Advertisement

ನಾಶದತ್ತ ಬನಗಳು : ಸಂರಕ್ಷಣೆಗೆ ಇಚ್ಛಾಶಕ್ತಿ ಬೇಕು

01:45 AM Aug 24, 2018 | Karthik A |

ಕಾಸರಗೋಡು: ಪವಿತ್ರ ಬನಗಳು ಪ್ರಕೃತಿ ಮತ್ತು ಸಂಸ್ಕೃತಿಯನ್ನು ಬೆಸೆಯುವ ನಂಬುಗೆಯ ತಾಣಗಳು. ವಿವಿಧ ಸಸ್ಯ ಪ್ರಭೇದ‌, ಸರಿಸೃಪ, ಪಕ್ಷಿಗಳ ಆಕರವಾಗಿರುವ ಬನಗಳು ಗಿಡಮೂಲಿಕೆ ಸಹಿತ ಬೃಹತ್‌ ಮರಗಳಿರುವ ಸುಂದರ ಪ್ರದೇಶ. ಕರಾವಳಿ ಸಹಿತ ಒಳನಾಡಿನ ಹಲವೆಡೆ ಹಿಂದೊಂದು ಕಾಲದಲ್ಲಿ ಹೇರಳವಾಗಿದ್ದ ವನ ಸಂಸ್ಕೃತಿಯ ಪವಿತ್ರ ಬನಗಳು ಇಂದಿಲ್ಲವಾಗುತ್ತಿವೆ.

Advertisement

ನಂಬಿಕೆ, ವಾಡಿಕೆಗಳ ಎತ್ತಿ ಹಿಡಿಯುವ ಶ್ರದ್ಧೆಯ ಕೇಂದ್ರಗಳು ಇಂದು ಜನ ವಸತಿ ಪ್ರದೇಶಗಳಾಗಿ ಮಾರ್ಪಡುತ್ತಿವೆ. ದಶಕಗಳಿಂದ ಏರುಗತಿಯಲ್ಲಿ ಬೆಳೆದ ಜನಸಂಖ್ಯೆ ಸಹಿತ ನಗರೀಕರಣದ ಪ್ರಭಾವದಿಂದ ಶುದ್ಧ ಗಾಳಿಯನ್ನು ನೀಡುವ ಪವಿತ್ರ ಬನಗಳ ಸಂಖ್ಯೆಕಡಿಮೆಯಾಗುತ್ತಿದ್ದು, ಅಳಿದುಳಿದ ಬನಗಳ ವಿಸ್ತೀರ್ಣವು ಕ್ಷೀಣಿಸುತ್ತಿದೆ. ಹಲವು ಗ್ರಾಮೀಣ ಪ್ರದೇಶ ಮತ್ತು ಊರುಗಳನ್ನು ಬನ ಎಂಬ ಉಪನಾಮದಿಂದ ಸಂಬೋಧಿಸುವುದು ಅದರ ಮಹತ್ವ, ಗೌರವವನ್ನು ಎತ್ತಿ ಹಿಡಿಯುತ್ತದೆ. ಕಾವು, ಕಾಡು, ಕಾನ ಎಂಬ ಹೆಸರಿನಿಂದ ಉಲ್ಲೇಖೀಸಲ್ಪಡುವ ಪವಿತ್ರ ಬನಗಳು ಇಂದು ಅತಿಕ್ರಮಣ ಮತ್ತು ಅಪನಂಬಿಕೆಗಳಿಗೆ ತುತ್ತಾಗಿ ಖಾಸಗಿ ಸ್ವತ್ತಾಗಿ ಮಾರ್ಪಟ್ಟು ಇಂದಿಲ್ಲವಾಗುತ್ತಿವೆ. ಮೂಡಂಬಿಕಾನ, ಎಡಕ್ಕಾನ, ಮಧುರಂಗಾನ, ನರಿಂಗಾನ, ಪೆರಿಕ್ಕಾನ, ಚೆಂಬರಿಕಾನ, ಕುಂಜರಿಕಾನ, ಕವಡಿಂಗಾನ, ಬೋವಿಕ್ಕಾನ ಸಹಿತ ಮಾಡಾಯಿಕಾವು, ಮುಚ್ಚಿಲೋಟು ಕಾವು, ಪ್ರಾಂದರಕಾವು ಮೊದಲಾದ ಪ್ರದೇಶಗಳು ಬನ ಸಂಸ್ಕೃತಿಯ ಮಹತ್ವ ಮತ್ತು ಶತಮಾನಗಳ ಹಿಂದಿನ ಕೃಷಿ ಸಂಸ್ಕೃತಿಯ ಜನ ಸಮೂಹವು ಅರಣ್ಯೀಕರಣಕ್ಕೆ ನೀಡಿದ ಪ್ರಾಶಸ್ತ್ಯವನ್ನು ಎತ್ತಿ ಹಿಡಿಯುತ್ತವೆ. ಪವಿತ್ರ ಬನಗಳು ನಾಗಾರಾಧನಾ ಕೇಂದ್ರಗಳಾದರೆ ಕಾವುಗಳಲ್ಲಿ ವನಶಾಸ್ತಾರ ಸಹಿತ ಜಾನಪದ ಸಂಸ್ಕೃತಿಯ ದೈವಗಳನ್ನು ಪೂಜಿಸುವ ರೂಢಿಯು ಜನಜನಿತವಾಗಿದೆ.

ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿರುವ ಬನಗಳು ಹಲವು ಚದರ ಕಿ.ಮೀ. ವರೆಗೂ ವಿಸ್ತರಿಸಲ್ಪಟ್ಟಿದ್ದು, ನಾನಾ ಪ್ರಭೇದದ ಗಿಡಮೂಲಿಕೆಗಳು, ಜೌಷ ಧೀಯ ಸಸ್ಯ ಸಂಕುಲವನ್ನು ಒಳಗೊಂಡಿದ್ದವು. ಧರ್ಮ ಸಂಸ್ಕೃತಿಯ ಪ್ರತೀಕವಾಗಿರುವ ಕಾವು ಅಥವಾ ಬನಗಳು ಪ್ರಾಚೀನ ಪರಂಪರೆಯ ಪ್ರಕೃತಿ ಆರಾಧನಾ ತತ್ವಗಳೊಂದಿಗೆ ಕಾನನದ ಮಹತ್ವವನ್ನು ತಿಳಿಸುತ್ತವೆ.


ಇಲಾಖೆೆಯಿಂದ ಗುರುತುಮಾಡಲ್ಪಟ್ಟ ಬನದಲ್ಲಿನ ಬೃಹತ್‌ ಮರ.

ಸಾಮೂಹಿಕ ಅರಣ್ಯೀಕರಣಕ್ಕೆ ಪವಿತ್ರ ಬನಗಳ ರಕ್ಷಣೆ ಅಗತ್ಯ

ಪ್ರಸ್ತುತ ಸಾಮೂಹಿಕ ಅರಣ್ಯೀಕರಣ ಪ್ರಕ್ರಿಯೆಗೆ ಮಾದರಿಯಂತಿರುವ ಪವಿತ್ರ ಬನಗಳನ್ನು ರಕ್ಷಿಸುವ ಕಾರ್ಯವಾಗಬೇಕಿದೆ. ಬನಗಳ ಗುರುತಿಸುವಿಕೆ ಸಹಿತ ಕ್ಷೀಣಿಸುತ್ತಿರುವ ಬನಗಳಲ್ಲಿ ಹೊಂದಿಕೆಯಾಗುವಂತೆ ಗಿಡಗಳನ್ನು ನೆಡುವುದು, ಸೂಕ್ತ ಆವರಣ ನಿರ್ಮಿಸಿ ಜನಸಾಮಾನ್ಯರಿಗೆ ಅದರ ಮಹತ್ವ ತಿಳಿಸುವ ಕಾರ್ಯವಾದಲ್ಲಿ ಪವಿತ್ರ ಬನಗಳ ರಕ್ಷಣೆಯ ಕಾರ್ಯ ಸುಗಮವಾದೀತು. ಪವಿತ್ರ ಬನಗಳ ಬಗೆಗಿನ ಸೂಕ್ತ ಮಾಹಿತಿ ಮತ್ತು ಅದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಸರಕಾರಕ್ಕಿದೆ. ಸ್ಥಳೀಯಾಡಳಿತ ಸಹಿತ ಸಂಘ ಸಂಸ್ಥೆಗಳ ಮೂಲಕ ಅಳಿವಿನಂಚಿನ ಪವಿತ್ರ ಬನಗಳ ರಕ್ಷಣೆಕಾರ್ಯ ಮುನ್ನಡೆಯಬೇಕಿದೆ.

