Advertisement

ಉಷಾ ಪತಿ ಉಪರಾಷ್ಟ್ರಪತಿ? ಎನ್‌ಡಿಎ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು

03:59 AM Jul 18, 2017 | |

ನವದಹೆಲಿ: “ನಾನು ರಾಷ್ಟ್ರಪತಿ, ಉಪರಾಷ್ಟ್ರಪತಿಯಾಗುವುದಿಲ್ಲ; ಉಷಾ ಪತಿಯಾಗಿಯೇ ಇರುತ್ತೇನೆ” ಎಂದು ತಿಂಗಳ ಹಿಂದೆ ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಮುಪ್ಪಾವರಪು ವೆಂಕಯ್ಯ ನಾಯ್ಡು ಈಗ ಅಧಿಕೃತವಾಗಿ ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ.

Advertisement

ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಸ್ಥಾನದ ಚುನಾವಣಾ ಪ್ರಕ್ರಿಯೆ ಆರಂಭವಾಗುವುದಕ್ಕೆ ಮೊದಲು ಎನ್‌ಡಿಎ ವಲಯದಲ್ಲಿ ನಾಯ್ಡು ಹೆಸರು ಚಾಲ್ತಿಯಲ್ಲಿತ್ತು. ಇದೀಗ ಅದರಂತೆಯೇ ಆಗಿ ಹೋಗಿದೆ. ಉಷಾ ಪತಿ (ಸಚಿವ ನಾಯ್ಡು ಪತ್ನಿಯವರ ಹೆಸರು) ವೆಂಕಯ್ಯ ನಾಯ್ಡು ಅವರು ಆ.5ರಂದು ನಡೆಯಲಿರುವ ಉಪ-ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರು ಮಂಗಳವಾರ ಬೆಳಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆಯ ಬಳಿಕ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಈ ಮಾಹಿತಿ ನೀಡಿದರು. ಎನ್‌ಡಿಎ ಪಾಲುದಾರ ಪಕ್ಷಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಿಯೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೋವಿಂದ್‌ ಆಯ್ಕೆ ಮಾದರಿಯೇ?: ರಾಷ್ಟ್ರಪತಿ ಸ್ಥಾನಕ್ಕೆ ಪ್ರತಿಪಕ್ಷಗಳು ಯಾರನ್ನು ಆಯ್ಕೆ ಮಾಡಬೇಕು ಎಂದು ಚಿಂತನೆ ನಡೆಸುತ್ತಿರುವಂತೆಯೇ ಹಲವು ಸಂಭಾವ್ಯ ಹೆಸರುಗಳ ನಡುವೆ ಅಚ್ಚರಿಯ ಘೋಷಣೆಯಾದದ್ದು ಬಿಹಾರ ರಾಜ್ಯಪಾಲ ರಾಮನಾಥ್‌ ಕೋವಿಂದ್‌ರನ್ನು. ಅದೇ ಮಾದರಿಯ ದಾಳವನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಆ.5ರಂದು ನಡೆಯುವ ಉಪರಾಷ್ಟ್ರಪತಿ ಸ್ಥಾನದ ಚುನಾವಣೆಯಲ್ಲೂ ಮಾಸ್ಟರ್‌ ಸ್ಟ್ರೋಕ್‌ ನೀಡಿದ್ದಾರೆ.

ಸದ್ಯ ನಗರಾಭಿವೃದ್ಧಿ ಸಚಿವರಾಗಿರುವ ನಾಯ್ಡು, ಎಲ್ಲ ಮಿತ್ರ ಪಕ್ಷಗಳ ಜತೆ ಒಡನಾಟ ಇಟ್ಟುಕೊಂಡವರು. ಅಲ್ಲದೆ, ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸದನದ ಒಳಗೆ ಮತ್ತು ಹೊರಗೆ ಗಮನಸೆಳೆಯುವ ವ್ಯಕ್ತಿತ್ವ ಅವರದ್ದು. ದಕ್ಷಿಣ ಭಾರತದಿಂದ ಬಿಜೆಪಿಗೆ ಸಮರ್ಥ ನಾಯಕರಿಲ್ಲ ಎಂಬ ಕೊರಗನ್ನು ನೀಗಿಸಿದವರು ನಾಯ್ಡು.  ಇವರ ಆಯ್ಕೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “”ನನಗೆ ವೆಂಕಯ್ಯ ನಾಯ್ಡುಗಾರು ಹಲವು ವರ್ಷಗಳಿಂದ ಪರಿಚಿತರು. ರೈತನ ಮಗನಾಗಿರುವ ಅವರು  ಕಠಿಣ ಪರಿಶ್ರಮಿ. ಉಪರಾಷ್ಟ್ರಪತಿಗೆ ಅವರು ಸಮರ್ಥ ಅಭ್ಯರ್ಥಿ” ಎಂದು ಹೇಳಿದ್ದಾರೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ನಿಟ್ಟಿನಿಂದ ಈ ಆಯ್ಕೆ ಬಹಳ ಮುಖ್ಯವಾಗಿದೆ. 1998ರಿಂದ ಕರ್ನಾಟಕದಿಂದ ಸತತವಾಗಿ ರಾಜ್ಯಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದಾರೆ. ನಾಲ್ಕನೇ ಬಾರಿಗೆ ರಾಜಸ್ಥಾನದಿಂದ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳ ಜತೆಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದಾರೆ. ಹಾಲಿ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮೇಲ್ಮನೆಯಲ್ಲಿ ಬಹುಮತ ಇಲ್ಲ. ಪ್ರಮುಖ ವಿಧೇಯಕಗಳ ಅಂಗೀಕಾರಕ್ಕೆ ಪ್ರತಿಪಕ್ಷಗಳ ನೆರವು ಬೇಕೇ ಬೇಕು. ಜತೆಗೆ ರಾಜ್ಯಸಭೆಯಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿರುವುದರಿಂದ ಅಲ್ಲಿನ ನಡಾವಳಿಗಳ ಬಗ್ಗೆ ತಿಳಿವಳಿಕೆಯ ಬಗ್ಗೆ ಹೆಚ್ಚಿನ ಜ್ಞಾನವೂ ಇರುವುದು ಮತ್ತೂಂದು ಕಾರಣ.

