Advertisement

ಸದ್ಯಕ್ಕೆ ಬ್ರೇಕ್ ಬೇಕು

03:59 PM May 30, 2019 | sudhir |

“ಒಂಬತ್ತು ವರ್ಷಗಳ ವೃತ್ತಿಪಯಣಕ್ಕೆ ಕುಪ್ಪುಸ್ವಾಮಿ ಅಣ್ಣಾಮಲೈ ವಿದಾಯ ಹೇಳಿದ್ದಾರೆ. ಪ್ರಾಮಾಣಿಕತೆ, ದಕ್ಷ ಅಧಿಕಾರಿ ಎಂದು ಕರೆಸಿಕೊಂಡು ಸೇವೆ ಸಲ್ಲಿಸಿದ, ಪ್ರತಿ ಜಾಗದಲ್ಲೂ ಹೊಸತನದ ಹೆಜ್ಜೆಗುರುತು ಮೂಡಿಸಿದ, ಕೆಳಹಂತದ ಸಿಬ್ಬಂದಿಯನ್ನು ಪ್ರೀತಿಸಿದ, ಪೀಪಲ್‌ ಫ್ರೆಂಡ್ಲಿ ಪೊಲೀಸ್‌ ಎಂಬ ಪದಕ್ಕೆ ಅನ್ವರ್ಥವಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ವೈಯಕ್ತಿಕ ಕಾರಣ ನೀಡಿ ಪೊಲೀಸ್‌ ಸೇವೆಗೆ ಗುಡ್‌ಬೈ ಹೇಳಿದ್ದಾರೆ. ರಾಜ್ಯದ ಜತೆಗಿನ ತಮ್ಮ ಭಾಂಧವ್ಯ, ತಮ್ಮ ರಾಜೀನಾಮೆಗೆ ಕಾರಣ, ಮುಂದಿನ ಜೀವನದ ಆಯ್ಕೆ ಅವಕಾಶಗಳ ಬಗ್ಗೆ ‘ಉದಯವಾಣಿ’ ವಿಶೇಷ ಸಂದರ್ಶನದಲ್ಲಿ ಹೇಳಿರುವುದಿಷ್ಟು…

Advertisement

– ಪೊಲೀಸ್‌ ಸೇವೆಯ ಒಂಬತ್ತು ವರ್ಷಗಳ ಪಯಣ ಹೇಗಿತ್ತು?
ಜೀವನದಲ್ಲಿ ಇದೊಂದು ಅದ್ಭುತ ಪಯಣ, ಸೇವೆಯ ಪ್ರತಿಕ್ಷಣವನ್ನು ಸಂತೋಷದಿಂದ ಅನುಭವಿಸಿದ್ದೇನೆ. ಸವಾಲುಗಳನ್ನು ಮೆಟ್ಟಿನಿಂತಿದ್ದೇನೆ. ಕೈಲಾದ ಮಟ್ಟಿಗೆ ಪ್ರಾಮಾಣಿಕವಾಗಿ ಸಮಸ್ಯೆಗಳನ್ನು ಪರಿಹಾರ ಮಾಡಿದ ಸಂತೃಪ್ತಿಯಿದೆ. ಆದರೆ, ಕೆಲವೊಂದು ತ್ಯಾಗಗಳನ್ನು ಮಾಡಿದ್ದೇನೆ. ಒಟ್ಟಾರೆ ಶೇ.80ರಷ್ಟು ವೃತ್ತಿ ತೃಪ್ತಿ ಸಿಕ್ಕಿದೆ ಎನ್ನಬಹುದು.

