವರ್ಗವನ್ನು ಸೋಲಿಸುವ ತಾಕತ್ತು ಇರುವುದು ನೂರಕ್ಕೆ ನೂರರಷ್ಟು ಬೇಳೂರು ಗೋಪಾಲಕೃಷ್ಣನಿಗೆ ಮಾತ್ರ. ಇದು ಪ್ರತಿಯೊಬ್ಬರಿಗೂ ಗೊತ್ತು. ಹೀಗಾಗಿ ನನಗೆ ಟಿಕೆಟ್‌ ಕೊಡಿ ಎಂದು ಎಲ್ಲರಿಗೂ ಕೇಳಿದ್ದೇನೆ.

 ರಾಘವೇಂದ್ರ ಭಟ್‌

 

Advertisement

Udayavani is now on Telegram. Click here to join our channel and stay updated with the latest news.

Next