Advertisement

Navaratri  ಜಗನ್ಮಾತೆಯ ಉತ್ಸವ-ಸಂಸ್ಕೃತಿಯ ಅನಾವರಣ

12:14 AM Oct 23, 2023 | Team Udayavani |

ಆನಂದವನ್ನು ಉಂಟುಮಾಡುವ ಚಟುವಟಿಕೆಗಳೇ ಉತ್ಸವಗಳು. ನಮ್ಮ ಸನಾತನ ಸಂಸ್ಕೃತಿಯಲ್ಲಿ ಉತ್ಸವಗಳಿಗೆ ಲೆಕ್ಕವಿಲ್ಲ. ಹಾಗೆಂದು ಒಂದರಂತೆ ಮತ್ತೂಂದಿಲ್ಲ. ಅವುಗಳ ಹಿನ್ನೆಲೆ ಮತ್ತು ಅವುಗಳ ಆಚರಣೆಯ ಕ್ರಮಗಳು ಅತ್ಯಂತ ಭಿನ್ನವಾದವುಗಳಾಗಿವೆ. ದೇವಸ್ಥಾನಗಳಲ್ಲಿ ನಡೆಯುವ ವಾರ್ಷಿಕ ಜಾತ್ರೆಗಳು, ತಿಥಿ-ನಕ್ಷತ್ರ-ಮಾಸಾದಿಗಳನ್ನು ಆಧರಿಸಿ ನಡೆಯುವ ಉತ್ಸವಗಳು, ಧರ್ಮದೇವತೆಗಳ ನೇಮಗಳು ಇವೇ ಮೊದಲಾದವುಗಳು ದೈವಿಕ ಉತ್ಸವಗಳು. ನಾಮ ಕರಣ, ಉಪನಯನ, ಮದುವೆ ಮೊದಲಾದವುಗಳು ಮಾನುಷ ಉತ್ಸವಗಳು. ಇವೆಲ್ಲವೂ ಆನಂದವನ್ನು ನೀಡುವುದರೊಂದಿಗೆ ಇಹ-ಪರಗಳ ಏಳಿಗೆಗೂ ಕಾರಣಗಳಾಗುವವು. ಇವು ಕುಟುಂಬದ ಮತ್ತು ಸಮಾಜದ ಸದಸ್ಯರನ್ನು ಒಂದುಗೂಡಿಸುವ ಸೂತ್ರಗಳೂ ಹೌದು. ಇಂತಹ ಹಿನ್ನೆಲೆಯನ್ನು ಹೊಂದದ, ಕೇವಲ ಮೋಜಿಗಾಗಿ ನಡೆಯುವ ಕಲಾಪಗಳನ್ನು ನಮ್ಮ ಸಂಸ್ಕತಿಯು ಉತ್ಸವವೆಂದು ಕರೆಯುವುದಿಲ್ಲವೆಂಬುದು ಗಮನೀಯವಾದ ಅಂಶ.

