Advertisement

ರಾ.ಹೆದ್ದಾರಿ: ಬೇಕಾದ್ದಲ್ಲಿ ಬಸ್‌ ನಿಲ್ದಾಣ ಇಲ್ಲ!

10:42 AM Apr 21, 2018 | Team Udayavani |

ಮಹಾನಗರ: ಸಾಮಾನ್ಯವಾಗಿ ನಗರದ ಹಲವೆಡೆ ಸಾರ್ವಜನಿಕರು ಸರಿಯಾದ ಬಸ್‌ ತಂಗುದಾಣವಿಲ್ಲದೆ ಪರದಾಡುತ್ತಿರಬೇಕಾದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜನರಿಗೆ ಅನುಕೂಲವಾಗದ ಕಡೆ ಬಸ್‌ ನಿಲ್ದಾಣ ನಿರ್ಮಿಸಿ ದುಡ್ಡು ಪೋಲು ಮಾಡುತ್ತಿದೆ.

Advertisement

ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಪಾದುವಾ ಕಾಲೇಜಿನ ಮುಂಭಾಗದಲ್ಲಿ ಈಗಾಗಲೇ ಬಸ್‌ ನಿಲ್ದಾಣವಿದೆ. ಇಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಬಸ್‌ಗಾಗಿ ಕಾಯುತ್ತಾರೆ. ಇಲ್ಲಿಂದ 150 ಮೀಟರ್‌ ದೂರದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಬಸ್‌ ನಿಲ್ದಾಣವನ್ನು ನಿರ್ಮಿಸಿದೆ. ಇಲ್ಲಿ ಯಾವುದೇ ಬಸ್‌ ನಿಲ್ಲುವುದು ಇಲ್ಲ. ಜನರು ಕಾಯುವುದೂ ಇಲ್ಲ. ಬಸ್‌ ನಿಲ್ದಾಣಕ್ಕಾಗಿ ಸಾವಿರಾರು ರೂಪಾಯಿಗಳನ್ನು ಪ್ರಾಧಿಕಾರ ಖರ್ಚು ಮಾಡಿದೆ.

ಈ ಬಸ್‌ ನಿಲ್ದಾಣ ಭಿಕ್ಷುಕರಿಗೆ ಆಶ್ರಯ ನೀಡುವ ತಾಣವಾಗಿ ಬದಲಾಗಿದೆ. ಸಮೀಪದಲ್ಲೇ ಸುಸಜ್ಜಿತ ಬಸ್‌ ನಿಲ್ದಾಣ ಇದ್ದರೂ ಅದರ ಪಕ್ಕದಲ್ಲಿ ಹೊಸ ನಿಲ್ದಾಣ ಮಾಡುವ ಆವಶ್ಯಕತೆ ಏನು ಎಂಬುದು ಸಾರ್ವಜನಿಕರ ಪ್ರಶ್ನೆ.

ಬಸ್‌ ನಿಲ್ದಾಣ ಇಲ್ಲ
ರಾ.ಹೆ. ಯ ಜಪ್ಪಿನಮೊಗರು, ಎಕ್ಕೂರು, ಪಂಪ್‌ವೆಲ್‌ಗ‌ಳಲ್ಲಿ ದಿನಕ್ಕೆ ನೂರಾರು ಜನರು ಉರಿ ಬಿಸಿಲಲ್ಲೇ ಬಸ್‌ಗಾಗಿ ಕಾಯುವ ಸ್ಥಿತಿ ಎದುರಾಗಿದೆ. ಇಂತಹ ಸ್ಥಳಗಳಲ್ಲಿ ಬಸ್‌ ನಿಲ್ದಾಣಗಳನ್ನು ಮಾಡುವುದನ್ನು ಬಿಟ್ಟು ಅನಗತ್ಯ ಜಾಗಗಳಲ್ಲಿ ನಿಲ್ದಾಣಗಳನ್ನು ಮಾಡಿ ಪ್ರಾಧಿಕಾರ ಹಣ ಪೋಲು ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಎಕ್ಕೂರಿನ ಒಂದು ಭಾಗದಲ್ಲಿ ಬಸ್‌ ನಿಲ್ದಾಣವಿದೆ, ಆದರೆ ನಗರದಿಂದ ತೊಕ್ಕೊಟು ಭಾಗಕ್ಕೆ ತೆರಳಬೇಕಾದ ಭಾಗದಲ್ಲಿ ಬಸ್‌ ನಿಲ್ದಾಣವಿಲ್ಲ. ಅತಿ ಹೆಚ್ಚು ಜನಸಂದಣಿ ಇರುವ ಜಪ್ಪಿನಮೊಗರಿನಲ್ಲಿ ಬಸ್‌ಗಳು ನಿಂತರೂ ಜನರು ನಿಲ್ಲಲ್ಲು ತಂಗುದಾಣವಿಲ್ಲ.

