Advertisement

13ರಿಂದ ರಾಷ್ಟ್ರೀಯ ಲೋಕ ಅದಾಲತ್‌: ನ್ಯಾ|ರೇಣುಕಾದೇವಿ

11:09 AM Jun 28, 2019 | Suhan S |

ಹಾವೇರಿ: ಎರಡನೇ ರಾಷ್ಟ್ರೀಯ ಲೋಕ ಅದಾಲತ್‌ ಕಾರ್ಯಕ್ರಮ ಜುಲೈ 13ರಂದು ಜಿಲ್ಲಾ ನ್ಯಾಯಾಲಯ ಹಾಗೂ ಜಿಲ್ಲೆಯ ಎಲ್ಲ ತಾಲೂಕು ನ್ಯಾಯಾಲಯಗಳಲ್ಲಿ ನಡೆಯಲಿದ್ದು, ರಾಜೀಯಾಗಬಲ್ಲ ಪ್ರಕರಣಗಳನ್ನು ಸಾರ್ವಜನಿಕರು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರೇಣುಕಾದೇವಿ ತಿಳಿಸಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ರಾಷ್ಟ್ರೀಯ ಲೋಕ ಅದಾಲತ್‌ ಕುರಿತು ಮಾಹಿತಿ ನೀಡಿದರು.

ತಾಲೂಕು, ಜಿಲ್ಲಾ ನ್ಯಾಯಾಲಯ ಒಳಗೊಂಡಂತೆ ದೇಶದ ಎಲ್ಲ ನ್ಯಾಯಾಲಯಗಳಲ್ಲೂ ರಾಷ್ಟ್ರೀಯ ಲೋಕ ಅದಾಲತ್‌ ಕಾರ್ಯಕ್ರಮವನ್ನು ನಡೆಸಲಾಗುವುದು. ಇದರಿಂದ ಕಕ್ಷಿದಾರರಿಗೆ ತ್ವರಿತ ನ್ಯಾಯದಾನ, ವಾದಿ ಮತ್ತು ಪ್ರತಿ ವಾದಿಗಳ ಹಣ, ಸಮಯ ಉಳಿಯುತ್ತದೆ, ಸಂಬಂಧಗಳು ಗಟ್ಟಿಯಾಗುತ್ತವೆ ಎಂದು ತಿಳಿಸಿದರು.

ವರ್ಷದಲ್ಲಿ ನಾಲ್ಕು ಲೋಕ ಅದಾಲತ್‌ಗಳನ್ನು ನಡೆಸಲಾಗುತ್ತದೆ. ಮೊದಲನೇ ಲೋಕ ಅದಾಲತ್‌ ಕಾರ್ಯಕ್ರಮ ಕಳೆದ ಮಾರ್ಚ್‌ 9ರಂದು ನಡೆಸಲಾಗಿದೆ. ಎರಡನೇ ಲೋಕ ಅದಾಲತ್‌ ಜು. 13ರಂದು ಆಯೋಜಿಸಲಾಗಿದೆ. ಮೂರನೇ ಲೋಕ ಅದಾಲತ್‌ ಸೆ.14 ಹಾಗೂ ನಾಲ್ಕನೇ ಲೋಕ ಅದಾಲತ್‌ ಡಿ. 14 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆಯಲಿವೆ ಎಂದರು.

ಕಳೆದ ಮಾರ್ಚ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 161 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 539 ಪ್ರಕರಣಗಳು ಸೇರಿ 700 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಜು. 13ರಂದು ನಡೆಯುವ ಎರಡನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ 1727 ಪ್ರಕರಣಗಳನ್ನು ರಾಜೀ ಸಂಧಾನಕ್ಕಾಗಿ ಗುರುತಿಸಲಾಗಿದೆ. ಈ ಪ್ರಕರಣಗಳು ಅದಾಲತ್‌ ನಡೆಯುವ ವೇಳೆ 2000 ಸಂಖ್ಯೆ ತಲುಪಬಹುದು. ಈ ಕುರಿತಂತೆ ರಾಜೀ ಸಂಧಾನ ಮಾಡುವ ಪ್ರಕರಣವನ್ನು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ವಕೀಲರ ಸಭೆ ನಡೆಸಿ ತಿಳಿಸಲಾಗಿದೆ ಎಂದರು.

Advertisement

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾದ ಪ್ರಕರಣಗಳಾದ ತಮ್ಮ ಚಾಲ್ತಿ ಸಿವಿಲ್, ಬ್ಯಾಂಕ್‌, ಮೋಟಾರು ವಾಹನ ಕಾಯ್ದೆಯ, ಭೂಸ್ವಾಧೀನ, ವೈವಾಹಿಕ ವ್ಯಾಜ್ಯಗಳು, ಚೆಕ್‌ ಅಮಾನ್ಯ, ಕಂದಾಯ ಹಾಗೂ ರಾಜೀ ಅಗಬಲ್ಲ ಕ್ರಿಮಿನಲ್ ಕೇಸುಗಳನ್ನು ಹಾಗೂ ಪೂರ್ವ ವ್ಯಾಜ್ಯ ಕೇಸುಗಳನ್ನು ರಾಜೀ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಇತ್ಯರ್ಥವಾದ ವ್ಯಾಜ್ಯಗಳ ಕುರಿತು ಪಕ್ಷಗಾರರು ಮೇಲ್ಮನವಿ ಸಲ್ಲಿಸಬಹುದು. ಆದರೆ, ಜನತಾ ನ್ಯಾಯಾಲಯಗಳಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶೆ ಶ್ರೀವಿದ್ಯಾ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next