Advertisement

ನವರೂಪ: ಭಾರತೀಯ ಸಂಸ್ಕೃತಿಯ ಅನಾವರಣ; ವಿದ್ಯಾಶ್ರೀ ರಾಧಾಕೃಷ್ಣ

05:13 PM Oct 11, 2022 | Team Udayavani |

ಮಹಾನಗರ: ನವರಾತ್ರಿಯು ದೇವಿಯ ಉಪಾಸನೆಯೊಂದಿಗೆ ಬದುಕಿಗೆ ಅರ್ಥವನ್ನು ತುಂಬುವ ಬಣ್ಣಗಳ ಪರಿಕಲ್ಪನೆಯೊಂದಿಗೆ ಜೋಡಿಸಿಕೊಂಡಿದೆ. ಜನಮನದ ಜೀವನಾಡಿ ಉದಯವಾಣಿ “ನವರೂಪ’ ಉತ್ಸವದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಸ್ತೃತ ರೂಪದಲ್ಲಿ ಅನಾವರಣಗೊಳಿಸಿದೆ ಎಂದು ಗಾನನೃತ್ಯ ಅಕಾಡೆಮಿಯ ಸಂಸ್ಥಾಪಕಿ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

Advertisement

ನವರಾತ್ರಿ ಪ್ರಯುಕ್ತ ಉದಯವಾಣಿ ಹಮ್ಮಿಕೊಂಡಿದ್ದ ನವರೂಪ ಉತ್ಸವದಲ್ಲಿ ವಿಜೇತರಾದವರಿಗೆ ಮಂಗಳೂರಿನ ಬೆಸೆಂಟ್‌ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ನವರಾತ್ರಿ ದೇವಿಶಕ್ತಿಯ ಆರಾಧನೆ ಮಾತ್ರವಲ್ಲದೆ ನಾರೀಶಕ್ತಿ ಅನಾವರಣ ಕೂಡ ಆಗಿದೆ. ಒಂಬತ್ತು ದಿನಗಳಲ್ಲಿ ದೇವಿಯನ್ನು ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತಿದೆ. ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ತೊಡಿಸಲಾಗುತ್ತಿದೆ. ಈ ಒಂದೊಂದು ಬಣ್ಣ ಅದರದ್ದೆ ಆದ ಮಹತ್ವವನ್ನು ಹೊಂದಿದೆ. ಆದರ ಹಿಂದೆ ಆಧ್ಯಾತ್ಮಿಕ ನೆಲಗಟ್ಟಿನ ಸಂದೇಶಗಳಿವೆ. ನವರೂಪ ಉತ್ಸವ ಮಹಿಳೆಯರಿಗೆ ಇದರ ಮಹತ್ವದ ಅರಿವು ಮೂಡಿಸುವುದರ ಜತೆಗೆ ನವರಾತ್ರಿ ಉತ್ಸವವನ್ನು ಭಕ್ತಿಯ ಜತೆಗೆ ಸಂಭ್ರಮಿಸುವಂತೆ ಮಾಡಿದೆ ಎಂದರು.

ಇಂದಿನ ಪೀಳಿಗೆಗೆ ಭಾರತೀಯ ಉಡುಗೆತೊಡುಗೆಗಳತ್ತ ಒಲವು ಕಡಿಮೆಯಾಗುತ್ತಿದೆ. ಆದರೆ ವಿದೇಶಗಳಲ್ಲಿ ನಮ್ಮ ಉಡುಗೆ ತೊಡುಗೆಗಳು, ಆಚಾರ – ವಿಚಾರಗಳತ್ತ ಒಲವು ಹೆಚ್ಚುತ್ತಿದೆ. ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಯನ್ನು ಇದರಲ್ಲಿ ಸಮ್ಮಿಳಿತಗೊಳಿಸುವ ಕಾರ್ಯ ಅಗತ್ಯ. ಉದಯವಾಣಿ ನವರೂಪ ಉತ್ಸವ ಈ ನಿಟ್ಟಿನಲ್ಲಿ ಮಹತ್ತರ ಪರಿಕಲ್ಪನೆಯಾಗಿದ್ದು, ಜನಮಾನಸದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿರುವುದು ಇದು ಗಳಿಸಿರುವ ಯಶಸ್ಸಿನ ಪ್ರತಿಬಿಂಬವಾಗಿದೆ. ನವರಾತ್ರಿ ಉತ್ಸವವನ್ನು ಆಯೋಜಿಸಿರುವ ಉದಯವಾಣಿಯನ್ನು ಅಭಿನಂದಿಸುತ್ತೇನೆ ಎಂದರು.

