Advertisement

ತಿರುವಿನಲ್ಲಿ ಬೇಕು ಸುಸಜ್ಜಿತ ತಡೆಗೋಡೆ

02:39 AM Mar 31, 2019 | Team Udayavani |

ಸಿದ್ದಾಪುರ: ಶಿವಮೊಗ್ಗ ಜಿಲ್ಲೆಯನ್ನು ಉಡುಪಿಯೊಂದಿಗೆ ಬೆಸೆಯುವ ಹುಲಿಕಲ್‌ ಘಾಟಿ ರಸ್ತೆಯ ಬಾಳೆಬರೆ ಶ್ರೀ ಚಂಡಿಕಾಂಬಾ ದೇವಸ್ಥಾನ ಬಳಿಯ “ಯು’ ತಿರುವಿನಲ್ಲಿ ತಡೆ ಬೇಲಿ ಸಂಪೂರ್ಣ ಜಖಂಗೊಂಡಿದೆ.

Advertisement

ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಆಪಾಯವನ್ನು ಆಹ್ವಾನಿಸುವಂತಿದೆ. ಆಗುಂಬೆ ಘಾಟಿ ರಸ್ತೆ ದುರಸ್ತಿಗಾಗಿ ಎಪ್ರಿಲ್‌ 1ರಿಂದ ಬಂದ್‌ ಆಗಲಿರುವುದರಿಂದ ಹುಲಿಕಲ್‌ ರಸ್ತೆ ಮೇಲೆ ಒತ್ತಡ ಹೆಚ್ಚಲಿದೆ.

ಇದು ಬಳ್ಳಾರಿ-ದಾವಣಗೆರೆ ಕಡೆಯಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಘಾಟಿ ರಸ್ತೆಯೂ ಹೌದು. ಇಲ್ಲಿ ಅಪಾಯ ಹೆಚ್ಚಿದ್ದು, ಶಾಶ್ವತ ಬೇಲಿ ಆಗುವುದಿರಲಿ. ನಿತ್ಯ ಸಾವಿರಾರು ವಾಹನಗಳ ಸಂಚಾರವಿದ್ದರೂ ತಡೆ ಬೇಲಿಯನ್ನು ಕನಿಷ್ಠ ದುರಸ್ತಿಯನ್ನೂ ನಡೆಸಿಲ್ಲ. ಘಾಟಿ ರಸ್ತೆಯನ್ನು ಅಲ್ಲಲ್ಲಿ ಅಗಲಗೊಳಿಸಿ ಕಾಂಕ್ರೀಟ್‌ ಹಾಕಲಾಗಿದೆ. ಆದರೆ ದೇವಸ್ಥಾನ ಬಳಿಯ ತಿರುವು ಮಾತ್ರ ಹಾಗೆಯೇ ಇದೆ. ಇಲ್ಲಿ ರಸ್ತೆ ಎರಡು ವಾಹನಗಳು ಒಮ್ಮೆಗೆ ಚಲಿಸುವಷ್ಟೂ ವಿಶಾಲವಾಗಿಲ್ಲ.

ಇಷ್ಟೇ ಅಲ್ಲ; ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲ. ಒಂದೆಡೆ ಬಂಡೆಗಲ್ಲುಗಳ ಗುಡ್ಡವಾದರೆ, ಇನ್ನೊಂದೆಡೆ ಚರಂಡಿ ನಿರ್ಮಿಸಲು ಅಡ್ಡಿಯಾಗಿ ಸಾವಿರ ಅಡಿಗೂ ಆಳವಾದ ಕಂದಕವಿದೆ. ರಸ್ತೆಯ ಇಕ್ಕೆಲಗಳಲ್ಲಿ ಬೃಹದಾಕಾರದ ಮರಗಳು, ಪೊದೆಗಳಿಂದಾಗಿ ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದೇ ಅಪಘಾತಗಳು ಸಂಭವಿಸುತ್ತವೆ.