Advertisement

ಮಳೆಗಾಲ ಮುಗಿದಿದೆ. ಶರತ್ಕಾಲ ಕಾಲಿರಿಸಿದೆ. ಆಗಸವು ಕಾರ್ಮುಗಿಲೆಂಬ ಕೊಳೆಯನ್ನು ತೊಳೆದುಕೊಂಡು ಬೆಳಗುತ್ತಿದೆ. ಭೂಮಿ ಹಸುರನ್ನುಟ್ಟು ಕಂಗೊಳಿಸುತ್ತಿದೆ. ನದಿಗಳು ನಿರ್ಮಲವಾಗಿ ಹರಿಯುತ್ತಿವೆ. ಸಕಲ ಜೀವಜಾತವೂ ಹೊಸ ಉತ್ಸಾಹದಿಂದ ನಲಿಯುತ್ತಿದೆ. ಇಂತಹ ಹಿತವಾದ ವಾತಾವರಣವೇ ಆನಂದದಾಯಕವಾದದ್ದು. ಅದರೊಂದಿಗೆ ಇದು ಜಗನ್ಮಾತೆಯಾದ ದುರ್ಗೆಯ ಮಹೋತ್ಸವದ ನವರಾತ್ರಿಯ ಪರ್ವಕಾಲವೂ ಹೌದು. ಶರದೃತುವಿನ ಮೊದಲ ಭಾಗ ಆಶ್ವಯುಜ ಮಾಸ. ಅದರ ಮೊದಲ ಭಾಗವೆನಿಸಿದ ಶುಕ್ಲ ಪಕ್ಷದ ಮೊದಲ ಒಂಬತ್ತು ದಿನಗಳಲ್ಲಿ ನಡೆಯುವ ಉತ್ಸವ ಈ ನವರಾತ್ರಿಯ ಉತ್ಸವ. ವೇದಗಳಲ್ಲಿ ದೇವಿಯನ್ನು ರಾತ್ರಿ ಎಂದೇ ಕರೆಯಲಾಗಿದೆ. ರಾತ್ರಿಯೆಂದರೆ ನೆಮ್ಮದಿಯನ್ನು ನೀಡುವವಳು ಎಂದರ್ಥ. ಆಕೆ ನಮ್ಮ ಆಪತ್ತು ಗಳನ್ನು ನಿವಾರಿಸಿ, ಸಂಪತ್ತನ್ನು ನೀಡಿ, ಮನದ ಬಯಕೆಗಳನ್ನು ಈಡೇರಿಸುವವಳಾದ್ದರಿಂದ ಆಕೆ ಯನ್ನು ರಾತ್ರಿ ಎಂದು ಸ್ತುತಿಸಲಾಗಿದೆ. ಇಂತಹ ದೇವಿ ಯನ್ನು ಒಂಬತ್ತು ರೂಪಗಳಿಂದ, ಒಂಬತ್ತು ದಿನಗಳ ಕಾಲ ಆರಾಧಿಸುವುದರಿಂದ ಇದು ನವರಾತ್ರಿ. ಇರುಳೂ ಕೂಡ ದಣಿದ ದೇಹಕ್ಕೆ, ಮನಸ್ಸಿಗೆ ಸುಖವನ್ನು ನೀಡುವ ಕಾಲವಾದ್ದರಿಂದ ರಾತ್ರಿ ಎನಿಸಿದೆ. ಹಾಗಾಗಿ ಇರುಳಿನಲ್ಲಿ ದುರ್ಗೆಯ ಆರಾಧನೆಗೆ ಮಹತ್ವವನ್ನು ನೀಡಲಾಗಿದೆ. ಶರತ್ಕಾಲದಲ್ಲಿ ನಡೆಸಿದ ನನ್ನ ಆರಾಧನೆಯು ಅತ್ಯಂತ ಫ‌ಲಪ್ರದವಾದುದೆಂದು ದೇವಿಯೇ ವಚನವನ್ನು ನೀಡಿರುವುದರಿಂದ ಈ ಪರ್ವದಿನಗಳಿಗೆ ಇನ್ನೂ ಹೆಚ್ಚಿನ ಮಹತ್ವ ಬಂದಿದೆ. ದುರ್ಗೆಯನ್ನು ಪರದೇವತೆ ಎಂದು ಆರಾಧಿಸುವ ಶಾಕ್ತ ಸಂಪ್ರದಾಯದವರಿಗೆ ನವರಾತ್ರಿಯು ಅತ್ಯಂತ ಶ್ರದ್ಧೆಯ ವ್ರತೋಪವಾಸಗಳ ದಿನಗಳಾಗಿವೆ.
ನವರಾತ್ರಿಯ ಕೊನೆಯ ದಿನ ಅಂದರೆ ನವಮೀ ತಿಥಿ. ಅದೇ ಮಹಾನವಮಿ. ದೇವಿಯು ಜಗತ್ತಿಗೆ ಪೀಡೆ ಯನ್ನು ಉಂಟುಮಾಡುತ್ತಿದ್ದ ದೈತ್ಯರನ್ನು ಸಂಹರಿಸಿ, ಸಜ್ಜನರಿಗೆ ಸುಖ ಶಾಂತಿಗಳನ್ನು ಅನುಗ್ರಹಿಸಿದ ದಿನವಿದು.

