Advertisement

ದೇವಿ ಆರಾಧನೆಯಿಂದ ಉತ್ತರೋತ್ತರ ಶ್ರೇಯಸ್ಸು

07:24 PM Sep 28, 2019 | Sriram |

ಆದಿಶಕ್ತಿಯಾಗಿರುವ ಆ ಮಾತೆಯನ್ನು ಆಶ್ವಯುಜ ಮಾಸಾರಂಭದ ನವದಿನಗಳಲ್ಲಿ ಒಂಬತ್ತು ರೂಪ-ಅಲಂಕಾರಗಳಲ್ಲಿ ಕಲ್ಪಿಸಿಕೊಂಡು ಆರಾಧಿಸುವುದು ನವರಾತ್ರಿಯ ವಿಶೇಷ. ಹೀಗೆ ಪೂಜಿಸುವುದರಿಂದ ದೇವಿಯು ಪ್ರಸನ್ನರಾಗಿ ಅನುಗ್ರಹಿಸುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಅಂಥ ಶರನ್ನವರಾತ್ರಿಯ ಸಡಗರ, ಶ್ರದ್ಧಾಭಕ್ತಿ ಇಂದಿನಿಂದ ಆರಂಭಗೊಂಡಿದೆ.

Advertisement

ಕುಂದಾಪುರ: ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಗೂ ವಿಶೇಷ ಮಹತ್ವವಿದೆ. ಆಶ್ವಯುಜ ಮಾಸದ ಆರಂಭದಲ್ಲಿ 9 ದಿನಗಳ ಕಾಲ ಆಚರಿಸುವ ನವರಾತ್ರಿ ಮಹೋತ್ಸವವೂ ವಿಶೇಷ ಅರ್ಥವಿರುವಂಥದ್ದು. ಚಾಂದ್ರಮಾನ ಪಂಚಾಂಗ ರೀತ್ಯ ಶರದ್‌ ಋತುವಿನ ಮೊದಲ 9 ದಿನಗಳಲ್ಲಿ ಈ ಹಬ್ಬ ಆಚರಿಸುವುದರಿಂದ ಶರನ್ನವರಾತ್ರಿ ಎನ್ನುವುದಾಗಿ ಕೂಡ ಕರೆಯುತ್ತಾರೆ. ಈ ದಿನಗಳಲ್ಲಿ ದೇವಿಯ ಆರಾಧನೆಯಿಂದ ಲೋಕ ಕಲ್ಯಾಣವಾಗುತ್ತದೆ ಎನ್ನುವುದು ನಂಬಿಕೆ.

ನವರಾತ್ರಿಯೆಂಬುದು ವ್ರತ. ಆಶ್ವಯುಜ ಮಾಸದ ಆರಂಭದಿಂದ ದಶಮಿಯ ವರೆಗಿನ ನವ ದಿನಗಳಲ್ಲಿ ನವದುರ್ಗೆಯರ ರೂಪದಲ್ಲಿರುವ ದೇವಿಯ ಅನುಗ್ರಹ ಪಡೆಯಲು ಈ ವ್ರತವನ್ನು ಮಾಡಬೇಕು. ಆಗ ದೇವಿಯು ನಮ್ಮೆಲ್ಲ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. ಜತೆಗೆ ವ್ರತಾಚರಣೆಯಿಂದ ವೈಜ್ಞಾನಿಕ ಲಾಭವೂ ಇದ್ದು, ಉಪವಾಸದಿಂದ ದೇಹ, ಮನಸ್ಸು ಎರಡೂ ಪ್ರಸನ್ನವಾಗಿ, ಶುದ್ಧವಾಗುತ್ತವೆ, ನೆಮ್ಮದಿ ಸಿಗುತ್ತದೆ.