– ಕರ್ನಾಟಕದ ಬಗ್ಗೆ ನಿಮ್ಮ ಅಭಿಪ್ರಾಯ?
2013ರ ಸೆಪ್ಟೆಂಬರ್‌ 11ರಂದು ಬ್ಯಾಗ್‌ ಹಿಡಿದುಕೊಂಡು ಉಡುಪಿ ಬಸ್‌ನಿಲ್ದಾಣದಲ್ಲಿ ಇಳಿದವನು ನಾನು. ಅಲ್ಲಿಂದ ಇಲ್ಲಿಯವರೆಗೂ ನಾಡಿನ ಜನರು ನನ್ನನ್ನು ಪೊರೆದಿದ್ದಾರೆ, ಅಗಾಧವಾದ ಪ್ರೀತಿ, ಭರವಸೆ ತುಂಬಿದ್ದಾರೆ. ಕೆಲವೊಮ್ಮೆ ಎಡವಿದಾಗ ಎಚ್ಚರಿಸಿದ್ದಾರೆ, ತಿದ್ದಿದ್ದಾರೆ. ರಾಜ್ಯದಲ್ಲಿ ಸೇವೆ ಸಲ್ಲಿಸಲು ಸಿಕ್ಕಿದ್ದು ನನ್ನ ಪುಣ್ಯ, ಎಲ್ಲ ರಾಜಕೀಯ ನಾಯಕರೂ ಸಹಕಾರ ನೀಡಿದ್ದಾರೆ. ನಾನು ಸೇವೆಯಿಂದ ಮಾತ್ರವೇ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ರಾಜ್ಯದ ಜತೆಗಿನ ನನ್ನ ಅವಿನಾಭಾವ ಸಂಬಂಧ ಮುಂದುವರಿಯಲಿದೆ.

– ಇಲಾಖೆಯಲ್ಲಿ ಮಾಡದೇ ಉಳಿದುಹೋದ ನಿಮ್ಮ ಕನಸುಗಳೇನು?
ಸಿಕ್ಕ ಅವಕಾಶದಲ್ಲಿ ಕೆಲವೊಂದನ್ನು ಪೂರ್ಣಗೊಳಿಸಿದ್ದೇನೆ. ಆದರೆ, ಕ್ರಿಮಿನಲ್‌ ರಿಫಾರ್ಮೇಶನ್‌ (ಅಪರಾಧಿಕ ಸುಧಾರಣೆ) ತರುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಿದ್ದೆ. ಪ್ರಮುಖವಾಗಿ ಅಪ್ರಾಪ್ತರು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಲು ಪರಿಹಾರಗಳನ್ನು ಹುಡುಕಬೇಕಿತ್ತು ಅದು ಅರ್ಧಕ್ಕೆ ನಿಂತುಬಿಡುತ್ತದೇನೋ…

– ಸೇವಾ ಅವಧಿಯಲ್ಲಿ ಎಂದಾದರೂ ಹಿತಾಸಕ್ತಿ ಸಂಘರ್ಷ ಕಾಡಿತ್ತೇ?
ನನಗೆ ಯಾವತ್ತಿಗೂ ಆ ರೀತಿಯ ಭಾವನೆ ಕಾಡಿಲ್ಲ. ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು, ರಾಜಕೀಯ ನಾಯಕರು, ಸಾರ್ವಜನಿಕರೂ ಎಲ್ಲರೂ ಸಹಕಾರ ನೀಡಿದ್ದಾರೆ. ವೃತ್ತಿಪಯಣದ ಹಾದಿಯುದ್ದಕ್ಕೂ ಸಹಕರಿಸಿದವರಿಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ.