ಮಹಿಷಾಸುರನಿಂದಾರಂಭಿಸಿ ಶುಂಭ-ನಿಶುಂಭರೆಂಬ ದುಷ್ಟ ದೈತ್ಯರನ್ನು ಒಳಗೊಂಡಂತೆ ಆಕೆಯಿಂದ ಹತರಾದವರು ಅದೆಷ್ಟೋ ಮಂದಿ. ದೇವತೆಗಳು ದುಷ್ಟರ ನಿಗ್ರಹವನ್ನು ಮಾಡಿ, ನಮಗೆ ರಕ್ಷಣೆಯನ್ನು ನೀಡಬೇಕೆಂದು ಪ್ರಾರ್ಥಿಸುವ ನಾವು ಆಯುಧಪಾಣಿಗಳಾಗಿ ನಿಂತಿರುವ ಅವರ ರೂಪಗಳನ್ನು ಪೂಜಿಸುವುದು ವಾಡಿಕೆ. ಮಹಾ ನವಮಿಯಂದು ದೇವಿಯನ್ನು ಸಿದ್ಧಿಧಾತ್ರಿ ಎಂಬ ಹೆಸರಿನಿಂದ ಪೂಜಿಸುತ್ತೇವೆ. ಮರುದಿನ ದಶಮೀ ತಿಥಿ. ಅದೇ ವಿಜಯದಶಮಿ. ಅಸುರರ ಸಂಹಾರದ ಬಳಿಕ ದೇವತೆಗಳೆಲ್ಲರೂ ದೇವಿಯನ್ನು ಕೊಂಡಾಡುತ್ತಾ, ಆಕೆಯ ಆಯುಧಗಳನ್ನು ಪುರಸ್ಕರಿಸಿ ವಿಜಯೋತ್ಸವವನ್ನು ಆಚರಿಸಿದ ಸಂಭ್ರಮದ ದಿನವಿದು. ನಾವೂ ಕೂಡ ಈ ಸಂಸಾರದಲ್ಲಿ ಒಳಿತು-ಕೆಡುಕುಗಳ ನಡುವೆ ನಿರಂತರವಾಗಿ ನಡೆಯುವ ಹೋರಾಟದಲ್ಲಿ ಸಿಲುಕಿದವರು. ಜಯವನ್ನು ಹಂಬಲಿಸುವವರು. ದೈವ ಬಲವಿಲ್ಲದ ಕೇವಲ ಪುರುಷ ಪ್ರಯತ್ನಕ್ಕೆ ಫ‌ಲ ವಿಲ್ಲ ವೆಂದು ನಂಬಿದವರು, ಅದನ್ನು ಅನುಭವಿಸಿ ದವರು. ಹಾಗಾಗಿ ಜಗನ್ಮಾತೆ ಎನಿಸಿರುವ ದುರ್ಗೆಯ ನವರಾತ್ರಿಯ ಆರಾಧನೆಗೆ ಭಕ್ತಿ ಶ್ರದ್ಧೆಯಿಂದ ತೊಡಗುತ್ತೇವೆ. ಅದರಲ್ಲಿಯೂ ಮಹಾ ನವಮಿಯಂದು ವಿಜೃಂಭಣೆಯಿಂದ ದುರ್ಗೆಯ ಆರಾಧನೆಯನ್ನು ನೆರವೇರಿಸುತ್ತೇವೆ. ಅಂದಿಗೆ ನವರಾತ್ರಿಯ ಉತ್ಸವವು ಕೊನೆಗೊಳ್ಳುತ್ತದೆ.

