Advertisement

NEP Vs SEP ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯಕ್ಕೆ ಅನಿವಾರ್ಯವಲ್ಲ

11:24 PM Sep 01, 2023 | Team Udayavani |

ಶಿಕ್ಷಣ ವ್ಯಾಪಾರ ಅಥವಾ ವ್ಯವಹಾರದ ಸರಕು ಅನ್ನುವ ರೀತಿ ನೋಡಲು ಸಾಧ್ಯ ವಿಲ್ಲ. ಶಿಕ್ಷಣ ಅಭಿವ್ಯಕ್ತಿಯ ಮಾಧ್ಯಮ. ಮಾನವ ಬೌದ್ಧಿಕವಾಗಿ ವಿಕಸನಗೊಳ್ಳುವ ಕ್ರಿಯೆಗೆ ಪ್ರೇರಕ ಶಕ್ತಿ. ಶಿಕ್ಷಣದ ಮೂಲಕವೇ ಒಂದು ದೇಶದ ಪ್ರಗತಿ ಅಳೆಯುವ ಕಾಲವಿದು. ಶೈಕ್ಷಣಿಕ­ವಾಗಿಯೇ ನಾವಿಂ ದು ಸ್ವಾತಂತ್ರ್ಯಾ ಅನಂತರ ಮಹತ್ತರ ಸಾಧನೆಗೈದಿರುವ ಹೆಮ್ಮೆ ನಮ್ಮೊಂದಿಗಿದೆ. 21ನೇ ಶತಮಾನ ನಮಗೆ ಬಹಳಷ್ಟು ಬದ ಲಾವಣೆ ತಂದುಕೊಟ್ಟಿದೆ. ವಿಶ್ವ ಮಟ್ಟದಲ್ಲಿ ನಮ್ಮ ಸಾಧನೆ ಅಪಾರ! ಅದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಎಂದರೆ ಚಂದ್ರಯಾನ-3ರ ಅದ್ಭುತ ಯಶಸ್ಸು! ಈ ರೀತಿ ಹಲವು ಕ್ಷೇತ್ರ­ಗಳಲ್ಲಿ ನಾವು ಯಶ ಸಾಧಿಸಿದ್ದೇವೆ, ಸಾಧಿಸುತ್ತಿದ್ದೇವೆ.., ಮುಂದೆಯೂ ಸಾಧಿಸುತ್ತೇವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಬಹುತ್ವ, ಬಹುಸಂಸ್ಕೃತಿ, ಬಹುಭಾಷೆ, ವೈವಿಧ್ಯತೆಯಲ್ಲಿನ ಏಕತೆ.

Advertisement

ಶಿಕ್ಷಣವೆಂಬುವುದು ಸರಕಾರಗಳು ತಮ್ಮ ರಾಜಕೀಯ ನಿಲುವುಗಳಿಗೆ ಸೂಕ್ತವಾಗಿ ರೂಪಿಸುವಂತಹ ಅಜೆಂಡಾ ಆಗ­ಬಾರದು. ಶಿಕ್ಷಣ ನೀತಿ ರಚನೆ ಸರಕಾರಗಳ ಜವಾಬ್ದಾರಿಯುತ ಕಾಯಕ. ಈ ನಿಟ್ಟಿನಲ್ಲಿ ಸರಕಾರಗಳು ಅತ್ಯಂತ ಗಂಭೀರವಾಗಿ ಎಚ್ಚರಿಕೆಯ ಹೆಜ್ಜೆ ಇಟ್ಟಾಗ ಮಾತ್ರ ಉತ್ತಮ ಶಿಕ್ಷಣ ವ್ಯವಸ್ಥೆ ಸಾಧ್ಯ. ನಮ್ಮದು ಬಹು ಭಾಷೆ, ಬಹು ಸಂಸ್ಕೃತಿ ನಾಡು. ನಮ್ಮ ಸಂವಿಧಾನದ ವ್ಯಾಪ್ತಿಯೊಳಗೆ ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ ವ್ಯವಸ್ಥೆ ನಮ್ಮದಾಗಿರಬೇಕು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ನಮ್ಮ ಶಿಕ್ಷಣ ಸಮಾನತೆ, ಸಾಮಾಜಿಕ ನ್ಯಾಯ, ಆರ್ಥಿಕ, ಸಾಂಸ್ಕೃತಿಕ ನೆಲಗಟ್ಟಿನ ಮೇಲೆ ರೂಪುಗೊಳ್ಳಬೇಕು.