ನವಾಲಂಕಾರ
ನವರಾತ್ರಿಯಂದು ದೇವಸ್ಥಾನಗಳಲ್ಲಿ ದೇವಿಗೆ ದಿನಕ್ಕೊಂದು ಅಲಂಕಾರ ಮಾಡುತ್ತಾರೆ. ದುರ್ಗಾ ಮಾತೆಯ ಒಂಬತ್ತು ರೂಪಗಳನ್ನು ಒಂದೊಂದು ದಿನ ಪೂಜಿಸಲಾಗುತ್ತದೆ. ಆ ನವ ಅಲಂಕಾರಗಳಿಗೂ ಅದರದೇ ಆದ ಅರ್ಥವಿದೆ. ಮೊದಲ ದಿನ ಶೈಲಪುತ್ರಿ (ಕೆಂಪು ಬಣ್ಣ) ಅಲಂಕಾರ- ಅಂದರೆ ಉತ್ಸಾಹ – ಸಂಭ್ರಮದ ಸಂಕೇತ. ಎರಡನೇ ದಿನ ಬ್ರಹ್ಮಚಾರಿಣಿ (ಕಡು ನೀಲಿ ಬಣ್ಣ) ಅಲಂಕಾರ- ಅಂದರೆ ಸಂತೋಷ – ಸಮೃದ್ಧಿ. ಮೂರನೇ ದಿನ ಚಂದ್ರಘಂಟಾ (ಹಳದಿ ಬಣ್ಣ) ಅಲಂಕಾರ – ಸೌಂದರ್ಯ ಹಾಗೂ ಶೌರ್ಯ, ನಾಲ್ಕನೇ ದಿನ ಕೂಷ್ಮಾಂಡಿನಿ (ಹಸಿರು ಬಣ್ಣ) ಅಲಂಕಾರ –ಹಸಿರಿನಿಂದ ಕಂಗೊಳಿಸುತ್ತಾಳೆ. ಐದನೇ ದಿನ ಸ್ಕಂದಮಾತಾ (ಬೂದು ಬಣ್ಣ) ಅಲಂಕಾರ – ತಾಯಿಯಾಗಿ ಮಗುವನ್ನು ಎಲ್ಲ ಹಂತಗಳಲ್ಲಿಯೂ ರಕ್ಷಿಸುತ್ತಾಳೆ. ಆರನೇ ದಿನ ಕಾತ್ಯಾಯಿನಿ (ಕೇಸರಿ ಬಣ್ಣ) ಅಲಂಕಾರ – ಧೈರ್ಯವನ್ನು ಬಿಂಬಿಸುತ್ತದೆ. ಏಳನೇ ದಿನ ಕಾಳರಾತ್ರಿ (ಬಿಳಿ ಬಣ್ಣ) ಅಲಂಕಾರ -ಅಂದರೆ ಭಕ್ತಿ ಹಾಗೂ ಶಾಂತಿಯ ಸಂಕೇತವಾಗಿದೆ. ಎಂಟನೇ ದಿನ ಮಹಾಗೌರಿ (ಗುಲಾಬಿ ಬಣ್ಣ) ಅಲಂಕಾರ – ಭರವಸೆ ಮತ್ತು ಹೊಸತನವನ್ನು ಹಾಗೂ ಒಂಬತ್ತೇ ದಿನ ಸಿದ್ಧಿಧಾತ್ರಿ (ತಿಳಿ ನೀಲಿ) ಅಲಂಕಾರ -ಅಂದರೆ ನಿಸರ್ಗದ ಸೌಂದರ್ಯವನ್ನು ಪ್ರತಿಪಾದಿಸುತ್ತದೆ. ಈ ನವ ದಿನಗಳಲ್ಲಿ ಒಂಬತ್ತು ಬಣ್ಣಗಳಿಂದ ದೇವಿಯನ್ನು ಅಲಂಕರಿಸಿ ಪೂಜಿಸುವುದರಿಂದ ಒಳಿತಾಗುತ್ತದೆ.