ಹಿಂದೆ ರಾಜರುಗಳು ತಮ್ಮ ಜಯಕ್ಕಾಗಿ ಯುದ್ಧ ದೇವತೆಯೆನಿಸಿದ ದುರ್ಗೆಯನ್ನು ಶ್ರದ್ಧೆಯಿಂದ ಆರಾಧಿಸಿ, ವಿಜಯದಶಮಿಯಂದು ಜೈತ್ರಯಾತ್ರೆಗೆ ಹೊರಡುವ ಪರಿಪಾಠವನ್ನು ಇರಿಸಿಕೊಂಡಿದ್ದರು. ಅಂದು ತಮ್ಮ ಆಯುಧಗಳಲ್ಲಿ ದೇವಿಯನ್ನು ಆವಾ ಹಿಸಿ ಪೂಜಿಸಿ ಆಕೆಯ ಅನುಗ್ರಹವನ್ನು ಪ್ರಾರ್ಥಿಸು ತ್ತಿದ್ದರು. ಇದರಿಂದಾಗಿ ನವರಾತ್ರಿಯ ಆರಾಧನೆಗೆ ರಾಜಾಶ್ರಯವೂ ದೊರೆತು ನಾಡಹಬ್ಬವಾಯಿತು. ದುರ್ಗೆಯು ಆಯುಧ, ಯಂತ್ರ, ವಾಹನಗಳಿಗೆ ಅಭಿಮಾನಿ ದೇವತೆಯೂ ಹೌದು. ಹಾಗಾಗಿ ವಿಜಯ ದಶಮಿಯಂದು ಅವುಗಳ ಆರಾಧನೆಯು ರೂಢಿಗೆ ಬಂದಿತು. ಸಾಮಾನ್ಯವಾಗಿ ಇದನ್ನು ಆಯುಧ ಪೂಜೆ ಎನ್ನುತ್ತೇವೆ. ಅಂದು ಅವುಗಳಲ್ಲಿ ದುರ್ಗೆಯನ್ನು ಪೂಜಿಸಿ ಅವು ನಮಗೆ ಚೆನ್ನಾಗಿ ಒದಗಿ ಬರಲೆಂದು ಪ್ರಾರ್ಥಿಸುತ್ತೇವೆ. ವಿಜಯ ದಶಮಿ ಯಂದು (ಬನ್ನಿಮರ) ಶಮೀ ವೃಕ್ಷವನ್ನು ಪೂಜಿಸುವ ಸಂಪ್ರದಾಯವಿದೆ. ಅದಕ್ಕನುಗುಣ ವಾಗಿ ದುರ್ಗೆಯ ಆಲಯದ ಸಮೀಪದಲ್ಲಿ ಶಮೀ ವೃಕ್ಷವನ್ನು ಬೆಳೆಸುವ ಕ್ರಮವೂ ಇದೆ. ಈ ವೃಕ್ಷವು ಅಮಂಗಲವನ್ನು ನಿವಾರಿಸುವ, ಪಾಪವನ್ನು ದೂರಗೊಳಿಸುವ ದೇವತಾ ಸಾನ್ನಿಧ್ಯವುಳ್ಳದ್ದು. ಜತೆಗೆ ರಾಮನಿಗೆ ಪ್ರಿಯವಾದುದೆಂದು ಸ್ತುತಿಸಲ್ಪಟ್ಟಿದೆ. ಪಾಂಡವರು ತಮ್ಮ ಅಜ್ಞಾತವಾಸದ ವೇಳೆಯಲ್ಲಿ ತಮ್ಮ ಆಯುಧಗಳನ್ನು ವಿರಾಟನಗರಿಯ ಸನಿಹ ದಲ್ಲಿದ್ದ ಶಮೀ ವೃಕ್ಷವೊಂದರಲ್ಲಿ ಗುಟ್ಟಾಗಿ ಇರಿಸಿದ್ದರು. ವಿಜಯದಶಮಿಯಂದು ಅಜ್ಞಾತ ವಾಸವು ಪೂರ್ಣ ವಾಗಲು ತಮ್ಮ ಆಯುಧಗಳನ್ನು ಪೂಜಿಸಿ ಪುನಃ ಸ್ವೀಕರಿಸಿದರು. ತಮ್ಮ ಆಯುಧಗಳಿಗೆ ಸ್ಥಾನ ವಾಗಿದ್ದ ಶಮೀವೃಕ್ಷವನ್ನೂ ಪೂಜಿಸಿದರು. ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ವಿಜಯ ಶಾಲಿಗಳಾದರು. ಹೀಗೆ ಹಲವು ಕಾರಣಗಳಿಂದ ವಿಜಯದಶಮಿಯಂದು ಶಮೀವೃಕ್ಷದ ಪೂಜೆಯೂ ನಡೆಯುತ್ತದೆ.