ಮೂಲಭೂತವಾಗಿ ಶಿಕ್ಷಣದಲ್ಲಿ ಏನೇ ಬದಲಾವಣೆ ಜಾರಿಗೆ ತರುವಾಗ ಪ್ರಾಥಮಿಕ ಹಂತದಲ್ಲಿ ಬದಲಾವಣೆಗಳು ಆರಂಭಗೊಳ್ಳಬೇಕು. ಶಿಕ್ಷಣದ ತಳಪಾಯ ಭದ್ರವಿದ್ದಾಗ ಮಾತ್ರ ಮುಂದಿನ ಶೈಕ್ಷಣಿಕ ಹಂತಗಳು ಹೆಚ್ಚು ಪ್ರಬಲವಾಗಿ­ರಲು ಸಾಧ್ಯ. ಈ ಹಿಂದಿನ ಬಿಜೆಪಿ ಸರಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಎಂಬುದು ಒಂದು ರಾಜಕೀಯ ಬಂಡವಾಳ ಮಾಡಿ­ಕೊಳ್ಳುವ ಅಸ್ತ್ರವಾಯಿತೇ ಹೊರತು, ಭಾರತದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂತ ವಿಚಾರವಾಗದಿದ್ದದ್ದು ಈಗ ಗೊಂದಲಕ್ಕೆ ಕಾರಣವಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಬಗ್ಗೆ ಗಮನ ಹರಿಸದೆ ಏಕಾಏಕಿ ಯಾವುದೇ ಪೂರ್ವ ತಯಾರಿ ಇಲ್ಲದೆ ಉನ್ನತ ಶಿಕ್ಷಣದಲ್ಲಿ ಎನ್‌ಇಪಿ ಜಾರಿ ಗೊಳಿಸುವ ಆತುರವಾದರೂ ಏಕೆ ಬೇಕಿತ್ತು?

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರೀಕರಣದ ಜತೆಗೆ ರಾಜ್ಯಗಳನ್ನು ಬಲಿಷ್ಠಗೊಳಿಸುವುದು ಅತೀ ಪ್ರಮುಖ ವಾದದ್ದು. ಪ್ರತೀ ರಾಜ್ಯವೂ ತನ್ನದೇ ಆದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಿನ್ನೆಲೆಯನ್ನೊಳಗೊಂಡಿವೆ. ಸಂವಿಧಾನದ ಚೌಕಟ್ಟಿನಲ್ಲಿ ಬಹುತ್ವ- ಸಮಗ್ರತೆ- ಐಕ್ಯತೆ ಹಾಗೂ ಸಾಮಾಜಿಕ ನ್ಯಾಯ­ವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ನೀತಿಗಳು ರೂಪುಗೊಳ್ಳಬೇಕು.

ಆದರೆ ಕೇಂದ್ರ ಸರಕಾರ ಸಂವಿಧಾನ ವಿರೋಧಿ ಧೋರಣೆ ತಾಳಿರುವುದು ದುರಂತ. “ರಾಷ್ಟ್ರೀಯ ಶಿಕ್ಷಣ ನೀತಿ’ ತರುವಾಗ ಅದಕ್ಕೆ ಸೂಕ್ತವಾದ ಮೂಲ­ಸೌಕರ್ಯಗಳು ಅತ್ಯವಶ್ಯಕ. ಸಂವಿಧಾನದ ಮೂಲಭೂತ ಹಕ್ಕಿನ ಪ್ರಕಾರ ಕೇಂದ್ರ ಸರಕಾರ “ಶಿಕ್ಷಣ ನೀತಿ’ ಬಗ್ಗೆ ಒಂದು ವಿಸ್ತೃತ ಚೌಕಟ್ಟು ನೀಡಬಹುದೇ ಹೊರತು ಯಾವುದನ್ನೂ ಬಲವಂತವಾಗಿ ಹೇರುವಂತಿಲ್ಲ. ಈ ಕಾರಣಕ್ಕಾಗಿ ಕೇಂದ್ರದ ಎನ್‌ಇಪಿ ಒಂದು ಮಾರ್ಗಸೂಚಿಯೇ ಹೊರತು ರಾಷ್ಟ್ರೀಯ ಶಿಕ್ಷಣ ನೀತಿ ಆಗುವುದಿಲ್ಲ. ಮೊದಲಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸದೃಢಗೊಳಿಸದೆ ಉನ್ನತ ಶಿಕ್ಷಣಕ್ಕೆ ಕಾಲಿಟ್ಟಿದ್ದೇ ದುರಂತ. ರಾಷ್ಟ್ರೀಯ ಶಿಕ್ಷಣ ನೀತಿ ಪಾಶ್ಚಾತ್ಯದ ನಕಲು ಎಂಬುದು ಸ್ಪಷ್ಟ. 3 ವರ್ಷದ ಪದವಿ ಬದಲಿಗೆ 4 ವರ್ಷದ ಹಾನರ್ಸ್‌ ರೂಪಿಸಿರುವುದು ರಾಜ್ಯದ ಎಸ್‌ಸಿ, ಎಸ್‌ಟಿ, ಹಿಂದುಳಿದ, ಅಲ್ಪಸಂಖ್ಯಾಕ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. 3 ವರ್ಷದ ಪದವಿಗೆ ಬದಲಾಗಿ ಒಂದು ವರ್ಷ ಹೆಚ್ಚು ಓದುವುದು ಆರ್ಥಿಕವಾಗಿ ವಿದ್ಯಾರ್ಥಿಗಳ ಮೇಲೆ ಹೊರೆಬಿದ್ದಿದೆ.