ಕೊಲ್ಲೂರಿನಲ್ಲಿ ವಿಜಯ ದಶಮಿಯಂದು ಮಕ್ಕಳಿಗೆ ಮೊದಲ ಬಾರಿಗೆ ಅಕ್ಷರಾಭ್ಯಾಸ ವಿಶೇಷ. ಕೇರಳ ಸಹಿತ ಬೇರೆ ಬೇರೆ ಕಡೆಗಳಿಂದ ಸಾವಿರಾರು ಮಂದಿ ಆ ದಿನ ಇಲ್ಲಿಗೆ ಬಂದು ವಿದ್ಯಾರಂಭ ಮಾಡುತ್ತಾರೆ. ಆ ದಿನ ಅಕ್ಷರಾಭ್ಯಾಸ ಮಾಡಿದವರಿಗೆ ಉತ್ತರೋತ್ತರ ಶೇಯಸ್ಸು ಲಭಿಸುತ್ತದೆ ಎನ್ನುವುದು ನಂಬಿಕೆ. ಅದೇ ದಿನ ನವಾನ್ನ ಪ್ರಾಶನ ಕೂಡ ನಡೆಯುತ್ತದೆ. ನವಾನ್ನ ಪ್ರಾಶನವೆಂದರೆ 6 ತಿಂಗಳೊಳಗಿನ ಮಕ್ಕಳಿಗೆ ಮೊದಲ ಬಾರಿಗೆ ಅನ್ನವನ್ನು ನೀಡುವುದು. ಕೊಲ್ಲೂರು ಮಾತ್ರವಲ್ಲದೆ ಶೃಂಗೇರಿ ಸಹಿತ ಅನೇಕ ದೇವಿಯ ದೇಗುಲಗಳಲ್ಲಿಯೂ ವಿದ್ಯಾರಂಭ, ನವಾನ್ನಪ್ರಾಶನ ನಡೆಯುತ್ತದೆ.

Advertisement

ಸುವಾಸಿನಿ ಪೂಜೆ
ನವರಾತ್ರಿಯ 9 ದಿನ ಸುವಾಸಿನಿ ಪೂಜೆಯನ್ನು ನೆರವೇರಿಸಲಾಗುತ್ತಿದ್ದು, ಮೊದಲ ದಿನ ಒಬ್ಬ ಮುತ್ತೈದೆ, ಎರಡನೇ ದಿನ ಇಬ್ಬರು, ಮೂರನೇ ದಿನ ಮೂವರು ಮುತ್ತೈದೆಯರು -ಹೀಗೆ 9ನೇ ದಿನದವರೆಗೆ ದಿನಕ್ಕೊಬ್ಬರು ಹೆಚ್ಚಿನ ಮುತ್ತೈದೆಯರು ದೇವಿಗೆ ಪ್ರಿಯವಾದ ಈ ಸುವಾಸಿನಿ ಪೂಜೆಯನ್ನು ಮಾಡುತ್ತಾರೆ.

ದುಷ್ಟರನ್ನು ಸಂಹರಿಸಲು ದೇವಿಯು ಒಂಬತ್ತು ರೂಪಗಳಲ್ಲಿ ನವದುರ್ಗೆಯರಾಗಿ ಅವತರಿಸಿದ್ದು, ಅಲ್ಲಿಂದ ಈವರೆಗೂ ನವರಾತ್ರಿ ಉತ್ಸವವನ್ನು ಪರಂಪರಾಗತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನವರಾತ್ರಿಯ ದಿನಗಳಲ್ಲಿ ದೇವಿಯರನ್ನು ಪೂಜಿಸುವುದರಿಂದ ಸಂತುಷ್ಟಗೊಂಡು ಎಲ್ಲರಿಗೂ ಸನ್ಮಂಗಳವನ್ನು ಉಂಟು ಮಾಡುತ್ತಾಳೆ. ನಂಬಿದವರಿಗೆ ಒಳ್ಳೆಯ ಫಲ ಸಿಗುತ್ತದೆ. ಈ ಸಮಯದಲ್ಲಿ ಚಂಡಿಕಾ ಹೋಮವನ್ನು ಮಾಡುವುದರಿಂದ ಲೋಕ ಕಲ್ಯಾಣವಾಗಿ, ಮನುಷ್ಯ, ಪ್ರಾಣಿ, ಪಕ್ಷಿಗಳ ಸಕಲ ಜೀವರಾಶಿಗಳಿಗೂ ಒಳಿತಾಗುತ್ತದೆ. ಭಕ್ತರಿಗೆ ಸುಖ, ಶಾಂತಿ, ನೆಮ್ಮದಿ, ಧನ – ಕನಕಾದಿಗಳು ಲಭಿಸುತ್ತವೆ.
– ಕೆ. ಮಂಜುನಾಥ ಅಡಿಗರು
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ತಂತ್ರಿಗಳು

Advertisement

Udayavani is now on Telegram. Click here to join our channel and stay updated with the latest news.

Next