ಪಂಪ್‌ವೆಲ್‌ನಲ್ಲಿ ತಾತ್ಕಾಲಿಕ ಬಸ್‌ ನಿಲ್ದಾಣಕ್ಕೆ ಬೇಡಿಕೆ
ಪಂಪ್‌ವೆಲ್‌ನಲ್ಲಿ ಫ್ಲೈಓವರ್‌ ಕೆಲಸ ಆರಂಭವಾಗಿ ಹಲವು ವರ್ಷಗಳೇ ಕಳೆದಿವೆ. ಇದರಿಂದ ಆ ಭಾಗದಲ್ಲಿ ಟ್ರಾಫಿಕ್‌ ಸಮಸ್ಯೆ, ಬ್ಲಾಕ್‌ ಸರ್ವೇ ಸಾಮಾನ್ಯ. ಇದರೊಂದಿಗೆ ಬಿಸಿಲಿನಲ್ಲಿ ಬಸ್‌ಗಾಗಿ ಕಾಯುವ ಸ್ಥಿತಿ ಸಾರ್ವಜನಿಕರದ್ದು. ಫೈವರ್‌ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಬಸ್‌ ನಿಲ್ದಾಣ ನಿರ್ಮಾಣ ಅಸಾಧ್ಯ ಆದರೆ ತಾತ್ಕಾಲಿಕ ಬಸ್‌ ನಿಲ್ದಾಣಗಳನ್ನು ನಿರ್ಮಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರ ಆಸಕ್ತಿ ತೋರುತ್ತಿಲ್ಲ. ಇನ್ನೂ ಎರಡು ತಿಂಗಳ ಒಳಗಾಗಿ ಮಳೆಗಾಲವೂ ಆರಂಭವಾಗಲಿದ್ದು, ಆಗ ಜನರು ಒದ್ದೆಯಾಗಿ ಬಸ್‌ಗೆ ಕಾಯಬೇಕಾಗುತ್ತದೆ. ಈ ಭಾಗದಲ್ಲಿ ತಾತ್ಕಾಲಿಕ ಬಸ್‌ ನಿಲ್ದಾಣಗಳನ್ನು ಮಾಡುವ ಬಗ್ಗೆ ಬೇಡಿಕೆಗಳು ಕೇಳಿಬರುತ್ತಿವೆ. 

Advertisement

ಇಲ್ಲಿ ಬಸ್‌ ನಿಲ್ದಾಣ ಅಗತ್ಯ
.ಜಪ್ಪಿನಮೊಗರು
.ಎಕ್ಕೂರು (ಒಂದು ಬದಿ)
.ಪಂಪ್‌ವೆಲ್ 

ಬಸ್‌ ನಿಲ್ದಾಣ ತೆರವಿಗೆ ಪಾಲಿಕೆಗೆ ಸೂಚನೆ
ಟ್ರಾಫಿಕ್‌ ಹಾಗೂ ಇನ್ನಿತರ ಸಮಸ್ಯೆಗಳಿರುವುದರಿಂದ ಪಾದುವಾ ಕಾಲೇಜು ಬಳಿ ಕಾರ್ಯಾಚರಿಸುತ್ತಿರುವ ಬಸ್‌
ನಿಲ್ದಾಣವನ್ನು ತೆರವು ಮಾಡಲು ಪಾಲಿಕೆಗೆ ಸೂಚಿಸಲಾಗಿದೆ. ಆ ಬಸ್‌ ನಿಲ್ದಾಣದ ಸಮೀಪ ಪ್ರಾಧಿಕಾರದ ವತಿಯಿಂದ ಮಾಡಲಾದ ಬಸ್‌ ನಿಲ್ದಾಣ ಶೀಘ್ರವೇ ಕಾರ್ಯಾಚರಿಸಲಿದೆ. ಇನ್ನೂ ಎಕ್ಕೂರು, ಜಪ್ಪಿನ ಮೊಗರು ಹೆದ್ದಾರಿ ಗುತ್ತಿಗೆಯನ್ನು ನವಯುಗ ಕನ್ಸ್‌ಟ್ರಕ್ಷನ್‌ಗೆ ನೀಡಲಾಗಿದ್ದು, ಆ ಬಗ್ಗೆ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ.
– ಸ್ಯಾಮ್‌ಸನ್‌
ವಿಜಯ್‌ ಕುಮಾರ್‌
ಹೆದ್ದಾರಿ ಪ್ರಾಧಿಕಾರದ
ಯೋಜನ ನಿರ್ದೇಶಕ.

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next