Advertisement

ಕಮ್ಮಡಂ ಕಾವು ಜಿಲ್ಲೆಯ ಅತಿ ದೊಡ್ಡ ಬನ  
ಪಶ್ಚಿಮ ಘಟ್ಟ ಶ್ರೇಣಿಯ ಭೀಮನಡಿ ಸಂರಕ್ಷಿತ ಅರಣ್ಯ ಸಮೀಪದ ಕಮ್ಮಡಂ ಕಾವು ಜಿಲ್ಲೆಯ ಅತಿ ದೊಡ್ಡ ಬನವಾಗಿದೆ. ಕಯ್ಯೂರು-ಚೀಮೇನಿ ಮತ್ತು ಎಳೇರಿ ಗ್ರಾಮ ಪಂಚಾಯತ್‌ಗಳಲ್ಲಿ ವ್ಯಾಪಿಸಿರುವ ಕಮ್ಮಡಂ ಕಾವು 54.7 ಎಕರೆ ವಿಸ್ತೀರ್ಣ ಹೊಂದಿದೆ. ಭಗವತಿ ಆರಾಧನಾಲಯವಿರುವ ಕಮ್ಮಡಂ ಕಾವು ದಶಕಗಳ ಹಿಂದೆ 109 ಎಕರೆ ದಟ್ಟ ಅರಣ್ಯ ಪ್ರದೇಶ ಹೊಂದಿತ್ತು. ಪ್ರಸ್ತುತ ಕಾವು ಕ್ಷೀಣಿಸಿದ್ದು ಇದರ ರಕ್ಷಣೆಗೆ ಕಮ್ಮಡಂ ಕಾವು ಸಂರಕ್ಷಣಾ ಸಮಿತಿಯನ್ನು ಗ್ರಾಮಸ್ಥರು ರಚಿಸಿದ್ದಾರೆ. ಕಮ್ಮಡಂ ಕಾವಿನ ಸುತ್ತ ಭತ್ತ ಗದ್ದೆಗಳೇ ಹೆಚ್ಚಿದ್ದು, ಮುಂಗಾರು ಮಳೆಯನ್ನು ಅವಲಂಬಿಸಿವೆ. ಕಮ್ಮಡಂ ಕಾವಿನ ರಕ್ಷಣೆ ಹೊಣೆ ಹೊತ್ತು ಬಂದಂತಹ ಹಲವು ಮಂದಿ ಜಿಲ್ಲಾಧಿಕಾರಿಗಳು ಯಾವುದೇ ದಿಟ್ಟ ಕ್ರಮ ಅನುಸರಿಸಲಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.


5,625 ಹೆಕ್ಟೇರ್‌ ಪ್ರದೇಶದಲ್ಲಿ ಬನಗಳು

ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 62 ಪವಿತ್ರ ಕಾವು ಯಾ ಪವಿತ್ರ ಬನಗಳಿವೆ. ಒಟ್ಟು 18 ಗ್ರಾಮ ಪಂಚಾಯತ್‌ಗಳಲ್ಲಿ ಹಬ್ಬಿರುವ ಪವಿತ್ರ ಬನಗಳು5,625 ಹೆಕ್ಟೇರ್‌ ಪ್ರದೇಶವನ್ನು ವ್ಯಾಪಿಸಿವೆ. ಶ್ರೀಮಂತ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಒಳಗೊಂಡಿರುವ ಕಾನನಗಳನ್ನು ಉಳಿಸಿ ಬೆಳೆಸಬೇಕು. ಸ್ಥಳೀಯ ಜನರ ಒಳಗೊಳ್ಳುವಿಕೆಯ ಮೂಲಕ ಪವಿತ್ರ ಬನಗಳನ್ನು ಸಂರಕ್ಷಿಸಬೇಕು ಎಂದು 2012ರ ಡಾ| ಪ್ರಭಾಕರನ್‌ ಆಯೋಗದ ಜಿಲ್ಲಾ ಅಭಿವೃದ್ಧಿ ವರದಿಯಲ್ಲಿ ತಿಳಿಸಲಾಗಿದೆ. ಸ್ಥಳೀಯ ಜನರ ಸಹಭಾಗಿತ್ವದಲ್ಲಿ ಪವಿತ್ರ ಬನಗಳ ರಕ್ಷಣೆಯ ಮೂಲಕ ಸಾಮೂಹಿಕ ಅರಣ್ಯೀಕರಣದ ಯೋಜನೆಯನ್ನು ಮುನ್ನಡೆಸಬೇಕು ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next