Advertisement

ಭಾರತ ಕ್ರಿಕೆಟ್‌ನಲ್ಲಿ ನವದೀಪ್‌ ಸೈನಿ ಯುಗ

08:42 PM Aug 09, 2019 | Team Udayavani |

ನೂರಾರು ಕಷ್ಟಗಳ ಪ್ರವಾಹವನ್ನೇ ಈಜಿ ಜಯಿಸಿ, ಅಪಮಾನ ಅವಮಾನಗಳ ಲೆಕ್ಕಿಸದೆ ಹೋರಾಡುವ ವ್ಯಕ್ತಿ ಬದುಕು ಜಯಿಸಬಲ್ಲ. ಮುಂದೊಂದು ದಿನ ಸಾಧಕನಾಗಿ ಗುರುತಿಸಿಕೊಳ್ಳಬಲ್ಲ. ಆತ್ಮವಿಶ್ವಾಸವೆಂಬ ಅಸ್ತ್ರ, ಎಲ್ಲವನ್ನು ಗೆಲ್ಲುವ ಶಕ್ತಿ ಒಳಗಡೆ ಇದ್ದರೆ ಸಾಕು. ಸಾಧನೆ ತನ್ನಿಂದ ತಾನೇ ಆಗುತ್ತದೆ. ಅಂಥಹವರು ಇಡೀ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಾರೆ. ಅಂತಹ ಅದೆಷ್ಟೋ ಸಾಧಕರನ್ನು ನಾವು ನೋಡಿದ್ದೇವೆ. ಇದೀಗ ಅಂತಹ ಸಾಧಕರ ಪಟ್ಟಿಗೆ ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ನವದೀಪ್‌ ಸೈನಿ ಕೂಡ ಸೇರಿಕೊಂಡಿದ್ದಾರೆ.

Advertisement

ಮೊದಲ ಟಿ20ನಲ್ಲೇ ಸೈನಿ ಶೈನ್‌:
ನವದೀಪ್‌ ಸೈನಿ ವೆಸ್ಟ್‌ ಇಂಡೀಸ್‌ ಸರಣಿಗೆ ಆಯ್ಕೆಯಾಗಿ ಸುದ್ದಿಯಾಗಿದ್ದರು. ಇದೀಗ ಪದಾರ್ಪಣೆ ಪಂದ್ಯದಲ್ಲೇ ಭಾರತ ಖಾಯಂ ಬೌಲರ್‌ ಆಗುವ ಭರವಸೆಯನ್ನು ಮೂಡಿಸಿದ್ದಾರೆ. ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗೂ ಬೆವರಿಳಿಸಬಲ್ಲ ಬೌಲಿಂಗ್‌ ಸಾಮರ್ಥ್ಯ ಅವರಲ್ಲಿದೆ. ಸೈನಿ ಪದಾರ್ಪಣೆ ಪಂದ್ಯದಲ್ಲಿ 4 ಓವರ್‌ ಹಾಕಿ 1 ಮೇಡನ್‌ ಓವರ್‌ ಮಾಡಿ ನಿಕೋಲಸ್‌ ಪೂರಾನ್‌, ಕೈರನ್‌ ಪೊಲಾರ್ಡ್‌ ಹಾಗೂ ಶಿಮ್ರಾನ್‌ ಹೆಟ್‌ಮೈರ್‌ರಂತಹ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ್ದರು. ಇವರ ಬೌಲಿಂಗ್‌ ಸಾಹಸದಿಂದಲೇ ಭಾರತ ತಂಡವು ಅಮೆರಿಕದಲ್ಲಿ ನಡೆದಿದ್ದ 2ನೇ ಟಿ20 ಪಂದ್ಯದಲ್ಲಿ 4 ವಿಕೆಟ್‌ ಗೆಲುವು ಸಾಧಿಸಿತ್ತು. ಸರಣಿಯಲ್ಲಿ 1-0 ಮುನ್ನಡೆ ಪಡೆದಿತ್ತು. 2ನೇ ಟಿ20 ಕ್ರಿಕೆಟ್‌ ಕೂಟದಲ್ಲಿ ಸೈನಿ ಮಿಂಚಲು ಸಾಧ್ಯವಾಗಿದ್ದರೂ ಉತ್ತಮ ಪ್ರದರ್ಶನ ನೀಡಿದ್ದರು. 3ನೇ ಟಿ20 ಪಂದ್ಯದಲ್ಲಿ ಸೈನಿ 34ಕ್ಕೆ2 ವಿಕೆಟ್‌ ಪಡೆದುಕೊಂಡಿದ್ದರು. ಒಟ್ಟಾರೆ ಸೈನಿ ಆಡಿದ ಮೂರೂ ಟಿ20 ಪಂದ್ಯದಲ್ಲೂ ಉತ್ತಮ ನಿರ್ವಹಣೆ ನೀಡಿದ್ದಾರೆ.