Advertisement

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾಗೆ ಅತ್ಯಂತ ಆಪ್ತರಾಗಿರುವುದೂ ಕೂಡ ಎಂ. ವೆಂಕಯ್ಯನಾಯ್ಡು ಅವರಿಗೆ ಧನಾತ್ಮಕವಾಗಿಯೂ ಪರಿಣಮಿಸಿದೆ.  ಹಾಲಿ ಕೇಂದ್ರ ಸಚಿವ ಸಂಪುಟದಲ್ಲಿ ನಾಯ್ಡು ಐದನೇ ಹಿರಿಯ ಸಚಿವರಾಗಿದ್ದಾರೆ. ಪ್ರಧಾನವಾಗಿರುವ ಋಣಾತ್ಮಕ ಅಂಶವೆಂದರೆ ಹಿಂದಿನ ಹಲವು ಸಂದರ್ಭಗಳಲ್ಲಿ ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾಗ ಅವರನ್ನು ಪ್ರಬಲವಾಗಿಯೇ ಸಮರ್ಥನೆ ಮಾಡಿಕೊಂಡು ಮಾತನಾಡುತ್ತಿದ್ದರು. ನಾಯ್ಡು ಉಪರಾಷ್ಟ್ರಪತಿಯಾಗುವುದರಿಂದ ಸರ್ಕಾರಕ್ಕೆ ಕೊಂಚ ಹಿನ್ನೆಡೆಯಾಗಬಹುದೆಂದು ವಿಶ್ಲೇಷಿಸಲಾಗುತ್ತದೆ.

ನಾಯ್ಡು ವ್ಯಕ್ತಿಚಿತ್ರ
– ಮುಪ್ಪಾವರಪು ವೆಂಕಯ್ಯ ನಾಯ್ಡು ಹುಟ್ಟಿದ್ದು 1949 ಜು.1
– 1973ರಲ್ಲಿ ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ಗೆ ಸೇರ್ಪಡೆ. 1972ರಲ್ಲಿ ನಡೆದ ಜೆ çಆಂಧ್ರ ಚಳವಳಿಯಲ್ಲಿ ನಾಯಕನಾಗಿ ಹೊರಹೊಮ್ಮಿದ ನಾಯ್ಡು
– 1975ರಲ್ಲಿ ತುರ್ತು ಪರಿಸ್ಥಿತಿ ವೇಳೆ ಜೈಲು ವಾಸ
– 1980-1985ರ ವರೆಗೆ ಯುವ ಮೋರ್ಚಾ ಅಧ್ಯಕ್ಷ
– 1978-1985 – 2 ಬಾರಿ ಹಿಂದಿನ ಆಂಧ್ರಪ್ರದೇಶ ಶಾಸಕರಾಗಿ ಆಯ್ಕೆ
– 1999ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ
– 2002  -2004 ಬಿಜೆಪಿ ಅಧ್ಯಕ್ಷ
– 2005- ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ
– 2004- ಮೋದಿ ಸಂಪುಟದಲ್ಲಿ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ, ಸಂಸದೀಯ ಮತ್ತು ವಾರ್ತಾ ಪ್ರಸಾರ ಖಾತೆ ಸಚಿವ
ಪತ್ನಿ ಉಷಾ
ಇಬ್ಬರು ಮಕ್ಕಳು
ವಿದ್ಯಾಭ್ಯಾಸ- ಆಂಧ್ರ ವಿವಿಯ ಕಾನೂನು ಕಾಲೇಜಿನಿಂದ ಕಾನೂನು ಪದವಿ

Advertisement

Udayavani is now on Telegram. Click here to join our channel and stay updated with the latest news.

Next