Advertisement

ಅಲ್ಲದೇ ಕಾಲೇಜುಗಳಲ್ಲಿ ಮೂಲ ಸೌರ್ಕಯಗಳಿ­ಲ್ಲದೆ ಮುಕ್ತ ಆಯ್ಕೆಗಳ ವಿಷಯ ಹಾಗೂ ಕೇವಲ ಎರಡು ವಿಷಯಗಳನ್ನು ಮಾತ್ರ ಮೇಜರ್‌ ಆಗಿ ಆಯ್ಕೆ ಮಾಡಿಕೊಳ್ಳು­ವುದು ಒಂದು ರೀತಿ ಅಸಮಾಧಾನಕ್ಕೆR ಕಾರಣವಾಗಿದೆ. ಕೆಲವು ಖಾಸಗಿ ಕಾಲೇಜುಗಳಲ್ಲಿ ಮೂಲ ಸೌಲಭ್ಯಗಳು ಇರಬಹುದು. ಆದರೆ ಸರಕಾರಿ ಕಾಲೇಜುಗಳ ಸ್ಥಿತಿ ಭಿನ್ನವಾಗಿದೆ. ನಮ್ಮ ಕಲಾ ಪದವಿ ಕಾಲೇಜುಗಳಲ್ಲಿ ವಿಜ್ಞಾನ ವಿಷಯಗಳ ಉಪನ್ಯಾಸಕರು ಹೇಗಿರಲು ಸಾಧ್ಯ?
ಮೊದಲನೇಯದಾಗಿ ಎನ್‌ಇಪಿಯನ್ನು ಜಾರಿಗೆ ತಂದ ಕ್ರಮವೇ ಸರಿಯಿಲ್ಲ. ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಿದರೆ ಅದರಿಂದ ಪರಿಣಾಮ ಬೀರುವುದು ವಿದ್ಯಾರ್ಥಿಗಳ ಮೇಲೆ. ಹಿಂದಿನ ಸರಕಾರದ ಅನಾಹುತಕಾರಿ ನಿರ್ಧಾರದಿಂದ ನಾವೀಗ ವಿದ್ಯಾರ್ಥಿಗಳ ಹಿತ ಕಾಪಾಡ­ಬೇಕಾಗಿದೆ. ವಿಕಸನದ ಹಾದಿಯಲ್ಲಿರುವ ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಮೇಲೆ ಬಲ ಪ್ರಯೋಗದ ಮೂಲಕ ಶಿಕ್ಷಣ ವ್ಯವಸ್ಥೆ ಹೇರುವುದನ್ನು ಯಾವ ಸಮಾಜವೂ ಒಪ್ಪಲೂ ಸಾಧ್ಯವಿಲ್ಲ. 3 ವರ್ಷದ ಪದವಿಯನ್ನು 4 ವರ್ಷಕ್ಕೆ, ಬಹು ಆಗಮನ ಮತ್ತು ನಿರ್ಗಮನ (Multiple entry and exit) ಪದ್ಧತಿಯಿಂದ ಕಾಲೇಜು ವಿದ್ಯಾರ್ಥಿಗಳು ಕಾಲೇಜಿನಿಂದ ಶಾಶ್ವತವಾಗಿ ನಿರ್ಗಮಿಸುವ ಸಾಧ್ಯತೆಗಳೇ ಹೆಚ್ಚು. ಪ್ರಥಮ ಅಥವಾ ದ್ವಿತೀಯ ವರ್ಷದ ಪ್ರಮಾಣ ಪತ್ರ ಪಡೆ ದವರಿಗೆ ಯಾವ ಉದ್ಯೋಗ ದೊರಕಲಿದೆ? ಸ್ಪಷ್ಟವಿಲ್ಲ. ಇನ್ನು ಮುಕ್ತ ಆಯ್ಕೆ (Open Electives) ಸಂಬಂಧ­ಪಟ್ಟಂತೆ ಉಪನ್ಯಾಸಕರ ಕೊರತೆ ಹೇಳತೀರದು. ಇನ್ನು ಆನ್‌ಲೈನ್‌ ಶಿಕ್ಷಣಕ್ಕೆ ಒತ್ತು ಕೊಡಲು ಹೋದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸ್ಥಿತಿ ಏನು? ಹೋಗಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಉಪನ್ಯಾಸಕರಿಗೂ ತರಬೇತಿಯನ್ನು ನೀಡಿಲ್ಲ. ಅವರ ಅಭಿಪ್ರಾಯ ಪಡೆದಿಲ್ಲ. ಈ ಕಾರಣಗಳಿಂದ ಈಗ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಹೀಗೆ ಹಲವಾರು ರೀತಿ ಗೊಂದಲದ ಗೂಡಾಗಿರುವ ಎನ್‌ಇಪಿಯನ್ನು ರಾಜ್ಯ ಸರಕಾರ ಒಪ್ಪಲು ಸಾಧ್ಯವಿಲ್ಲ. ಉದಾರೀ ಕರಣ, ಜಾಗತೀಕರಣದ ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಮಾರ್ಪಡುಗಳಾಗಿರಬಹುದು. ಕೆಲವು ಬದಲಾವಣೆ ಆವಶ್ಯಕವು ಆಗಿರಬಹುದು. ಹಾಗಾಗಿ ಪೂರ್ವ ತಯಾರಿ ಜತೆ ಸಂವಿಧಾನ ವ್ಯಾಪ್ತಿಗೆ ಒಳಪಟ್ಟು ಸರ್ವರಿಗೂ ಸಲ್ಲುವಂತ ಶಿಕ್ಷಣ ರೂಪಿಸುವುದು ಈಗ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾನೂನುಬದ್ಧ, ಸಂವಿಧಾನ ಬದ್ಧ ಸರ್ವರಿಗೂ ಸಲ್ಲುವಂತ ಉದ್ಯೋಗ ಆಧಾರಿತವಾದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ರಾಜ್ಯ ಶಿಕ್ಷಣ ನೀತಿ ರೂಪಿಸಲು ಮುಂದಾಗಿದೆ. ದೇಶ ಹಾಗೂ ರಾಜ್ಯದ ಆಸ್ಮಿತೆ ಒಳಗೊಂಡಂತೆ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್‌ ಅವರ ನಾಡಿನಲ್ಲಿ ಸಂವಿ ಧಾನ ಆಶಯಗಳಿಗೆ ಧಕ್ಕೆಯಾಗದಂತೆ ಸಮಾನತೆ -ಸಮಾನ ಅವಕಾಶ ಸಾಮಾಜಿಕ ನ್ಯಾಯ, ಜಾತ್ಯತೀತ ಮನೋ ಭಾವದ ಎಸ್‌ಇಪಿ ರೂಪಿಸಲು ನಮ್ಮ ಸರಕಾರ ಹೆಜ್ಜೆ ಇಟ್ಟಿದೆ. 70 ವರ್ಷಗಳಿಂದ ಸದೃಢವಾಗಿರುವ ನಮ್ಮ ಶಿಕ್ಷಣ ನೀತಿಯನ್ನು ಬುಡಮೇಲು ಮಾಡುವ ಕೇಂದ್ರ ಸರಕಾರದ ನಿಲುವಿಗೆ ನಮ್ಮ ವಿರೋಧವಿದೆ. ಈ ಹಿಂದಿನ ಎಲ್ಲ ಶಿಕ್ಷಣ ನೀತಿಗಳ ಜತೆಗೆ ಎನ್‌ಇಪಿಯಲ್ಲಿ ಉತ್ತಮವಾದ ಅಂಶಗಳಿದ್ದರೆ ಸ್ವೀಕರಿಸಲು ನಮ್ಮ ಸರಕಾರ ಮುಕ್ತವಾಗಿದೆ. ವಿವಿಧ ಕ್ಷೇತ್ರದ ಗಣ್ಯರು, ವಿದ್ಯಾರ್ಥಿ ಗಳು, ನ್ಯಾಯಾಧೀಶರು ವಿಜ್ಞಾನಿಗಳು ಸಾಹಿತಿ­ಗಳು, ಬುದ್ಧಿ ಜೀವಿಗಳೊಂದಿಗೆ ಚರ್ಚಿಸಿ ಎಸ್‌ಇಪಿಯನ್ನು ದೇಶದಲ್ಲೇ ಮಾದರಿಯಾಗಿ ರೂಪಿಸಲು ಬದ್ಧರಾಗಿದ್ದೇವೆ.

– ಡಾ| ಎಂ.ಸಿ. ಸುಧಾಕರ್‌,
ಉನ್ನತ ಶಿಕ್ಷಣ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next