ಯಾರಿವರು ನವದೀಪ್‌ ಸೈನಿ?:
ಪೂರ್ಣ ಹೆಸರು ನವದೀಪ್‌ ಅಮರ್‌ಜಿತ್‌ ಸೈನಿ. ಹರ್ಯಾಣದ ಕರ್ನಾಲ್‌ನವರು. ಅವರಿಗೆ 26 ವರ್ಷ. ಬಲಗೈ ವೇಗದ ಬೌಲರ್‌ ಆಗಿರುವ ಅವರು ಅನೇಕ ಪಂದ್ಯಗಳಲ್ಲಿ ಆಡಿ ಮಿಂಚಿದ್ದಾರೆ. 2013ರಲ್ಲಿ ಡೆಲ್ಲಿ ಪರ ದೇಶೀಯ ಕ್ರಿಕೆಟ್‌ ಆಡುವ ಮೂಲಕ ತಮ್ಮ ಕ್ರಿಕೆಟ್‌ ವೃತ್ತಿ ಜೀವನವನ್ನು ಆರಂಭಿಸಿದರು. ನವದೀಪ್‌ ಸೈನಿ ಅವರ ತಂದೆ ಹರ್ಯಾಣ ಸರ್ಕಾರದಲ್ಲಿ ಚಾಲಕರಾಗಿದ್ದಾರೆ. ಸೈನಿ ಅಜ್ಜ ಕರಮ್‌ ಸಿಂಗ್‌ ಸ್ವಾತಂತ್ರ್ಯ ಹೋರಾಟಗಾರ. ಸುಭಾಷ್‌ ಚಂದ್ರ ಬೋಸ್‌ ಜತೆಗೂಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದರಂತೆ.

ಐಪಿಎಲ್‌ನಲ್ಲೂ ಮಿಂಚಿದ ವೀರ:
2016, ಜನವರಿ 2ರಂದು ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದಲ್ಲಿ ಆಡುವ ಮೂಲಕ ನವದೀಪ್‌ ಸೈನಿ ಟಿ20 ಕ್ರಿಕೆಟ್‌ ಕೂಟಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ ಅವರು ಡೆಲ್ಲಿ ಡೇರ್‌ ಡೆವಿಲ್ಸ್‌ ಪರ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌)ನಲ್ಲೀ ಆಡಿದರು. ಇವರನ್ನು ಕೇವಲ 10 ಲಕ್ಷ ರೂ.ಗೆ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ ಖರೀದಿಸಿತ್ತು. ಜನವರಿ 2018ರಲ್ಲಿ ನವದೀಪ್‌ ಸೈನಿ ಆರ್‌ಸಿಬಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) ತಂಡವನ್ನು ಕೂಡಿಕೊಂಡರು. ಅದು ಬರೋಬ್ಬರಿ 3 ಕೋಟಿ ರೂ.ಗೆ ಎನ್ನುವುದು ವಿಶೇಷ. 2019ರಲ್ಲಿ ಆರ್‌ಸಿಬಿ ಉಳಿಕೆ ಆಟಗಾರರಾಗಿ ಅದೇ ತಂಡದಲ್ಲಿ ಮುಂದುವರಿದಿದ್ದರು. ಇವರು ರಣಜಿಯಲ್ಲಿ 2017-18ರಲ್ಲಿ ಒಟ್ಟಾರೆ 8 ಪಂದ್ಯವನ್ನು ಆಡಿ 34 ವಿಕೆಟ್‌ ಕಿತ್ತು ಶ್ರೇಷ್ಠ ಸಾಧನೆ ಮಾಡಿದ್ದರು.

 ಟೆಸ್ಟ್‌ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ:
ನವದೀಪ್‌ ಸೈನಿಗೆ 2018ರಲ್ಲಿ ಆಫ್ಗಾನಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಮೊಹಮ್ಮದ್‌ ಶಮಿ ಬದಲಾಗಿ ಇವರು ತಂಡಕ್ಕೆ ಸೇರಿಕೊಂಡರೂ ಆಡುವ ಹನ್ನೊಂದರೊಳಗೆ ಇವರಿಗೆ ಅವಕಾಶ ಸಿಕ್ಕಿರಲಿಲ್ಲ. 2019 ವಿಶ್ವಕಪ್‌ ಕ್ರಿಕೆಟ್‌ ಕೂಟದ ವೇಳೆ ಹೆಚ್ಚುವರಿ ಬೌಲರ್‌ ಆಗಿ ಸ್ಥಾನ ಪಡೆದುಕೊಂಡಿದ್ದರು.

Advertisement

ತಾಯಿಯೇ ಸೈನಿಗೆ ಮೊದಲ ಗುರು
ನವದೀಪ್‌ ಸೈನಿ ಹನ್ನೊಂದು ವರ್ಷ ಆಗಿದ್ದಾಗ ಕ್ರಿಕೆಟ್‌ ಆಡಲು ಶುರು ಮಾಡಿದರು. ಆಗಲೇ ಅವರು ಬೌಲಿಂಗ್‌ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಇವರು ಬೌಲಿಂಗ್‌ ಮಾಡುವಾಗ ಇವರ ತಾಯಿಯೇ ಇವರಿಗೆ ಎದುರಾಳಿ ಬ್ಯಾಟ್ಸ್‌ವುಮನ್‌ ಆಗಿದ್ದರು. ಸ್ವತಃ ಇದನ್ನು ಸಂದರ್ಶನವೊಂದರಲ್ಲಿ ನವದೀಪ್‌ ಸೈನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next