Advertisement

ನಕ್ಸಲ್‌ ಎನ್‌ಕೌಂಟರ್‌; ಚಿಕ್ಕಮಗಳೂರು ಮೂಲದ ಇಬ್ಬರ ಹತ್ಯೆ?

10:06 AM Nov 01, 2019 | Team Udayavani |

ಚಿಕ್ಕಮಗಳೂರು: ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಅಗಳಿ ಗ್ರಾಮದ ಮಂಚಕಟ್ಟಿ ಅರಣ್ಯ ಪ್ರದೇಶದಲ್ಲಿ ಸೋಮವಾರ ನಕ್ಸಲ್‌ ನಿಗ್ರಹ ಪಡೆ(ಎಎನ್‌ಎಫ್‌)ಯ “ಥಂಡರ್‌ ಬೋಲ್ಟ್ ‘ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂಬ ವದಂತಿ ಹರಡಿದೆ.

Advertisement

ಈ ಸುದ್ದಿಯನ್ನು ಮಂಗಳವಾರ ಮಧ್ಯಾಹ್ನ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಹರೀಶ್‌ ಪಾಂಡೆ ದೃಢಪಡಿಸಿದ್ದರಾದರೂ ಬಳಿಕ ಸಂಜೆ ಹೊತ್ತಿಗೆ ಹತರಾದವರು ತಮಿಳುನಾಡು ಮೂಲದವರು ಎಂದು ಗೊತ್ತಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಂಚಕಟ್ಟಿ ಅರಣ್ಯ ಪ್ರದೇಶದಲ್ಲಿ ನಕ್ಸಲರ ಗುಂಪು ಸಭೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಎನ್‌ಎಫ್ ತಂಡ ಕಾರ್ಯಾಚರಣೆ ಮುಂದಾದಾಗ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಡೆಸಿದ ಪ್ರತಿದಾಳಿಯಲ್ಲಿ ಸಿಪಿಎಂ(ಮಾರ್ಕ್ಸಿಸ್ಟ್‌)ಪಕ್ಷದ ಭವಾನಿ ದಳಂ ತಂಡದ ಸದಸ್ಯರಾದ ಶ್ರೀಮತಿ, ಎ.ಎಸ್‌.ಸುರೇಶ್‌ ಮತ್ತು ಕಾರ್ತಿ ಹತರಾಗಿದ್ದಾರೆ ಎಂದು ಹೇಳಲಾಗಿತ್ತು.

ಈ ಪೈಕಿ ಶ್ರೀಮತಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದವಳಾ ಗಿದ್ದಾಳೆ. 2008ರಿಂದ ಮಲೆನಾಡಿನ ನಕ್ಸಲ್‌ ಚಳವಳಿಯಲ್ಲಿ ಸಕ್ರಿಯಳಾಗಿದ್ದಳು. ಸುರೇಶ್‌ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನಾಗಿದ್ದು, 2004ರಲ್ಲೇ ನಕ್ಸಲ್‌ ಚಳವಳಿಗೆ ಸೇರ್ಪಡೆಗೊಂಡಿದ್ದನು. ಸುರೇಶ್‌ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ, ಶೃಂಗೇರಿ, ಆಲ್ದೂರು ಪೊಲೀಸ್‌ ಠಾಣೆಗಳಲ್ಲಿ 21 ಪ್ರಕರಣ ಗಳಿದ್ದರೆ ಶ್ರೀಮತಿ ವಿರುದ್ಧ ಕುದುರೆ ಮುಖ, ಶೃಂಗೇರಿ ಪೊಲೀಸ್‌ ಠಾಣೆ ಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಸುರೇಶ್‌ ಹಾಗೂ ಶ್ರೀಮತಿ ಕಳೆದ ಎರಡು ವರ್ಷಗಳಿಂದ ಕೇರಳದಲ್ಲಿ ನಕ್ಸಲ್‌ ಚಳವಳಿಯಲ್ಲಿ ಸಕ್ರಿಯರಾಗಿದ್ದರು.

ಈ ನಡುವೆ ಇಬ್ಬರು ನಕ್ಸಲರ ಹತ್ಯೆ ವದಂತಿ ಹಿನ್ನೆಲೆಯಲ್ಲಿ ಎಎನ್‌ಎಫ್‌ ಸಿಬಂದಿ ನಕ್ಸಲ್‌ಪೀಡಿತ ತಾಲೂಕಾಗಿರುವ ಶೃಂಗೇರಿಯ ಅರಣ್ಯ ಪ್ರದೇಶಗಳಲ್ಲಿ ಮಂಗಳವಾರ ಕೂಂಬಿಂಗ್‌ ನಡೆಸಿದರು. ಇನ್ನೊಂದೆಡೆ ಸುರೇಶನ ಮೃತದೇಹವನ್ನು ಚಿಕ್ಕಮಗಳೂರಿಗೆ ತರಲು ಜಿಲ್ಲಾಡಳಿತ ಸಹಕರಿಸಬೇಕು ಎಂದು ಆತನ ಸಹೋದರ ಮನವಿ ಮಾಡಿದ್ದರು.

Advertisement

ಕೇರಳದ ಪಾಲಕ್ಕಾಡ್‌ ಜಿಲ್ಲೆ ಅಗಳಿ ಗ್ರಾಮದ ಮಂಚಕಟ್ಟಿ ಅರಣ್ಯ ಪ್ರದೇಶದಲ್ಲಿ ಸೋಮವಾರ ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತರಾಗಿರುವ ನಕ್ಸಲೀಯರಲ್ಲಿ ಜಿಲ್ಲೆಯವರು ಮೃತಪಟ್ಟಿರುವುದು ದೃಢಪಟ್ಟಿಲ್ಲ.
– ಹರೀಶ್‌ ಪಾಂಡೆ, ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next