ಕೆಲವು ಕಡೆಗಳಲ್ಲಿ ದುರ್ಗೆಯ ದೇವಸ್ಥಾನವಿಲ್ಲದಿದ್ದರೂ, ಊರಿನವರೆಲ್ಲ ಒಟ್ಟಾಗಿ ಮೆರವಣಿಗೆಯಲ್ಲಿ ಸಾಗಿ ಶಮೀವೃಕ್ಷದ ಪೂಜೆಯನ್ನು ಜಾತ್ರೆಯಂತೆ ನಡೆಸು ವುದೂ ಇದೆ. ಭತ್ತ ಮೊದಲಾದ ಧಾನ್ಯಗಳು ಬೆಳೆ ಯುವ ಪ್ರದೇಶಗಳಲ್ಲಿ ವಿಜಯದಶಮಿಯಂದು ಹೊಲಕ್ಕೆ ಹೋಗಿ ಧಾನ್ಯವನ್ನು ಪೂಜಿಸಿ, ಕೊಯ್ದು, ಶಂಖ, ಜಾಗಟೆಯ ನಾದದೊಂದಿಗೆ ಮನೆಗೆ ತರುವ ಸಂಪ್ರದಾಯವಿದೆ. ದೇವಸ್ಥಾನಗಳಲ್ಲಿಯೂ ಈ ಕ್ರಮವು ರೂಢಿಯಲ್ಲಿದೆ. ಭಕ್ತರು ಪ್ರಸಾದ ರೂಪ ವಾಗಿ ಧಾನ್ಯದ ತೆನೆಗಳನ್ನು ಮನೆಗೆ ಒಯ್ಯುತ್ತಾರೆ.