ಪ್ರತಿದಿನ ಸಾವಿರಾರು ವಾಹನ
ನಿತ್ಯವೂ ಸರಿಸುಮಾರು 1,500ಕ್ಕೂ ಹೆಚ್ಚು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಭಾರೀ ಗಾತ್ರದ ಲಾರಿಗಳು, ಮಂಗಳೂರಿನಿಂದ ಶಿವಮೊಗ್ಗ ಮತ್ತು ಇನ್ನಿತರ ಜಿಲ್ಲೆಗಳಿಗೆ ಇಂಧನ ಒಯ್ಯುವ ಟ್ಯಾಂಕರ್‌ಗಳೂ ಇದೇ ರಸ್ತೆ ಬಳಸುತ್ತವೆ. ವಾಹನ ದಟ್ಟಣೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದರೂ ರಸ್ತೆಯ ಸ್ವರೂಪ ಬದ ಲಾಗಿಲ್ಲ.

Advertisement

ರಸ್ತೆಯ ಒಂದು ಪಾರ್ಶ್ವದಲ್ಲಿ ಸಮಾರು 6 ಕಿ.ಮೀ.ವರೆಗೆ ಸಾವಿರ ಅಡಿಗೂ ಅಧಿಕ ಆಳದ ಪ್ರಪಾತವಿದೆ. ಇದಕ್ಕೆ ಅಡ್ಡಲಾಗಿ ನಿರ್ಮಿಸಿದ ತಡೆಗೋಡೆ ಅಲ್ಲಲ್ಲಿ ಮುರಿದು ಬಿದ್ದಿದೆ. ಕೆಲವೆಡೆ ತಡೆ ನಿರ್ಮಾಣ ಸಮರ್ಪಕವಾಗಿ ಆಗಿಯೇ ಇಲ್ಲ.

ರಾ. ಹೆ. ವಾಹನಗಳು ಇತ್ತ
ಕಳೆದ ಮಳೆಗಾಲದಲ್ಲಿ ಸಂಪಾಜೆ, ಶಿರಾಡಿ ಘಾಟಿ ರಸ್ತೆಗಳು ಕುಸಿದ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನೆಲೆ ಯಲ್ಲಿ ಅವು ಬಾಳೆಬರೆ ಘಾಟಿಯನ್ನು ಆಶ್ರಯಿಸುತ್ತಿವೆ. ಈ ರಸ್ತೆಯ ಮೇಲೆ ಒತ್ತಡ ಹೆಚ್ಚಲು ಇದೂ ಒಂದು ಕಾರಣ. ಅಪಾಯಕಾರಿ ತಿರುವುಗಳು, ಹದಗೆಟ್ಟ ರಸ್ತೆ, ನಿರ್ವಹಣೆಯ ಕೊರತೆ ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸಿವೆ.

ನಾವು ನಿತ್ಯವೂ ಈ ರಸ್ತೆಯ ಮೂಲಕ ಓಡಾಡುತ್ತೇವೆ. ನಮಗೆ ರಸ್ತೆಯ ತಿರುವು ಮತ್ತು ಅಗಲದ ಬಗ್ಗೆ ಮಾಹಿತಿ ಇದ್ದರೂ ವಾಹನ ಓಡಿಸಲು ಭಯವಾಗುತ್ತದೆ. ಹೊಸಬರಿಗೆ ತಿರುವುಗಳ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಅಪಘಾತವಾಗುತ್ತದೆ. ಇದನ್ನು ತಪ್ಪಿಸಲು ಶಾಶ್ವತ ತಡೆಗೋಡೆ ಮತ್ತು ಸೂಚನಾ ಫಲಕಗಳು ಬೇಕು.
– ದಿನಕರ, ಗ್ಯಾಸ್‌ ಲಾರಿ ಚಾಲಕ

ಹೊಸ ಕಾಮಗಾರಿ ಇಲ್ಲ. ಮಾರ್ಚ್‌ ತಿಂಗಳಾದ್ದರಿಂದ ಎಲ್ಲ ಕಾಮಗಾರಿ ಗಳು ಮುಗಿದಿವೆ. ಹೊಸದಾಗಿ ತಡೆಗೋಡೆ ನಿರ್ಮಾಣದ ಬಗ್ಗೆ ಸರಕಾರಕ್ಕೆ ಬರೆಯುತ್ತೇವೆ. ಸರಕಾರದಿಂದ ಒಪ್ಪಿಗೆ ಬಂದ ಮೇಲೆ ಕಾಮಗಾರಿ ಆರಂಭಿಸುತ್ತೇವೆ. ಇದರ ಆರಂಭಕ್ಕೆ ಕನಿಷ್ಠ 6 ತಿಂಗಳಾದರೂ ಬೇಕಾಗುತ್ತದೆ.
– ಶೇಷಪ್ಪ, ಎಇಇ, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next