ನೀತಿಬೋಧಕ ಜಾನಪದ ಗೀತೆಯೊಂದನ್ನು ಹಾಡಿದರು. ಉದಯವಾಣಿ ಉಪಾಧ್ಯಕ್ಷ (ಮ್ಯಾಗಜಿನ್‌ ಮತ್ತು ಸ್ಪೆಶಲ್‌ ಪ್ರಾಜೆಕ್ಟ್) ರಾಮಚಂದ್ರ ಮಿಜಾರು ಸ್ವಾಗತಿಸಿ, ಪ್ರಸ್ತಾವನೆಗೈದು, ರೇಷ್ಮೆ ಸೀರೆಯೊಂದಿಗೆ ದೀಪಾವಳಿ, ಯಶೋದಾ ಕೃಷ್ಣ ಸಹಿತ ವಿನೂತನ ಪರಿಕಲ್ಪನೆಗಳ ಮೂಲಕ ಹಬ್ಬಗಳನ್ನು ಓದುಗ ಸಮೂಹದೊಂದಿಗೆ ಸಂಭ್ರಮಿಸುತ್ತಾ ಬಂದಿರುವ ಉದಯವಾಣಿಯ ಈ “ನವರೂಪ ಉತ್ಸವ’ದಲ್ಲಿ ಕರಾವಳಿಯ ಜಿಲ್ಲೆಗಳ ಸಾವಿರಾರು ಮಹಿಳೆಯರು ಭಾಗವಹಿಸಿದ್ದು, ಅಭೂತ ಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಫೋಟೋಗಳನ್ನು ಆಯ್ಕೆ ಮಾಡುವುದು ನಮಗೆ ಅತ್ಯಂತ ಕಠಿನ ಸವಾಲು ಆಗಿತ್ತು ಎಂದರು.

ನವರೂಪ ಉತ್ಸವದಲ್ಲಿ ಅತ್ಯಂತ ಸಂಭ್ರಮದಿಂದ ಪಾಲ್ಗೊಂಡ ಎಲ್ಲರನ್ನು ಉದಯವಾಣಿ ಅಭಿನಂದಿಸುತ್ತದೆ ಎಂದರು.

Advertisement

ನವರೂಪ ವಿಜೇತರು ಪ್ರತಿಭಾ ಮತ್ತು ಬಳಗ, ಯು.ಎಸ್‌. ಮಲ್ಯ ನಗರ ಬಿಕರ್ನಕಟ್ಟೆ, ಸುಭಾಷ್‌ನಗರ ಫ್ರೆಂಡ್ಸ್‌ ಮೂಡುಬಿದಿರೆ, ಟೀಂ ನೀಲಾಂಬರಿ ಮಂಗಳೂರು. ಸುಶೀಲಾ ಮತ್ತು ಕುಟುಂಬ ಕಾಟಿಪಳ್ಳ, ಶುಭಾ ಎಸ್‌.ಎನ್‌. ಭಟ್‌ ಮತ್ತು ಬಳಗ ಮುಡಿಪು, ದಿವ್ಯಾಶ್ರೀ ಮತ್ತು ಬಳಗ ಪೆರ್ಲತ್ತಡ್ಕ ಕಾಸರಗೋಡು, ಲಕ್ಷ್ಮೀ ನಿವಾಸ ಕುಟುಂಬ ಬಲ್ಲಾಳ್‌ಬಾಗ್‌, ಚೇತನಾ, ಗೆಳತಿಯರು ಅಳಪೆ ಪಡೀಲ್‌, ಮಂಜುಳಾ ಮತ್ತು ಕುಟುಂಬ ಕುದ್ರೋಳಿ ಅವರಿಗೆ ವಿದ್ಯಾಶ್ರೀ ರಾಧಾಕೃಷ್ಣ ಅವರು ಬಹುಮಾನಗಳನ್ನು ಪ್ರದಾನ ಮಾಡಿದರು.

ಉದಯವಾಣಿ ಪ್ರಾದೇಶಿಕ ಪ್ರಬಂಧಕ ಸತೀಶ್‌ ಮಂಜೇಶ್ವರ ಬಹುಮಾನ ವಿಜೇತರ ವಿವರ ನೀಡಿದರು. ಸಹಾಯಕ ಪ್ರಬಂಧಕ ಉಮೇಶ್‌ ಎನ್‌. ಶೆಟ್ಟಿ ವಂದಿಸಿದರು.

ಹಿರಿಯ ವರದಿಗಾರ ದಿನೇಶ್‌ ಇರಾ ನಿರೂಪಿಸಿದರು. ಸಂಭ್ರಮಿಸಿದ್ದೇವೆ ಪ್ರಶಸ್ತಿ ವಿಜೇತರ ಪೈಕಿ ಗೀತಾ ವಿ. ಮೈಂದನ್‌ ಮಾತನಾಡಿ, ನವರಾತ್ರಿಯ ಸಂದರ್ಭ ಉದಯವಾಣಿ ಪ್ರಸ್ತುತಪಡಿಸಿರುವ ನವರೂಪ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದೇವೆ. ಸಂತೋಷ ಪಟ್ಟಿದ್ದೇವೆ. ಈ ರೀತಿಯ ಅವಕಾಶವನ್ನು ಓದುಗ ಬಳಗಕ್ಕೆ ಒದಗಿಸಿಕೊಟ್ಟ ಉದಯವಾಣಿ ಸಂಸ್ಥೆಯನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ರೀತಿಯ ಇನ್ನಷ್ಟು ಉತ್ತಮ ಪರಿಕಲ್ಪನೆಗಳು ಮೂಡಿಬರಲಿ ಎಂದು ಹಾರೈಸುತ್ತೇನೆ ಎಂದು ನವರೂಪ ಉತ್ಸವ ಆಯೋಜನೆಗೆ ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next