Advertisement

ನವರಾತ್ರಿಯ ಕಾಲದಲ್ಲಿ ಬರುವ ಮೂಲಾ ನಕ್ಷತ್ರದ ದಿನದಿಂದ ಆರಂಭಿಸಿ ಶ್ರವಣ ನಕ್ಷತ್ರದ ದಿನದ ವರೆಗೆ ವೇದವೇ ಮೊದಲಾದ ಗ್ರಂಥಗಳನ್ನಿರಿಸಿ ಶಾರದೆಯ ಪೂಜೆಯನ್ನು ನಡೆಸಲಾಗುವುದು. ಶ್ರವಣ ನಕ್ಷತ್ರವು ವಿಜಯದಶಮಿಯಂದು ಒದಗು ತ್ತದೆ. ಹಾಗಾಗಿ ಈ ದಿನವು ವಿದ್ಯಾರಂಭಕ್ಕೆ ಪ್ರಶಸ್ತವಾದ ದಿನವಾಗಿದೆ. ಹಾಗಾಗಿ ಹೆತ್ತವರು ಬೆಳಗಿನ ಹೊತ್ತಿನಲ್ಲಿ ತಮ್ಮ ಮಕ್ಕಳನ್ನು ದೇವಿಯ ಮಂದಿರಕ್ಕೆ ಕರೆತಂದು ಅಕ್ಷರಾ ಭ್ಯಾಸದ ಮೂಲಕ ವಿದ್ಯಾರಂಭವನ್ನು ಮಾಡಿಸು ವುದು ವಾಡಿಕೆಯಾಗಿದೆ. ಜತೆಗೆ ಅಂದು ಯಾವುದೇ ಕಾರ್ಯವನ್ನು ಆರಂಭಿಸಿದರೂ ಅದು ಯಶಸ್ವಿಯಾಗುವುದು. ಶಾರದೆಯನ್ನು ಮಣ್ಣಿನ ವಿಗ್ರಹದಲ್ಲಿ ಪೂಜಿಸುವ ಮತ್ತು ವಿಜಯ ದಶಮಿಯಂದು ವಿಗ್ರಹವನ್ನು ಮೆರವಣಿಗೆಯಲ್ಲಿ ಒಯ್ದು ವಿಸರ್ಜಿಸುವ ಕ್ರಮವೂ ಇದೆ. ಇಂದು ಸಾರ್ವಜನಿಕ ಗಣೇಶೋತ್ಸವದಂತೆ ಸಾರ್ವಜನಿಕ ಶಾರದಾ ಪೂಜೆಯೂ ನಡೆಯುತ್ತಿದೆ. ವಾಯು ದೇವರ ಮೂರನೆಯ ಅವತಾರವೆನಿಸಿರುವ ಮಧ್ವಾ ಚಾರ್ಯರು ಪಾಜಕ ಕ್ಷೇತ್ರದಲ್ಲಿ ವಾಸುದೇವನಾಗಿ ವಿಜಯದಶಮಿಯಂದು ಅವತರಿಸಿದರು. ಹಾಗಾಗಿ ಮಾಧ್ವ ಪರಂಪರೆಯಲ್ಲಿ ಈ ದಿನಕ್ಕೆ ಮತ್ತೂ ಮಹತ್ವದ ಸ್ಥಾನವಿದೆ. ಅಂದು ಮಠಗಳಲ್ಲಿ ವಿಶೇಷವಾಗಿ ಮಧ್ವಾಚಾರ್ಯರ ಜಯಂತಿಯನ್ನು ಆಚರಿಸಲಾಗು ವುದು. ಮನೆಗಳಲ್ಲಿಯೂ ಆರಾಧನೆಯು ನಡೆಯುತ್ತದೆ.

ಇಂತಹ ಅನೇಕ ವಿಶೇಷತೆಗಳನ್ನು ಒಳಗೊಂಡ ಮಹಾ ನವಮಿ ಮತ್ತು ವಿಜಯದಶಮಿಯ ಆಚರಣೆಯನ್ನು ನಾವು ನಮ್ಮ ಮಕ್ಕಳನ್ನು ಜತೆಯಲ್ಲಿ ಸೇರಿಸಿಕೊಂಡು ಮಾಡೋಣ. ಆಗ ಅವರಿಗೆ ಈ ಉತ್ಸವದ ಮಹತ್ವವು ತಿಳಿಯುವುದು. ಶ್ರದ್ಧೆಯು ಮೂಡುವುದು. ನಮ್ಮ ಸಂಸ್ಕೃತಿಯ ಉಳಿವಿಗೆ ಅದು ಅತ್ಯಂತ ಅಗತ್ಯದ ಕಾರ್ಯವಾಗಿದೆ.

ಡಾ| ವಿಜಯಲಕ್ಷ್ಮೀ ಎಂ.(ಲೇಖಕರು: ಸಂಸ್ಕೃತ ಉಪನ್ಯಾಸಕರು ಎಂ.ಜಿ.ಎಂ ಕಾಲೇಜು, ಉಡುಪಿ)

 

Advertisement

Udayavani is now on Telegram. Click here to join our channel and stay updated with the latest news.

Next