Advertisement

– ರಾಜೀನಾಮೆಯಂಥ ದಿಢೀರ್‌ ನಿರ್ಧಾರದ ಹಿಂದಿರುವ ರಹಸ್ಯ ಏನು?
ರಹಸ್ಯ ಏನು ಇಲ್ಲ. ನನಗೆ ಸದ್ಯಕ್ಕೆ ಬ್ರೇಕ್‌ ಬೇಕಾಗಿದೆ. ಆರು ತಿಂಗಳ ಹಿಂದೆಯೇ ರಾಜೀನಾಮೆ ಬಗ್ಗೆ ಆಲೋಚಿಸಿ ಕುಟುಂಬ, ಹಿತೈಷಿಗಳು, ಹಿರಿಯ ಅಧಿಕಾರಿಗಳು ಎಲ್ಲರ ಜತೆ ಚರ್ಚಿಸಿ ಅತ್ಯಂತ ಸಂತೋಷದಿಂದ ಹೊರಹೋಗುತ್ತಿದ್ದೇನೆ. ನನ್ನದೇ ಆದ ವೈಯಕ್ತಿಕ ಜೀವನ ಇದೆ. ಅದಕ್ಕೆ ಸಮಯಕೊಡಬೇಕು. ಬದುಕು ತುಂಬಾ ಚಿಕ್ಕದು.. ನಾವು ಬೇರೇನೋ ಮಾಡುವುದಿದೆ ಎಂದ ತಕ್ಷಣ ಕಂಫ‌ರ್ಟ್‌ ಜೋನ್‌ನಿಂದ ಹೊರಬರಬೇಕು.

– ರಾಜಕೀಯಕ್ಕೆ ಬರುತ್ತೀರಾ? ಮುಂದಿನ ಪಯಣ ಹೇಗಿರಲಿದೆ?
ಈ ಹಂತದಲ್ಲಿ ನಾನೂ ಏನನ್ನೂ ಹೇಳುವುದಿಲ್ಲ. ಆದರೆ, ಸಾರ್ವಜನಿಕ ಜೀವನದಲ್ಲಿಯೇ ಇರುತ್ತೇನೆ ಮತ್ತಷ್ಟು ಸ್ವತಂತ್ರವಾಗಿ ಕೆಲಸ ಮಾಡುತ್ತೇನೆ. ಒಂದಷ್ಟು ಕಾಲ ಕುಟುಂಬದ ಜತೆ ಕಾಲ ಕಳೆಯಬೇಕು. ಮುಂದೆ ಯಾವುದನ್ನು ಮಾಡಬೇಕು ಎಂಬುದರ ಬಗ್ಗೆ ನನಗೆ ಕ್ಲಾರಿಟಿ ಸಿಗಬೇಕು ನಂತರವಷ್ಟೇ ನಿಖರವಾಗಿ ಹೇಳುತ್ತೇನೆ. ಹೀಗಾಗಿ ಈಗಲೆ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ.

– ಅಣ್ಣಾಮಲೈ ಪ್ರತಿಪಾದಿಸುವ ಸಿದ್ಧಾಂತಗಳೇನು?
ಸಮಾನತೆ, ನಾಲ್ಕು ಜನಕ್ಕೆ ಸಹಾಯ, ಮನಸ್ಸು ಏನು ಹೇಳುತ್ತೋ ಅದನ್ನು ಕೇಳುತ್ತೇನೆ… ಇವಿಷ್ಟೇ ನನಗೆ ಗೊತ್ತಿರೋದು. ಚಿಕ್ಕಂದಿನಿಂದಲೂ ಈ ಅಂಶಗಳು ಪಾಲಿಸಿದ್ದೇನೆ. ಮುಂದೆಯೂ ಪಾಲಿಸಲಿದ್ದೇನೆ.

– ಮಧುಕರ್‌ ಶೆಟ್ಟರ ಸಾವು ಯಾವ ರೀತಿ ಪ್ರಭಾವ ಬೀರಿದೆ?
ಮಧುಕರ್‌ ಶೆಟ್ಟಿ ಸರ್‌ ಸಾವು ದುರದೃಷ್ಟಕರ ಸಂಗತಿ. ಅವರನ್ನು ಕಳೆದುಕೊಂಡೆವು. ಅವರ ಸಾವಿನ ದಿನ ನನಗೆ ಅನಿಸಿದ್ದು, ಒಳ್ಳೇತನಕ್ಕೇ ಕಷ್ಟಗಳು ಹೆಚ್ಚು.

– ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next